ದಿಗಂತ್ ಹೊಸ ಸಿನಿಮಾ 'ರುದ್ರ ಕಾಲ'; ಟೈಟಲ್ ಅನಾವರಣ ಮಾಡಿ ಶುಭ ಕೋರಿದ ಸಮಂತಾ
ಕನ್ನಡ ಚಿತ್ರರಂಗದ ಹ್ಯಾಂಡ್ಸಮ್ ಹೀರೋ ದಿಗಂತ್ ನಟಿಸುತ್ತಿರುವ ಹೊಸ ಸಿನಿಮಾ 'ರುದ್ರ ಕಾಲ'. ಇತ್ತೀಚೆಗೆ ಈ ಸಿನಿಮಾದ ಟೈಟಲ್ ಅನ್ನು ಅನಾವರಣಗೊಳಿಸಲಾಗಿದೆ. ದಿಗಂತ್ ನಟಿಸಿರುವ ಈ ಸಿನಿಮಾವನ್ನು ಗೋಪಿ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾ ಟೈಟಲ್ ಈಗಾಗಲೇ ಕುತೂಹಲ ಕೆರಳಿಸಿದೆ. ದಿಗಂತ್ ವಿಭಿನ್ನ ಸಿನಿಮಾಗೆ ಗ್ರೀನ್ ಕೊಟ್ಟಿರಬಹುದೆಂದು ಟೈಟಲ್ ಹೇಳುತ್ತಿದೆ.
'ರುದ್ರ ಕಾಲ' ಸಿನಿಮಾದ ಟೈಟಲ್ ಅನ್ನು ತೆಲುಗು ನಟಿ ಸಮಂತಾ ಬಿಡುಗಡೆ ಮಾಡಿರೋದು ಮತ್ತೊಂದು ವಿಶೇಷ. ಅಷ್ಟೇ ಅಲ್ಲದೆ ಈ ಸಿನಿಮಾ ಯಶಸ್ವಿ ಆಗಲೆಂದು ಸಮಂತಾ ಹಾರೈಸಿದ್ದಾರೆ. ಅಂದ್ಹಾಗೆ ಈ ಸಿನಿಮಾವನ್ನು ರಮೇಶ್ ನಾಯ್ಕ್ ನಿರ್ಮಾಣ ಮಾಡುತ್ತಿದ್ದಾರೆ. ಟೈಟಲ್ನಿಂದಲೇ ಕುತೂಹಲ ಮೂಡಿಸಿರುವ ಈ ಚಿತ್ರದ ಮುಹೂರ್ತ ಸಮಾರಂಭ ಇದೇ ತಿಂಗಳ ಅಂದರೆ, ಏಪ್ರಿಲ್ 22 ರಂದು ನೆರವೇರಲಿದೆ.

ಸಮಂತಾ ನಟಿಸುತ್ತಿರುವ 'ಮಾ ಇಂಟಿ ಬಂಗಾರಂ' ಸಿನಿಮಾದಲ್ಲಿ ದಿಗಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಮಂತಾ ಹಾಗೂ ದಿಗಂತ್ ನಡುವೆ ಉತ್ತಮ ಬಾಂಧವ್ಯ ಬೆಳೆದಿದೆ. ಹೀಗಾಗಿ ದಿಗಂತ್ ಹೊಸ ಸಿನಿಮಾದ ಟೈಟಲ್ ಅನ್ನು ಸಮಂತಾ ಅನಾವರಣ ಮಾಡಿದ್ದಾರೆ. ಟೈಟಲ್ ಲಾಂಚ್ ಆದ ಬಳಿಕ ಇಡೀ ತಂಡ ಸಿನಿಮಾ ಮಾಹಿತಿಯನ್ನು ಹಂಚಿಕೊಂಡಿವೆ.
ರುದ್ರ ಕಾಲ ಸಿನಿಮಾದ ಬಗ್ಗೆ ದಿಗಂತ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ನಮ್ಮ ಡೈರೆಕ್ಟರ್ ಗೋಪಿ ಅವರು ಕಥೆ ಹೇಳುತ್ತಿದ್ದಾಗಲೇ ಈ ಸಿನಿಮಾದಲ್ಲಿ ನಟಿಸಬೇಕೆಂದು ನಿರ್ಧಾರ ಮಾಡಿದೆ. ಹಾಗೆಯೇ ನಮ್ಮ 'ರುದ್ರ ಕಾಲ ಸಿನಿಮಾದ ಟೈಟಲ್ ಸಮಂತಾ ಅವರ ಕೈಯಿಂದ ರಿಲೀಸ್ ಆಗಿರುವುದು ತುಂಬಾ ಖುಷಿ ಕೊಟ್ಟಿದೆ. ಈ ಸಿನಿಮಾ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ. ನಿರ್ದೇಶಕ ಗೋಪಿ, ನಿರ್ಮಾಪಕ ರಮೇಶ್ ನಾಯ್ಕ್ ಮತ್ತು ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ" ಎಂದು ದಿಗಂತ್ ಹಾರೈಸಿದ್ದಾರೆ.

ರುದ್ರ ಕಾಲ ಸಿನಿಮಾ ನಿರ್ದೇಶಕ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ನಮ್ಮ ಚಿತ್ರದ ಶೀರ್ಷಿಕೆ ಅನಾವರಣ ಮಾಡಿಕೊಟ್ಟ ಸಮಂತಾ ಅವರಿಗೆ ಧನ್ಯವಾದ. ಇದು ನಮ್ಮ ಚಿತ್ರದ ಶುಭಾರಂಭ ಎಂದು ಭಾವಿಸುತ್ತೇನೆ. "ರುದ್ರ ಕಾಲ" ಸಿನಿಮಾದ ಚಿತ್ರೀಕರಣ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ನಡೆಯಲಿದೆ. ಒಂದೇ ಹಂತದ ಚಿತ್ರೀಕರಣ ನಡೆಸಿ ಅದಷ್ಟು ಬೇಗ ತೆರೆಗೆ ತರುವ ಯೋಚನೆ ಇದೆ. ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಕಥೆ ಕೇಳಿ ಮೆಚ್ಚಿಕೊಂಡು ನಾಯಕನಾಗಿ ನಟಿಸುತ್ತಿರುವ ದಿಗಂತ್ ಹಾಗೂ ನಿರ್ಮಾಣ ಮಾಡುತ್ತಿರುವ ರಮೇಶ್ ನಾಯ್ಕ್ ಅವರಿಗೆ ನನ್ನ ಧನ್ಯವಾದ" ಎಂದು ನಿರ್ದೇಶಕ ಗೋಪಿ ಹೇಳಿದ್ದಾರೆ.
ಇನ್ನು ನಿರ್ಮಾಪಕ ರಮೇಶ್ ನಾಯ್ಕ್ ಚಿತ್ರದ ಬಗ್ಗೆ ಮಾತನಾಡುತ್ತಾ, "ಡೈರೆಕ್ಟರ್ ಗೋಪಿ ಹೇಳಿದ ಸ್ಕ್ರಿಪ್ಟ್ ನನಗೆ ಫ್ರೆಶ್ ಆಗಿ ಅನಿಸಿತು. ನಮ್ಮ ಪ್ರೊಡಕ್ಷನ್ನಲ್ಲಿ ಇಂತಹ ಸಿನಿಮಾ ಬರುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ. ಟೈಟಲ್ ರಿಲೀಸ್ ಮಾಡಿದ ನಟಿ ಸಮಂತಾ ಹಾಗೂ ನಾಯಕ ದಿಗಂತ್ ಅವರಿಗೆ ಧನ್ಯವಾದ" ಎಂದು ಹೇಳಿದ್ದಾರೆ. ರಮೇಶ್ ಅವರು ಕಥೆ ಬರೆದಿರುವ ಈ ಚಿತ್ರಕ್ಕೆ ಕ್ರಿಸ್ಟೋಫರ್ ಜೋಸೆಫ್ ಕ್ಯಾಮರಾ ವರ್ಕ್ ಇದೆ. ಲೈನ್ ಪ್ರೊಡ್ಯೂಸರ್ ಆಗಿ ನವೀನ್ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಶಿವರಾಜ್ ಕಾರ್ಯ ನಿರ್ವಹಿಸುತ್ತಿದ್ದಾರೆ. ರಮೇಶ್ ಕೆ ಪೂಜಾರಿ ಈ ಚಿತ್ರದ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications