ಬೆಂಗಳೂರಿನ ಮಳೆ ಅವಾಂತರಕ್ಕೆ ಸಿಡಿದೆದ್ದ ರಮ್ಯಾ: ಅಕ್ರಮ ಕಟ್ಟಡ ತೆರವುಗೊಳಿಸೋರಿಗೆ ವೋಟ್ ಫಿಕ್ಸ್!
ಮಳೆ ಬಂತು ಅಂದರೆ ಬೆಂಗಳೂರು ನದಿಯಂತಾಗುತ್ತೆ. ಮನೆ ಮನೆಗಳಿಗೂ ನೀರು ಮುಲಾಜಿಲ್ಲದೆ ನುಗ್ಗುತ್ತೆ. ಜನ ಜೀವನ ಬೀದಿಗೆ ಬರುತ್ತೆ. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೆಂಗಳೂರಿನ ಹಲವೆಡೆ ಜನ ಜೀವನ ಅಯೋಮಯವಾಗಿದೆ. ಜನರು ಹಿಡಿ ಶಾಪ ಹಾಕುತ್ತಲೇ ಜೀವನ ಸರಿ ಪಡಿಸಿಕೊಳ್ಳುವುದಕ್ಕೆ ಹೆಣಗಾಡುತ್ತಿದ್ದಾರೆ.
ಬೆಂಗಳೂರಿನ ಬೆಳ್ಳಂದೂರು, ನಾಗಾವಾರ, ಬೊಮ್ಮಸಂದ್ರ ಸೇರಿದಂತೆ ಹಲವೆಡೆ ಜನ ಜೀವನ ಅಸ್ಥವ್ಯಸ್ಥವಾಗಿದೆ. ಅಕ್ರಮವಾಗಿ ಎದ್ದು ನಿಂತಿರುವ ಕಟ್ಟಡದಿಂದಲೇ ಇಂತಹ ಅವಾಂತರ ಎದುರಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಸ್ಮಾರ್ಟ್ ಸಿಟಿ ಬೆಂಗಳೂರಿನ ಚಿತ್ರಣ ಮಳೆಯಿಂದ ಬದಲಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ. ಮೂಲಗಳ ಪ್ರಕಾರ, ಸಿಲಿಕಾನ್ ಸಿಟಿಯಲ್ಲಿ 51 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಾಖಲೆ 709 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇತ್ತ ಮೋಹಕ ತಾರೆ ರಮ್ಯಾ ಪೋಟೊ ಶೇರ್ ಮಾಡಿ ಕಿಡಿ ಕಾರಿದ್ದಾರೆ.
ಕಿಡಿಕಾರಿದ ಮೋಹಕತಾರೆ
ಮೋಹಕತಾರೆ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ನಡೆಯೋ ಅವಾಂತರಗಳ ಬಗ್ಗೆ ಕಿಡಿಕಾರುತ್ತಲೇ ಇರುತ್ತಾರೆ. ಸಮಸ್ಯೆಗಳ ವಿರುದ್ದ ಸಿಡಿದೇಳುತ್ತಿರುತ್ತಾರೆ. ಈಗ ಮಳೆಯಿಂದಾದ ಅವಾಂತರದ ವಿರುದ್ಧವೂ ರಮ್ಯಾ ಸಿಟ್ಟಿಗೆದ್ದಿದ್ದು, ರಾಜ್ಯ ಸರ್ಕಾರ ವಿರುದ್ಧ ಟ್ವೀಟ್ ಮಾಡಿದ್ದಾರೆ. ಜೊತೆಗೆ ಒಂದು ಫೋಟೊವನ್ನು ಶೇರ್ ಮಾಡಿದ್ದಾರೆ.

ಬೆಂಗಳೂರಿನ ಮಳೆಯಿಂದಾದ ಅವಾಂತರದಿಂದ ರಸ್ತೆ ತುಂಬು ನೀರು ನಿಂತಿದೆ. ಈ ವೇಳೆ ನೀರು ನಿಂತ ರಸ್ತೆಯಲ್ಲಿ ವಾಹನಗಳು ಸಂಚಾರ ಮಾಡಲು ಪರದಾಡುತ್ತಿದ್ದ ಫೋಟೊವನ್ನು ಶೇರ್ ಮಾಡಿ ಮೋಹಕತಾರೆ ರಮ್ಯಾ ಆಕ್ರೋಶ ಹೊರಹಾಕಿದ್ದಾರೆ. ಸ್ಮಾರ್ಟ್ ಸಿಟಿ ಬೆಂಗಳೂರು ಅಂತ ಹಾಸ್ಯ ಮಾಡಿದ್ದಾರೆ.
ಅಕ್ರಮ ತೆರವುಗೊಳಿಸೋರಿಗೆ ಮತ
ರಮ್ಯಾ ಟ್ವೀಟ್ನಲ್ಲಿ ಕೇವಲ ಫೋಟೊವನ್ನಷ್ಟೇ ಶೇರ್ ಮಾಡಿಲ್ಲ. ಬದಲಾಗಿ ಯಾರಿಗೆ ಮತ ಹಾಕುತ್ತೇನೆ ಅನ್ನೋದನ್ನು ಬಹಿರಂಗವಾಗಿಯೇ ಹೇಳಿದ್ದಾರೆ. ಬೆಂಗಳೂರಿನಲ್ಲಿ ಎದ್ದು ನಿಂತಿರೋ ಅಕ್ರಮ ಕಟ್ಟಡವನ್ನು ತೆರವುಗೊಳಿಸುವವರಿಗೆ ನನ್ನ ಮತ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಳೆ ನೀರು ಹೊರ ಹೋಗುವುದಕ್ಕೆ ಜಾಗವಿಲ್ಲ. ಇದಕ್ಕೆ ಕಾರಣ ಅಕ್ರಮವಾಗಿ ಎದ್ದು ನಿಂತಿರುವ ಅಕ್ರಮ ಕಟ್ಟಡಗಳು ಎಂದು ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ರಾಜಕಾಲುವೆ ಮೇಲೂ ಅಪಾರ್ಟ್ಮೆಂಟ್ ಹಾಗೂ ಬೃಹತ್ ಕಟ್ಟಡಗಳು ಎದ್ದು ನಿಂತಿದ್ಧೇ ಕಾರಣ ಅಂತ ಹೇಳಲಾಗುತ್ತಿದ್ದರೂ, ಕ್ರಮ ಕೈಗೊಳ್ಳುವ ಕೆಲಸ ಮಾತ್ರ ಯಾವ ಸರ್ಕಾರವೂ ಮಾಡಿಲ್ಲ.
ಐಟಿ ಕಂಪನಿಗಳಿಗೆ ಭಾರಿ ನಷ್ಟ
ಬೆಂಗಳೂರಿನ ಬೆಳ್ಳಂದೂರು ಸುತ್ತಮುತ್ತ ಮಳೆ ನಿಂತಿದ್ದರಿಂದ ಎರಡು ಮೂರು ದಿನಗಳಿಂದ ಐಟಿ ಕಂಪನಿ ಸಿಬ್ಬಂದಿಗಳು ಕಚೇರಿಗೆ ತೆರಳಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಸುಮಾರು 225 ಕೋಟಿ ರೂ.ಯಷ್ಟು ಹಣ ನಷ್ಟ ಆಗಿದೆ ಎನ್ನಲಾಗಿದೆ. ಈ ಬಗ್ಗೆ ಐಟಿ ಕಂಪನಿಗಳ ಒಕ್ಕೂಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿವೆ ಎನ್ನಲಾಗಿದೆ.

ಮಳೆ ಅವಾಂತರದ ಬಗ್ಗೆ ಜನರು ಕಿಡಿಕಾರುತ್ತಿದ್ದರೆ, ಇತ್ತ ರಮ್ಯಾ ಕೂಡ ಅಖಾಡಕ್ಕೆ ಇಳಿದಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಎದುರಾಗುತ್ತಿದ್ದು, ರಾಜ್ಯ ಸರ್ಕಾರ ಅಕ್ರಮ ಕಟ್ಟಡ ತೆರವುಗೊಳಿಸಲು ಮುಂದಾಗುತ್ತಾ? ಎಂಬ ಪ್ರಶ್ನೆ ಎದುರಾಗಿದೆ.


Click it and Unblock the Notifications











