ನಡೆಯಲಿಲ್ಲ ಪವಾಡ: ಇಹಲೋಕದ ಸಂಚಾರ ಮುಗಿಸಿದ ಸಂಚಾರಿ ವಿಜಯ್
ಅಪೊಲೊ ಆಸ್ಪತ್ರೆ ವೈದ್ಯರು ಇಂದು 8:20 ಕ್ಕೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್ನಲ್ಲಿ ಸಂಚಾರಿ ವಿಜಯ್ರ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ವೈದ್ಯರು ಹೇಳಿದ್ದಾರೆ. ನಿಯಮದ ಪ್ರಕಾರ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿ ನಿಧನ ಹೊಂದಿದ್ದಾನೆ ಎಂದು ಅರ್ಥ.
ಮಾಧ್ಯಮಗಳೊಟ್ಟಿಗೆ ಮಾತನಾಡಿದ ವೈದ್ಯ ಅರುಣ್ ನಾಯಕ್, 'ವಿಜಯ್ರಿಗೆ ಎರಡು ಬಾರಿ ಅಪ್ನಿಯಾ ಪರೀಕ್ಷೆ ಮಾಡಲಾಯಿತು. ಎರಡೂ ಬಾರಿಯೂ ಪಾಸಿಟಿವ್ ವರದಿ ಬಂದಿದೆ. ಅದರರ್ಥ, ಸಂಚಾರಿ ವಿಜಯ್ ಮೆದುಳು ನಿಷ್ಕ್ರಿಯಗೊಂಡಿದೆ. ಅವರು ಮತ್ತೆ ಚೇತರಿಸಿಕೊಳ್ಳುವುದಿಲ್ಲ' ಎಂದಿದ್ದಾರೆ.
ಬೆಂಗಳೂರಿನ ಜೆಪಿ ನಗರ 7ನೇ ಹಂತದ ಬಳಿ ಶನಿವಾರ ರಾತ್ರಿ ಊಟ ಮಾಡಲೆಂದು ಬೈಕ್ನಲ್ಲಿ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಕಂಬಕ್ಕೆ ಡಿಕ್ಕಿಯಾಗಿತ್ತು. ಬೈಕಿನ ಹಿಂಬದಿಯಲ್ಲಿ ಕೂತಿದ್ದ ಸಂಚಾರಿ ವಿಜಯ್ ತಲೆ ಹಾಗೂ ತೊಡೆ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು. ಸಂಚಾರಿ ವಿಜಯ್ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಸಂಚಾರಿ ವಿಜಯ್ ಅವರ ಅಂಗಾಗಳನ್ನು ಸಂಗ್ರಹಿಸಲಾಗುತ್ತಿದ್ದು, ಅಗತ್ಯ ಇದ್ದವರಿಗೆ ಅಂಗಾಂಗಗಳನ್ನು ಕಸಿ ಮಾಡಲಾಗುತ್ತದೆ. ವಿಜಯ್ ದೇಹದಿಂದ ಕಿಡ್ನಿ, ಲಿವರ್, ಹೃದಯದ ಒಂದು ಭಾಗ, ಕಣ್ಣುಗಳನ್ನು ಸಂಗ್ರಹಿಸಲಾಗುತ್ತಿದ್ದು. ಅಗತ್ಯ ಇದ್ದವರಿಗೆ ನಿಗದಿತ ಸಮಯದ ಒಳಗೆ ಕಸಿ ಮಾಡಲಾಗುತ್ತದೆ.
ರಂಗಭೂಮಿಯಿಂದ ಸಿನಿಮಾಗಳಿಗೆ ಪ್ರವೇಶಿಸಿದ ಸಂಚಾರಿ ವಿಜಯ್ ಅತ್ಯುತ್ತಮ ನಟರಾಗಿದ್ದರು. 'ನಾನು ಅವನಲ್ಲ ಅವಳು' ಸಿನಿಮಾದ ಅತ್ಯುತ್ತಮ ನಟನೆಗಾಗಿ ಸಂಚಾರಿ ವಿಜಯ್ಗೆ ರಾಷ್ಟ್ರಪ್ರಶಸ್ತಿ ಸಹ ದೊರಕಿತ್ತು.
ನಟನನ್ನು ಕಳೆದುಕೊಂಡ ಚಿತ್ರರಂಗದ ಗಣ್ಯರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ರಾಜಕಾರಣಿಗಳು ಸಹ ರಾಷ್ಟ್ರಪ್ರಶಸ್ತಿ ವಿಜೇತನ ಸಾವಿಗೆ ಮರುಗಿದ್ದಾರೆ.
Recommended Video
ವಿಜಯ್ರ ಮೃತದೇಹದ ಅಂತಿಮ ದರ್ಶನವನ್ನು ನಾಳೆ ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದ ಮುಂಭಾಗ ವ್ಯವಸ್ಥೆ ಮಾಡಲಾಗಿದೆ. ನಂತರ ಸಂಜೆ ಹುಟ್ಟೂರು ಮಂಚನಹಳ್ಳಿಯಲ್ಲಿ ಅಂತಿಮಕಾರ್ಯ ನಡೆಯಲಿದೆ.


Click it and Unblock the Notifications











