"ರೆಹಮಾನ್ ಸರ್, ಕ್ಷಮಿಸಿ.. ನೀವು ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಖಂಡಿತ ಇಲ್ಲ"- ನಟ ಕಿಶೋರ್
ಇತ್ತೀಚೆಗೆ ಎ.ಆರ್.ರೆಹಮಾನ್ ಕೊಟ್ಟಿರುವ ಹೇಳಿಕೆಯೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ತಾನು ಮುಸ್ಲಿಂ ಆಗಿರುವ ಕಾರಣಕ್ಕೆ ಬಾಲಿವುಡ್ನಲ್ಲಿ ತನಗೆ ಅವಕಾಶಗಳು ಸಿಗುತ್ತಿಲ್ಲ ಎಂದು ರೆಹಮಾನ್ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೆ ಕೊಟ್ಟಿದ್ದರು. ಈ ಮೂಲಕ ಬಾಲಿವುಡ್ನಲ್ಲಿ ಧರ್ಮದ ಆಧಾರದ ಮೇಲೆ ಬಿಗ್ ಬಜೆಟ್ ಸಿನಿಮಾಗಳಿಗೆ ಕೆಲಸ ಮಾಡುವ ಆಫರ್ಗಳು ಸಿಗುತ್ತವೆಂದಿದ್ದರು.
ಎ.ಆರ್. ರೆಹಮಾನ್ ಇಂತಹದ್ದೊಂದು ಹೇಳಿಕೆ ಕೊಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವಿವಾದದ ಕಿಡಿಯೇ ಹೊತ್ತಿತ್ತು. ನೆಟ್ಟಿಗರು ಎಆರ್ ರೆಹಮಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇನ್ನೊಂದು ಕಡೆ ಚಿತ್ರರಂಗದ ಅನೇಕ ಗಣ್ಯರು ಕೂಡ ರೆಹಮಾನ್ ಹೇಳಿಕೆಯನ್ನು ವಿರೋಧಿಸಿದ್ದರು. ತಾನು ಕೊಟ್ಟ ಹೇಳಿಕೆ ದೊಡ್ಡ ವಿವಾದ ಸೃಷ್ಟಿಯಾಗುತ್ತಿದ್ದಂತೆ ವಿಡಿಯೋ ಮೂಲಕ ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ರೆಹಮಾನ್ ಹೇಳಿದ್ದರು.

"ಯಾರಿಗೂ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಕೆಲವೊಮ್ಮೆ ನಾವು ಆಡಿದ ಮಾತು, ಅದರಲ್ಲಿರುವ ಉದ್ದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ಭಾರತ ದೇಶ ನನ್ನ ಮನೆ, ನನ್ನ ಸ್ಪೂರ್ತಿ ಹಾಗೂ ನನ್ನ ಗುರು. ಭಾರತದ ಸಂಸ್ಕೃತಿಯನ್ನು ಆಚರಿಸುವುದಕ್ಕೆ, ಗೌರವಿಸುವುದಕ್ಕೆ ಸಂಗೀತ ಒಂದು ಮಾರ್ಗವಾಗಿದೆ" ಎಂದು ವಿಡಿಯೋದಲ್ಲಿ ರೆಹಮಾನ್ ಹೇಳಿದ್ದರು. ಈಗ ಎಆರ್ ರೆಹಮಾನ್ ಕುರಿತು, ಈ ವಿವಾದದ ಕುರಿತು ಕನ್ನಡದ ಬಹುಭಾಷಾ ನಟ ಕಿಶೋರ್ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ "ರೆಹಮಾನ್ ಸರ್, ಕ್ಷಮಿಸಿ.. ನೀವು ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಖಂಡಿತ ಇಲ್ಲ" ಎಂದು ಹೇಳಿದ್ದಾರೆ.
ನಟ ಕಿಶೋರ್ ಕೇಂದ್ರ ಸರ್ಕಾರ, ಬಿಜೆಪಿ ಹಾಗೂ ಮೋದಿ ಸರ್ಕಾರವನ್ನು ಆಗಾಗ ಟೀಕಿಸುತ್ತಲೇ ಇರುತ್ತಾರೆ. ತಮ್ಮ ತೀಕ್ಷ್ಣವಾದ ಪದಗಳಿಂದ ಖಂಡಿಸುತ್ತಲೇ ಬಂದಿದ್ದಾರೆ. ಈಗ ಎಆರ್ ರೆಹಮಾನ್ ಬೆಂಬಲಕ್ಕೆ ನಿಂತಿತ್ತು. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸುಧೀರ್ಘವಾಗಿ ಬರೆದುಕೊಂಡಿದ್ದಾರೆ. ಸಂವಿಧಾನ, ದೇಶಪ್ರೇಮ, ಭಾಷೆ, ಧರ್ಮ, ತಾರತಮ್ಯದ ಬಗ್ಗೆ ಮಾತಾಡಿದ್ದಾರೆ. ಅವರು ಇನ್ಸ್ಟಾಗ್ರಾಂನಲ್ಲಿ ಮಾಡಿದ ಪೋಸ್ಟ್ ಹೀಗಿದೆ.
"ರೆಹಮಾನ್ ಸರ್, ಕ್ಷಮಿಸಿ"
"ಅಸಂವೈಧಾನಿಕವಾದರೂ ಕೂಡ ಜಾತಿ, ಭಾಷೆ, ದೇಶ, ಧರ್ಮಗಳ ತಾರತಮ್ಯ ಮಾಡದ ಸಂತರು ನಾವೆಂದುಕೊಂಡರೆ ನಾವು ಅತಿ ಸುಳ್ಳರೋ ಇಲ್ಲ ಅತಿ ಮೂರ್ಖರೋ ಆಗಿರಲೇಬೇಕು.
ರೆಹಮಾನ್ ಸರ್, ಕ್ಷಮಿಸಿ. ನಿಮ್ಮನ್ನು ದೇಶಪ್ರೇಮ ಸಾಬೀತು ಮಾಡಬೇಕಾದ ಹಂತಕ್ಕೆ ನೂಕಿದ್ದಕ್ಕೆ.. ನಿಮ್ಮ ಅನುಭವ, ನೋವು ಅದರ ಬಗ್ಗೆ ಅದರ ಪರಿಹಾರದ ಬಗ್ಗೆ ನಾವು ಒಂದು ಕ್ಷಣವಾದರೂ ನಿಂತು ಯೋಚಿಸಬೇಕಿತ್ತು, ಚರ್ಚಿಸಬೇಕಿತ್ತು." ಎಂದು ಹೇಳಿದ್ದಾರೆ.
"ನೀವು ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಖಂಡಿತ ಇಲ್ಲ"
ನಿಮ್ಮ ಅನುಭವ ವೈಯುಕ್ತಿಕವೇ ಆಗಿದ್ದರೂ, ಅದರಿಂದ ದೇಶದ ಅಲ್ಪಸಂಖ್ಯಾತರು ಇಂದು ಎದುರಿಸುತ್ತಿರುವ ಅಸುರಕ್ಷಿತತೆಯ ಸಂಕಟದ ದೊಡ್ಡ ಸಮಸ್ಯೆ ಸುಳ್ಳಾಗುವುದಿಲ್ಲವಲ್ಲ.
ಆದರೆ, ಬರೀ ಧರ್ಮದ ಆಧಾರದಲ್ಲಿ ದ್ವೇಷದ ವಿಷ ಕಕ್ಕಿ ಅಧಿಕಾರ ಹಿಡಿದಿರುವ ನಮ್ಮ ಇಂದಿನ ನಾನ್ ಬಯಲಾಜಿಕಲ್ನ ಭಾರತದಲ್ಲಿ ದೇಶ ಮತ್ತು ದೇಶಪ್ರೇಮದ ಕಲ್ಪನೆಯೇ ಮೂರ್ಖತನದ ಪರಮಾವಧಿ ತಲುಪಿಬಿಟ್ಟಿದೆ.
ನಮಗೆ ಒಂದು ದಿನ ಅಡಾಣಿ ದೇಶವಾದರೆ, ಒಂದು ದಿನ ಮೋದಿ ದೇಶ. ಒಂದು ದಿನ ಕ್ರಿಕೆಟ್ ದೇಶವಾದರೆ, ಒಂದು ದಿನ ಧರ್ಮವೇ ದೇಶ. ಹಾಗಾಗಿ ಇಂದಿನ ನಮ್ಮ ವಿಶ್ವಗುರು ಭಾರತದಲ್ಲಿ ನಮ್ಮ ದೇಶದ ಸಮಸ್ಯೆಗಳ ಬಗ್ಗೆ ದನಿಯೆತ್ತುವುದೇ ದೇಶದ್ರೋಹ. ಅದೂ ಇಂದಿನ ಇಂಟರ್ನೆಟ್ ಯುಗದಲ್ಲಿ ಹೊರನಾಡಿನಲ್ಲಿ ಹೋಗಿ ಮಾತಾಡಿದರಂತೂ ಮುಗಿಯಿತು.
ಏನೇ ಆದರೂ ಗಾಂಧಿಯನ್ನೇ ಕೊಂದು ಸೋನಮ್ ವಾಂಗ್ಚುಕ್ ರಂಥ ವಿಜ್ಞಾನಿಯನ್ನೂ ಜೈಲಿಗಟ್ಟಿದ, ಹಾವಾಡಿಗರ ದೇಶವೆಂಬ ಪಾಶ್ಚಾತ್ಯರ ಪುರಾತನ ಕಲ್ಪನೆಯನ್ನು ನಿಜ ಮಾಡಲು ಹೊರಟಿರುವ ನಮ್ಮಂಥ ಅಮಾಯಕ ಮೂರ್ಖರಿಗೆ ನೀವು ನಿಮ್ಮ ದೇಶಪ್ರೇಮ ಸಾಬೀತು ಮಾಡುವ ಅಗತ್ಯ ಖಂಡಿತ ಇಲ್ಲ."


Click it and Unblock the Notifications











