ಕನ್ವರ್ಲಾಲ್ ಲುಕ್ ಕೊಟ್ಟು ವಿದೇಶ ಹೊರಟ 'ಡೆವಿಲ್'; ಕೋರ್ಟ್ ಪರ್ಮಿಷನ್ ಕೊಟ್ಟಿದ್ದು ಎಷ್ಟು ದಿನ?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನಿನ ಮೇಲೆ ಹೊರಗೆ ಇದ್ದಾರೆ. ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ನಟಿಸುತ್ತಿದ್ದ 'ಡೆವಿಲ್' ಸಿನಿಮಾದ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಮೈಸೂರು, ರಾಜಸ್ಥಾನ್ನ ಹಲವು ಕಡೆಗಳಲ್ಲಿ ಸಿನಿಮಾದ ಶೂಟಿಂಗ್ ಮಾಡಲಾಗಿತ್ತು. ಬಳಿಕ ಸದ್ದಿಲ್ಲದೆ ಸಿನಿಮಾದ ಟಾಕಿ ಪೋಷನ್ ಅನ್ನು ಶೂಟ್ ಮಾಡಿ ಮುಗಿಸಿದ್ದಾರೆ.
ಡೆವಿಲ್ ಸಿನಿಮಾದ ಟಾಕಿ ಪೋಷನ್ ಬಹುತೇಕ ಮುಗಿದಿದ್ದು, ಇನ್ನು ಹಾಡುಗಳ ಚಿತ್ರೀಕರಣ ಬಾಕಿಯಿದೆ. ಈ ಕಾರಣಕ್ಕೆ ಇತ್ತೀಚೆಗೆ ದರ್ಶನ್ ವಿದೇಶಕ್ಕೆ ತೆರಳುವುದಕ್ಕೆ ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ಕೋರ್ಟ್ ಕೂಡ ವಿದೇಶಕ್ಕೆ ತೆರಳುವುದಕ್ಕೆ ಅನುಮತಿಯನ್ನು ನೀಡಿದೆ. ಅದಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹಳ ದಿನಗಳ ಬಳಿಕ ವಿದೇಶಕ್ಕೆ ತೆರಳುತ್ತಿದ್ದಾರೆ. ಸಾಮಾನ್ಯವಾಗಿ ಅವರ ಸಿನಿಮಾದ ಒಂದಲ್ಲ ಒಂದು ಹಾಡು ವಿದೇಶದಲ್ಲಿ ಚಿತ್ರೀಕರಣ ಆಗೇ ಆಗುತ್ತೆ. ಆದರೆ, ಈ ಹಿಂದೆ ತೆರೆಕಂಡಿರುವ 'ಕಾಟೇರ' ಸಿನಿಮಾಗೆ ವಿದೇಶಕ್ಕೆ ತೆರಳುವ ಅವಕಾಶವಿರಲಿಲ್ಲ. ಈಗ 'ಡೆವಿಲ್' ಸಿನಿಮಾದಿಂದ ಮತ್ತೆ ಆ ಪರಂಪರೆ ಮುಂದುವರೆದಿದೆ. ವಿದೇಶಕ್ಕೆ ತೆರಳುವುದಕ್ಕೂ ಮುನ್ನ ಚಿತ್ರತಂಡ ಒಂದು ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಅದರಲ್ಲಿ ರೆಬೆಲ್ ಸ್ಟಾರ್ ಕನ್ವರ್ಲಾಲ್ ಲುಕ್ ಕೊಟ್ಟಿದ್ದಾರೆ. ಹಾಗಿದ್ದರೆ, ಹೊಸ ಪೋಸ್ಟರ್ ಹೇಗಿದೆ? ವಿದೇಶಕ್ಕೆ ಚಿತ್ರೀಕರಣಕ್ಕೆ ತೆರಳುವುದು ಯಾವಾಗ? ತಿಳಿಯುವುದಕ್ಕೆ ಮುಂದೆ ಓದಿ.
ಕನ್ವರ್ಲಾಲ್ ಲುಕ್ ಕೊಟ್ಟ ದರ್ಶನ್
ರೆಬೆಲ್ಸ್ಟಾರ್ ಅಂಬರೀಶ್ ನಟಿಸಿದ ಎವರ್ಗ್ರೀನ್ ಸಿನಿಮಾ 'ಅಂತ'. ಈ ಸಿನಿಮಾದಲ್ಲಿ ಅಂಬಿ ಕನ್ವರ್ಲಾಲ್ ಪಾತ್ರದಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದರು. ಇದೇ 'ಡೆವಿಲ್' ಸಿನಿಮಾದಲ್ಲಿ ದರ್ಶನ್ ಈಗ ಕನ್ವರ್ಲಾಲ್ ಲುಕ್ ಕೊಟ್ಟಿದ್ದಾರೆ. ಆ ಲುಕ್ನ ಪೋಸ್ಟರ್ ಅನ್ನು ನಿರ್ದೇಶಕ ಪ್ರಕಾಶ್ ರಿವೀಲ್ ಮಾಡಿದ್ದಾರೆ. ಈ ಪೋಸ್ಟರ್ ದರ್ಶನ್ ಅಭಿಮಾನಿಗಳಿಗಂತೂ ಕಿಕ್ ಕೊಟ್ಟಿದೆ.
ಹಾಗೇ ಟಾಕಿ ಪೋಷನ್ ಕಂಪ್ಲೀಟ್ ಆಗಿರುವ ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದಾರೆ. 'ಡೆವಿಲ್' ಸಿನಿಮಾ ದರ್ಶನ್ಗೆ ಹೊಸ ಇಮೇಜ್ ಕೊಡುತ್ತೆ ಎನ್ನುವ ಮಾತುಗಳು ಕೇಳಿ ಬಂದಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ವೃತ್ತಿ ಬದುಕಿನಲ್ಲಿ ಕೊಂಚ ಹಿನ್ನಡೆ ಕಂಡಿರುವ ದರ್ಶನ್ಗೆ ಡೆವಿಲ್ ಬೂಸ್ಟ್ ಕೊಡಲಿದೆ ಎಂದು ಸಿನಿಮಾ ಮಂದಿ ಭವಿಷ್ಯ ನುಡಿಯುತ್ತಿದ್ದಾರೆ. ವೇಗವಾಗಿ ಶೂಟಿಂಗ್ ಮಾಡುತ್ತಿರುವುದು ನೋಡಿದರೆ, ಇದೇ ವರ್ಷ 'ಡೆವಿಲ್' ರಿಲೀಸ್ ಆಗೋದು ಕನ್ಫರ್ಮ್.

ವಿದೇಶಕ್ಕೆ ತೆರಳುವುದು ಯಾವಾಗ?
'ಡೆವಿಲ್' ಶೂಟಿಂಗ್ಗಾಗಿ ವಿದೇಶಕಕ್ಕೆ ತೆರಳುವುದಕ್ಕೆಂದು ಅನುಮತಿ ಕೋರಿ ದರ್ಶನ್ 57ನೇ ಸಿಸಿಎಚ್ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯಲ್ಲಿ ಸಿನಿಮಾ ಶೂಟಿಂಗ್ ನಿಮಿತ್ತ ದುಬೈಗೆ ತೆರಳಬೇಕಿದ್ದು, ಜೂನ್ 1 ರಿಂದ ಜೂನ್ 25ರವರೆಗೆ ಅನುಮತಿಯನ್ನು ಕೋರಿದ್ದರು. ಈ ಅರ್ಜಿಯ ವಿಚಾರಣೆಯನ್ನು ನಡೆಸಿದ ಕೋರ್ಟ್ ನಿನ್ನೆ (ಮೇ 30) ದರ್ಶನ್ಗೆ ಅನುಮತಿಯನ್ನು ನೀಡಿದೆ.
ದರ್ಶನ್ ವಿದೇಶಕ್ಕೆ ತೆರಳುವ ಅರ್ಜಿ ವಿಚಾರಣೆಗೆ ಬಂದಾಗ ಸರ್ಕಾರದ ಪರ ವಕೀಲರು ವಿರೋಧಿಸಿದ್ದರು. ಹತ್ಯೆ ಕೇಸ್ನಲ್ಲಿ ಎರಡನೇ ಆರೋಪಿಯಾಗಿದ್ದರಿಂದ ವಿದೇಶಕ್ಕೆ ತೆರಳುವುದಕ್ಕೆ ಅನುಮತಿಯನ್ನು ನೀಡಬಾರದು. ಹಿಂತಿರುಗಿ ಬರುವ ಗ್ಯಾರಂಟಿ ಇರುದಿಲ್ಲವೆಂದು ವಾದಿಸಿದ್ದರು. ಎರಡು ಕಡೆ ವಕೀಲರ ವಾದವನ್ನು ಆಲಿಸಿದ ಬಳಿಕ ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿ ಅನುಮತಿ ನೀಡಿದೆ. ಆರಂಭದಲ್ಲಿ ಜಾಮೀನು ನೀಡುವಾಗ ಕೆಲವು ಶರತ್ತುಗಳನ್ನು ವಿಧಿಸಲಾಗಿತ್ತು. ಆದ್ರೀಗ ಆ ಷರತ್ತುಗಳನ್ನು ಸಡಿಲಗೊಳಿಸಿ, ವಿದೇಶಕ್ಕೆ ತೆರಳುವುದಕ್ಕೆ ಕೋರ್ಟ್ ಅನುಮತಿಯನ್ನು ನೀಡಲಾಗಿದೆ.


Click it and Unblock the Notifications











