"ನನ್ನ ಜೀವನದ ಕೆಲವು ರಹಸ್ಯಗಳು ಬ್ಯಾಂಕ್ ಜನಾರ್ಧನ್ ಅವರಿಗೆ ಮಾತ್ರ ಗೊತ್ತಿತ್ತು"; ನಟಿ ರೇಖಾ ದಾಸ್ ಕಣ್ಣೀರು
ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಕೆಲವು ದಿನಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸುಮಾರು ಮೂರುವರೆ ನಾಲ್ಕು ದಶಕಗಳ ಕಾಲ ನಟಿಸಿ, ಪ್ರೇಕ್ಷಕರನ್ನು ರಂಜಿಸಿದ ಹೆಗ್ಗಳಿಕೆ ಇವರದ್ದು, ಪೋಷಕ ಕಲಾವಿದನಾಗಿ, ಹಾಸ್ಯ ನಟನಾಗಿ, ಖಳನಟನಾಗಿ ಬ್ಯಾಂಕ್ ಜನಾರ್ಧನ್ ಅವರಿಗೆ ಮಿಂಚಿದ್ದರು. ಇವುಗಳಲ್ಲಿ ಹಾಸ್ಯ ಪಾತ್ರ ಸಿನಿಪ್ರಿಯರಿಗೆ ಹೆಚ್ಚು ಇಷ್ಟವಾಗಿದ್ದವು.
ಬ್ಯಾಂಕ್ ಜನಾರ್ಧನ್ ಹಾಸ್ಯ ಪಾತ್ರ ಅಂದಕೂಡಲೇ ಮೊದಲು ನೆನಪಾಗೋದು ಹಿರಿಯ ನಟಿ ರೇಖಾ ದಾಸ್. ಇವರಿಬ್ಬರ ಕಾಂಬಿನೇಷನ್ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಕ್ಲಿಕ್ ಆಗಿತ್ತು. ಅಪ್ಪ ಮಗಳಾಗಿ, ಗಂಡ ಹೆಂಡ್ತಿಯಾಗಿ, ಬ್ಯಾಂಕ್ ಜನಾರ್ಧನ್ ಅವರೊಂದಿಗೆ ಸುಮಾರು 100ಕ್ಕೂ ಅಧಿಕ ಸಿನಿಮಾಗಳಲ್ಲಿ ರೇಖಾ ದಾಸ್ ನಟಿಸಿದ್ದಾರೆ. ರಿಯಲ್ ಲೈಫ್ನಲ್ಲೂ ಇವರದ್ದು ತಂದೆ ಮಗಳ ಸಂಬಂಧವೇ ಇತ್ತು. ತಂದೆ ಸಮಾನರಾಗಿದ್ದ ಬ್ಯಾಂಕ್ ಜನಾರ್ಧನ್ ಅವರನ್ನು ಕಳೆದುಕೊಂಡು ರೇಖಾ ದಾಸ್ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಕಣ್ಣೀರು ಹಾಕಿದ್ದಾರೆ.

"ನನಗೆ ವಿಷಯವೇ ಗೊತ್ತಿರಲಿಲ್ಲ"
"ಅವರು ತೀರಿ ಹೋದ ವಿಷಯ ನನಗೆ ಗೊತ್ತೇ ಇರಲಿಲ್ಲ. ಹಿಂದಿನ ದಿನವೇ ಶೃಂಗೇರಿಗೆ ಹೊರಟಿದ್ದೆ ನಾನು. ಅಲ್ಲಿಗೆ ನಾನು ಐದೂವರೆಗೆ ರೀಚ್ ಆದೆ. ಅಲ್ಲಿ ನನಗೆ ಮೂರು ಗಂಟೆ ರೆಸ್ಟ್ ತಗೊಳ್ಳಿ ಆಮೇಲೆ ನಾನು ಹೇಳುತ್ತೇನೆ ಅಂದಿದ್ದರು. ನಾನು ಮಲಗಿದ್ದೆ. ಆಗ ಹಿರಿಯ ನಟಿ ಸಿತಾರಾ ಒಂದು ನ್ಯೂಸ್ ಇದೆ ಅಂತ ಎಬ್ಬಿಸಿದ್ದಳು. ಏನಾಯ್ತು ಅಂತ ಕೇಳಿದಾಗ, ನಿಮ್ಮ ಪಪ್ಪಾ ಹೊರಟು ಹೋದರಂತೆ ಅಂದಳು. ಅದನ್ನು ಹೇಳಿದಾಗ ತಲೆ ಮೇಲೆ ಬಂಡೆ ಬಿದ್ದ ಹಾಗೆ ಆಯ್ತು. ನ್ಯೂಸ್ ನೋಡುತ್ತಿದ್ದೆ. ಅದನ್ನು ಕನ್ಫರ್ಮ್ ಮಾಡಿಕೊಳ್ಳುವ ಮುನ್ನವೇ ಕರೆಗಳು ಬರುವುದಕ್ಕೆ ಶುರುವಾಗಿತ್ತು. ನನಗೆ ಏನು ಹೇಳಬೇಕು ಅಂತಾನೇ ಗೊತ್ತಾಗಲಿಲ್ಲ."
"ಏನು ಮಾತಾಡಬೇಕು ಅಂತಾನೇ ಗೊತ್ತಾಗಲಿಲ್ಲ"
"ಪೋಷಕ ಕಲಾವಿದರ ಸಂಘಕ್ಕೆ ಫೋನ್ ಮಾಡಿದಾಗ ನಿಮ್ಮ ಪೊಪ್ಪ ಹೋಗ್ಬಿಟ್ರು. ಅದಾಗ ನನಗೆ ಜೋರಾಗಿ ಅಳು ಬಂತು. ಅಲ್ಲಿ ಶೂಟಿಂಗ್ ಮಾಡುತ್ತಿದ್ದವರೆಲ್ಲ ಓಡಿ ಬಂದರು. ಸಮಾಧಾನ ಮಾಡಿಕೊಳ್ಳಿ. ಟಿವಿಯವರೊಂದಿಗೆ ಮಾತಾಡಿ ಅಂತ ಹೇಳಿದರು. ನನಗೆ ಅವರ ಬಗ್ಗೆ ಏನು ಹೇಳುವುದು? ನನಗೆ ಏನು ಮಾತಾಡಬೇಕು ಅಂತಾನೇ ಗೊತ್ತಾಗಲಿಲ್ಲ."
"ನನ್ನ ಮೊದಲ ಸಿನಿಮಾದಲ್ಲೇ ತಂದೆ ಪಾತ್ರ"
"ನಾನು ಮೊದಲನೇ ಸಿನಿಮಾ ಮಾಡುವಾಗ ಚಿಕ್ಕ ಹುಡುಗಿ. ನನಗೆ 16 ವರ್ಷ. ಪಂಜರದ ಗಿಳಿ ಅಂತ ಒಂದು ಸಿನಿಮಾ ಬಂತು. ಆ ಸಿನಿಮಾದಲ್ಲಿ ನನ್ನ ತಂದೆ ಪಾತ್ರವನ್ನು ಬ್ಯಾಂಕ್ ಜನಾರ್ಧನ್ ಅವರು ಮಾತಾಡಿದ್ದರು. ಆ ಸಿನಿಮಾ ಅಪ್ಪ ಅಂತ ಕರೆದಿದ್ದು. ಕೊನೆಯವರೆಗೂ ತಂದೆಯಂತೆಯೇ ಇದ್ದರು ಅವರು. ನಾನು ನಿನ್ನನ್ನು ದತ್ತು ತೆಗೆದುಕೊಳ್ಳುತ್ತೇನೆ ಅಂತ ಹೇಳುತ್ತಿದ್ದರು. ಆ ದಿನದಿಂದ ನಾವಿಬ್ಬರೂ ಸುಮಾರು 100 ಸಿನಿಮಾಗಳನ್ನು ಒಟ್ಟಿಗೆ ಮಾಡಿದ್ದೀವಿ."
"ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದ ಜೋಡಿ"
"ಅಪ್ಪ ಮಗಳಾಗಿ ಮಾಡಿದ್ದೀವಿ. ಗಂಡ ಹೆಂಡತಿಯಾಗಿ ಮಾಡಿದ್ದೀವಿ. ಎಲ್ಲ ತರಹದ ಪಾತ್ರವನ್ನು ಮಾಡಿಬಿಟ್ವಿ. ಎಷ್ಟೋ ಬಾರಿ ಅವರು ಆಸ್ಪತ್ರೆಗೆ ದಾಖಲಾದಾಗ ನಾನು ಓಡಿ ಹೋಗುತ್ತಿದ್ದೆ. ಅಯ್ಯೋ ನಿನಗೆ ಯಾರೇ ಹೇಳಿದರು? ನೀನು ಬರಬಾರದಾಗಿತ್ತು. ನೀನು ನೋಡಬಾರದು ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ ಎಂದಿದ್ದರು. ಎಷ್ಟೋ ಸಲ ಅವರ ಮಗನಿಗೆ ಹೇಳುತ್ತಿದ್ದರು. ಯಾರಿಗೂ ಹೇಳುವುದಕ್ಕೆ ಹೋಗಬೇಡ ಅಡ್ಮಿಟ್ ಆಗಿದ್ದೀನಿ ಅಂತ ಹೇಳೋರು."
ನನ್ನ ಜೀವನದ ರಹಸ್ಯಗಳು ಅವರಿಗೆ ಗೊತ್ತಿತ್ತು
"ನನ್ನ ಜೀವನದ ಕೆಲವು ರಹಸ್ಯಗಳು, ವೈಯಕ್ತಿಕ ಸಮಸ್ಯೆಗಳು ಅದು ಅವರಿಗೆ ಬಿಟ್ಟರೆ, ಬೇರೆ ಯಾರಿಗೂ ಗೊತ್ತಿಲ್ಲ. ಅದು ಅವರಲ್ಲಿಯೇ ಹೊರಟು ಹೋಯ್ತು. ಅವರು ಹೇಳಿದ್ದರು. ನಾನು ಬದುಕಿರುವವರೆಗೂ ನನ್ನಲ್ಲಿ ಇರುತ್ತೆ. ನಾನು ಸತ್ತಾಗ ನನ್ನಲ್ಲೇ ಹೊರಟು ಹೋಗುತ್ತೆ ಅಂತ. ಆ ರೀತಿ ಇದ್ವಿ ನಾವು. ಕಷ್ಟ ಸುಖವನ್ನು ಹಂಚಿಕೊಳ್ಳುತ್ತಿದ್ವಿ." ಎಂದು ಹಿರಿಯ ನಟಿ ರೇಖಾ ದಾಸ್ ಕಣ್ಣೀರು ಹಾಕಿದ್ದಾರೆ.
"ನನಗೆ ಜೀವ ಹೋದ ಹಾಗಾಗಿತ್ತು"
"ಒಮ್ಮೆ ಅವರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. 13 ವರ್ಷ ಮತ್ತೇನೂ ಆಗಿರಲಿಲ್ಲ. ಮಧ್ಯದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ನಾಟಕ ಮಾಡುವುದಕ್ಕೆ ಹೋದಾಗ, ಅವರಿಗೆ ಏಕಾಏಕಿ ಉಸಿರಾಟ ತೊಂದರೆಯಾಗಿ ಅಲ್ಲೇ ಗಾಡಿಯನ್ನು ನಿಲ್ಲಿಸಿ ಸರ್ಕಾರಿ ಆಸ್ಪತ್ರೆಯಿತ್ತು. ಅಲ್ಲೇ ಅವರನ್ನು ಅಡ್ಮಿಟ್ ಮಾಡಿಸಿದ್ವಿ. ಅಲ್ಲೇ ನನ್ನ ಜೀವ ಹೋದ ಹಾಗೆ ಆಗಿತ್ತು. ಯಾಕಂದ್ರೆ, ಅವರ ಮಗನಿಗೆ ಮಾತು ಕೊಟ್ಟಿದ್ವಿ. ಸರಿಯಾಗಿ ಕರೆದುಕೊಂಡು ಹೋಗಿ ಕರೆದುಕೊಂಡು ಬರುತ್ತೇವೆ ಅಂತ. ಗಾಬರಿಯಾಗ್ಬಿಟ್ಟಿತ್ತು. ನನಗೇನು ಆಗಲ್ಲ ಅಲ್ವಾ ಮಗಳೇ ಅಂತ ಕೇಳೋರು. ನಾವು ಅಲ್ಲೇ ಅಡ್ಮಿಟ್ ಮಾಡಿ, ನಂತರ ಬೆಂಗಳೂರಿಗೆ ಕರೆದುಕೊಂಡು ಹೋದ್ವಿ. ಆತರ ಎರಡು ಮೂರು ಬಾರಿ ಆಗಿದೆ." ಎಂದು ರೇಖಾ ದಾಸ್ ಭಾವುಕರಾಗಿದ್ದಾರೆ.


Click it and Unblock the Notifications











