ಬಿಡದಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಸಿದ ನಟಿ ರಚಿತಾ ರಾಮ್
'ಲವ್ ಯು ರಚ್ಚು' ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಆದ ಅವಘಡದಲ್ಲಿ ಸಾಹಸ ಕಲಾವಿದನೊಬ್ಬ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಬಿಡದಿ ಪೊಲೀಸರು ತನಿಖೆ ನಡೆಸುತ್ತಿದ್ದು, ಇಂದು ನಟಿ ರಚಿತಾ ರಾಮ್ ಅನ್ನು ವಿಚಾರಣೆ ಮಾಡಿದರು.
Recommended Video

ಘಟನೆಗೆ ಸಂಬಂಧಿಸಿದಂತೆ ಸಿನಿಮಾ ನಿರ್ದೇಶಕ, ಸಾಹಸ ನಿರ್ದೇಶಕ, ಮ್ಯಾನೇಜರ್ ಹಾಗೂ ಕ್ರೇನ್ ಡ್ರೈವರ್ ಅನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ. ಸಿನಿಮಾಕ್ಕೆ ಸಂಬಂಧಿಸಿದ ಇನ್ನೂ ಕೆಲವರಿಗೆ ನೊಟೀಸ್ ಜಾರಿ ವಿಚಾರಣೆ ನಡೆಸುತ್ತಿದ್ದು, ಅಂತೆಯೇ ಸಿನಿಮಾದ ನಾಯಕಿ ರಚಿತಾ ರಾಮ್ ಅವರಿಗೂ ನೊಟೀಸ್ ಜಾರಿ ಮಾಡಲಾಗಿತ್ತು.
ಅದರಂತೆ ಇಂದು ಸಂಜೆ ವೇಳೆಗೆ ಬಿಡದಿ ಪೊಲೀಸ್ ಠಾಣೆಗೆ ನಟಿ ರಚಿತಾ ರಾಮ್ ಬಂದರು, ಅವರನ್ನು ರಾಮನಗರ ಡಿವೈಎಸ್ಪಿ ಮೋಹನ್ ವಿಚಾರಣೆ ನಡೆಸಿ ಚಿತ್ರೀಕರಣ ಸಂದರ್ಭದಲ್ಲಾದ ದುರಂತದ ಬಗ್ಗೆ ಮಾಹಿತಿ ಪಡೆದುಕೊಂಡರು.

ವಿದ್ಯುತ್ ಅವಘಡದಲ್ಲಿ ವಿವೇಕ್ ಸಾವು
ಬಿಡದಿ ಸಮೀಪದ ಜೋಗರಪಾಳ್ಯ ಗ್ರಾಮದಲ್ಲಿ 'ಲವ್ ಯು ರಚ್ಚು' ಸಿನಿಮಾದ ಚಿತ್ರೀಕರಣ ಸಂದರ್ಭ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಸಾಹಸ ಕಲಾವಿದ ವಿವೇಕ್ ಮೃತಪಟ್ಟು, ರಂಜಿತ್ ಎಂಬುವರು ಗಾಯಗೊಂಡಿದ್ದರು. ಸಿನಿಮಾದ ನಾಯಕ ಅಜಯ್ ರಾವ್ ಹಾಗೂ ರಚಿತಾ ರಾಮ್ ಇಬ್ಬರೂ ಆ ಫೈಟ್ ದೃಶ್ಯದಲ್ಲಿ ಇರಲಿಲ್ಲ ಎನ್ನಲಾಗಿದೆ. ಆದರೆ ಘಟನೆ ನಡೆದಾಗ ಅಜಯ್ ರಾವ್ ಸೆಟ್ನಲ್ಲಿದ್ದರು. ರಚಿತಾ ರಾಮ್ ಸೆಟ್ನಲ್ಲಿ ಸಹ ಇರಲಿಲ್ಲ ಎನ್ನಲಾಗಿದೆ.

ನಾಲ್ವರನ್ನು ಬಂಧಿಸಿದ ಬಿಡದಿ ಪೊಲೀಸರು
ಪ್ರಕರಣ ಸಂಬಂಧ ಬಿಡದಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಚಿತ್ರದ ನಿರ್ದೇಶಕ ಶಂಕರ್, ಕ್ರೇನ್ ಆಪರೇಟರ್ ಮಹದೇವ್ ಹಾಗೂ ಫೈಟ್ ಮಾಸ್ಟರ್ ವಿನೋದ್, ಹಾಗೂ ಸಿನಿಮಾ ಸೆಟ್ನಲ್ಲಿದ್ದ ಮ್ಯಾನೇಜರ್ ಅವರುಗಳನ್ನು ಬಂಧಿಸಿದದ್ದಾರೆ, ನಿರ್ಮಾಪಕ ಗುರು ದೇಶಪಾಂಡೆ ವಿರುದ್ಧವೂ ಪ್ರಕರಣ ದಾಖಲಾಗಿದೆ. ಆದರೆ ಗುರು ದೇಶಪಾಂಡೆ ಪೊಲೀಸರ ಸಂಪರ್ಕಕ್ಕೆ ಸಿಗದೆ ತಪ್ಪಿಸಿಕೊಂಡಿದ್ದಾರೆ. ಈ ನಡುವೆ ಗುರು ದೇಶಪಾಂಡೆ ಪತ್ನಿ ಪ್ರೀತಿಕಾ ಸುದ್ದಿಗೋಷ್ಠಿ ನಡೆಸಿ ಮೃತ ವಿವೇಕ್ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರವನ್ನು ಘೋಷಿಸಿರುವುದಾಗಿ ಹೇಳಿದ್ದಾರೆ.

ರಚಿತಾ ರಾಮ್ ವಿರುದ್ಧ ಆಕ್ರೋಶ
ಘಟನೆ ಬಗ್ಗೆ ತುಸು ತಡವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದ ನಟಿ ರಚಿತಾ ರಾಮ್, ''ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ ಫೈಟರ್ ವಿವೇಕ್ ಅವರ ಆತ್ಮಕ್ಕೆ ಸಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ" ಎಂದಿದ್ದರು. ನಟಿ ರಚಿತಾ ರಾಮ್ ವಿರುದ್ಧ ಕೆಲ ನೆಟ್ಟಿಗರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಕೇವಲ ಸೋಷಿಯಲ್ ಮೀಡಿಯಾ ಪೋಸ್ಟ್ ಅಷ್ಟೇನಾ ಅಥವಾ ಮೃತನ ಕುಟುಂಬಕ್ಕೆ ಏನಾದರೂ ಸಹಾಯ ಮಾಡುತ್ತೀರಾ? ಎಂದು ಕೇಳಿದ್ದರು.

ಬಹಿರಂಗ ಪತ್ರ ಬರೆದ ರಚಿತಾ ರಾಮ್
ರಚಿತಾ ರಾಮ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೆಚ್ಚಾದ ಬೆನ್ನಲ್ಲೆ ಬಹಿರಂಗ ಪತ್ರ ಬರೆದ ರಚಿತಾ ರಾಮ್, ''ಲವ್ ಯು ರಚ್ಚು ಸೆಟ್ನಲ್ಲಿ ಒಂದು ನಡೀಬಾರದ ಘಟನೆ ನಡೆದಾಗಿಂದ, ಆ ಆಘಾತ ನನ್ನನ್ನು ಸೈಲೆಂಟ್ ಆಗಿರುವ ಹಾಗೆ ಮಾಡಿತ್ತು. ನನ್ನ ಮೌನ ಕೆಲವರಿಗೆ ತಪ್ಪಾಗಿ ಅರ್ಥವಾಗಿದೆ. ತಪ್ಪಾಗಿ ಬಳಕೆ ಆಗ್ತಾ ಇದೆ. ಇದು ನನಗೆ ನಿಜಕ್ಕೂ ನೋವು ಕೊಟ್ಟಿದೆ" ಬೇಸರ ವ್ಯಕ್ತಪಡಿಸಿದ್ದಾರೆ. "ಆ ದುರ್ಘಟನೆ ನಡೆದಾಗ ನಾನು ಆ ಸೆಟ್ನಲ್ಲಿ ಇರ್ಲಿಲ್ಲ ಅದಂತೂ ಸತ್ಯ. ಆಗಸ್ಟ್ 2ನೇ ತಾರಿಖಿನಿಂದ ನಾನು ಶಬರಿ ಸಿನಿಮಾ ಶೂಟಿಂಗ್ ಗೋಸ್ಕರ್ ಮೈಸೂರಿನಲ್ಲಿದ್ದೆ. ಆ ಘಟನೆ ನಡೆದಾಗ ನಾನು ಆ ಜಾಗದಲ್ಲಿ ಇರ್ಲಿಲ್ಲ. ಸತ್ಯವನ್ನು ಒಂದೇ ಒಂದು ಸಲ, ಒಂದೇ ಒಂದು ಸಲ ಪುನರ್ ಪರಿಶೀಲಿಸಿದ್ರೆ ನನ್ ಬಗ್ಗೆ ಕೆಟ್ಟ ಕಾಮೆಂಟ್ ನನ್ನ ಬಗ್ಗೆ ಕೆಟ್ಟ ಕಮೆಂಟ್ಗಳನ್ನು ಬರೆಯುವ, ನನ್ನ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವ ಪ್ರಮೇಯ ಒದಗಿಬರುತ್ತಿರಲಿಲ್ಲ ಅನ್ಸುತ್ತೆ. ಆ ಜಾಗದಲ್ಲಿ ನಾನು ಇರಲಿ, ಇಲ್ಲದಿರಲಿ. ನಮ್ಮ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಯೊಬ್ಬರು ದುರ್ಘಟನೆಗೆ ಬಲಿಯಾಗಿದ್ದಾರೆ ಎನ್ನುವ ನೋವು ನನ್ನನ್ನು ಕಾಡ್ತಿದೆ. ಆ ಕುಟುಂಬಕ್ಕೆ ಆಗಿರುವ ನಷ್ಟಕ್ಕೆ ನನ್ನ ವಿಷಾದವಿದೆ. ಈ ದುಃಖವನ್ನು ಭರಿಸುವ ಶಕ್ತಿ ಆ ಕುಟುಂಬಕ್ಕೆ ಭಗವಂತ ನೀಡಲಿ ಅಂತ ನಾನು ಬೇಡಿಕೊಳ್ತೀನಿ. ನನ್ನ ಬೆಳೆಸಿರುವ ಜನ ನನ್ನ ಬಗ್ಗೆ, ನನ್ನ ಮಾತುಗಳ ಬಗ್ಗೆ ನಂಬುತ್ತಾರೆ ಅಂತ ನಂಬಿದ್ದೀನೆ. ಆರೋಪಗಳು ಏನೇ ಇದ್ರೂ, ಸರಿ-ತಪ್ಪುಗಳ ಲೆಕ್ಕ ಆ ಭಗವಂತನ ಬಳಿ ಇರುತ್ತೆ ಅಂತಾನೂ ನಂಬಿದ್ದೀನೆ'' ಎಂದಿದ್ದರು.


Click it and Unblock the Notifications











