"ಜಾತಿನೇ ಇರಬಾರದು ಎನ್ನುವುದು ಅಂಬೇಡ್ಕರ್ ಹಾಗೂ ಪೆರಿಯಾರ್ ವಾದವಾಗಿತ್ತು"; ಆದಿನಗಳು ಚೇತನ್
ಆದಿನಗಳು ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ನಟ ಚೇತನ್ ಈಗ ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳಿಗಿಂತ ಹೆಚ್ಚಾಗಿ ಹೋರಾಟದಲ್ಲಿ ನಿರತರಾಗಿದ್ದಾರೆ. ಸರ್ಕಾರದ ವಿರುದ್ಧ, ರಾಜಕಾರಣಿಗಳ ವಿರುದ್ಧ ಚೇತನ್ ಆಗಾಗ ಸಿಡಿದೇಳುತ್ತಲೇ ಇರುತ್ತಾರೆ. ಜಾತಿ ವ್ಯವಸ್ಥೆಯನ್ನು ಖಂಡಿಸುತ್ತಾ ಬಂದಿದ್ದಾರೆ. ಇದು ಕೆಲವೊಮ್ಮೆ ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ.
ನಾಲ್ಕು ವರ್ಷಗಳ ಹಿಂದೆ ಬ್ರಾಹ್ಮಣತ್ವದ ಬಗ್ಗೆ ಹೇಳಿಕೆಗಳನ್ನು ಕೊಟ್ಟು ವಿವಾದಕ್ಕೆ ಸಿಕ್ಕಿಕೊಂಡಿದ್ದರು. ಈ ಸಂಬಂಧ ಇವರ ವಿರುದ್ಧ ಕೇಸ್ಗಳು ಕೂಡ ದಾಖಲಾಗಿದ್ದವು. ಬಾಬಾ ಸಾಹೇಬ್ ಅಂಬೇಡ್ಕರ್, ಪೆರಿಯರ್, ಜ್ಯೋತಿಬಾ ಫುಲೆ ಅವರ ಸಿದ್ಧಾಂತಗಳಿಂದ ಪ್ರೇರಿತರಾಗಿದ್ದಾರೆ. ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇರಬಾರದು ಎನ್ನುವುದು ಚೇತನ್ ಅಹಿಂಸಾ ಅವರ ವಾದ.

ಇತ್ತೀಚೆಗೆ ಚೇತನ್ ಅಹಿಂಸಾ ಬಿಯಾಂಡ್ ಲಿಮಿಟ್ಸ್ ಎಂಬ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದಾರೆ. ಇದರಲ್ಲಿ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಜಾತಿನೇ ಇರಬಾರದು ಎನ್ನುವುದು ಅಂಬೇಡ್ಕರ್ ಹಾಗೂ ಪೆರಿಯಾರ್ ಇಬ್ಬರದ್ದೂ ವಾದವಾಗಿತ್ತು ಎಂದು ಹೇಳಿದ್ದಾರೆ. ಅಷ್ಟಕ್ಕೂ ನಟ ಚೇತನ್ ಅವರ ವಾದವೇನು? ಈ ಸಂದರ್ಶನದಲ್ಲಿ ಏನು ಹೇಳಿದ್ದಾರೆ? ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಈ ಸಂದರ್ಶನದಲ್ಲಿ ಆದಿನಗಳು ಖ್ಯಾತಿಯ ಚೇತನ್ ಯಾವುದೇ ಧರ್ಮ ಹಾಗೂ ಜಾತಿಯವರು ನಮ್ಮ ವಿರೋಧಿಗಳಲ್ಲ. ಈ ದೇಶದಲ್ಲಿರುವ ವ್ಯವಸ್ಥೆಯೇ ಅನ್ಯಾಯದಿಂದ ಕೂಡಿದೆ ಎಂದು ವಾದಿಸಿದ್ದಾರೆ. ಸಾಕಷ್ಟು ಮಂದಿ ಬ್ರಾಹ್ಮಣ ಸಮುದಾಯದವರು ಅಂಬೇಡ್ಕರ್ ಅವರ ಜೊತೆ ಗಟ್ಟಿಯಾಗಿ ನಿಂತಿದ್ದರು ಎಂದು ಚೇತನ್ ಅಹಿಂಸಾ ಬಿಯಾಂಡ್ ಲಿಮಿಟ್ಸ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

"ಈ ವ್ಯವಸ್ಥೆಯ ತಪ್ಪನ್ನು ಯಾವುದೇ ಜನಾಂಗದ ಮೇಲೆ ನಾನು ಹಾಕುವುದಲ್ಲ. ನಾನು ಈ ವ್ಯವಸ್ಥೆಯ ಮೇಲೆ ತಪ್ಪನ್ನು ಹಾಕುತ್ತೇನೆ. ಈ ವ್ಯವಸ್ಥೆಯೇ ಅನ್ಯಾಯವಾಗಿದೆ. ನಮ್ಮ ಶತ್ರು ಯಾವ ಧರ್ಮದವರಲ್ಲ, ಯಾವ ಜಾತಿಯವರಲ್ಲ. ನಮ್ಮ ಶತ್ರು ಇರೋದು ಯಾವ ಭಾಷಿಗರಲ್ಲಿ ಅಲ್ಲ. ಈ ಅಸಮಾನತೆ ಮತ್ತು ಅನ್ಯಾಯದಿಂದ ಕೂಡಿರುವ ಈ ವ್ಯವಸ್ಥೆ. ನಾನು ಈ ಅನ್ಯಾಯದ ವ್ಯವಸ್ಥೆಯ ವಿರುದ್ಧ ಗಟ್ಟಿಯಾದ ವಿರೋಧ ತರಬೇಕು. ಬಾಬಾ ಸಾಹೇಬ್ ಜೀವಮಾದಲ್ಲೂ ಸಹ, ಬಹಳ ಜನ ಬ್ರಾಹ್ಮಣ ಸಮುದಾಯದವರು ಇವರೊಂದಿಗೆ ಗಟ್ಟಿಯಾಗಿ ಆ ಬ್ರಾಹ್ಮಣ ಸಮುದಾಯದ ವಿರುದ್ಧ ನಿಂತುಕೊಂಡವರಿದ್ದರು. ಸವೀತಾ ಅಂಬೇಡ್ಕರ್ ಅವರು ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿದವರು ಅವರೊಂದಿಗೆ ಗಟ್ಟಿಯಾಗಿ ನಿಂತಿದ್ದರು." ಎಂದು ಚೇತನ್ ಹೇಳಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ವೀರ ಸಾವರ್ಕರ್ ಅತಿಥಿಯಾಗಿ ಕರೆಸಿದ್ದರು. ಆ ವೇಳೆ ಅಂಬೇಡ್ಕರ್ ಜಾತಿ ವ್ಯವಸ್ಥೆಯ ಬಗ್ಗೆ ಮಾತಾಡಿದ್ದನ್ನು ಈ ಸಂದರ್ಶನದಲ್ಲಿ ಉಲ್ಲೇಖಿಸಿದ್ದಾರೆ. "1933ರಲ್ಲಿ ಸಾವರ್ಕರ್ ರತ್ನಗಿರಿ ಫೋರ್ಟ್ಗೆ ಬಾಬಾ ಸಾಹೇಬ್ ಅವರನ್ನು ಗೆಸ್ಟ್ ಆಗಿ ಕರೆಸುತ್ತಾರೆ. ಆ ಪಾತ್ರದಲ್ಲಿ ಇವರು ಉಲ್ಲೇಖವನ್ನು ಮಾಡುತ್ತಾರೆ. ನೀವೆಲ್ಲ ನಿಮ್ಮ ರೀತಿಯಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದೀರಿ ಭೇಷ್. ಆದರೆ, ನಮ್ಮ ಶತ್ರು ಅಸ್ಪಶ್ಯತೆ ಮಾತ್ರ ಅಲ್ಲ. ನಮ್ಮ ಶತ್ರು ಇಡೀ ಜಾತಿ ವ್ಯವಸ್ಥೆ. ಅದು ಅಂಬೇಡ್ಕರ್ ಅವರ ಕ್ರಾಂತಿ. ಜಾತಿ ವ್ಯವಸ್ಥೆಗೆ ವಿರುದ್ಧ ಮಾಡಬೇಕು ಅಂತ." ಎಂದು ಹೇಳಿದ್ದಾರೆ.
ಜಾತಿ ವ್ಯವಸ್ಥೆಯ ಬಗ್ಗೆ ಹಲವು ವರ್ಷಗಳಿಂದ ಧ್ವನಿ ಎತ್ತುತ್ತಲೇ ಬಂದಿರುವ ಚೇತನ್ ಈ ಸಂದರ್ಶನದಲ್ಲಿ ಅಂಬೇಡ್ಕರ್ ಹಾಗೂ ಪೆರಿಯರ್ ಅವರ ನಿಲುವುಗನ್ನು ಪ್ರಸ್ತಾಪಿಸಿದ್ದಾರೆ. "ಜಾತಿನೇ ಇರಬಾರದು ಎನ್ನುವುದು ಅಂಬೇಡ್ಕರ್ ಹಾಗೂ ಪೆರಿಯಾರ್ ಇಬ್ಬರದ್ದೂ ವಾದವಾಗಿತ್ತು. ಯಾಕೆ ಅಂದರೆ, 1957ರಲ್ಲಿ ಕೆಲವು ಪುಟಗಳನ್ನು ತಂದೆ ಪೆರಿಯಾರ್ ಸಂವಿಧಾನದಲ್ಲಿ ಸುಡುತ್ತಾರೆ. ಅದ್ಯಾವ ಪುಟಗಳು ಅಂದರೆ, ಆಪುಟಗಳು ಅಸ್ಪೃಶ್ಯತೆಯನ್ನೇ ಬ್ಯಾನ್ ಮಾಡುತ್ತೆ. ಆದರೆ, ಜಾತಿಯನ್ನು ಬ್ಯಾನ್ ಮಾಡುವುದಿಲ್ಲ. ಈಗಲೂ ಸಂವಿಧಾನವನ್ನು ನೋಡಿದರೆ, ಅಸ್ಪೃಶ್ಯತೆ ಬ್ಯಾನ್ ಆಗಿದೆ. ಆದರೆ, ಜಾತಿ ಬ್ಯಾನ್ ಆಗಿಲ್ಲ." ಎಂದು ಚೇತನ್ ಹೇಳಿದ್ದಾರೆ.


Click it and Unblock the Notifications











