ಕೇಕ್ ಮೇಲೆ 'Bossism'ಕಾಲ ಮುಗೀತು ಅಂತ ಬರೆಸಿದ್ದ ಪ್ರದೀಪ್; ದರ್ಶನ್ ಫ್ಯಾನ್ಸ್ ಕಿಡಿಕಾರುತ್ತಿದ್ದಂತೆ ನಟನಿಂದ ಸ್ಪಷ್ಟನೆ
ಕಿಚ್ಚ ಸುದೀಪ್ ನಟನೆಯ ಸಿನಿಮಾ 'ಮ್ಯಾಕ್ಸ್' ಸಿನಿಮಾಗೆ ಥಿಯೇಟರ್ನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೇ ಖುಷಿಯಲ್ಲಿ ಕಿಚ್ಚ ಮನೆಯಲ್ಲಿ ಇಡೀ ತಂಡ ಸೇರಿಕೊಂಡಿತ್ತು. ಚಿತ್ರರಂಗದಲ್ಲಿ ಕಿಚ್ಚನಿಗೆ ಆತ್ಮೀಯರಾಗಿರುವವರು ಅವರ ಮನೆಗೆ ತೆರಳಿ ಶುಭ ಕೋರಿದ್ದರು. ಹಾಗೇ ಕಿಚ್ಚನಿಗೆ ಅತ್ಮೀಯರಾಗಿರುವ ಸ್ಯಾಂಡಲ್ವುಡ್ ನಟ ಪ್ರದೀಪ್ ಕೂಡ ಕೇಕ್ ತೆಗೆದುಕೊಂಡು ಹೋಗಿ ಸಂಭ್ರಮಿಸಿದ್ದರು.
'ಮ್ಯಾಕ್ಸ್' ನೋಡಿ ಥ್ರಿಲ್ ಆಗಿದ್ದ ಪ್ರದೀಪ್ ಕೇಕ್ ಮೇಲೆ "Bossism ಕಾಲ ಮುಗೀತು. Maximum Mass ಕಾಲ ಶುರುವಾಯ್ತು" ಅಂತ ಬರೆಸಿದ್ದರು. ಆ ಕೇಕ್ನ ಫೋಟೊವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಕೇಸ್ ಫೋಟೊ ಪೋಸ್ಟ್ ಮಾಡುತ್ತಿದ್ದಂತೆ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ನಟ ಪ್ರದೀಪ್ ವಿರುದ್ಧ ಕಿಡಿಕಾರಿದ್ದರು. ಈ ಪೋಸ್ಟ್ ವಿವಾದಕ್ಕೆ ಎಡೆ ಮಾಡಿಕೊಡುತ್ತಿದ್ದಂತೆ ನಟ ಪ್ರದೀಪ್ ವಿಡಿಯೋ ಮಾಡಿ 'Bossism' ಕೇಕ್ ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಕೇಕ್ ಮೇಲೆ ಈ ವಿವಾದಕ್ಕೀಡಾಗಿರುವ ಈ ಸಾಲುಗಳನ್ನು ಬರೆದಿದ್ದು ಯಾಕೆ? ಎಂದು ಕ್ಲಾರಿಟಿ ಕೊಟ್ಟಿದ್ದಾರೆ. ಅಷಕ್ಕೂ ಈ ವಿಡಿಯೋದಲ್ಲಿ ಪ್ರದೀಪ್ ಕೊಟ್ಟ ಸ್ಪಷ್ಟನೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ವಿವಾದ ಹುಟ್ಟಾಕುತ್ತಿದ್ದಾರೆ.
"ಈ ಕ್ರಿಸ್ಮಸ್ಗೆ 'ಮ್ಯಾಕ್ಸ್' ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಿನ್ನೆ 'ಮ್ಯಾಕ್ಸ್' ಸಿನಿಮಾ ಬಿಡುಗಡೆ ಆಯ್ತು. ಸಿನಿಮಾ ನೋಡಿದ ಮೇಲೆ ತುಂಬಾನೇ ಇಷ್ಟ ಆಯ್ತು. ಹಾಗಾಗಿ ವಿಶ್ ಮಾಡೋಣ ಅಂತ ಸುದೀಪಣ್ಣನ ಮನೆಗೆ ನಾನು ರಾತ್ರಿ ಹೋಗಿದ್ದೆ. ಹೋಗುವ ದಾರಿನಲ್ಲಿ ಸೆಲೆಬ್ರೆಷನ್ಗೆ ಅಂತ ಒಂದು ಕೇಕ್ ತೆಗೆದುಕೊಂಡು ಹೋಗಿದ್ದೆ. ಒಂದು ಕೇಕ್ ಹಾಗೂ ಅದರ ಮೇಲೆ ಬರೆದಿರುವ ಒಂದು ಸಾಲನ್ನು ತಿರುಚಿ ಬೇರೆ ದಾರಿಯಲ್ಲಿ ಹೋಗುತ್ತಿದೆ. ಬೇರೆ ಒಬ್ಬ ನಟನನ್ನು ಅಲ್ಲಿಗೆ ಲಿಂಕ್ ಮಾಡಿ ವಿವಾದ ಹುಟ್ಟಾಕುವುದಕ್ಕೆ ಪ್ರಯತ್ನ ಪಡುತ್ತಿರೋದು ನನ್ನ ಗಮನಕ್ಕೆ ಬಂತು. ಹಾಗಾಗಿ ಸ್ಪಷ್ಟನೆ ನೀಡಲು ಈ ವಿಡಿಯೋವನ್ನು ಮಾಡುತ್ತಿದ್ದೇನೆ." ಎಂದು ನಟ ಪ್ರದೀಪ್ ಕ್ಲಾರಿಟಿ ಕೊಟ್ಟಿದ್ದಾರೆ.
"ಸಿನಿಮಾ ಸಾಲನ್ನು ಅನುವಾದಿಸಿದ್ದೆ"
ಕೇಕ್ ಮೇಲೆ "ಬಾಸ್ಇಸಂ ಕಾಲ ಮುಗೀತು. ಮ್ಯಾಕ್ಸಿಸಂ ಮಾಸ್ ಕಾಲ ಶುರುವಾಯ್ತು" ಅಂತ ಬರೆದಿದ್ದೇಕೆ ಅನ್ನೋದಕ್ಕೆ ಈ ವಿಡಿಯೋದಲ್ಲಿ ಕಾರಣ ಕೊಟ್ಟಿದ್ದಾರೆ. "ಆ ಕೇಕ್ ಮೇಲೆ ಬರೆದಂತಹ ಲೈನ್ ಇದ್ದಿದ್ದು ಬಾಸ್ಇಸಂ ಕಾಲ ಮುಗೀತು. ಮ್ಯಾಕ್ಸಿಸಂ ಮಾಸ್ ಕಾಲ ಶುರುವಾಯ್ತು ಅಂತ. ಇಲ್ಲಿ ಯಾವ ನಟನಿಗೂ ಕೂಡ ಹೋಲಿಕೆ ಮಾಡಿ ಬರೆದಿದ್ದು ಅಲ್ಲ. 'ಮ್ಯಾಕ್ಸ್' ಚಿತ್ರದಲ್ಲಿಯೇ ಬರುವಂತಹ ಒಂದು ಸಾಂಗ್. ಮ್ಯಾಕ್ಸಿ ಮ್ಯಾಕ್ಸಿಸಂ ಮಾಸ್.. ಮಾಸ್ನಲ್ಲಿ ಮಾಸಿಗೆ ಬಾಸ್. ಈ ಸಾಲನ್ನೇ ಅನುವಾದಿಸಿ ಅದನ್ನೇ ಕೇಕ್ ಮೇಲೆ ಬರೆದಂತಹ ಲೈನ್ ಆಗಿತ್ತು." ಎಂದಿದ್ದಾರೆ.
"ಒಂದು ಪದ ಯಾರಿಗೂ ಸೀಮಿತವಲ್ಲ"
ಇದೇ ವಿಡಿಯೋದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸ್ವಇಚ್ಛೆಯಿಂದ ಹೇಗೆ ಬೇಕಾದರೂ ಕರೆಯಬಹುದು. ಒಂದು ಪದ ಯಾರಿಗೂ ಸೀಮಿತವಲ್ಲ ಎಂದು ಹೇಳಿದ್ದಾರೆ. "ಪ್ರತಿಯೊಬ್ಬ ನಾಯಕ ನಟನಿಗೂ ತನ್ನದೇ ಆದ ಅಭಿಮಾನಿ ಬಳಗವಿರುತ್ತೆ. ಆ ಅಭಿಮಾನಿಗಳು ತಮ್ಮ ನಟನನ್ನು ಬಾಸ್ ಅಂತಾರೆ, ಅಣ್ಣ ಅಂತಾರೆ, ಸರ್ ಅಂತಾರೆ, ಅವರಿಗೆ ಇಷ್ಟ ಆಗುವಂತಹರಲ್ಲಿ ತಮ್ಮ ನಾಯಕ ನಟನನ್ನು ಕೂಗುತ್ತಾರೆ, ಕಿರುಚುತ್ತಾರೆ ಸೆಲೆಬ್ರೆಟ್ ಮಾಡುತ್ತಾರೆ. ಇಲ್ಲಿ ಒಂದು ಪದ ಯಾವ ನಟನಿಗೂ ಸೀಮಿತವಾಗಿರಲ್ಲ ಅಂತ ಅನಿಸುತ್ತೆ. ಪ್ರತಿಯೊಬ್ಬ ಅಭಿಮಾನಿಗೂ ತನ್ನ ನಾಯಕ ನಟನನ್ನು ಹೇಗೆ ಬೇಕೋ ಹಾಗೆ ಕರೆಯಬಹುದು." ಎಂದಿದ್ದಾರೆ.
"ಕಿಚ್ಚ ಮಾಸ್ ಅಂತ ಹೇಳಿದ್ದು"
"ನಮ್ಮ ಕಿಚ್ಚ ಸುದೀಪ್ ಅಣ್ಣನ ಅಭಿಮಾನಿಗಳು ಬಾದ್ಷಾ ಅಂತಾರೆ, ಅಭಿನಯ ಚಕ್ರವರ್ತಿ ಅಂತಾರೆ, ಹಾಗೇ ಕಿಚ್ಚ ಬಾಸ್ ಅಂತಾರೆ. ಕಿಚ್ಚ ಬಾಸ್ ಅಲ್ಲ ಇನ್ಮುಂದೆ ಕಿಚ್ಚ ಮಾಸ್ ಅಂತಹ ಹೇಳುವುದಕ್ಕೆ ಹೋಗಿದ್ದು. ಬಾಸಿಸಂ ಕಾಲ ಮುಗೀತು.. ಇನ್ನೇಲೆ ಏನಿದ್ದರೂ ಮಾಸ್ ಕಾಲ ಶುರುವಾಗುತ್ತೆ. ಇದರಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಇದೂವರೆಗೂ ಸೋಶಿಯಲ್ ಮೀಡಿಯಾದಲ್ಲಿ ನಾನು ಪರ್ಸನಲ್ ಆಗಿ ಏನೂ ಹೇಳಿಲ್ಲ." ಎಂದು ನಟ ಪ್ರದೀಪ್ ಹೇಳಿದ್ದಾರೆ.


Click it and Unblock the Notifications











