'ಸ್ವಾತಿ ಮುತ್ತಿನ ಮಳೆ ಹನಿಯೇ' ನಿಮಗೆ ಒಲವಾಗುವಂತೆ ಮಾಡುತ್ತೆ: ರಮ್ಯಾ
ಸ್ಯಾಂಡಲ್ವುಡ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳಲ್ಲಿ ರಾಜ್ ಬಿ ಶೆಟ್ಟಿ ನಿರ್ದೇಶನದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಕೂಡ ಒಂದು. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಜೊತೆ ಮೋಹಕತಾರೆ ರಮ್ಯಾ ನಟಿಸಬೇಕಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಈ ಸಿನಿಮಾದಿಂದ ದೂರ ಉಳಿದಿದ್ದರು.
ಅಂದ್ಹಾಗೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ತಮ್ಮ ನಿರ್ಮಾಣ ಸಂಸ್ಥೆ 'ಆಪಲ್ ಬಾಕ್ಸ್ ಸ್ಟುಡಿಯೋಸ್' ಮೂಲಕ ನಿರ್ಮಿಸಿದ ಮೊದಲ ಸಿನಿಮಾವಿದು. ನಿರ್ಮಾಪಕಿಯಾಗಿ ಸ್ಯಾಂಡಲ್ವುಡ್ಗೆ ಕಮ್ ಬ್ಯಾಕ್ ಮಾಡಿದ್ದರು. 'ಲೈಟರ್ ಬುದ್ಧ ಫಿಲಂಸ್' ನಿರ್ಮಾಣ ಸಂಸ್ಥೆ ಜೊತೆನೂ ಕೈ ಜೋಡಿಸಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾವನ್ನು ರಾಜ್ ಬಿ ಶೆಟ್ಟಿ ನಿರ್ದೇಶಿಸುವುದರೊಂದಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ನಾಯಕಿಯಾಗಿ ಸಿರಿ ರವಿಕುಮಾರ್ ಕೂಡ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ನಿರ್ಮಾಣ ಮಾಡಿರುವ ರಮ್ಯಾ ಈ ಸಿನಿಮಾ ಬಗ್ಗೆ ಅತೀವ ಭರವಸೆಯನ್ನು ಹೊಂದಿದ್ದಾರೆ.
"ಮೊದಲ ಬಾರಿ ನಾನು ನಿರ್ಮಾಪಕಿಯ ಜವಾಬ್ದಾರಿ ನಿರ್ವಹಿಸುತ್ತಾ ಬಹಳಷ್ಟು ವಿಷಯಗಳನ್ನು ಕಲಿತಿದ್ದೀನಿ. ನನಗಿದೊಂದು ಅದ್ಭುತವಾದ ಅನುಭವ ಆಗಿದೆ. ಈ ಸಿನಿಮಾವು ಪ್ರೀತಿ ಹಾಗೂ ಆತ್ಮಶೋಧನೆಯ ಕುರಿತು ಒಂದು ಸುಂದರ, ಕಾವ್ಯಾತ್ಮಕವಾದ ಅನುಭವ ನೀಡಲಿದೆ" ಎಂದಿದ್ದಾರೆ.
2022ರ ವಿಜಯದಶಮಿ ಹಬ್ಬಕ್ಕೆ ಈ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಅಂದಿನಿಂದ ಸುಂದರತಾಣಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿದೆ. ಈಗಾಗಲೇ ಪೋಸ್ಟರ್ಗಳ ಮೂಲಕ ಸಿನಿಮಾ ಕುತೂಹಲವನ್ನು ಕೆರಳಿಸಿದೆ. 'ಪ್ರೇರಣಾ' ಮತ್ತು 'ಅನಿಕೇತ್' ಎಂಬ ಮುಖ್ಯ ಪಾತ್ರಗಳಲ್ಲಿ ಸಿರಿ ರವಿಕುಮಾರ್ ಹಾಗು ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ.

'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದಲ್ಲಿ ಕನ್ನಡ ಪ್ರತಿಭಾವಂತ ನಟರೇ ನಟಿಸಿದ್ದಾರೆ. ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹ ಶರ್ಮ, ಜೆಪಿ ತುಮ್ಮಿನಾಡ್, ಗೋಪಾಲಕೃಷ್ಣ ದೇಶಪಾಂಡೆ ಹಾಗೂ ಇನ್ನಿತರು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗೆ ಮಿಧುನ್ ಮುಕುಂದನ್ ಸಂಗೀತ ನೀಡಿದ್ದು, ಪ್ರವೀಣ್ ಶ್ರೀಯಾನ್ ಕ್ಯಾಮರಾ ಹಾಗೂ ಎಡಿಟಿಂಗ್ ಎರಡೂ ಮಾಡಿದ್ದಾರೆ.


Click it and Unblock the Notifications











