ತಮಿಳು ಸಿನಿಮಾ ಮಿಂಚಿದ ಮತ್ತೊಬ್ಬ ಕನ್ನಡದ ನಟ: ವೆಟ್ರಿಮಾರನ್ 'ವಿಡುದಲೈ'ನಲ್ಲಿ ಸರ್ದಾರ್ ಸತ್ಯ!
ತಮಿಳಿನ ಜನಪ್ರಿಯ ನಿರ್ದೇಶಕ ವೆಟ್ರಿಮಾರನ್. ಕಾಲಿವುಡ್ ಸೂಪರ್ಸ್ಟಾರ್ಗಳೇ ಇವರ ಸಿನಿಮಾದಲ್ಲಿ ನಟಿಸೋಕೆ ಕಾದು ಕೂರುತ್ತಾರೆ. ಇದೂವರೆಗೂ ವೆಟ್ರಿಮಾರನ್ ನಿರ್ದೇಶಿಸಿದ ಸಿನಿಮಾಗಳು ಆ ಮಟ್ಟಿಗೆ ಸದ್ದು ಮಾಡಿವೆ. ಸದ್ಯಕ್ಕೀಗ ಇವರ ಹೊಸ ಸಿನಿಮಾ 'ವಿಡುದಲೈ' ದಕ್ಷಿಣ ಭಾರತದಲ್ಲಿ ಬೇಜಾನ್ ಸದ್ದು ಮಾಡುತ್ತಿದೆ.
ಈ ಸಿನಿಮಾದಲ್ಲಿ ತಮಿಳಿನ ದಿಗ್ಗಜರೇ ನಟಿಸಿದ್ದಾರೆ. ನಟ ವಿಜಯ್ ಸೇತುಪತಿ, ಸೂರಿ, ಗೌತಮ್ ವಾಸುದೇವ ಮೆನನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳುನಾಡಿನಾದ್ಯಂತ 'ವಿಡುದಲೈ'ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ಸಿನಿಮಾದಲ್ಲಿ ಕನ್ನಡದ ನಟ ಸರ್ದಾರ್ ಸತ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

'ಆ ದಿನಗಳು' ಸಿನಿಮಾದಲ್ಲಿ ಸರ್ದಾರ್ ಪಾತ್ರದಲ್ಲಿ ನಟಿಸಿ ಜನಗೆದ್ದಿದ್ದ ಸರ್ದಾರ್ ಸತ್ಯ ಸಹ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಸಿನಿಮಾದಲ್ಲಿ ಸತ್ಯ ಪೊಲೀಸ್ ಅಧಿಕಾರಿ ಎಸ್ ಐ ವೇಲಮುರುಗನ್ ಪಾತ್ರ ನಿಭಾಯಿಸಿದ್ದಾರೆ. ಇವರಿಗೆ ತಮಿಳುನಾಡಿನಲ್ಲಿ ಮೆಚ್ಚುಗೆ ಸಿಕ್ಕಿದೆ.
'ವಿಡುದಲೈ' ಜೇಕಬ್ ವರ್ಗೀಸ್ ಕಾರಣ
'ಆ ದಿನಗಳು' ಸರ್ದಾರ್ ಸತ್ಯ ಅಭಿನಯದ ಮೊದಲ ಸಿನಿಮಾ. ಇಲ್ಲಿಂದ ಶುರುವಾಗಿದ್ದ ಜರ್ನಿ 'ಸ್ಲಂ ಬಾಲ', 'ರಾಜಧಾನಿ', 'ದ್ಯಾವ್ರೇ', 'ಚಂಬಲ್' ಒಳ್ಳೊಳ್ಳೆ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 'ಗುಂಡ್ರು ಗೋವಿ' ಮೂಲಕ ಹೀರೊನೂ ಆದರು. ಆದರೆ, ಸಿನಿಮಾ ಕೈ ಹಿಡಿಯಲಿಲ್ಲ. ಬಳಿಕ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಿ ಕಿರುತೆರೆಗೆ 'ಪದ್ಮಾವತಿ' ಹಾಗೂ 'ಕನ್ನಡ ಕೋಗಿಲೆ' ಅಂತಹ ಜನಪ್ರಿಯ ಕಾರ್ಯಕ್ರಮ ನಿರ್ಮಿಸಿದ್ದರು.
ಇಷ್ಟು ದಿನ ಕಾದಿದ್ದಕ್ಕೆ ಈಗ ತಮಿಳಿನ ಸ್ಟಾರ್ ನಿರ್ದೇಶಕನ ಸಿನಿಮಾದಲ್ಲಿ ನಟಿಸೋ ಅವಕಾಶ ಸಿಕ್ಕಿದೆ. ಅಷ್ಟಕ್ಕೂ ಈ ಸಿನಿಮಾ ಸಿಕ್ಕಿದ್ದು ಒಂದು ಇಂಟ್ರೆಸ್ಟಿಂಗ್ ಸ್ಟೋರಿ. ಸರ್ದಾರ್ ಸತ್ಯಗೆ ಈ ಪಾತ್ರ ಸಿಗೋದಕ್ಕೆ ಕಾರಣ ನಿರ್ದೇಶಕ ಜೇಕಬ್ ವರ್ಗೀಸ್. "ನನ್ನ ಮತ್ತು ಜೇಕಬ್ ನಡುವೆ ಒಳ್ಳೆಯ ಬಾಂಧವ್ಯವಿದೆ. ಅವರ ಚಂಬಲ್' ಸಿನಿಮಾದ ಒಂದು ಪ್ರಮುಖ ಪಾತ್ರದಲ್ಲಿ ನಾನು ನಟಿಸಿದ್ದೆ. ಅವರು ಮತ್ತು ವೆಟ್ರಿಮಾರನ್ ಒಳ್ಳೆಯ ಸ್ನೇಹಿತರು. ಒಮ್ಮೆ ವೆಟ್ರಿಮಾರನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಆಗ ಒಂದು ನಿಮಿಷ ನನ್ನನ್ನು ಸೂಕ್ಷ್ಮವಾಗಿ ಗಮನಿಸಿದರು. ಅದಾಗಿ ಮೂರು ತಿಂಗಳಲ್ಲಿ ನಾನು ವಿಡುದಲೈ ಸಿನಿಮಾದ ಭಾಗವಾಗಿದ್ದೆ." ಎಂದು ಎನ್ನುತ್ತಾರೆ ಸತ್ಯ.

ಅಪ್ಪ ಅಮ್ಮನ ಆಸೆ ಈಡೇರಿತು
ತಮಿಳು ಸಿನಿಮಾದಲ್ಲಿ ನಟಿಸಬೇಕು ಅನ್ನೋದು ಸತ್ಯ ತಂದೆ-ತಾಯಿಯ ಆಸೆ. ಆ ಆಸೆಯನ್ನು ಸತ್ಯ ಇಂದು ಈಡೇರಿಸಿದ್ದಾರೆ. " ನಾನು ನಾಯಕನಾಗಿ ನಟಿಸಿದ 'ಗುಂಡ್ರು ಗೋವಿ' ಅಷ್ಟೇನೂ ಯಶಸ್ವಿಯಾಗಲಿಲ್ಲ. ಎರಡನೆಯ ಚಿತ್ರ 'ಬೀರ' ರಿಲೀಸ್ ಆಗಲೇ ಇಲ್ಲ. ಈ ಮಧ್ಯೆ, ನನಗೆ ಕನ್ನಡದಲ್ಲಿ ಸರಿಯಾಗಿ ಕೆಲಸ ಸಿಗುತ್ತಿರಲಿಲ್ಲ, ಸಿಕ್ಕರೂ ದುಡ್ಡು ಸಿಗುತ್ತಿರಲಿಲ್ಲ. ಆಗ ಹೆಂಡತಿ ನಿರ್ಮಲಾ ಆಸೆಯ ಮೇರೆಗೆ ಸಾಯಿ ನಿರ್ಮಲಾ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದೆ. ಅಲ್ಲಿ ಸಾಕಷ್ಟು ಯಶಸ್ಸನ್ನೂ ಕಂಡೆ. ಆದರೂ, ನಟನಾಗಿ ಏನಾದರೂ ಸಾಧಿಸಬೇಕು ಎಂಬ ಆಸೆ ಮಾತ್ರ ಹಾಗೆಯೇ ಇತ್ತು. ಇಲ್ಲಿ ಸಾಧ್ಯವಾಗದಿದ್ದರೆ ತಮಿಳಿಗೆ ಹೋಗು ಎಂದು ಸಲಹೆ ನೀಡಿದ್ದೇ ನನ್ನ ತಾಯಿ. ಆಗ ವೆಟ್ರಿಮಾರನ್ ಪರಿಚಯವಾಯಿತು. ಈಗ ನನ್ನ ಮೊದಲ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಆದರೆ, ಅದನ್ನು ನೋಡಲು ನನ್ನ ತಂದೆ-ತಾಯಿ ಇಬ್ಬರೂ ಇಲ್ಲ" ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ ಸತ್ಯ.
'ವಿಡುದಲೈ' ಸಿನಿಮಾದಿಂದ ಸತ್ಯ ಕಳೆದುಕೊಂಡಿದ್ದನ್ನೆಲ್ಲ ವಾಪಸ್ಸು ತಂದುಕೊಟ್ಟಿದೆ. "ವೆಟ್ರಿಮಾರನ್ ಒಬ್ಬ ಸೂಕ್ಷ್ಮ ಸಂವೇದನೆಯ ನಿರ್ದೇಶಕ. ಅವರಿಗೆ ಜಾತಿ, ಬಣ್ಣ, ಭಾಷೆಯ ಬೇಧ-ಭಾವವಿಲ್ಲ. ಅವರು ಮನುಷ್ಯನನ್ನು ಮನುಷ್ಯನನ್ನಾಗಿಯೇ ನೋಡುತ್ತಾರೆ. ಚಿತ್ರ ಜನರಿಗೆ ಇಷ್ಟವಾಗಿದೆಯೆಂದರೆ, ಅದಕ್ಕೆ ಕಾರಣ ಪ್ರಸ್ತುತತೆ. ಇವತ್ತು ಮನುಷ್ಯನಿಗೆ ದೊಡ್ಡ ಶತ್ರುವೆಂದರೆ ಅದು ಮನುಷ್ಯನೇ. ಅವನ ದುರ್ಗುಣದಿಂದ ಇನ್ನೊಬ್ಬ ಬಲಿಯಾಗುತ್ತಿದ್ದಾನೆ. ಅವನ ತಾರತಮ್ಯದಿಂದಾಗಿ ಹಲವರಿಗೆ ಸಮಸ್ಯೆ ಆಗುತ್ತಿದೆ. ಈ ನಿಟ್ಟಿನಲ್ಲಿ ಇದೊಂದು ಶ್ರೇಷ್ಠವಾದ ಚಿತ್ರ. ಎಲ್ಲ ಕಡೆ ಮೆಚ್ಚುಗೆ ಸಿಗುತ್ತಿದೆ." ಎನ್ನುತ್ತಾರೆ ಸತ್ಯ.
'ವಿಡುದಲೈ' ನಂತರ ಸರ್ದಾರ್ ಸತ್ಯ ಮತ್ತೆ ಟ್ರ್ಯಾಕ್ಗೆ ಮರಳಿದ್ದಾರೆ. ಸದ್ಯ ಮೂರು ಸ್ಕ್ರಿಪ್ಟ್ ಕೇಳಿದ್ದಾರಂತೆ. ಈ ಗ್ಯಾಪ್ನಲ್ಲಿ ಒಂದು ಸಿನಿಮಾವನ್ನೂ ಸದ್ದಿಲ್ಲದೆ ಮುಗಿಸಿದ್ದಾರೆ. ತಮಿಳಿನಲ್ಲಿ ಗೆದ್ದರೂ ಕನ್ನಡಕ್ಕೆ ಮೊದಲ ಆಧ್ಯತೆ ಎಂದಿದ್ದಾರೆ. ಅಲ್ಲದೆ ಇಲ್ಲಿ ಹೆಚ್ಚು ಕೆಲಸ ಸಿಗುತ್ತೆ ಅನ್ನೋ ಹಂಬಲದಲ್ಲಿದ್ದಾರೆ.


Click it and Unblock the Notifications











