ಚೇತನ್ ಪರ ನಟಿ ರಮ್ಯಾ ಬ್ಯಾಟಿಂಗ್: ಟ್ವೀಟ್ನಲ್ಲಿರುವ ದೋಷವೇನೆಂದ ನಟಿ!
ನ್ಯಾಯಾಧೀಶರನ್ನು ನಿಂದಿಸಿ ಟ್ವೀಟ್ ಮಾಡಿದ್ದ ಆರೋಪದ ಅಡಿ ನಟ ಚೇತನ್ ಅವರನ್ನು ಶೇಷಾದ್ರಿಪುರಂ ಪೊಲೀಸರು ನಿನ್ನೆ(ಫೆ.22) ಮಧ್ಯಾಹ್ನ ವಶಕ್ಕೆ ಪಡೆದಿದ್ದರು. ಇದೀಗ ನಟ ಚೇತನ್ಗೆ 8ನೇ ಎಸಿಎಂಎಂ ನ್ಯಾಯಲಯ 14 ದಿನ ನ್ಯಾಯಾಂಗ ಬಂಧನ ನೀಡಿ ಆದೇಶ ಹೊರಡಿಸಿದೆ. ಹಾಗಾಗಿ ಚೇತನ್ ಸದ್ಯ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
ಚೇತನ್ ಅವರನ್ನು ವಶಕ್ಕೆ ಪಡೆದ ಬಳಿಕ ಅವರ ಪತ್ನಿ ಮೇಘಾ ಫೇಸ್ ಬುಕ್ ಲೈವ್ ಬಂದಿದ್ದರು. ನಟನ ಪತ್ನಿ ಮೇಘಾ, ಪೊಲೀಸರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಯಾವುದೇ ಮಾಹಿತಿ ಇಲ್ಲದೇ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೈವ್ನಲ್ಲಿ ಹೇಳಿಕೊಂಡಿದ್ದರು. ಫೆಬ್ರವರಿ 16ರಂದು ನಟ ಚೇತನ್ ನ್ಯಾಯಾಧೀಶರ ಕುರಿತು ಟ್ವೀಟ್ ಮಾಡಿದ್ದರು.
ನ್ಯಾಯಾಧೀಶರ ನಿಂದನೆ ಆರೋಪ ಹಿನ್ನೆಲೆ ನಟ ಚೇತನ್ರನ್ನು ವಶಕ್ಕೆ ಪಡೆದ ಪೊಲೀಸ್: ಪತ್ನಿಯಿಂದ ಕಿಡ್ನಾಪ್ ಆರೋಪ
ಈ ವಿಚಾರದ ಕುರಿತಾಗಿ ಸಿನಿಮಾರಂಗದ ಯಾರೂ ಪ್ರತಿಕ್ರಿಯೆ ನೀಡಿಲ್ಲ. ಯಾರು ಮಾತನಾಡುವ ಗೋಜಿಗೆ ಹೋಗಿಲ್ಲ. ಆದರೆ ನಟಿ ರಮ್ಯಾ ಈ ವಿಚಾರವಾಗಿ ದನಿ ಎತ್ತಿದ್ದಾರೆ. ನಟ ಚೇತನ್ ಮಾಡಿರುವ ಅಪರಾಧವಾದರೂ ಏನು?. ಅವರು ಮಾಡಿರುವ ಟ್ವೀಟ್ನಲ್ಲಿ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಚೇತನ್ರನ್ನು ಬಂಧಿಸುವಂತಹ ತಪ್ಪು ಟ್ವೀಟ್ನಲ್ಲಿ ಏನಿದೆ: ನಟಿ ರಮ್ಯಾ?
ನಟ ಚೇತನ್ರನ್ನು ನ್ಯಾಯಾಂಗ ಬಂಧದಲ್ಲಿ ಇಟ್ಟಿರುವ ಬಗ್ಗೆ ನಟಿ ರಮ್ಯಾ ಪ್ರಶ್ನೆ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಮ್ಯಾ, ಚೇತನ್ ಬಂಧನಕ್ಕೆ ಕಾರಣ ಆಗಿರುವ ಟ್ವೀಟ್ಗಳನ್ನು ಪೋಸ್ಟ್ ಮಾಡಿ, "ಪೊಲೀಸರು ಚೇತನ್ ಅವರನ್ನು ಬಂಧಿಸುವಂತಹ ದೋಷ ಈ ಟ್ವೀಟ್ನಲ್ಲಿ ಏನಿದೆ?." ಎಂದು ರಮ್ಯಾ ಟ್ವೀಟ್ ಮಾಡುವ ಮೂಲಕ ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಅವರು ಚೇತನ್ ಅವರ ಟ್ವೀಟ್ನಲ್ಲಿ ತಪ್ಪಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಚೇತನ್ ಹೋರಾಟದ ಬಗ್ಗೆ ಪತ್ನಿ ಮಾತು!
ಚೇತನ್ ಪತ್ನಿ ಮೇಘಾ ವಿಚಾರ ತಿಳಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಚೇತನ್ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನಿಸುವ ಅವಕಾಶ ಎಲ್ಲರಿಗೂ ಇದೆ. ಪೊಲೀಸ್, ಜಡ್ಜ್, ಮೋದಿ ಯಾರೇ ಆಗಿರಲಿ ಪ್ರಶ್ನಿಸುವ ಅಧಿಕಾರವಿದೆ. ಯಾವುದೇ ಆಕ್ಷೇಪಾರ್ಹ ಪದಗಳನ್ನು ಬಳಸಿ ಚೇತನ್ ಮಾತನಾಡಿಲ್ಲ. ಚೇತನ್ ಜೊತೆ ಮಾತನಾಡಿದ್ದೇನೆ, ಆತ್ಮವಿಶ್ವಾಸದಿಂದಿದ್ದಾರೆ. ಬಂಧನದ ವಿರುದ್ಧವಾಗಿ ನಾವು ಕಾನೂನು ಹೋರಾಟ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.
ಫೇಸ್ಬುಕ್ ಲೈವ್ನಲ್ಲಿ ವಿಚಾರ ತಿಳಿಸಿದ್ದ ಚೇತನ್ ಪತ್ನಿ!
ಚೇತನ್ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ ಎಂದು ಚೇತನ್ ಪತ್ನಿ ಫೇಸ್ಬುಕ್ ಲೈನ್ ಬಂದಿದ್ದರು. "ನಾನು ಚೇತನ್ ಫೇಸ್ಬುಕ್ ಪೇಜ್ನಿಂದ ಲೈವ್ ಬರುತ್ತಿದ್ದೇನೆ. ನಾನು ಮನೆಯಲ್ಲಿ ಇದ್ದೆ, ನನಗೆ ಗೊತ್ತಿರಲಿಲ್ಲ. ನಾನು ಚೇತನ್ ಎಲ್ಲಿದ್ದಾರೆ ಎಂದು ಹುಡುಕಿದೆ. ಅವರು ಮನೆಯಲ್ಲಿ ಇರಲಿಲ್ಲ. ಮನೆಯಲ್ಲಿ ಕೆಲಸ ಮಾಡುವವರು ಚೇತನ್ರನ್ನು ಪೊಲೀಸ್ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದರು. ಯಾರಿಗೂ ಈ ವಿಚಾರ ಹೇಳಿಲ್ಲ. ಅವರ ಪೋನ್ ಸ್ವಿಚ್ ಆಫ್ ಆಗಿದೆ. ಅವರ ಗನ್ ಮ್ಯಾನ್ ಫೋನ್ ಕೂಡ ಆಫ್ ಆಗಿದೆ. ನನಗೆ ಅವರು ಎಲ್ಲಿದ್ದಾರೆ ಅನ್ನುವುದು ಏನೂ ಗೊತ್ತಿಲ್ಲ. ಅದಕ್ಕೆ ನಾನು ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್ಗೆ ಬಂದಿದ್ದೇನೆ." ಎಂದು ಲೈವ್ನಲ್ಲಿ ಚೇತನ್ ಪತ್ನಿ ಮೇಘಾ ಹೇಳಿದ್ದರು.

ಜಾಮೀನು ಅರ್ಜಿ ಸಲ್ಲಿಸಲು ಅವಕಾಶ!
ಅಕ್ಷೇಪಾರ್ಹ ಟ್ವೀಟ್ ಮಾಡಿರುವ ಆರೋಪದ ಮೇರೆಗೆ ಬೆಂಗಳೂರು ಪೊಲೀಸರು ನಟ ಚೇತನ್ ಅವರನ್ನು ಫೆಬ್ರವರಿ 22ರಂದು ವಶಕ್ಕೆ ಪಡೆದರು. 8ನೇ ಎಸಿಎಂಎಂ ಕೋರ್ಟ್ ಅವರಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದೆ. ಜಾಮೀನಿಗಾಗಿ ಚೇತನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಇಂದು (ಫೆಬ್ರವರಿ 23ರಂದು) ಆಕ್ಷೇಪಣೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.


Click it and Unblock the Notifications











