"ಯೋಗ-ಯೋಗ್ಯತೆ ಇದ್ದರೇ ಇಲ್ಲಿ ಚಪ್ಪಾಳೆ ತಟ್ಟೋದು"; ವಿಷ್ಣುದಾದ ಡೈಲಾಗ್ ಉಪ್ಪಿ ಬಿಟ್ಟಿದ್ದೇಕೆ?
ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ 'ಕೋಟಿಗೊಬ್ಬ' ರಿಲೀಸ್ ಆಗಿ 25 ವರ್ಷ ಆಗಿದೆ. ವಿಷ್ಣುದಾದ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಸಕ್ಸಸ್ ಕಂಡ ಸಿನಿಮಾಗಳಲ್ಲಿ 'ಕೋಟಿಗೊಬ್ಬ' ಕೂಡ ಒಂದು. ಸೂರಪ್ಪ ಬಾಬು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. 25 ವರ್ಷಗಳ ಈ ಸಂಭ್ರಮವನ್ನು ಹಂಚಿಕೊಳ್ಳಲು ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
'ಕೋಟಿಗೊಬ್ಬ' 25ರ ಸಂಭ್ರಮದ ಈ ವಿಶೇಷ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರು ಆಗಮಿಸಿದ್ದರು. ರಿಯಲ್ಸ್ಟಾರ್ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ಡೈನಾಮಿಕ್ ಸ್ಟಾರ್ ದೇವರಾಜ್ ಸೇರಿದಂತೆ ಗಣ್ಯರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. 'ಕೋಟಿಗೊಬ್ಬ' ಸಿನಿಮಾದಲ್ಲಿ ಕೆಲಸ ಮಾಡಿದ್ದ ಹಲವು ಕಲಾವಿದರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಿದ್ದು ವಿಶೇಷ. ಒಬ್ಬೊಬ್ಬ ಕಲಾವಿದರು ಕೂಡ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

'ಕೋಟಿಗೊಬ್ಬ' ಸಿನಿಮಾ 2001, ನವೆಂಬರ್ 16ರಂದು ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಈ ಸಿನಿಮಾವನ್ನು ನಾಗಣ್ಣ ನಿರ್ದೇಶನ ಮಾಡಿದ್ದರೆ, ಸೂರಪ್ಪ ಬಾಬು ನಿರ್ಮಾಣವನ್ನು ಮಾಡಿದ್ದಾರೆ. ಈ ಸಿನಿಮಾ 25 ವರ್ಷಗಳನ್ನು ಪೂರೈಸಿದ ಬೆನ್ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ವೇಳೆ ವಿಶೇಷ ಅತಿಥಿಯಾಗಿ ಬಂದಿದ್ದ ರಿಯಲ್ ಸ್ಟಾರ್ ಉಪೇಂದ್ರ, ವಿಷ್ಣುದಾದ ಹೇಳಿದ್ದ ಮಾತುಗಳನ್ನು ಈ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.
"ನನ್ನ ಲೈಫ್ನಲ್ಲಿ ಮೊದಲ ಬಾರಿ ವಿಷ್ಣು ಸರ್ ಸಿನಿಮಾ ನೋಡಿದ್ದು ನಾಗರಹಾವು. ನಾನಿನ್ನು ಚಿಕ್ಕ ಹುಡುಗ. ಅದು ಹೇಗೆ ನೆನಪಿದೆ ಅಂದರೆ, ನಮ್ಮ ಅಮ್ಮ ಇನ್ನೊಂದು ವಿಷ್ಣು ಸರ್ ಸಿನಿಮಾಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನಾನು ಅಮ್ಮ ರಾಮಾಚಾರಿ ಅಂತ ಕೂಗುತ್ತಿದ್ನಂತೆ. ಆಗ ಅವರಿಗೆ ಗೊತ್ತಾಯ್ತಂತೆ ಇವನು ನೋಡಿದ ಮೊದಲ ಸಿನಿಮಾ ನಾಗರಹಾವು ಅಂತ. ನೋಡಿ ಗೊತ್ತಿಲ್ಲದೆ ಅವರ ಬರ್ತ್ಡೇಯನ್ನೂ ಹಂಚಿಕೊಂಡಿದ್ದೇನೆ. ಯಾವಾಗಲೂ ಸಿಕ್ಕಾಗ ಹೇಳುತ್ತಿದ್ದಂತೆ ಸರ್ ನಾವಿಬ್ಬರು ಸೇರಿ ಬರ್ತ್ಡೇ ಮಾಡಬೇಕು ಅಂದಾಗ, ನಾವು ಸೇರೋ ದಿನವೆಲ್ಲ ಬರ್ತ್ಡೇ ಬಿಡಿ ಅನ್ನೋರು" ಎಂದು ವಿಷ್ಣುದಾದರನ್ನು ನೆನಪಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ ವಿಷ್ಣುವರ್ಧನ್ ಅವರ ಮಿಮಿಕ್ರಿ ಹಾಗೂ ಅವರು ಹೇಳುತ್ತಿದ್ದ ಫಿಲಾಸಫಿಕಲ್ ಮಾತುಗಳ ಬಗ್ಗೆನೂ ರಿವೀಲ್ ಮಾಡಿದ್ದಾರೆ. "ಅವರು ತುಂಬಾ ಒಳ್ಳೆಯ ಮಿಮಿಕ್ರಿ ಆರ್ಟಿಸ್ಟ್. ಅದ್ಭುತವಾಗಿ ಮಿಮಿಕ್ರಿ ಮಾಡೋರು. ಎಲ್ಲರನ್ನೂ ಹೇಗೆ ಮಿಮಿಕ್ರಿ ಮಾಡೋರು ಅಂದರೆ, ಒಂದೊಂದು ಗಂಟೆ ನೋಡುತ್ತಾ ಕೂತುಬಿಡುತ್ತಿದ್ದೆ. ಅದರ ಮಧ್ಯೆ ಒಂದು ಫೇಮಸ್ ಡೈಲಾಗ್ ಹೇಳೋರು. ಅದೇನಂದ್ರೆ, ಒಬ್ಬ ಮನುಷ್ಯನಿಗೆ ಯೋಗ ಬರುತ್ತೆ. ಅದನ್ನು ಉಳಿಸಿಕೊಳ್ಳುವ ಯೋಗ್ಯತೆ ಇರಬೇಕು. ಯೋಗ ಮತ್ತು ಯೋಗ್ಯತೆ ಇದ್ದರೇ ಈ ಸಿನಿಮಾರಂಗದಲ್ಲಿ ಚಪ್ಪಾಳೆ ತಟ್ಟೋದು ಅಂತ. ಇನ್ನೊಂದು ವಿಷಯ ಹೇಳೋರು ಅವನನ್ನು ಸಂಪೂರ್ಣ ಒಪ್ಪಿಕೊಳ್ಳಿ. ಅವನು ನಿಮ್ಮನ್ನು ಸಂಪೂರ್ಣ ಅಪ್ಪಿಕೊಳ್ತಾನೆ ಅಂತ. ಅದೇ ವಿಷ್ಣು ಸಾರ್." ಎಂದು ಉಪೇಂದ್ರ ಹೇಳಿದ್ದಾರೆ.

ಇದೇ ವೇಳೆ ವಿಷ್ಣುವರ್ಧನ್ ಅವರ ಸಿನಿಮಾಗಳನ್ನು ನಿರ್ಮಾಣ ಮಾಡಿದ ನಿರ್ಮಾಪಕರೆಲ್ಲರೂ ಅಭಿಮಾನಿಗಳೇ ಎಂದಿದ್ದಾರೆ. "ಒಬ್ಬ ಪ್ರೇಕ್ಷಕ ಸಿನಿಮಾ ನೋಡಿ ಒಬ್ಬ ಸ್ಟಾರ್ಗೆ ಅಭಿಮಾನಿಯಾಗುತ್ತಾರೆ. ಅದು ಮಾಮೂಲಿ. ಇವರದ್ದು ವಿಶೇಷ ಏನು ಅಂದರೆ, ಇವರೊಂದಿಗೆ ಸಿನಿಮಾ ನಿರ್ಮಾಪಕರೆಲ್ಲರೂ ಫ್ಯಾನ್ಸ್ ಇವರಿಗೆ. ಅವರ ಕಟ್ಔಟ್ಗೆ ಅಭಿಮಾನಿಗಳು ಹಾಕುತ್ತಿದ್ದ ಹಾರವನ್ನು ಯಾರಿಗೂ ಹಾಕಿಲ್ಲ. ಕಟ್ಔಟ್ ಅಂದರೆ ಹಾಗೇ ಮೇಲಿಂದ ಕೆಳಗಿನ ವರೆಗೂ ಹಾರ ಹಾಕಿ ಸಂಭ್ರಮಿಸುತ್ತಿದ್ರಿ." ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.
ಹಾಗೇ ನಾಗರಹಾವು ಸಿನಿಮಾದ ಹಾಡಿನ ಸಾಲುಗಳನ್ನು ಮೆಚ್ಚಿಕೊಂಡಿದ್ದಾರೆ. "ಈ ಅಂಜದ ಎದೆಯಲಿ.. ನಂಜೇ ಇಲ್ಲ. ತಗ್ಗುವ ಆಳಲ್ಲ. ತಲೆ ತಗ್ಗಿಸಿ ಬಾಳಲ್ಲ. ಈ ರಾಮಾಚಾರಿ ಕೆಣಕೋ ಗಂಡು ಇನ್ನೂ ಹುಟ್ಟಿಲ್ಲ. ಆ ಸಿನಿಮಾ ನೆನೆಪಿಸಿಕೊಂಡರೇ ರೋಮಾಂಚನ ಆಗುತ್ತೆ. ಕೋಟಿಗೊಬ್ಬ 25 ವರ್ಷ ಆಗಿರೋದು, ಅದನ್ನು ರಿ-ರಿಲೀಸ್ ಮಾಡುತ್ತಿರೋದು ವಿಶೇಷ. ಈ ಸಿನಿಮಾ ನಮ್ಮ ಶ್ರೀಮತಿ ನಟಿಸಿರೋದು ಇನ್ನೊಂದು ವಿಶೇಷ. ಅವರ ಸಿನಿಮಾಗಳೆಲ್ಲವೂ ರಿ-ರಿಲೀಸ್ ಆಗ್ತಾನೇ ಇರಬೇಕು." ಎಂದು ಶುಭ ಹಾರೈಸಿದ್ದಾರೆ.


Click it and Unblock the Notifications















