ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಸೂರಜ್; ನೋವಿನಲ್ಲೂ 'ಕಾಟೇರ' ಕ್ಲೈಮ್ಯಾಕ್ಸ್ ನಟಿಸಿದ್ದೇಗೆ?
ಪಾರ್ವತಮ್ಮ ರಾಜ್ಕುಮಾರ್ ಅವರ ತಮ್ಮನ ಮಗ ಸೂರಜ್ ಕುಮಾರ್ ಚಿತ್ರರಂಗ ಎಂಟ್ರಿ ಕೊಟ್ಟಿದ್ದರು. 'ಭಗವಾನ್ ಶ್ರೀ ಕೃಷ್ಣ ಪರಮಾತ್ಮ' ಸಿನಿಮಾದಲ್ಲಿ ನಟಿಸುತ್ತಿದ್ದರು. ಆದರೆ, ಈ ಸಿನಿಮಾ ಅರ್ಧಕ್ಕೆ ನಿಂತಿತ್ತು. ಮೈಸೂರಿನವರಾಗಿದ್ದರಿಂದ ಸೂರಜ್ಗೆ ಮೊದಲಿನಿಂದ ದರ್ಶನ್ ಅವರ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಹೀಗಾಗಿ 'ಕಾಟೇರ' ನಟಿಸುವುದಕ್ಕೆ ಅವಕಾಶ ಸಿಕ್ಕಿತ್ತು.
ದುರಾದೃಷ್ಟವಶಾತ್ ಕಳೆದ ವರ್ಷ ಸೂರಜ್ ಊಟಿಯಿಂದ ಬೈಕ್ನಲ್ಲಿ ಹಿಂತಿರುಗುವಾಗ ಟೆಪ್ಪರ್ ಲಾರಿ ಬಂದು ಗುದ್ದಿತ್ತು. ಈ ಅಪಘಾತದಲ್ಲಿ ಟಿಪ್ಪರ್ ಲಾರಿ ಸೂರಜ್ ಬಲಗಾಲಿನ ಮೇಲೆ ಹರಿದಿತ್ತು. ಈ ಸಂಬಂಧ ವೈದ್ಯರು ಅವರ ಬಲಗಾಲನ್ನು ಶಸ್ತ್ರ ಚಿಕಿತ್ಸೆ ಮಾಡಿ ಮಂಡಿವರೆಗೂ ಕಾಲನ್ನು ತೆಗೆದಿದ್ದರು.

ಈ ವೇಳೆ ದರ್ಶನ್ ಅಭಿನಯದ 'ಕಾಟೇರ' ಸಿನಿಮಾದಲ್ಲಿ ಸೂರಜ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದರು. ಕ್ಲೈಮ್ಯಾಕ್ಸ್ ಸೀನ್ ಬಾಕಿ ಉಳಿದಿತ್ತು. ಕಾಲಿನ ಸ್ಥಿತಿ ಗಂಭೀರವಾಗಿರುವಾಗಲೇ ಮುಂದೆ ಬಂದು ಕ್ಲೈಮ್ಯಾಕ್ಸ್ ಸೀನ್ನಲ್ಲಿ ನಟಿಸುತ್ತೇನೆ ಎಂದು ಹೇಳಿದ್ದನ್ನು ದರ್ಶನ್ ನೆನಪಿಸಿಕೊಂಡಿದ್ದಾರೆ. 'ಕಾಟೇರ' ಯಶಸ್ಸಿನ ಹಿನ್ನೆಲೆಯಲ್ಲಿ ಸಂಭಾಷಣೆಗಾರ ಮಾಸ್ತಿ, ಕಥೆಗಾರ ಜಡೇಶ್ ಹಾಗೂ ಸೂರಜ್ಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಈ ವೇಳೆ ಸ್ವತ: ದರ್ಶನ್ ಅವರೇ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
"ಇನ್ನೊಂದು ವಿಷಯ ಯಾರಿಗೂ ಗೊತ್ತಿಲ್ಲ. ಆಕ್ಸಿಡೆಂಟ್ ಆಗಿ ಕಾಲು ಹೀಗಾದ್ಮೇಲೂ ಬಂದ ಕ್ಲೈಮ್ಯಾಕ್ಸ್ ಮಾಡಿಕೊಟ್ಟ. ಅದು ಡೆಡಿಕೇಷನ್. ಯಾರೂ ಮಾಡುವುದಿಲ್ಲ. ಇಲ್ಲ ಕುಗ್ಗಿ ಹೋಗುತ್ತಾರೆ. ಏನು ಹೀಗೆ ಆಗಿ ಹೋಯ್ತಲ್ಲ ಅಂತ. ಇಲ್ಲಾ ನಾನು ಬಂದು ಮಾಡುತ್ತೇನೆ ಅಂತ ಆಕ್ಟ್ ಮಾಡಿದ. ತರುಣ್ ಆಗಲಿ, ರಾಕ್ಲೈನ್ ವೆಂಕಟೇಶ್ ಆಗಲಿ ತುಂಬಾನೇ ಸಪೋರ್ಟ್ ಮಾಡಿದ್ದಾರೆ." ಎಂದು ದರ್ಶನ್ ವೇದಿಕೆ ಮೇಲೆ ಹೇಳಿದ್ದಾರೆ.

ಸೂರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ದರ್ಶನ್ ಭೇಟಿ ಕೊಟ್ಟಿದ್ದರು. ಈ ವೇಳೆ 'ಕಾಟೇರ' ಕ್ಲೈಮ್ಯಾಕ್ಸ್ ಇದೆ. ರೆಡಿಯಾಗು ಎಂದು ಹೇಳಿದ್ದರಂತೆ. "ಅವರು ಆಸ್ಪತ್ರೆಯಲ್ಲಿ ಇದ್ದಾಗಲೇ ಹೇಳಿದ್ದೆವು. ಕ್ಲೈಮ್ಯಾಕ್ಸ್ ಇದೆ ರೆಡಿಯಾಗಿ ಬಾ ಅಂತ. ಕಾಟೇರ ಕ್ಲೈಮ್ಯಾಕ್ಸ್ಗಿಂತ ಮುಂಚೆ ಆಗಿರೋದು. ಅದಾದ ಮೇಲೂ ಕೂಡ ಡಾಕ್ಟರ್ ಪರ್ಮಿಷನ್ ತೆಗೆದುಕೊಂಡು ಕ್ಲೈಮ್ಯಾಕ್ಸ್ ಮಾಡಿದ ಹಾಗೇ ಡಬ್ಬಿಂಗ್ ಕೂಡ ಮಾಡಿದ್ದಾನೆ" ಎಂದು ದರ್ಶನ್ ಹೆಮ್ಮೆ ಪಟ್ಟಿದ್ದಾರೆ.
ಸೂರಜ್ ಕಾಲು ಕಳೆದುಕೊಂಡು ನೋವಿನಲ್ಲಿದ್ದರು. ವೈದ್ಯರು ಸಂಪೂರ್ಣ ಬೆಡ್ ರೆಸ್ಟ್ ಹೇಳಿದ್ದರು. ಇಂತಹ ಸಮಯದಲ್ಲಿ ಕ್ಲೈಮ್ಯಾಕ್ಸ್ ಶೂಟ್ ಅನ್ನು ಮಾಡಿದ್ದು ಹೇಗೆ ಅಂತ ನಿರ್ದೇಶಕ ತರುಣ್ ಸುಧೀರ್ ರಿವೀಲ್ ಮಾಡಿದ್ದಾರೆ. "ಒಂದು ದಿನ ಶೂಟಿಂಗ್ ಇತ್ತು. ವಿಎಫ್ಎಕ್ಸ್ ಸಪೋರ್ಟ್ ತೆಗೆದುಕೊಂಡಿದ್ದೇವೆ. ಆದರೂ ಮೇಕಪ್ ಎಲ್ಲಾ ಹಾಕಿಸಿ, ಕ್ಲೋಸ್ ಅಪ್ ಶಾಟ್ಗಳನ್ನೆಲ್ಲ ತೆಗೆದುಕೊಂಡು ಮಾಡಿದ್ವಿ. ಈಗಿನಷ್ಟೂ ನಡೆಯುವುದಕ್ಕೆ ಆಗುತ್ತಿರಲಿಲ್ಲ. ಡಬ್ಬಿಂಗ್ ಕೂಡ ಮೈಸೂರಲ್ಲೇ ಮಾಡಿದ್ವಿ. ಆದರೂ, ಸರಿ ಹೋಗಲಿಲ್ಲ. ಮತ್ತೆ ಬೆಂಗಳೂರಿಗೆ ಕರೆಸಿ ಮಾಡಿದ್ವಿ." ಎಂದಿದ್ದಾರೆ.
ಸೂರಜ್ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್ನೊಂದು ಖುಷಿ ವಿಷಯವನ್ನು ಹಂಚಿಕೊಂಡಿದ್ದಾರೆ. ಇನ್ನು ಮೂರು ತಿಂಗಳಲ್ಲಿ ಸರಿ ಹೋಗುತ್ತಾರೆಂದು ದರ್ಶನ್ ಹೇಳಿದ್ದಾರೆ. "ನನಗೆ ಗೊತ್ತಿರೋ ಹಾಗೇ ಇನ್ನೊಂದು ಮೂರು ತಿಂಗಳು. ಮತ್ತೆ ಅವನ ಕಾಲ ಮೇಲೆ ಅವನು ನಿಲ್ಲುತ್ತಾನೆ" ಎಂದು ಸೂರಜ್ಗೆ ದರ್ಶನ್ ಭರವಸೆ ನೀಡಿದ್ದಾರೆ.


Click it and Unblock the Notifications











