ಸ್ಯಾಂಡಲ್ವುಡ್ ದಿಗ್ಗಜರಿಗೆ ಶಬರಿಮಲೆ ದರ್ಶನ ಮಾಡಿಸಿದ್ದ ಪರಮಭಕ್ತ ಶಿವರಾಂ
ಸ್ಯಾಂಡಲ್ವುಡ್ನ ಹಿರಿಯ ನಟ ಶಿವರಾಂ ಇಹಲೋಕ ತ್ಯಜಿಸಿದ್ದಾರೆ. 83ನೇ ವಯಸ್ಸಿನಲ್ಲೂ ನಿರಂತರ ಅಯ್ಯಪ್ಪ ಸ್ವಾಮಿಯ ಧ್ಯಾನ, ಸಿನಿಮಾ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಆರಾಮಾಗಿದ್ದ ಶಿವರಾಂ ಇಂದು ನಮ್ಮೊಂದಿಗಿಲ್ಲ ಅನ್ನುವುದನ್ನು ಚಿತ್ರರಂಗ ಒಪ್ಪಿಕೊಳ್ಳುತ್ತಿಲ್ಲ. ಇಡೀ ಕನ್ನಡ ಚಿತ್ರರಂಗ ಭಕ್ತಿರತ್ನ ಶಿವರಾಂ ಅವರನ್ನು ಕಳೆದುಕೊಂಡು ದು:ಖಿತರಾಗಿದ್ದಾರೆ. ಶಿವರಾಂ ಆತ್ಮಕ್ಕೆ ಶಾಂತಿ ಕೋರುತ್ತಿದ್ದಾರೆ.
ಶಿವರಾಂ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಟ್ಟ ಬಳಿಕ ಬನಶಂಕರಿ ಚಿತಾಗ್ರಾರದಲ್ಲಿ ಅಂತಿಮ ಕ್ರಿಯೆ ನಡೆಯಲಿದೆ. ಶಿವರಾಂ ಶಬರಿಮಲೆಸ್ವಾಮಿ ಅಯ್ಯಪ್ಪನ ಪರಭಕ್ತನಾಗಿದ್ದರು. ಅಯ್ಯಪ್ಪನ ಭಕ್ತರಿಗೆ, ಸ್ಯಾಂಡಲ್ವುಡ್ಗೆ ಶಿವರಾಂ ಅವರೇ ಗುರುಸ್ವಾಮಿಗಳು. ಇವರ ಮಾರ್ಗದರ್ಶನದಲ್ಲಿಯೇ ಸ್ಯಾಂಡಲ್ವುಡ್ ದಿಗ್ಜಜರು ಶಬರಿಮಲೆ ಯಾತ್ರೆ ಮಾಡಿದ್ದಾರೆ. ಅಯ್ಯಪ್ಪನ ದರ್ಶನ ಮಾಡಿದ್ದಾರೆ.

ಮೂರುವರೆ ದಶಕಗಳಿಂದ ಶಿವರಾಂ ಅಯ್ಯಪ್ಪ ಭಕ್ತ
ಹಿರಿಯ ನಟ ಶಿವರಾಂ ತಮ್ಮ 45ನೇ ವಯಸ್ಸಿನ ಬಳಿಕ ಅಯ್ಯಪ್ಪ ಸ್ವಾಮಿಯ ಆರಾಧನೆಯಲ್ಲಿ ಮಗ್ನರಾಗಿದ್ದರು. ಅಯ್ಯಪ್ಪಸ್ವಾಮಿಯಲ್ಲಿ ನೆಮ್ಮದಿಯನ್ನು ಕಂಡಿದ್ದರು. ಇದಕ್ಕಾಗಿ ಪ್ರತಿದಿನ ಕಠಿಣ ವ್ರತ ನಿಯಮಪಾಲನೆ ಮಾಡುತ್ತಿದ್ದರು. ತನ್ನ ಎದುರು ಅದೇನೇ ಕಷ್ಟ ಎದುರಾದರೂ, ಅಯ್ಯಪ್ಪನ ಪೂಜೆಗೆ ಮಾಡಿ ನಿರಾಳರಾಗಿಬಿಡುತ್ತಿದ್ದರು. ಸುಮಾರು ಮೂರೂವರೆ ದಶಕಗಳಿಂದ ಅಯ್ಯಪ್ಪನ ದರ್ಶನ ಮಾಡುತ್ತಿದ್ದರು. ಇಷ್ಟು ವರ್ಷಗಳಲ್ಲಿ ಲೆಕ್ಕವಿಲ್ಲದಷ್ಟು ಬಾರಿ ಅಯ್ಯಪ್ಪನ ದರ್ಶನ ಪಡೆದಿದ್ದರು. ತಮ್ಮ ಮನಸ್ಸಿಗೆ ಬೇಕು ಅನಿಸಿದಾಗ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆದು ಬರುತ್ತಿದ್ದರು. ಸುಮಾರು 100ಕ್ಕೂ ಅಧಿಕ ಬಾರಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ ಎನ್ನಲಾಗಿದೆ.

ವಿಷ್ಣುವರ್ಧನ್ರನ್ನು 3 ಬಾರಿ ಅಯ್ಯಪ್ಪನ ದರ್ಶನ ಮಾಡಿಸಿದ್ದ ಶಿವರಾಂ
ಶಿವರಾಂ ಎಲ್ಲರ ನಟರೊಂದಿಗೂ ಆತ್ಮೀಯರಾಗಿದ್ದರು. ಅಣ್ಣಾವ್ರ ಕುಟುಂಬಕ್ಕೆ ಶಿವರಾಂ ಎಷ್ಟು ಆತ್ಮೀಯರೋ ಹಾಗೇ ವಿಷ್ಣುವರ್ಧನ್ ಕುಟುಂಬಕ್ಕೂ ಅಷ್ಟೇ ಆತ್ಮೀಯರು. ಡಾ.ವಿಷ್ಣುವರ್ಧನ್ ಅವರಿಗೂ ಶಿವರಾಂ ಅವರೇ ಗುರುಸ್ವಾಮಿಗಳಾಗಿದ್ದರು. ಆಧ್ಯಾತ್ಮದಲ್ಲಿ ಹೆಚ್ಚು ಒಲವು ಕಂಡುಕೊಂಡಿದ್ದ ವಿಷ್ಣುದಾದಾರನ್ನು ಮೂರು ವರ್ಷ ಶಬರಿಮಲೆಗೆ ಕರೆದೊಯ್ದು ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿಸಿದ್ದರು. "ನಮ್ಮ ಯಜಮಾನರು ಮೂರು ಬಾರಿ ಶಿವರಾಮಣ್ಣನ ಜೊತೆ ಶಬರಿಮಲೆಗೆ ಹೋಗಿದ್ದರು. ಇವರೇ ಅವರಿಗೆ ಮಾರ್ಗದರ್ಶಕರಾಗಿದ್ದರು. ಶಿವರಾಮಣ್ಣ ಅಯ್ಯಪ್ಪ ಸ್ವಾಮಿಯ ಪರಮಭಕ್ತರಾಗಿದ್ದರು. ಅವರು ಎಂದೆಂದಿಗೂ ನಮ್ಮೊಂದಿಗೆ ಇರುತ್ತಾರೆ. ಅವರೇ ನಮ್ಮ ಯಜಮಾನರೊಂದಿಗೆ ಸೇರಿ ಸ್ನೇಹಲೋಕ ಕಟ್ಟಲು ಪ್ರೇರೆಪಿಸಿದ್ದರು." ಎಂದು ಭಾರತಿ ವಿಷ್ಣುವರ್ಧನ್ ನೆನಪಿಸಿಕೊಂಡಿದ್ದಾರೆ.

ಹಿರಿಯರಿಂದ ಕಿರಿಯರಿಗೆ ಶಿವರಾಂ ಗುರುಸ್ವಾಮಿಗಳು
ಕನ್ನಡ ಚಿತ್ರರಂಗದ ಪಾಲಿಗೆ ಶಿವರಾಂ ಅವರೇ ಅಯ್ಯಪ್ಪಸ್ವಾಮಿಯ ಮಾರ್ಗದರ್ಶಕರು. ಡಾ.ರಾಜ್ಕುಮಾರ್ ಅವರಿಂದ ಹಿಡಿದು, ಇತ್ತೀಚೆಗೆ ಬಂದ ನಟರಿಗೆ ಶಿವರಾಂ ಅಯ್ಯಪ್ಪಸ್ವಾಮಿ ಮಾಲೆ ಹಾಕಿಸುತ್ತಿದ್ದರು. ಡಾ.ರಾಜ್ಕುಮಾರ್, ಶಿವರಾಜ್ಕುಮಾರ್, ರಾಘಣ್ಣ, ಪುನೀತ್, ನೆನಪಿರಲಿ ಪ್ರೇಮ್ ಸೇರಿದಂತೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಬೇಕು ಅಂತ ಯಾರು ಸಂಕಲ್ಪ ಮಾಡಿಕೊಳ್ಳುತ್ತಿದ್ದರೋ ಅವರಿಗೆಲ್ಲಾ ಶಿವರಾಂ ಅವರೇ ಗುರುಸ್ವಾಮಿಗಳಾಗಿದ್ದರು.

ನಡೆದಾಡುವ ಅಯ್ಯಪ್ಪಸ್ವಾಮಿಯಾಗಿದ್ದ ಶಿವರಾಂ
"ಕರ್ನಾಟಕದ ಮಾತನಾಡುವ ಮತ್ತು ನಡೆದಾಡುವ ಅಯ್ಯಪ್ಪಸ್ವಾಮಿ ಎಂದರೆ ಶಿವರಾಂ ಸ್ವಾಮಿಗಳು. ಕರ್ನಾಟಕದಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ಅಯ್ಯಪ್ಪನ ಅನುಯಾಯಿಗಳಿದ್ದಾರೆ. ಅವರಿಗೆ ಮಾರ್ಗದರ್ಶನ ಕೊಟ್ಟವರು. ದಾರಿ ತಪ್ಪಿದವರಿಗೆ ದಾರಿ ತೋರಿಸಿದವರು. ಯಾರೇ ತೊಂದರೆಯಲ್ಲಿದ್ದರೂ ಅವರಿಗೆ ಅಯ್ಯಪ್ಪನ ಮೂಲಕ ತೊಂದರಿಯಿಂದ ಪಾರುಮಾಡಿದ ಕಲಿಯುಗದ ಚೈತನ್ಯ ಅಂದರೆ ಅದು ಶಿವರಾಂ ಸ್ವಾಮಿಗಳು. ಕರ್ನಾಟಕದಲ್ಲಿ ಶಿವರಾಂ ಸ್ವಾಮಿಗಳು ಜ್ಯೋತಿ ರೂಪದಲ್ಲಿ ದರ್ಶನ ಕೊಡುತ್ತಾರೆ." ಎಂದು ಚಾಮರಾಜ ಪೇಟೆ ಅಯ್ಯಪ್ಪಸ್ವಾಮಿ ಮಂದಿರದ ಗುರುಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











