Prakash Raj: ಹೈಕೋರ್ಟ್ ಅರ್ಜಿಯಲ್ಲಿ ಪ್ರಕಾಶ್ ರಾಜ್ ಹೆಸರು; "ಗಾಳಿಮಾತುಗಳನ್ನು ನಂಬದಿರಿ" ಟ್ವಿಟ್ಟರ್ನಲ್ಲಿ ಸ್ಪಷ್ಟನೆ
ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಇದೀಗ ಮತ್ತೆ ಆಕ್ಟಿವ್ ಆಗಿದೆ. ಇತ್ತೀಚೆಗೆ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, 'ಮಾಸ್ಕ್ ಮ್ಯಾನ್' ಚಿನ್ನಯ್ಯ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿ ಚರ್ಚೆಗೆ ಬಂದಿದೆ. ಅದರಲ್ಲಿ ಪ್ರಕಾಶ್ ರಾಜ್ ಎಂಬ ಹೆಸರನ್ನು ಸೇರಿಸಲಾಗಿದೆ. ಇದು ನಟ ಪ್ರಕಾಶ್ ರಾಜ್ ಅವರ ಹೆಸರು ಎಂದೇ ವರದಿಗಳಾಗಿದ್ದವು. ಈ ವಿಷಯ ದೊಡ್ಡದಾಗುತ್ತಿದ್ದಂತೆ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಧರ್ಮಸ್ಥಳದ ಧಾರ್ಮಿಕ ಕ್ಷೇತ್ರದ ವಿರುದ್ಧ ವ್ಯವಸ್ಥಿತವಾಗಿ ದೊಡ್ಡ ಮಟ್ಟದ ಸಂಚು ರೂಪಿಸಲಾಗಿತ್ತು ಎಂಬ ಅರ್ಜಿಯಲ್ಲಿ ಚಿನ್ನಯ್ಯ ಉಲ್ಲೇಖ ಮಾಡಿದ್ದರು. ಅದರಲ್ಲಿ ಧರ್ಮಸ್ಥಳದ ವಿರುದ್ಧ ಧ್ವನಿ ಎತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಹಾಗೂ ಅವರ ತಂಡ ಈ ಬೃಹತ್ ಷಡ್ಯಂತ್ರದಲ್ಲಿ ಇದ್ದಾರೆಂಬ ಅರ್ಥದಲ್ಲಿ ಚಿನ್ನಯ್ಯ ಆರೋಪ ಮಾಡಿದ್ದರು. ಅದರಲ್ಲಿ ಪ್ರಕಾಶ್ ರಾಜ್ ಹೆಸರು ಎಲ್ಲರ ಗಮನ ಸೆಳೆದಿತ್ತು.

ಈ ವಿಷಯ ಸಂಚಲನ ಸೃಷ್ಟಿಸುತ್ತಿದ್ದಂತೆ ಪ್ರಕಾಶ್ ರಾಜ್ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಗಾಳಿಸುದ್ದಿಗಳನ್ನು, ದುರುಳರು ಈ ಸುದ್ದಿಗೆ ಕಟ್ಟಲೆತ್ನಿಸುತ್ತಿರುವ ರೆಕ್ಕೆ ಪುಕ್ಕಗಳನ್ನು ನಂಬದಿರಿ ಎಂದು ಬರೆದುಕೊಂಡಿದ್ದಾರೆ. ಹಾಗಿದ್ದರೆ ಈ ಹೊಸ ವಿವಾದದ ಬಗ್ಗೆ ಪ್ರಕಾಶ್ ರಾಜ್ ಏನು ಕ್ಲಾರಿಟಿ ಕೊಟ್ಟಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಪ್ರಕಾಶ್ ರಾಜ್ ಹೆಸರು ಉಲ್ಲೇಖ.. ಸುದ್ದಿ ವೈರಲ್
ಚಿನ್ನಯ್ಯ ಹೈಕೋರ್ಟ್ನಲ್ಲಿ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಪ್ರಕಾಶ್ ರಾಜ್ ಅನ್ನೋ ಹೆಸರನ್ನು ಉಲ್ಲೇಖ ಮಾಡಿದ್ದಾರೆ."ಪ್ರಕಾಶ್ ರಾಜ್ ಎಂಬುವವರು ನನ್ನ ಜೊತೆ ದೂರವಾಣಿ ಮೂಲಕ ತಮಿಳಿನಲ್ಲಿ ಮಾತನಾಡಿದ್ದರು. ಈ ಕೆಲಸ ಮಾಡಿದರೆ, ಒಂದು ದಿನ ನಿನ್ನನ್ನು ಬಂದು ಅಪ್ಪಿಕೊಳ್ಳುತ್ತೇನೆಂದು ಫೋನ್ನಲ್ಲಿ ಹೇಳಿದ್ದರು" ಎಂದು ಚಿನ್ನಯ್ಯ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ನಟ ಪ್ರಕಾಶ್ ರಾಜ್ ಹೆಸರು ಮುನ್ನೆಲೆಗೆ ಬಂದಿತ್ತು.
ವಿವಾದಕ್ಕೆ ಪ್ರಕಾಶ್ ರಾಜ್ ಬ್ರೇಕ್
ಧರ್ಮಸ್ಥಳದ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ, ಈ ವಿವಾದಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಹೀಗಾಗಿ ತಮ್ಮ ಅಧಿಕೃತ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ನಟ ಪ್ರಕಾಶ್ ರಾಜ್ ಮಾಡಿದ ಟ್ವೀಟ್ನ ಅಂಶಗಳು ಹೀಗಿವೆ.
"ಎಲ್ಲರಿಗು ನಮಸ್ಕಾರ.. ಮಾಧ್ಯಮಗಳಲ್ಲಿ... ಸಾಮಾಜಿಕ ಜಲತಾಣಗಳಲ್ಲಿ ಧರ್ಮಸ್ಥಳ ಪ್ರಕರಣದ ಕುರಿತಂತೆ ನನ್ನ ಬಗ್ಗೆ ಕೆಲವು ಸುದ್ದಿ ಚರ್ಚಿಸಲ್ಪಡುತ್ತಿರುವು ನನ್ನ ಗಮನಕ್ಕೆ ಬಂದಿದೆ. ಇದು ಅತಿ ಸೂಕ್ಷ್ಮವಾದ .. ಮತ್ತು ಕೋಟ್ಯಾಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿರುವ ಪ್ರಕರಣವಾಗಿರುವುದರಿಂದ ..ಈ ರೀತಿಯ ಅನುಮಾನಗಳಿಗೆ ಉತ್ತರಿಸಬೇಕಾಗಿರುವುದು ನನ್ನ ಕರ್ತವ್ಯವೂ ಆಗಿದೆ .ನಾನು ದೂರದೂರಿನಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ನಾನೇ ಸ್ವತಃ ಬಂದು ಮಾಧ್ಯಮ ಮಿತ್ರರ ಮುಖೇನ ಉತ್ತರಿಸುತ್ತೇನೆ. ಅಲ್ಲಿಯವರೆಗೆ ಗಾಳಿಮಾತುಗಳನ್ನು .. ಮತ್ತು ಕೆಲವು ದುರುಳರು ಈ ಸುದ್ದಿಗೆ ಕಟ್ಟಲೆತ್ನಿಸುತ್ತಿರುವ ರೆಕ್ಕೆ ಪುಕ್ಕಗಳನ್ನು ನಂಬದಿರಿ" ಎಂದು ಪ್ರಕಾಶ್ ರಾಜ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಗಾಳಿ ಮಾತುಗಳನ್ನು ನಂಬಬೇಡಿ
ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ನಲ್ಲಿ ಯಾರೂ ಗಾಳಿ ಮಾತುಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ. ಹೀಗಾಗಿ ಪ್ರಕಾಶ್ ರಾಜ್ ಅಂದರೆ, ಬೇರೆ ಯಾರೋ ಇರಬಹುದೇನೋ ಎಂಬ ಅನುಮಾನ ಮೂಡಿದೆ. ಇನ್ನು ಎರಡು ದಿನಗಳಲ್ಲಿ ತಾನೇ ಸ್ವತಃ ಬಂದು ಮಾಧ್ಯಮ ಮಿತ್ರರ ಮೂಲಕ ಎಲ್ಲದಕ್ಕೂ ಉತ್ತರಿಸುತ್ತೇನೆ. ಅಲ್ಲಿಯವರೆಗೆ ಯಾರೂ ಗಾಳಿಮಾತುಗಳನ್ನು ಮತ್ತು ಕೆಲವು ದುರುಳರು ಈ ಸುದ್ದಿಗೆ ಕಟ್ಟಲು ಯತ್ನಿಸುತ್ತಿರುವ ರೆಕ್ಕೆ ಪುಕ್ಕಗಳನ್ನು ನಂಬಬೇಡಿ ಎಂದಿರೋದು ಕುತೂಹಲ ಕೆರಳಿಸಿದೆ.
ಚಿನ್ನಯ್ಯ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿರುವ ಆರೋಪಗಳು ಆಧಾರ ರಹಿತವೇ..? ಇಲ್ಲ ನಿಜಕ್ಕೂ ಇದರ ಹಿಂದೆ ಕೋಟ್ಯಂತರ ರೂಪಾಯಿಗಳ ಆರ್ಥಿಕ ವಹಿವಾಟು ನಡೆದಿದೆಯೇ ಎಂಬುದು ತನಿಖೆಯಲ್ಲಿ ಗೊತ್ತಾಗಬೇಕಿದೆ. ಇತ್ತ ಇನ್ನೆರಡು ದಿನಗಳಲ್ಲಿ ನಟ ಪ್ರಕಾಶ್ ರಾಜ್ ಪತ್ರಿಕಾಗೋಷ್ಠಿಯಲ್ಲಿ ಹೊಸ ಆಯಾಮ ಏನಾದರೂ ನೀಡುತ್ತಾರಾ? ಅನ್ನೋದು ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿದೆ.


Click it and Unblock the Notifications
