"ವಿಜಯಲಕ್ಷ್ಮಿ ನನಗೆ ಒಳ್ಳೆಯ ಸ್ನೇಹಿತೆ..ನನಗೆ ಸತ್ಯವೇ ಮುಖ್ಯ.. ತಪ್ಪು ತಪ್ಪು ಅಷ್ಟೇ": ನಟಿ ರಮ್ಯಾ
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ದರ್ಶನ್ ಮತ್ತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ. ಅದಕ್ಕೆ ಕಾರಣ ಸುಪ್ರೀಂ ಕೋರ್ಟ್ನಲ್ಲಿ ನಡೆಯುತ್ತಿರುವ ಈ ಕೇಸ್ನ ವಿಚಾರಣೆ. ಹೈಕೋರ್ಟ್ ನೀಡಿದ್ದ ಜಾಮೀನಿನ ಬಗ್ಗೆ ಸುಪ್ರೀಂ ಕೋರ್ಟ್ ಅಸಮಧಾನವನ್ನು ಹೊರ ಹಾಕಿತ್ತು. ಈ ಬೆನ್ನಲ್ಲೇ ರಮ್ಯಾ ಅದನ್ನು ಬೆಂಬಲಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಅಲ್ಲಿಂದ ದರ್ಶನ್ ಫ್ಯಾನ್ಸ್ ರಮ್ಯಾರನ್ನು ಅಶ್ಲೀಲ ಪದಗಳಿಂದ ಟೀಕಿಸುತ್ತಿದ್ದಾರೆ.
ದರ್ಶನ್ ಅಭಿಮಾನಿಗಳು ಅಶ್ಲೀಲ ಪದಗಳಿಂದ ಅವರನ್ನು ನಿಂದಿಸುತ್ತಿರುವುದರಿಂದ ರಮ್ಯಾ ರೊಚ್ಚಿಗೆದ್ದಿದ್ದಾರೆ. ಅಂತಹವರ ವಿರುದ್ಧ ಸಮರ ಸಾರುವುದಕ್ಕೆ ಮುಂದಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡುತ್ತಿರುವ ದರ್ಶನ್ ಅಭಿಮಾನಿಗಳ ವಿರುದ್ಧ ದೂರು ನೀಡುವುದಕ್ಕೆ ಮೋಹಕ ತಾರೆ ರಮ್ಯಾ ನಿರ್ಧರಿಸಿದ್ದಾರೆ. ಇಂತಹವರಿಗೆ ಪಾಠ ಕಲಿಸಲೇಬೇಕು ಎಂದು ನಿರ್ಧರಿಸಿದ್ದಾರೆ.

ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಅಭಿಪ್ರಾಯವನ್ನು ಆಧರಿಸಿ ರಮ್ಯಾ ಪೋಸ್ಟ್ ಮಾಡಿದ್ದರು. ಅದರಲ್ಲಿ ಸುಪ್ರೀಂ ಕೋರ್ಟ್ ಜನ ಸಾಮಾನ್ಯರ ನಂಬಿಕೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ಭರವಸೆ ಎದ್ದು ಕಾಣುತ್ತಿದೆ ಎಂದು ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ನೋಡಿ ರೊಚ್ಚಿಗೆದ್ದಿರುವ ದರ್ಶನ್ ಅಭಿಮಾನಿಗಳು ರಮ್ಯಾಗೆ ಅಶ್ಲೀಲ ಕಮೆಂಟ್ಗಳನ್ನು ಮಾಡುವುದಕ್ಕೆ ಶುರು ಮಾಡಿದ್ದರು. ಈ ಕಾರಣಕ್ಕೆ ರಮ್ಯಾ ರೊಚ್ಚಿಗೆದ್ದಿದ್ದಾರೆ.
ರಮ್ಯಾ ಈ ವಿಷಯಕ್ಕೆ ಸಂಬಂಧಿಸಿದಂತೆ ಟಿವಿ9ಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆತ್ಮೀಯ ಸ್ನೇಹಿತೆ. ಆದರೆ, ನನಗೆ ಸತ್ಯ ಮುಖ್ಯ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ಇಂತಹ ಅಶ್ಲೀಲ ಕಮೆಂಟ್ಗಳನ್ನು ಮಾಡುವವರ ವಿರುದ್ಧ ಮಹಿಳೆಯರು ಮುಂದೆ ಬರಬೇಕು ಎಂದು ಆಕ್ರೋಶ ಹೊರ ಹಾಕಿದ್ದಾರೆ. ದರ್ಶನ್ ವಿರುದ್ಧ ನಿಂತಿದ್ದನ್ನು ರಮ್ಯಾ ಇಲ್ಲೂ ಸಮರ್ಥಿಸಿಕೊಂಡಿದ್ದಾರೆ.
"ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಗಮನಿಸಿ ಸಾಮಾನ್ಯ ಜನರಿಗೆ ನ್ಯಾಯ ಸಿಗುವ ಭರವಸೆಯಿದೆ ಎಂದು ಹೇಳಿದ್ದು, ಇದಕ್ಕೆ ಅಶ್ಲೀಲ ಪದಗಳನ್ನು ಬಳಸಿ ಕಮೆಂಟ್ ಮಾಡಿತ್ತಿದ್ದಾರೆ. ಇದು ಅವರಿಗೆ ಕಾಮನ್ ಆಗಿದೆ. ಸುದೀಪ್, ತಶ್ ಅವರಿಗೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಯಶ್ ಪತ್ನಿ, ಮಕ್ಕಳ ಬಗ್ಗೆನೂ ಕೆಟ್ಟ ಪದಗಳಲ್ಲಿ ಕಮೆಂಟ್ ಮಾಡಿದ್ದಾರೆ. ಇಂತಹ ಪ್ರವೃತ್ತಿಗೆ ಅಂತ್ಯ ಹಾಡಲೇಬೇಕಿದೆ ಎಂದು ರಮ್ಯಾ ಗರಂ ಆಗಿದ್ದಾರೆ.

ಹಾಗೇ "ನನಗೆ ಬಕೆಟ್ ಹಿಡಿಯೋದಕ್ಕೆ ಬರೋದಿಲ್ಲ" ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ರಾಜಕಾರಣಿಗಳೇ ತಪ್ಪು ಮಾಡಲಿ, ನಟರೇ ತಪ್ಪು ಮಾಡಲಿ ತಪ್ಪು ಅಂದ್ಮೇಲೆ ತಪ್ಪೇ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು. ಇದೊಂದು ವಿಷಯ ಅಲ್ಲ, ಅನ್ಯಾಯ ಆದಾಗಲೂ ಬೇರೆ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿರುವುದಾಗಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಇಂತಹ ದುಷ್ಟರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದು ಹೇಳಿದ್ದಾರೆ.
ಹಾಗೇ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಜೊತೆಗಿನ ಸ್ನೇಹದ ಬಗ್ಗೆನೂ ಮಾತಾಡಿದ್ದಾರೆ. ದರ್ಶನ್ ಜೊತೆ ನಟಿಸಿದ 'ದತ್ತ' ಸಿನಿಮಾದಿಂದಲೂ ಪರಿಚಯವಿದೆ. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದು, ಅವರ ಜೀವನದಲ್ಲಿ ಹೀಗೆಲ್ಲ ಆಗಬಾರದಿತ್ತು ಎಂದಿದ್ದಾರೆ. ಅಲ್ಲದೇ, " ವಿಜಯಲಕ್ಷ್ಮಿ ಅಂದರೆ, ನನಗೆ ಬಲು ಇಷ್ಟ. ಆದರೆ, ನನಗೆ ಸತ್ಯವೇ ಮುಖ್ಯ. ನಾನು ನ್ಯಾಯದ ಪರವಾಗಿಯೇ ನಿಲ್ಲುವವಳು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರಮ್ಯಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದು, ಮತ್ತೆ ದರ್ಶನ್ ಹಾಗೂ ಅವರ ಅಭಿಮಾನಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎಂದು ಮೋಹಕತಾರೆ ರಮ್ಯಾ ರೊಚ್ಚಿಗೆದ್ದಿದ್ದಾರೆ. ಅಲ್ಲದೆ ಅಶ್ಲೀಲ ಕಮೆಂಟ್ ಮಾಡಿದವರ ವಿರುದ್ಧ ಸೈಬರ್ ಕ್ಲೈಂಗೆ ದೂರು ನೀಡುವುದಕ್ಕೂ ರಮ್ಯಾ ನಿರ್ಧರಿಸಿದ್ದಾರೆ.


Click it and Unblock the Notifications











