"ಶಾಸ್ತ್ರದಲ್ಲಿ ಏನೇ ಇರಲಿ.. ನೀವು ಹೇಗೆ ಬದುಕುತ್ತೀರಾ ಅನ್ನೋದು ಮುಖ್ಯ"; ವಿಚ್ಚೇದನ ಬಗ್ಗೆ ಅಜಯ್ ರಾವ್ ಸ್ಪಷ್ಟನೆ
ಸ್ಯಾಂಡಲ್ವುಡ್ನ ಕೃಷ್ಣ ಅಜಯ್ ರಾವ್ ಬಹಳ ದಿನಗಳ ಬಳಿಕ ಮತ್ತೊಂದು ಸಿನಿಮಾ ಮೂಲಕ ರೀ ಎಂಟ್ರಿ ಕೊಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಇವರ 'ಯುದ್ಧಕಾಂಡ 2' ಸಿನಿಮಾ ಬಗ್ಗೆ ಚರ್ಚೆಯಾಗುತ್ತಿದೆ. ಇತ್ತೀಚೆಗೆ ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ 'ಟಾಕ್ಸಿಕ್' ನಿರ್ಮಿಸುತ್ತಿರುವ ಕೆವಿಎನ್ ಪ್ರೊಡಕ್ಷನ್ ಮುಂದೆ ಬಂದಿದೆ. ಈ ವೇಳೆ ಅಜಯ್ ರಾವ್ ಕೆಲವು ವಿಷಯಗಳಿಗೆ ಉತ್ತರ ಕೊಟ್ಟಿದ್ದಾರೆ.
'ಯುದ್ಧಕಾಂಡ 2' ಸಿನಿಮಾವನ್ನು ಅಜಯ್ ರಾವ್ ಅವರೇ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾವನ್ನು ನಿರ್ಮಿಸುವುದಕ್ಕೆ ಅಜಯ್ ರಾವ್ ಮೈ ತುಂಬಾ ಸಾಲ ಮಾಡಿಕೊಂಡಿದ್ದಾಗಿ ಹಲವು ಸುದ್ದು ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ವೇಳೆ ಇನ್ನೂ ಕೆಲವು ಗಂಭೀರ ವಿಷಯಗಳ ಬಗ್ಗೆನೂ ಓಪನ್ ಆಗಿ ಮಾತಾಡಿದ್ದಾರೆ.

'ಯುದ್ಧಕಾಂಡ 2' ಬಿಡುಗಡೆ ಓಡಾಡುತ್ತಿದ್ದ ಅಜಯ್ ರಾವ್ಗೆ ರಾಕಿಂಗ್ ಸ್ಟಾರ್ ಯಶ್ ನೆರವಿಗೆ ಬಂದಿದ್ದಾರೆ. ಸ್ವತ: ಯಶ್ ಕೆವಿಎನ್ ಜೊತೆ ಮಾತಾಡಿ ಈ ಸಿನಿಮಾ ಬಿಡುಗಡೆಗೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಈ ವಿಷಯವನ್ನು ಹಲವು ಸಂದರ್ಶನಗಳಲ್ಲಿ ಅಜಯ್ ರಾವ್ ಬಹಿರಂಗ ಪಡಿಸಿದ್ದಾರೆ. ಹೆಚ್ಚು ಮಾಹಿತಿಯನ್ನು ಬಿಟ್ಟುಕೊಡದೇ ಇದ್ದರೂ ಯಶ್ ಸಹಾಯವನ್ನು ಅಜಯ್ ರಾವ್ ನೆನಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಇತ್ತೀಚೆಗೆ ಅಜಯ್ ರಾವ್ ತಮ್ಮ ವಿಚ್ಛೇದನದ ಬಗ್ಗೆ ಹಬ್ಬಿದ್ದ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ.
ಮೊದಲು 'ಯುದ್ಧಕಾಂಡ 2' ರಿಲೀಸ್ಗೆ ಕೆವಿಎನ್ ಪ್ರೊಡಕ್ಷನ್ ಮುಂದೆ ಬಂದಿದ್ದಕ್ಕೆ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಯಶ್ ತಮಗೆ ಹೇಗೆ ನೆರವಾದವರು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಕೆವಿಎನ್ ಸಂಸ್ಥೆಯವರು ಸಿನಿಮಾವನ್ನು ನೋಡಿ ಮೆಚ್ಚುಗೆಯಿಂದಾನೇ ಬಿಡುಗಡೆ ಮಾಡುವುದಕ್ಕೆ ಹೊರಟಿದ್ದಾರೆ. ಇದೆಲ್ಲ ಒಬ್ಬ ವ್ಯಕ್ತಿಯ ಹೃದಯ ಶ್ರೀಮಂತಿಕೆಯಿಂದಾನೇ ಆಗಿದ್ದು. ಯಾಕಂದ್ರೆ, ಅವರ ಅಭಿಮಾನಿಗಳಿಗೆ ಆ ವ್ಯಕ್ತಿಯ ತೂಕವೇನು? ಕಷ್ಟದಲ್ಲಿ ಇದ್ದವರಿಗೆ ಒಳ್ಳೆಯನ್ನು ಮಾಡುವುಕ್ಕೆ ನಿಲ್ಲುತ್ತಾರೆ ಅನ್ನೋದು ಗೊತ್ತಾಗಬೇಕು. ಅವರು ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರೇ ಕೂಡ ಆ ಸಂಸ್ಥೆಯೊಂದಿಗೆ ಸಿನಿಮಾವನ್ನು ನೋಡಿ ಅಂತ ಮಾತಾಡಿದ ಮೇಲೆ ಕೆವಿಎನ್ ಅವರು ಆ ಸಿನಿಮಾ ನೋಡಿ, ತುಂಬಾ ಚೆನ್ನಾಗಿದೆ. ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡೋಣ ಅಂತ ಹೇಳಿದ್ದಾರೆ."ಎಂದು ಅಜಯ್ ರಾವ್ ಪವರ್ ಟಿವಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
'ಯುದ್ಧಕಾಂಡ 2' ಸಿನಿಮಾಗಾಗಿ ಸಿಕ್ಕಾಪಟ್ಟೆ ಸಾಲ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಆದರೆ ತಾನು ಸಾಲ ಮಾಡಿದ್ದು ಕೇವಲ ಸಿನಿಮಾಗಾಗಿ ಮಾತ್ರ ಅಂತಾನೂ ಹೇಳಿದ್ದಾರೆ. "ಎಷ್ಟು ಸಾಲ ಮಾಡಿಕೊಂಡಿದ್ದೀನಿ ಅಂತ ಲೆಕ್ಕ ಹಾಕುವುದಕ್ಕೆ ಆಗುವುದಿಲ್ಲ. ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದೇನೆ. ಅದು ಮಾತ್ರ ನಿಜ. ನಾನು ಯಾವತ್ತೂ ದುಡ್ಡಿಗೆ ಲೆಕ್ಕ ಹಾಕಿದವನಲ್ಲ. ದುಡ್ಡು ಮಾಡಬೇಕು ಅಂತ ಬಂದವನಲ್ಲ. ಕಲಾವಿದನಾಗಬೇಕು ಅಂತ ಬಂದವನು. ಸಾಲ ಮಾಡಿದ್ದೀನಿ ಅಂತ ಹೇಳ್ತಿರೋದು, ಅಷ್ಟು ಸಾಲ ಮಾಡುವ ತಾಕತ್ತು ಇದೆ ಅನ್ನೋದಕ್ಕೆ ಹೇಳಿದ್ದು. ಸಾಲ ಮಾಡಿದ್ದೀನಿ ಅಂತ ಕೊರಗುತ್ತಿಲ್ಲ. ಅಷ್ಟು ಸಾಲ ಮಾಡಿದ್ದೀನಿ ಅಂದರೆ, ಅಷ್ಟು ಸಂಪಾದನೆ ಮಾಡಿದ್ದೀನಿ ಅಂತಾನೇ ಅರ್ಥ." ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಅಜಯ್ ರಾವ್ ಜ್ಯೋತಿಷ್ಯದ ಬಗ್ಗೆ ಹೇಳಿಕೆ ನೀಡಿದ್ದರು. ಅಲ್ಲಿಂದ ಅವರ ವಿಚ್ಚೇದನದ ಬಗ್ಗೆನೂ ಸುದ್ದಿ ಹರಿದಾಡಿತ್ತು. ಅದಕ್ಕೂ ಅಜಯ್ ರಾವ್ ಸ್ಪಷ್ಟನೆ ನೀಡಿದ್ದಾರೆ. "ನಾವು ಚೆನ್ನಾಗಿದ್ದೀವಿ. ನಿಮಗೆ ಜ್ಯೋತಿಷ್ಯ ಗೊತ್ತಾ ಅಂತ ಕೇಳಿದ್ದಕ್ಕೆ ಹಾಗೆ ಹೇಳಿದ್ದೆ. ನಾನು ಸಿನಿಮಾ ವಿಚಾರವನ್ನೂ ಹೇಳಿದ್ದೆ. ಕೃಷ್ಣಲೀಲಾ ಸಿನಿಮಾ ಮಾಡಿದ್ದು ತುಂಬಾನೇ ಕೆಟ್ಟ ಮುಹೂರ್ತ ಅಂತಾನೂ ಹೇಳಿದ್ದರು. ಅದು ಕೋಟಿಗಟ್ಲೆ ಸಂಪಾದನೆ ಮಾಡಿದೆ. ಬ್ಲಾಕ್ ಬಸ್ಟರ್ ಸಿನಿಮಾ ಎನಿಸಿಕೊಂಡಿದೆ. ಶಾಸ್ತ್ರದಲ್ಲಿ ಏನೇ ಇರಲಿ. ನೀವು ಹೇಗೆ ಬದುಕುತ್ತೀರ. ನಿಮ್ಮ ಶ್ರಮ ಎಷ್ಟಿರುತ್ತೆ? ನಿಮ್ಮ ಶ್ರದ್ಧೆ ಎಷ್ಟಿರುತ್ತೆ? ಇದಕ್ಕಿಂತ ಮೀರಿದ್ದು ಇರುತ್ತೆ ಅನ್ನೋದನ್ನು ಹೇಳುವುದಕ್ಕೆ ಬಂದೆ. ದಾಂಪತ್ಯ ಜೀವನವೇ ಆಗಿರಲಿ, ಸಿನಿಮಾನೇ ಆಗಿರಲಿ. ನೀವು ತುಂಬಾನೇ ಇಷ್ಟ ಪಟ್ಟು ಇದ್ದರೆ, ಇದ್ಯಾವುದೂ ವರ್ಕ್ ಆಗಲ್ಲ. ಇದನ್ನು ಮೀರಿ ದೇವರ ಅನುಗ್ರಹ ಆಶೀರ್ವಾದ ಇರುತ್ತೆ ಅಂತ ಆ ರೀತಿ ಹೇಳಿದ್ದು." ಎಂದು ಕ್ಲಾರಿಟಿ ಕೊಟ್ಟಿದ್ದಾರೆ.
ಇನ್ನು ಅಜಯ್ ರಾವ್ ಕತೆಯನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಎಡವುತ್ತಿದ್ದಾರಾ? ಎಂದು ಪ್ರಶ್ನೆ ಮಾಡಲಾಗಿತ್ತು. ಅದಕ್ಕೂ ಸ್ಪಷ್ಟೀಕರಣ ನೀಡಿದ್ದಾರೆ. "ಕಥೆಗಳ ಆಯ್ಕೆಯಲ್ಲಿ ತಪ್ಪಾಗಿದೆ ಅಂತಲ್ಲ. ಅವತ್ತಿನ ಕಾಲದಲ್ಲಿ ಬಂದ 10 ಕಥೆಗಳಲ್ಲಿ ಬೆಸ್ಟ್ ಯಾವುದು ಇತ್ತೋ ಅದನ್ನೇ ಆಯ್ಕೆ ಮಾಡಿದ್ದು. ಆ ಆಯ್ಕೆಗಳಲ್ಲಿ ಬಿಟ್ಟಿದ್ದೀನಿ ಅಂದರೆ, ಇದಕ್ಕಿಂತ ಎಷ್ಟು ಕೆಟ್ಟದಾಗಿದೆ ಅಂತ ಯೋಚನೆ ಮಾಡಿ." ಎಂದಿದ್ದಾರೆ.
"ಅಂಕಿ ಅಂಶಗಳನ್ನು ನೋಡಿದರೆ, ವರ್ಷಕ್ಕೆ 30 ಸಾವಿರ ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ. ಕೇವಲ ಭಾರತದಲ್ಲಿ ನಾನು ಹೇಳುತ್ತಿರೋದು. ನೈಜ ಘಟನೆ ಅಂತ ಕೇಳಿದರೆ, ವರ್ಷಕ್ಕೆ 30 ಸಾವಿರ ನೈಜ ಘಟನೆಯ ಕೇಸ್ಗಳು ಇದ್ದಾವೆ. ಈಗ ನಾವು ಮಾತಾಡುತ್ತಿರುವಾಗ ಯಾವುದೋ ಒಂದು ಹೆಣ್ಣು ಮಗಳ ಮೇಲೆ ಅತ್ಯಾಚಾರ ನಡೆಯುತ್ತಿರುತ್ತೆ. ನೀವು ಯಾವುದೇ ಹೆಣ್ಣು ಮಗುಗೆ ಹೋಗಿ ಹೇಳಿದರೆ, ಯಾವುದೋ ಒಂದು ರೀತಿಯಲ್ಲಿ, ಹಂತದಲ್ಲಿ ಅತ್ಯಾಚಾರ ಆಗಿರುತ್ತೆ. ಎಲ್ಲಿ ಹೆಣ್ಣು ಮಕ್ಕಳು ಖುಷಿ ಖುಷಿಯಾಗಿರುತ್ತಾರೆ. ಅಲ್ಲಿ ಆ ದೇಶ, ಆ ಸ್ಥಳ ಖುಷಿಯಾಗಿರುತ್ತೆ ಅಂತ" ಎಂದು ಮಾಹಿತಿ ನೀಡಿದ್ದಾರೆ.
" ಈ ಸಿನಿಮಾ ನೋಡಿದ ಮೇಲೆ ನಾವು ಹೇಗಿದ್ದೀವಿ ಅಂತ ಗಂಡು ಮಕ್ಕಳಿಗೆ ಒಂದು ಪ್ರಶ್ನೆ ಕಾಡುತ್ತೆ. ಸಿನಿಮಾ ನೋಡಿದ ಮೇಲೆ ಹೆಣ್ಣು ಮಕ್ಕಳಿಗೂ ಈತರದವರು ಇದ್ದಾರಲ್ಲ ಅಂತ ನಂಬಿಕೆ ಬರುತ್ತೆ. ಭರತ್ ಅನ್ನು ಪಾತ್ರ ನ್ಯಾಯಕ್ಕಾಗಿ ಇದ್ದಾರಲ್ಲ ಅಂತ ಅನಿಸುತ್ತೆ. ಇಂತಹ ಗಂಡು ಮಕ್ಕಳು ಕೂಡ ಇದ್ದಾರೆ. ಈ ಸಿನಿಮಾ ನೋಡಿದ ಮೇಲೆ ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳುವಂತಹ ಸನ್ನಿವೇಶ ಕ್ರಿಯೇಟ್ ಮಾಡುತ್ತೆ." ಎಂದು ಭರವಸೆ ನೀಡುತ್ತಾರೆ.
ಇನ್ನು ಈ ಸಿನಿಮಾ ಕತೆಯ ಬಗ್ಗೆ ನಿರ್ದೇಶಕರ ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದಾರೆ. "ಮೊದಲು ಕಥೆ ಇದೆಯಲ್ಲ ಅದೇ ಸಿನಿಮಾದ ಶಕ್ತಿ. ಎಂತಹ ಒಳ್ಳೆಯ ಆಕ್ಟರ್ ಹಾಕಿದರೂ, ಒಳ್ಳೆ ತಂತ್ರಜ್ಞರನ್ನು ಹಾಕಿದರೂ, ಎಷ್ಟೇ ಖರ್ಚು ಮಾಡಿದರೂ ಕಂಟೆಂಟ್ ಸ್ಟ್ರಾಂಗ್ ಇಲ್ಲ ಅಂದರೆ, ಏನು ಮಾಡಿದರೂ ವ್ಯರ್ಥನೇ. ನನಗೆ ಪವನ್ ತಗೆದುಕೊಂಡು ಬಂದಂತಹ ಕಂಟೆಂಟ್ ನನಗೆ ಇಷ್ಟ ಆಯ್ತು." ಎಂದು ಹೇಳಿದ್ದಾರೆ.
ಹಾಗೇ ಈ ಸಿನಿಮಾಗೆ ಬಜೆಟ್ ಎಷ್ಟಾಗಿದೆ ಅಂತಾನೂ ಗೊತ್ತಿಲ್ಲ ಎನ್ನುತ್ತಾರೆ ಅಜಯ್ ರಾವ್. "ರೆಗ್ಯೂಲರ್ ಕಮರ್ಷಿಯಲ್ ಸಿನಿಮಾ ಮಾಡಿದಾಗ ಇದು ವರ್ಕ್ ಆಗುತ್ತೆ ಅಂತ ಲೆಕ್ಕ ಹಾಕುತ್ತೇವೆ. ಆದರೆ, ಇದು ವರ್ಕ್ ಆಗಲೇ ಬೇಕು ಅಂತ ಮಾಡಿರುವ ಸಿನಿಮಾ. ನಾನು ಹೇಳಿದಾಗ ಹಾಗೆ, ನನ್ನ ಹೆಂಡ್ತಿ, ನನ್ನ ಮಗಳು, ನನಗೆ ಅಮ್ಮ ಇದ್ದಾರೆ. ನನಗೆ ಹೆಣ್ಣು ಮಕ್ಕಳ ಎಮೋಷನ್ಸ್ ಚೆನ್ನಾಗೇ ಗೊತ್ತು. ಈ ಸಿನಿಮಾದ ಕತೆ ಕೇಳುವಾಗಲೂ ಅತ್ತಿದ್ದೀನಿ. ಸೀನ್ ಶೂಟ್ ಮಾಡುವಾಗಲೂ ಅತ್ತಿದ್ದೀನಿ. ಎಡಿಟ್ ಮಾಡುವಾಗಲೂ ಅತ್ತಿದ್ದೀನಿ. ಈ ಸಿನಿಮಾ ಒಬ್ಬ ತಂದೆಯಾಗಿ ಅಷ್ಟು ಎಮೋಷನಲ್ ಆಗಿ ಟಚ್ ಆಗುತ್ತೆ. ಎನ್ನುತ್ತಾರೆ ಅಜಯ್ ರಾವ್.


Click it and Unblock the Notifications











