'ವರ್ಷದ ಕೊನೆಯ ಸೂರ್ಯಗ್ರಹಣದಂದೇ ಶಿವರಾಮಣ್ಣನನ್ನು ಕಳಕೊಂಡು ಚಿತ್ರರಂಗಕ್ಕೆ ಗ್ರಹಣ ಬಡಿದಿದೆ'
ಹಿರಿಯ ನಟ ಶಿವರಾಂ ಗುಬ್ಬಿ ವೀರಣ್ಣ ಸಿನಿಮಾಗಳಲ್ಲಿ ನಟಿಸುವುದಕ್ಕೂ ಮುನ್ನ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಚಿತ್ರರಂಗಕ್ಕೆ ಪ್ರವೇಶ ಪಡೆದಾಗ ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸಿದ್ದಾರೆ. ಕು. ರಾ. ಸೀತಾರಾಮಶಾಸ್ತ್ರಿ ಅಂತಹ ದಿಗ್ಗಜರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 1958 ರಿಂದ 1965 ರ ವರೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸುವ ಅವಕಾಶವೇ ಹೆಚ್ಚು ಸಿಕಿತ್ತು. ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಶರಪಂಜರ, ನಾಗರಹಾವು, ಶುಭಮಂಗಳ ಚಿತ್ರದಲ್ಲಿ ನಟಿಸಿದ ಬಳಿಕ ಶಿವರಾಂ ಅವರಿಗೆ ಒಂದು ಆಪ್ತ ಬಳಗ ಸಿಕ್ಕಿತ್ತು.
ಪುಟ್ಟಣ ಕಣಗಾಲ್ ನಿರ್ದೇಶನದ ಸಿನಿಮಾದಲ್ಲಿ ಶಿವರಾಂ ನಟಸುತ್ತಿದ್ದಂತೆ ನಟ ರಾಮಕೃಷ್ಣ ಆತ್ಮೀಯರಾಗಿದ್ದರು. ಶಿವರಾಂ ಅವರ ಅಪಾರ ಜ್ಞಾನ ಜನಸಂಪಾದನೆ ಬಗ್ಗೆ ಹಿರಿಯ ನಟ ರಾಮಕೃಷ್ಣ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ಶಿವರಾಮಣ್ಣನನ್ನು ಕಳೆದುಕೊಂಡು ಕನ್ನಡ ಚಿತ್ರರಂಗಕ್ಕೆ ಗ್ರಹಣ ಬಡಿದಂತೆ ಆಗಿದೆ ಎಂದು ಭಾವುಕರಾಗಿದ್ದಾರೆ.

ಶಿವರಾಮಣ್ಣನನ್ನು ಕಳೆದುಕೊಂಡು ಗ್ರಹಣ ಬಡಿದಂತಾಗಿದೆ.
"ನಿನ್ನೆ ದಿನ ಈ ವರ್ಷದ ಕೊನೆಯ ಸೂರ್ಯಗ್ರಹಣ. ಈ ಕನ್ನಡ ಚಿತ್ರರಂಗಕ್ಕೆ ಜ್ಞಾನ ಭಾಸ್ಕರ್ ಅಂತಹ ಶಿವರಾಮಣ್ಣನನ್ನು ಕಳಕೊಂಡು ಕನ್ನಡ ಚಿತ್ರರಂಗಕ್ಕೆ ಶಾಶ್ವತ ಗ್ರಹಣ ಬಡಿದಿದೆ ಅಂತ ಅನಿಸುತ್ತಿದೆ. ಅವರ ಗುಣಗಳನ್ನು ಬಣ್ಣಿಸುವುದಕ್ಕೆ ನನ್ನಂಥವರು ಬಣ್ಣಿಸಲು ಯೋಗ್ಯ ಅಂತ ಅನಿಸುತ್ತಿಲ್ಲ. ಅಜಗಜಾಂತರ ವ್ಯತ್ಯಾಸ ಬಂದುಬಿಡುತ್ತೆ. ಅವರು ಅತ್ಯಂತ ಹೆಚ್ಚಿನ ವಿವಿಧ ರೀತಿಯ ಪ್ರತಿಭೆಯನ್ನು ಹೊಂದಿದವರು. ಎಷ್ಟು ಜ್ಞಾನಿಗಳು ಕನ್ನಡದ ಜ್ಞಾನ ಭಾಸ್ಕರ್ ಅಂತ ಯಾರಾದರೂ ಇದ್ದರೆ ಅವರು ಶಿವರಾಮಣ್ಣ ಅಂತ ಧೈರ್ಯವಾಗಿ ಹೇಳಬಲ್ಲೆ." ಎಂದು ಹಿರಿಯ ನಟ ರಾಮಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.

ಶಿವರಾಂ ಕೊಡುಗೆ ಅತ್ಯಂತ ದೊಡ್ಡದು
"ಕನ್ನಡ ಚಿತ್ರರಂಗದ ಉನ್ನತಿಗಾಗಿ, ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸುವುದಕ್ಕಾಗಿ ಹಗಲಿರುಳು ಶ್ರಮವನ್ನು ಹಾಕಿದ ಒಬ್ಬ ವ್ಯಕ್ತಿ. ಕಳೆದ 50 ವರ್ಷಗಳಲ್ಲಿ ಕನ್ನಡ ಚಿತ್ರರಂಗವನ್ನು ಅವಲೋಕಿಸಿದಾಗ ಒಂದಲ್ಲ ಒಂದು ಸಿನಿಮಾದಲ್ಲಿ ಅವರ ಅಭಿನಯವನ್ನು ನಾವು ನೋಡಬಹುದು. ಚಿತ್ರ ಸೋಲಲಿ ಗೆಲ್ಲಲಿ ಶಿವರಾಮಣ್ಣ ಮಾತ್ರ ಆಳವಾಗಿ ಬೇರೂರುವ ಪ್ರತಿಭೆ. ಈ ಭೂಮಿಗೆ ರಾಶಿ ಬ್ರದರ್ಸ್ ಅತ್ಯಂತ ದೊಡ್ಡ ಕೊಡುಗೆ." ಎಂದಿದ್ದಾರೆ ರಾಮಕೃಷ್ಣ

ಶಿವರಾಂ ಸಿಎಂ ಜೊತೆ ಹೆಲಿಕಾಪ್ಟರ್ನಲ್ಲಿ ಓಡಾಡುತ್ತಿದ್ದರು
"ಶಿವರಾಮಣ್ಣ ಚಿತ್ರರಂಗ, ನಮ್ಮ ಕಲಾವಿದರೆಲ್ಲ ಒಟ್ಟುಗೂಡಿ, ಒಂದು ಕಡೆ ನೆಲೆಸಿ, ನಮ್ಮ ಸಮಸ್ಯೆಗಳನ್ನೆಲ್ಲಾ ಪರಿಹರಿಸಿಕೊಳ್ಳುವಂತಹ ನೆರಳು ಕೂಡ ಅವರೆನೇ. ಆಗಿನ ಕಾಲದಲ್ಲೇ ಮುಖ್ಯಮಂತ್ರಿಗಳಾಗಿದ್ದ ಗುಂಡೂರಾಯರ ಬೆನ್ನತ್ತಿ, ಕನ್ನಡ ಕಲಾವಿದರಿಗೊಂದು ನೆರಳು ಮಾಡಿಕೊಟ್ಟಿದ್ದರು. ಮುಖ್ಯ ಮಂತ್ರಿಗಳ ಜೊತೆ ಹೆಲಿಕಾಪ್ಟರ್ನಲ್ಲಿ ಒಡಾಡುತ್ತಿದ್ದ ಏಕೈಕ ನಟ ನಾನು ನೋಡಿದ್ದು ಅಂದರೆ ಅದು ಶಿವರಾಮಣ್ಣ." ಹಿರಿಯ ನಟ ರಾಮಕೃಷ್ಣ ಹೇಳಿದ್ದಾರೆ.

ಶಿವರಾಮಣ್ಣ ಮತ್ತೆ ಹುಟ್ಟಿಬರಲಿ
"ಕರ್ನಾಟಕಕ್ಕೆ ಶಿವರಾಮಣ್ಣ ಮತ್ತೆ ಹುಟ್ಟಿಬರಲಿ. ಶಿವರಾಮಣ್ಣನ ಜೊತೆಗೆ ನಾವೂ ಕೂಡ ಅಭಿನಯಿಸಿಕೊಂಡು ದನ್ಯತೆಯನ್ನು ಪಡೆದಿದ್ದೇವೆ ಎಂದು ಅನಿಸುತ್ತಿದೆ. ಸಾಹಿತ್ಯ ಕ್ಷೇತ್ರ ಇರಬಹುದು. ಸಿನಿಮಾ ಕ್ಷೇತ್ರ ಇರಬಹುದು. ರಾಜಕೀಯ ಕ್ಷೇತ್ರವಿರಬಹುದು. ವೈದ್ಯಕೀಯ ಕ್ಷೇತ್ರವಿರಬಹುದು. ಕಾನೂನು ಕ್ಷೇತ್ರವಿರಬಹುದು. ಎಲ್ಲಾ ಕಡೆಗೆ ಅವರು ಕೈ ಇಟ್ಟಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯ ಗುಣಗಳನ್ನು ಹೊಂದಿರುವ ಶಿವರಾಮಣ್ಣ ಯಾವುದೇ ಕಲಾವಿದನಿಗೆ ತೊಂದರೆಯಾಗಿದ್ದರೂ ತಾವೇ ಬಂದು ಸಹಾಯ ಮಾಡುವ ಕಲಾವಿದರಾಗಿದ್ದರು. ಆ ವ್ಯಕ್ತಿತ್ವವನ್ನು ಬೇರೆಯವರಲ್ಲಿ ಕಾಣಲು ಸಾಧ್ಯವಿಲ್ಲವೆಂದು ಅನಿಸುತ್ತದೆ." ನಟ ರಾಮಕೃಷ್ಣ ಹಿರಿಯ ನಟ ಶಿವರಾಂ ನೆನೆದು ಭಾವುಕರಾಗಿದ್ದರು.


Click it and Unblock the Notifications











