ಕ್ರೇಜಿಸ್ಟಾರ್ ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ಇನ್ನಿಲ್ಲ
ಕ್ರೇಜಿಸ್ಟಾರ್ ರವಿಚಂದ್ರನ್ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಬೆಂಗಳೂರಿನ ರಾಜಾಜಿನಗರದಲ್ಲಿರುವ ಸುಗುಣ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ( ಫೆ 28) ಬೆಳಗ್ಗೆ ಸುಮಾರು 6.30ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಪಟ್ಟಮ್ಮಾಳ್ ವೀರಸ್ವಾಮಿಯವರಿಗೆ 83 ವರ್ಷ ವಯಸ್ಸಾಗಿತ್ತು. ಇವರು 5 ಮಕ್ಕಳನ್ನು ಅಗಲಿದ್ದಾರೆ. ಇವರಲ್ಲಿ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳು. ಇವರಲ್ಲಿ ವಿ ರವಿಚಂದ್ರನ್ ಅವರು ಕೂಡ ಒಬ್ಬರು.
ಕಳೆದ 10 ವರ್ಷಗಳಿಂದ ರವಿಚಂದ್ರನ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅಲ್ಜೈಮರ್ಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದರಿಂದ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದರು. ಕೆಲವು ಸಂದರ್ಶನದಲ್ಲಿ ರವಿಚಂದ್ರನ್ ತಮ್ಮ ತಾಯಿ ಸ್ಥಿತಿಯನ್ನು ನೆನೆದು ಭಾವುಕರಾಗಿದ್ದರು. ನೆನಪಿನ ಶಕ್ತಿ ಕಳೆದುಕೊಂಡಿದ್ದರು. ನನ್ನನ್ನು ಮಾತ್ರ ಗುರುತಿಸುತ್ತಾರೆ ಎಂದು ಹೇಳಿದ್ದರು. ಕಳೆದ ಕೆಲವು ದಿನಗಳಿಂದ ಅನಾರೋಗ್ಯ ಹೆಚ್ಚಾಗಿದ್ದರಿಂದ ಸುಗುಣ ಆಸ್ಪತ್ರೆ ಸೇರಿಸಲಾಗಿತ್ತು.
ರವಿಚಂದ್ರನ್ ಅವರ ತಾಯಿಯ ಪಾರ್ಥೀವ ಶರೀರ ಸದ್ಯ ಸುಗಣ ಆಸ್ಪತ್ರೆಯಲ್ಲೇ ಇದೆ. ಬೆಳಗ್ಗೆ 10.30ಕ್ಕೆ ಪಟ್ಟಮ್ಮಾಳ್ ವೀರಸ್ವಾಮಿಯವರ ಪಾರ್ಥೀವ ಶರೀರವನ್ನು ರವಿಚಂದ್ರನ್ ನಿವಾಸಕ್ಕೆ ತೆಗೆದುಕೊಂಡು ಬರಲಾಗುತ್ತೆ. ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಪುತ್ರ ವಿ ರವಿಚಂದ್ರನ್ ಅವರು ತಿಳಿಸಿದ್ದಾರೆ.

ಹೆಚ್ಚು ದಿನ ಬದುಕಲ್ಲ ಎಂದಿದ್ದ ವೈದ್ಯರು
ರವಿಚಂದ್ರನ್ ತಾಯಿ ಹೆಚ್ಚು ಕಡಿಮೆ ದಶಕಗಳಿಂದ ಅನಾರೋಗ್ಯ ಪೀಡಿತರಾಗಿದ್ದಾರೆ. "ವೈದ್ಯರು ಅಮ್ಮ ಪಟ್ಟಮ್ಮಾಳ್ ವೀರಸ್ವಾಮಿ ಹೆಚ್ಚು ದಿನ ಬದುಕುಳಿಯುದಿಲ್ಲವೆಂದು ಹೇಳಿದ್ದರು. ಇದರ ಹೊರತಾಗಿಯೂ ತಾಯಿ ಹತ್ತು ವರ್ಷಗಳಿಂದ ನಮ್ಮ ಜೊತೆಯಲ್ಲಿಯೇ ಇದ್ದಾರೆ. ಅವರಿಗೆ ವಿಲ್ ಪವರ್ ಚೆನ್ನಾಗಿದೆ." ಎಂದು ಸಂದರ್ಶನವೊಂದರಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಭಾವುಕರಾಗಿದ್ದರು.

ಅತ್ತೆಗೆ ರವಿಚಂದ್ರನ್ ಪತ್ತಿ ಆರೈಕೆ
ಪಟ್ಟಮ್ಮಾಳ್ ವೀರಸ್ವಾಮಿ ಅಲ್ಜೈಮರ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದರು. "ಅಮ್ಮನಿಗೆ ನೆನಪಿನ ಶಕ್ತಿ ದಿನೇ ದಿನೇ ಕಡಿಮೆ ಆಗುತ್ತಿತ್ತು. ಒಂದಿಷ್ಟು ವರ್ಷ ಬರೀ ಅಳುತ್ತಿದ್ದರು. ಆಗ ನಮಗೆ ಯಾಕೆ ಹೀಗಾಗುತ್ತಿದೆ ಅಂತ ಅನಿಸಿತ್ತು. ಆದರೆ, ನನ್ನ ಹೆಂಡ್ತಿ, ಅವೆಲ್ಲವನ್ನೂ ಸಹಿಸಿಕೊಂಡು ಅಮ್ಮನ ಆರೈಕೆ ಮಾಡಿದ್ದಾರೆ. ಅದಕ್ಕೆ ಇಂದಿಗೂ ನಾನು ಹಾಗೂ ನನ್ನ ಪತ್ನಿ ಮಾತ್ರ ನೆನಪಿನಲ್ಲಿ ಇದ್ದಾರೆ. ಅವರನ್ನು ಗುರುತಿಸುತ್ತಾರೆ." ಎಂದು ಕ್ರೇಜಿ ಸ್ಟಾರ್ ಹೇಳಿದ್ದರು.

ಅಮ್ಮನ ಜೀವ ಆಸ್ಪತ್ರೆಯಲ್ಲಿ ಹೋಗಬಾರದು
ಕೆಲವು ದಿನಗಳಿಂದ ರವಿಚಂದ್ರನ್ ಅಮ್ಮನ ಆರೋಗ್ಯದಲ್ಲಿ ಏರು-ಪೇರಾಗಿತ್ತು. ಹೀಗಾಗಿ ಸುಗುಣ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. "ಈ ವೇಳೆ ರವಿಚಂದ್ರನ್ ಮತ್ತೆ ಅಮ್ಮನನ್ನು ನೆನೆದಿದ್ದರು. "ತನ್ನ ತಾಯಿಯ ಜೀವ ಆಸ್ಪತ್ರೆಯಲ್ಲಿ ಹೋಗಬಾರದು. ಅದಕ್ಕೆ ಮನೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ವೇವೆ." ಎಂದು ಹೇಳಿ ಭಾವುಕರಾಗಿದ್ದರು. ರವಿಚಂದ್ರನ್ ಅಮ್ಮನ ಅಂತಿಮ ದರ್ಶನಕ್ಕೆ ಸಂಗೀತ ನಿರ್ದೇಶಕ ಹಂಸಲೇಖ, ಹಂಸಲೇಖ ಅವರ ಪತ್ನಿ ಹಾಗೂ ರಾಘವೇಂದ್ರ ರಾಜ್ಕುಮಾರ್ ಆಗಮಿಸಿದ್ದರು.

ರಾಘಣ್ಣ ಭಾವುಕ ನುಡಿ
"ರವಿಚಂದ್ರನ್ ಅವರ ತಾಯಿ ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ. ತಾಯಿ ಕಳೆದುಕೊಂಡ ಅನುಭವ ನಮಗೂ ಆಗಿದೆ. ಅದನ್ನು ಅನುಭವಿಸಿದ್ದೇವೆ. ತಾಯಿ ಜೊತೆಯಲ್ಲಿ ಇದ್ದರೆ ನಮಗೆ ಒಂಥರಾ ಶಕ್ತಿ. ಎಲ್ಲೋ ಇದ್ದಾರೆ ಅಂತ ಧೈರ್ಯ ಬರುತ್ತೆ. ನಮಗೆ ಈ ಕುಟುಂಬ ತುಂಬಾನೇ ಪರಿಚಯ. ಅವರ ತಾಯಿಯನ್ನು ನೋಡಿದ್ದೇವೆ. ಅವರು ನಮ್ಮನ್ನು ಆಟ ಆಡಿಸಿದ್ದಾರೆ. ರವಿಚಂದ್ರನ್ ಹೇಗೆ ತಡೆದುಕೊಳ್ಳುತ್ತಾರೋ ಗೊತ್ತಿಲ್ಲ. ತಡೆದುಕೊಳ್ಳುವ ಶಕ್ತಿ ಆ ದೇವರು ಕೊಡುತ್ತಾನೆ." ಎಂದು ಭಾವುಕರಾಗಿದ್ದಾರೆ.


Click it and Unblock the Notifications











