ನಟಿ ರಚನಾ-ಜೀವನ್ 'ದುರ್ಮರಣ'ದ ಪೂರ್ತಿ ವಿವರ, ಈ ಅಪಘಾತ ಆಗಿದ್ದೇಗೆ?
ಕಿರುತೆರೆ ಕಲಾವಿದರಿಬ್ಬರು ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿರುವ ಘಟನೆ ಇಂದು (ಆಗಸ್ಟ್ 24) ನೆಲಮಂಗಲದ ಹೆದ್ದಾರಿಯಲ್ಲಿ ನಡೆದಿದೆ. ಕಿರುತೆರೆ ನಟಿ ರಚನಾ ಮತ್ತು ನಟ ಜೀವನ್ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.
ಈ ಘಟನೆ ಹೇಗೆ ಮತ್ತು ಯಾವಾಗ ನಡೆಯಿತು? ರಚನಾ ಮತ್ತು ಜೀವನ್ ಎಲ್ಲಿಗೆ ಹೋಗುತ್ತಿದ್ದರು? ಇವರ ಜೊತೆಯಲ್ಲಿ ಯಾರೆಲ್ಲಾ ಇದ್ದರು ಎಂಬ ಹಲವು ಪ್ರಶ್ನೆಗಳು ಕಾಡುವುದು ಸಹಜ.
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಈ ಅಪಘಾತದ ಸಂಪೂರ್ಣ ವಿವರ ಇಲ್ಲಿದೆ ನೋಡಿ....

ಕುಕ್ಕೆ ಸುಬ್ರಮಣ್ಯಗೆ ಹೊರಟ್ಟಿದ ರಚನಾ
ನಟಿ ರಚನಾ, ಜೀವನ್ ಸೇರಿದಂತೆ ಒಟ್ಟು ಏಳು ಜನ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಹೊರಟಿದ್ದರು. ಸ್ನೇಹಿತ ಕಾರ್ತಿಕ್ ಅವರ ಹುಟ್ಟುಹಬ್ಬದ ಹಿನ್ನೆಲೆ ಎಲ್ಲರೂ ಹೋಗಿ ಬರುವ ಪ್ಲಾನ್ ಆಗಿತ್ತು. ಈ ಹಿನ್ನೆಲೆ ಪ್ರಯಾಣ ಬೆಳಸಿದ್ದರು.

12 ಗಂಟೆಗೆ ಬೆಂಗಳೂರಿನಿಂದ ಪ್ರಯಾಣ
ಆಗಸ್ಟ್ 23ರ ರಾತ್ರಿ 12 ಗಂಟೆಗೆ ರಚನಾ ಮತ್ತು ಸ್ನೇಹಿತರ ತಂಡ ಬೆಂಗಳೂರಿನಿಂದ ಪ್ರಯಾಣ ಆರಂಭಿಸಿದ್ದರು. ಸಫಾರಿ ಕಾರಿನಲ್ಲಿ ರಚನಾ, ಜೀವನ್, ರಂಜಿತ್, ಕಾರ್ತಿಕ್, ಹೊನ್ನೇಶ್, ಉತ್ತಮ್, ಹ್ಯಾರಿಕ್ ಇದ್ದರು.

2 ಗಂಟೆಗೆ ಅಪಘಾತ
ರಾತ್ರಿ 12 ಗಂಟೆಗೆ ಬೆಂಗಳೂರಿನಿಂದ ಹೊರಟ ಸಫಾರಿ ಕಾರ್ ಸುಮಾರು 2 ಗಂಟೆ ವೇಳೆಗೆ ಅಪಘಾತಕ್ಕೀಡಾಗಿದೆ. ನೆಲಮಂಗಲದ ಹೆದ್ದಾರಿ 48ರಲ್ಲಿ ನಿಂತಿದ್ದ ಟ್ಯಾಂಕರ್ ಡಿಕ್ಕಿ ಹೊಡೆಯುವ ಮೂಲಕ ಭೀಕರ ಅಪಘಾತ ಸಂಭವಿಸಿದೆ.

ಸ್ಥಳದಲ್ಲೇ ಮೃತಪಟ್ಟ ಜೀವನ್-ರಚನಾ
ಈ ಭೀಕರ ರಸ್ತೆ ಅಪಘಾತದಲ್ಲಿ ನಟಿ ರಚನಾ ಮತ್ತು ಜೀವನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕನ ಎಡಭಾಗದಲ್ಲಿ ರಚನಾ ಕೂತಿದ್ದರು, ಅವರ ಹಿಂದೆ ಜೀವನ್ ಕೂತಿದ್ದರು ಎನ್ನಲಾಗಿದ್ದು, ಇವರಿಬ್ಬರು ಹೊರತು ಪಡಿಸಿ ಉಳಿದವರೆಗೆಲ್ಲಾ ಗಾಯವಾಗಿದೆ.

ಹೈದರಾಬಾದ್ ಗೆ ಹೋಗಬೇಕಿದ್ದ ರಚನಾ
ಅಂದ್ಹಾಗೆ, ರಚನಾ ಅವರು ಇಂದು ಸಂಜೆ ಧಾರಾವಾಹಿವೊಂದರ ಚಿತ್ರೀಕರಣದ ನಿಮಿತ್ತ ಹೈದರಾಬಾದ್ ಗೆ ಹೋಗಬೇಕಿತ್ತು. ಹೀಗಾಗಿ, ಬೆಳಗ್ಗೆ ವಾಪಸ್ ಆಗಬೇಕು ಎಂಬ ಕಾರಣಕ್ಕೆ ರಾತ್ರಿ ಕುಕ್ಕೆ ಸುಬ್ರಮಣ್ಯಗೆ ಹೋಗಲು ನಿರ್ಧರಿಸಿದ್ದರು.

ಅಪಘಾತಕ್ಕೆ ಕಾರಣ ಗೊತ್ತಿಲ್ಲ
ಸಫಾರಿ ಕಾರ್, ನಿಂತಿರುವ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಮುಂದೆ ಇದ್ದ ವಾಹನವನ್ನ ಓವರ್ ಟೇಕ್ ಮಾಡಲು ಹೋಗಿ, ಎಡ ಬದಿಯಲ್ಲಿ ನಿಂತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದ್ದಾರೆ ಎನ್ನುತ್ತಿದ್ದರೆ, ಮತ್ತೊಂದೆಡೆ ನಿದ್ದೆಯ ಮಂಪರಿನಲ್ಲಿದ್ದ ಚಾಲಕನ ಅಜಾಗೃತೆಯಿಂದ ಈ ಅಫಘಾತ ಸಂಭವಿಸಿದೆ ಎನ್ನಲಾಗಿದೆ. ಆದ್ರೆ, ನಿಜವಾದ ಕಾರಣ ತನಿಖೆಯಿಂದ ಮಾತ್ರ ಗೊತ್ತಾಗಬೇಕಿದೆ.


Click it and Unblock the Notifications











