8 ವರ್ಷಗಳ ಬಳಿಕ ಸಿನಿಮಾಗೆ ಅಮೂಲ್ಯ ಎಂಟ್ರಿ; ಏನಿದು 'ಪೀಕಬೂ'?
ಬಹಳ ದಿನಗಳಿಂದ ಸಿನಿಮಾ ಪ್ರಿಯರಿಗೊಂದು ಆಸೆಯಿತ್ತು. ಗೋಲ್ಡನ್ ಕ್ವೀನ್ ಅಮೂಲ್ಯರನ್ನು ಮತ್ತೆ ತೆರೆಮೇಲೆ ನೋಡಬೇಕು? ಅವರು ಮತ್ತೆ ಸಿನಿಮಾ ಮಾಡಬೇಕು ಅಂತ ಬೇಡಿಕೆ ಇಡುತ್ತಲೇ ಇದ್ದರು. ಅಮೂಲ್ಯ ಮಾತ್ರ ಈ ಬಗ್ಗೆ ಏನೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಸೈಲೆಂಟ್ ಆಗಿಯೇ ಕಮ್ಬ್ಯಾಕ್ ಮಾಡುವುದಕ್ಕೆ ತಯಾರಿ ನಡೆಸುತ್ತಲೇ ಇದ್ದರು. 'ಶ್ರಾವಣಿ ಸುಬ್ರಮಣ್ಯ' ಸಿನಿಮಾದ ನಿರ್ದೇಶಕರೊಂದಿಗೆ ಚರ್ಚೆ ನಡೆಯುತ್ತಲೇ ಇತ್ತು. ಕೊನೆಗೂ ಅವರ ಹುಟುಹಬ್ಬಕ್ಕೆ (ಸೆಪ್ಟೆಂಬರ್ 14) ಸಿನಿಮಾ ಅನೌನ್ಸ್ ಆಗಿದೆ.
ಅಮೂಲ್ಯ ನಟಿಸಿದ ಕೊನೆಯ ಸಿನಿಮಾ 'ಮಾಸ್ತಿಗುಡಿ'. ದುನಿಯಾ ವಿಜಯ್ ನಟಿಸಿದ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿ ಇರುವಾಗಲೇ ಅಮೂಲ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಳಿಕ ಕುಟುಂಬ, ಮಕ್ಕಳು ಅಂತ ಬ್ಯುಸಿಯಾಗಿಬಿಟ್ಟರು. ಇಬ್ಬರು ಅವಳಿ ಮಕ್ಕಳನ್ನು ಬೆಳೆಸುವುದರಲ್ಲಿ ಗಮನ ಹರಿಸಿದ್ದರು. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಅಮೂಲ್ಯಗೆ ಕಮ್ ಬ್ಯಾಕ್ ಮಾಡುವಂತೆ ಒತ್ತಡಗಳು ಹೆಚ್ಚಾಗುತ್ತಲೇ ಇದ್ದವು.

ಒಳ್ಳೆಯ ಸ್ಕ್ರಿಪ್ಟ್ ಹುಡುಕಾಡುತ್ತಿದ್ದ ಅಮೂಲ್ಯ ಕೊನೆಗೂ ಕಮ್ ಬ್ಯಾಕ್ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಬರೋಬ್ಬರಿ 8 ವರ್ಷಗಳ ಬಳಿಕ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಚಿಕ್ಕದೊಂದು ಟೀಸರ್ ಮೂಲಕ ಅಮೂಲ್ಯ ಅವರ ಪಾತ್ರವನ್ನು ನಿರ್ದೇಶಕ ಮಂಜು ಸ್ವರಾಜ್ ಪರಿಚಯಿಸಿದ್ದಾರೆ. ಈ ಸಿನಿಮಾ ಬಗ್ಗೆ, ಅಮೂಲ್ಯ ಕಮ್ಬ್ಯಾಕ್ ಬಗ್ಗೆ ನಿರ್ದೇಶಕ ಮಂಜು ಸ್ವರಾಜ್ ಫಿಲ್ಮಿಬೀಟ್ ಕನ್ನಡದ ಜೊತೆ ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಟೀಸರ್ ಅಮೂಲ್ಯ ಲುಕ್ ರಿವೀಲ್
ಅಮೂಲ್ಯ ಹುಟ್ಟುಹಬ್ಬಕ್ಕೆ ಟೀಸರ್ ಮೂಲಕ ರೀ ಎಂಟ್ರಿ ಕೊಡುತ್ತಿರುವ 'ಪೀಕಬೂ' ಸಿನಿಮಾವನ್ನು ಅನೌನ್ಸ್ ಮಾಡಲಾಗಿದೆ. 'ಪೀಕಬೂ ಸಿನಿಮಾದ ಟೀಸರ್ ಡ್ಯಾನ್ಸ್ ಮೂಮೆಂಟ್ ಅನ್ನು ವಿ ನಾಗೇಂದ್ರ ಕೊರಿಯೋಗ್ರಾಫ್ ಮಾಡಿದ್ದಾರೆ. ಫನ್ನಿ ಮ್ಯೂಸಿಕ್ಗೆ ಅಮೂಲ್ಯ ಸಿನಿಮಾ ಕ್ಯಾರೆಕ್ಟರ್ ರಿವೀಲ್ ಮಾಡಲಾಗಿದೆ. ಸಿಂಗಲ್ ಟೇಕ್ನಲ್ಲಿಯೇ ಈ ಟೀಸರ್ಗೆ ಸ್ಟೆಪ್ಸ್ ಹಾಕಿದ್ದು, ಇನ್ನೂ ಹಿಡಿತ ಕಂಡುಕೊಂಡಿಲ್ಲ ಅನ್ನೋದನ್ನು ಸಾಬೀತು ಮಾಡಿದ್ದಾರೆ. ಈ ಸಿನಿಮಾ ಬಗ್ಗೆ ಮಂಜು ಸ್ವರಾಜ್ ಕೂಡ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಪ್ರಾಜೆಕ್ಟ್ ಶುರುವಾಗಿದ್ದು ಎಂದಿನಿಂದ?
ಗೋಲ್ಡನ್ ಕ್ವೀನ್ ಅಮೂಲ್ಯ ಕಮ್ಬ್ಯಾಕ್ ಬಗ್ಗೆ ಚರ್ಚೆ ಆಗುತ್ತಲೇ ಇತ್ತು. 'ಶ್ರಾವಣಿ ಸುಬ್ರಮಣ್ಯ' ಸಿನಿಮಾದ ನಿರ್ದೇಶಕ ಮಂಜು ಸ್ವರಾಜ್ ಅವರೊಂದಿಗೆ ಅಮೂಲ್ಯ ಚರ್ಚೆ ಮಾಡುತ್ತಿದ್ದರು. "ಶ್ರಾವಣಿ ಸುಬ್ರಮಣ್ಯ ಸಿನಿಮಾದ ಬಳಿಕ ನಾನು ಅಮೂಲ್ಯ ಒಟ್ಟಿಗೆ ಮಾಡುತ್ತಿರುವ ಎರಡನೇ ಸಿನಿಮಾ. ಹಾಗೇ 8 ವರ್ಷಗಳ ಬಳಿಕ ಸಿನಿಮಾ ಎಂಟ್ರಿ ಕೊಡುತ್ತಿದ್ದಾರೆ. ಒಂದಿಷ್ಟು ವರ್ಷಗಳ ಹಿಂದಿನಿಂದಲೇ ಅಮೂಲ್ಯ ಎಂಟ್ರಿ ಕೊಡುವ ಬಗ್ಗೆ ಮಾತುಕತೆಯಲ್ಲಿ ಇದ್ವಿ. ಒಂದು ಒಳ್ಳೆಯ ಕಥೆಗೆ ಹುಡುಕುತಿದ್ವಿ. ಈಗ ರೀ ಎಂಟ್ರಿ ಅಂದ ಕೂಡಲೇ ಮದುವೆ ಆಗಿದೆ ಅನ್ನೋ ಕಾರಣಕ್ಕೆ ಅದೇ ತರಹದ ಸಿನಿಮಾ ಮಾಡಬಾರದು ಅನ್ನೋದು ತಲೆಯಲ್ಲಿ ಇತ್ತು. ಇನ್ನೂ ಆಡಿಯನ್ಸ್ ಮೈಂಡ್ಸೆಟ್ ಕೂಡ ಹಾಗೇ ಇರುತ್ತೆ. ಅಮೂಲ್ಯ ಅವರೊಂದಿಗೆ ಈಗಲೂ ತುಂಬಾ ಜನರು ಕನೆಕ್ಟ್ ಆಗುತ್ತಾರೆ. ಹೀಗಾಗಿ ಅವರು ಮದುವೆ ಆಗಿದ್ದಾರೆ ಅನ್ನೋದು ಬಾರದೆ ಇರಲಿ ಅನ್ನೋದನ್ನೂ ಗಮನದಲ್ಲಿಟ್ಟುಕೊಂಡು ಒಂದು ಕಥೆಯನ್ನು ಸೃಷ್ಟಿ ಮಾಡಿದ್ವಿ." ಎನ್ನುತ್ತಾರೆ ಮಂಜು ಸ್ವರಾಜ್.
ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ 'ಅಧ್ಯಕ್ಷ' ಶರಣ್, ಗೋಲ್ಡನ್ ಕ್ವೀನ್ ಅಮೂಲ್ಯ, ತಾರಾ; ಇದೇ ವಾರ'ನಾವು ನಮ್ಮವರು'!
'ಪೀಕಬೂ' ಎಂದರೇನು?
ಅಮೂಲ್ಯ ಕಮ್ ಬ್ಯಾಕ್ ಆಗಬೇಕು ಅಂತ ತುಂಬಾ ವರ್ಷದಿಂದ ಕೇಳುತ್ತಿದ್ದರಂತೆ. ಅವರು ಸಿನಿಮಾ ಮಾಡುವುದನ್ನು ನಿಲ್ಲಿಸಿದಾಗ ಅಂದರೆ, ಮಾಸ್ತಿಗುಡಿವರೆಗೂ ಸ್ಟಾರ್ ಆಗಿಯೇ ಇದ್ದರು. ಮತ್ತೆ ಸ್ಟಾರ್ಢಮ್ ಅನ್ನು ಹಾಗೇ ಎತ್ತಿಕೊಂಡು ಬರಬೇಕೆ ಅಂದಾಗ ಒಳ್ಳೆಯ ಕಥೆಯನ್ನು ಹುಡುಕಾಟ ಶುರುವಾಗಿತ್ತು. ಈಗ ಪೀಕಬೂ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡುವುಕ್ಕೆ ಮುಂದಾಗಿದ್ದಾರೆ. "ಪೀಕಬೂ ಅಂದರೆ, ನಾವು ಮಕ್ಕಳಿಗೆ ಛೀ ಕಳ್ಳ ಅಂತೀವಲ್ಲ ಆತರ. ಇದೊಂದು ಸೈಕಾಲಜಿಕಲ್ ಪದ. ಈ ಪದವನ್ನು ಮಕ್ಕಳಿಗೆ ಹೇಳಿದರೆ, ಅವು ನಗುತ್ತವೆ. ಸಿನಿಮಾ ಕೂಡ ಹಾಗೇ ಇರುತ್ತದೆ. ಲೈಫ್ ಅನ್ನು ಎಷ್ಟು ಖುಷಿ ಖುಷಿಯಾಗಿ ಅನುಭವಿಸಬೇಕು ಅನ್ನೋದನ್ನು ತಲೆಯಲ್ಲಿ ಇಟ್ಟುಕೊಂಡು ಈ ಕಥೆಯನ್ನು ಮಾಡಿದ್ದೇವೆ. ನಮ್ಮ ಜೀವನಕ್ಕೆ ಸರ್ಪ್ರೈಸ್ ಹೇಗೆ ಬರುತ್ತವೆ. ಅವು ನಮ್ಮನ್ನು ಹೇಗೆ ನಗಿಸುತ್ತವೆ ಅನ್ನೋದನ್ನು ಸಿನಿಮಾದಲ್ಲಿ ಹೇಳಲಾಗಿದೆ.

ಹೀರೋ ಯಾರು?
ಇದೊಂದು ಔಟ್ ಅಂಡ್ ಔಟ್ ಫ್ಯಾಮಿಲಿ ಕಮ್ ಕಾಮಿಡಿ ಸಿನಿಮಾ. ತೆರೆಮೇಲೆ ಅಮೂಲ್ಯ ಭಾವುಕರಾದಾಗ ಆಡಿಯನ್ಸ್ ನಗುತ್ತಾರೆ. ಅಮೂಲ್ಯ ನಕ್ಕಾಗ ಆಡಿಯನ್ಸ್ ಭಾವಕರಾಗುತ್ತಾರೆ. ಅಂತಹದ್ದೊಂದು ಸಿನಿಮಾ ಎನ್ನುತ್ತಾರೆ ಮಂಜು ಸ್ವರಾಜ್. ಇದೇ ವಿಜಯದಶಮಿಯಿಂದ ಸಿನಿಮಾದ ಶೂಟಿಂಗ್ ಆರಂಭ ಆಗಲಿದೆ. ಇನ್ನು ಸಿನಿಮಾ ಹೀರೋ ಯಾರೋ ಅನ್ನೋ ಗುಟ್ಟನ್ನು ಮಂಜು ಸ್ವರಾಜ್ ಬಿಟ್ಟುಕೊಟ್ಟಿಲ್ಲ. ಸುರೇಶ್ ಬಾಬು ಸಿನಿಮಾಟೋಗ್ರಫಿ ಇದ್ದರೆ, ವೀರ್ ಸಮರ್ಥ್ ಸಂಗೀತ ನಿರ್ದೇಶನವಿದೆ.ಗಣೇಶ್ ಕೆಂಚಾಂಬಾ ಎಂಬುವವರು ಪೀಕಾಬೂ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications











