ಡಾ. ರಾಜ್ ಕುಮಾರ್ ಅಗಲಿದ ದಿನವನ್ನು ನೆನಪಿಸಿಕೊಂಡು ಭಾವುಕರಾದ ಜಗ್ಗೇಶ್
2006ರ ಏಪ್ರಿಲ್ 12 ಇಡೀ ರಾಜ್ಯಕ್ಕೆ ಆಘಾತಕಾರಿ ಸುದ್ದಿ ನೀಡಿದ ದಿನ. ಕನ್ನಡ ನಾಡು ಸೂತಕದಲ್ಲಿ ಮುಳುಗಿದ ದಿನ. ಡಾ. ರಾಜ್ ಕುಮಾರ್ ಎಂಬ ಮರೆಯಲಾಗದ ಮಾಣಿಕ್ಯ ಅಂದು ಜನಮಾನಸದಲ್ಲಿ ಕೇವಲ ನೆನಪಾಗಿ ಉಳಿಯುವಂತಾದ ನೋವಿನ ದಿನ. ಹದಿನಾಲ್ಕು ವರ್ಷಗಳ ಈ ದಿನಗಳಲ್ಲಿ ರಾಜ್ ಕುಮಾರ್ ಅವರ ಅಗಲುವಿಕೆ ಕಾಡುತ್ತಲೇ ಇದೆ. ಡಾ. ರಾಜಕುಮಾರ್ ಪುಣ್ಯತಿಥಿಯ ಈ ಸಂದರ್ಭದಲ್ಲಿ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಅವರನ್ನು ಸ್ಮರಿಸಿಕೊಂಡಿದ್ದಾರೆ.
Recommended Video
2006 ಶ್ರೀರಂಗಪಟ್ಟಣದಲ್ಲಿ 'ಪಾಂಡವರು' ಚಿತ್ರೀಕರಣದ ವಿರಾಮದಲ್ಲಿ ಅಂಬರೀಶ್ ರವರ ಊಟದ ಆತಿಥ್ಯ ಪಡೆದು ಕಾರಲ್ಲಿ ನಿದ್ರಿಸುತ್ತಿದ್ದೆ. ನನ್ನ ಸಹಾಯಕ, 'ರಾಜಣ್ಣ ಹೋದರು' ಅಂದ. ಮೇಕಪ್ ತೆಗೆಯದೆ ಬೆಂಗಳೂರಿಗೆ ಬಂದೆ. ಕಾವೇರಿ ಚಿತ್ರಂದಿರದ ಹತ್ತಿರ ಅಣ್ಣನ ದೇಹಹೊತ್ತ ವಾಹನ ಅಭಿಮಾನಿಗಳ ಕೈಯಲ್ಲಿತ್ತು ಎಂದು ಆ ದಿನದ ಉದ್ವೇಗ, ತಳಮಳದ ಕ್ಷಣಗಳನ್ನು ಜಗ್ಗೇಶ್ ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ...
ಜನರನ್ನು ಚೆದುರಿಸಲು ಪ್ರಯತ್ನ
ಆ ವಾಹನದಲ್ಲಿ ನೂರಾರು ಜನ ಇಷ್ಟಬಂದಂತೆ ವರ್ತನೆ ಮಾಡುತ್ತಿದ್ದರು. ಸಿಟ್ಟು ತಡೆಯಲಾಗಲಿಲ್ಲ. ಟಿವಿ ನಟ ಗಣೇಶ, ನಾನು, ಅಣ್ಣನ ಕೊನೆಗಾಲದವರೆಗಿನ ಸಹಾಯಕ ಹನುಮಂತ ಸೇರಿ ಜನರ ಚೆದುರಿಸಿ ಹೆದರಿಸಿ ಆ ವಾಹನ ಅಪಹರಣ ಮಾಡಿ ಸ್ಯಾಂಕಿಟ್ಯಾಂಕ್ ರಸ್ತೆಪಕ್ಕದಲ್ಲಿ ನಿಲ್ಲಿಸಿಕೊಂಡು ಕ್ಷೇಮವಾಗಿ ಅಣ್ಣನ ಪಾರ್ಥಿವ ಮನೆಗೆ ಸೇರಿಸಲು ಕಾರ್ಯರೂಪಿಸಲು ಮೊಬೈಲ್ ಕೈಗೆ ತೆಗೆದುಕೊಂಡೆ. ಗಲಾಟೆ ಜಾಸ್ತಿಯಾದ ಕಾರಣ ಮೊಬೈಲ್ ನಿಂತಿತು ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.
ಅವರ ಮಾತುಗಳು ನೆನಪಾದವು
ಏನು ಮಾಡಲು ತೋಚದೆ ಅಣ್ಣನ ಮುಖ ಆಗ ನೋಡಿದೆ. ಆಗಷ್ಟೇ ನಟಿಸಿ ಬಣ್ಣ ತೆಗೆದಂತೆ ಸೌಮ್ಯಮುಖ. ಅವರು ನನ್ನ ಜೊತೆ ಆಡಿದ ಮಾತುಗಳು ಮನದಲ್ಲಿ ಮೆಲ್ಲಗೆ ಒಂದೊಂದೆ ನೆನಪಾಗುತ್ತಿತ್ತು! ಅವರು ಹೇಳಿದ ಮಾತು ಒಂದು ನನ್ನನ್ನು ಇಂದಿಗು ಮರೆಯದಂತೆ ಮನದಲ್ಲಿ ಉಳಿಸಿದೆ ಎಂದಿದ್ದಾರೆ.
ನಮ್ಮ ಜೀವನ ಅಭಿಮಾನಿಗಳ ಕೈಯಲ್ಲಿ
ನಾವು ಯಾರು ನಮಗೆ ಗೊತ್ತಿಲ್ಲದೆ ಯಾರೋ ಕೊಟ್ಟ ಭಿಕ್ಷೆಗೆ ಏನೋ ಆದಂತೆ ಬೀಗುತ್ತೇವೆ. ನಮ್ಮ ಗುಣನಡತೆ ಸರಿಯಿಲ್ಲದಿದ್ದರೆ ನಮಗೆ ಅನ್ನಹಾಕುವ ದೇವರು ಮೃಷ್ಟಾನ್ನವನ್ನು ಭಿಕ್ಷಾನ್ನವಾಗಿ ಮಾಡುತ್ತಾನೆ. ಬಂದಾಗ ಹಿಗ್ಗದೆ ಹೋದಾಗ ಕುಗ್ಗದೆ ಇದ್ದವನೆ ನಿಜಮಾನವ. ನಮ್ಮ ಜೀವನ ಅಭಿಮಾನಿಗಳ ಕೈಯಲ್ಲಿ. ಅದಕ್ಕೆ ಅಭಿಮಾನಿ ದೇವರೆ ಎಂದು ಕರೆಯುವುದು. ಏನು ಇಲ್ಲದ ನಮ್ಮನ್ನ ರಾಜನ ಕುಮಾರ ಮಾಡಿದರು. ನನ್ನ ಮೊದಲ ನಮಸ್ಕಾರ ಎಂದು ಅವರಿಗೆ ಎಂದು ಸ್ಮರಿಸಿದ್ದಾರೆ.
ರಾಜಣ್ಣ ನನಗೆ ರಾಯರಂತೆ
ಅವರು ದೇವರ ಸೇರುವ ಒಂದು ತಿಂಗಳ ಹಿಂದೆ ಅವರ ಸಹೋದರನ ಸಾವಲ್ಲಿ ಅವರು ಹಿಡಿದಿಟ್ಟ ದುಃಖ ನೋಡಿ ಅಯ್ಯೋ ಇವರು ಹೊರಟರು ಅನ್ನಿಸಿತು ಮನ. ಹಾಗೆ ತಿಂಗಳಲ್ಲಿ ಹೋಗಿಯೇ ಬಿಟ್ಟರು! ನನ್ನ ಉಸಿರಲ್ಲಿ ಬೆರೆತ ನಟ. ದೇವರು ತಂದೆ ಮಾರ್ಗದರ್ಶಕ ನೆಪಕ್ಕೆ ಹೋಗಿದ್ದಾರೆ ಮಾನಸದಲ್ಲಿ ಜೀವಂತ ಉಳಿದಿದ್ದಾರೆ.. ಮುತ್ತಿನಂತ ಮಕ್ಕಳ ಉಳಿಸಿದ್ದಾರೆ! ರಾಜಣ್ಣ ನನಗೆ ರಾಯರಂತೆ..
ಸಹಸ್ರ ನಮನಗಳು
ನಟ ಸಾರ್ವಭೌಮ, ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ರವರ ಪುಣ್ಯಸ್ಮರಣೆಯಂದು ಅವರು ನಾಡು ನುಡಿಗೆ ನೀಡಿದ ಅನುಪಮ ಸೇವೆಗೆ ಸಹಸ್ರ ನಮನಗಳು. ಕನ್ನಡ ರಂಗಭೂಮಿ ಹಾಗೂ ಕನ್ನಡ ಚಿತ್ರರಂಗವು ಕನ್ನಡನಾಡಿಗೆ ನೀಡಿದ ಮಾಣಿಕ್ಯ ಡಾ.ರಾಜ್ ಕುಮಾರ್. ಶ್ರೇಷ್ಠ ಕಲಾವಿದರಾಗಿ ಹಾಗೂ ಶ್ರೇಷ್ಠ ವ್ಯಕ್ತಿಯಾಗಿ ಅವರ ವ್ಯಕ್ತಿತ್ವವು ಅನುಕರಣೀಯ ಹಾಗೂ ಆದರ್ಶವಾಗಿದೆ- ಬಿ. ಶ್ರೀರಾಮುಲು
ಅಜರಾಮರ
ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಸಾರ್ವಭೌಮ ನೀವೆಂದೆಂದು ನಮ್ಮ ಮನೆ ಮನಗಳಲ್ಲಿ ಅಜರಾಮರ- ನಿರ್ದೇಶಕ ಪವನ್ ಒಡೆಯರ್.
ಕನ್ನಡ ನಾಡಿನ ಸಾಂಸ್ಕೃತಿಕ ಶಕ್ತಿ
ಕನ್ನಡ ನಾಡಿನ ಸಾಂಸ್ಕೃತಿಕ ಶಕ್ತಿ, ಕನ್ನಡ ಚಿತ್ರರಂಗದ ಚಕ್ರವರ್ತಿ, ವರನಟ ಡಾ. ರಾಜ್ ಕುಮಾರ್ ಪುಣ್ಯಸ್ಮರಣೆಯಂದು ನನ್ನ ಶತ ಕೋಟಿ ನಮನಗಳು- ಜಗದೀಶ್ ಶೆಟ್ಟರ್
ಕನ್ನಡ ನಾಡಿನ ವೀರ ಕೇಸರಿ
ಚಂದನ ವನದ ಧ್ರುವತಾರೆ, ಕನ್ನಡ ನಾಡಿನ ವೀರ ಕೇಸರಿ, ಅಭಿಮಾನಿಗಳೇ ನನ್ನ ದೇವರು ಎನ್ನುತ್ತಾ ಅಭಿಮಾನಿಗಳ ಹೃದಯ ಸಾಮ್ರಾಟರಾಗಿರುವ ವರನಟ ಡಾ. ರಾಜ್ ಕುಮಾರ್ ಪುಣ್ಯಸ್ಮರಣೆಯಂದು ನನ್ನ ಕೋಟಿ ಕೋಟಿ ನಮನಗಳು- ಸುರೇಶ್ ಅಂಗಡಿ


Click it and Unblock the Notifications











