ಸಂಯುಕ್ತ ಹೆಗ್ಡೆಗೆ ಕನ್ನಡದಲ್ಲಿ ಯಾಕೆ ಆಫರ್ ಸಿಗುತ್ತಿಲ್ಲ? ವಿವಾದನಾ? ಅವರದ್ದೇ ನಿರ್ಧಾರಗಳಾ?
ಕನ್ನಡ ಚಿತ್ರರಂಗಕ್ಕೆ ಕಿರಿಕ್ ಪಾರ್ಟಿ ಎರಡು ಪ್ರತಿಭೆಗಳನ್ನು ಕೊಟ್ಟಿತ್ತು. ಒಬ್ಬರು ರಶ್ಮಿಕಾ ಮಂದಣ್ಣ. ಇನ್ನೊಬ್ಬರು ಸಂಯುಕ್ತ ಹೆಗ್ಡೆ. ಇಬ್ಬರೂ ಇಂದು ಚಿತ್ರರಂಗದಲ್ಲಿ ತಮ್ಮದೇ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ತಮ್ಮಿಷ್ಟದಂತೆ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ತಮ್ಮಿಷ್ಟದಂತೆ ಬದುಕು ನಡೆಸುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ. ಆದರೆ, ಅದೇ ಕಿರಿಕ್ ಪಾರ್ಟಿಯಲ್ಲಿ ಮಿಂಚಿದ್ದ ಇನ್ನೊಬ್ಬ ಸಂಯುಕ್ತ ಹೆಗ್ಡೆ ನಡೆ ನಿಜಕ್ಕೂ ಇಂಟ್ರೆಸ್ಟಿಂಗ್ ಅಂತ ಅನಿಸುತ್ತೆ. ಸಂಯುಕ್ತ ಹೆಗ್ಡೆ ಕಿರಿಕ್ ಪಾರ್ಟಿ ಬಳಿಕ ಕನ್ನಡದಲ್ಲಿ ನಟಿಸಿದ್ದು ತೀರಾ ಕಡಿಮೆ. ಈಗಾಗಲೇ ಕನ್ನಡ, ತಮಿಳು, ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದರೂ, ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಅದಕ್ಕೆ ಕಾರಣವೇನು?

ಸಂಯುಕ್ತ ಹೆಗ್ಡೆ ವಿವಾದಗಳಿಗೆ ಸಿಕ್ಕಿಕೊಳ್ಳದ ನಟಿಯೇನಲ್ಲ. 'ಕಾಲೇಜ್ ಕುಮಾರ' ವಿವಾದ, ಪಾರ್ಕ್ನಲ್ಲಿ ಸ್ಪೋರ್ಟ್ಸ್ ಉಡುಪು ಧರಿಸಿ ಬಂದಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಕನ್ನಡದಲ್ಲಿ ಹೆಚ್ಚು ಆಫರ್ಗಳು ಸಿಗದೇ ಇರೋದಕ್ಕೆ ಇವೆಲ್ಲವೂ ಕಾರಣವಾಯ್ತಾ? ಈ ಬಗ್ಗೆ ಸ್ವತ: ನಟಿ ಸಂಯುಕ್ತ ಹೆಗ್ಡೆ ಏನಂತಾರೆ? ತಿಳಿಯಲು ಮುಂದೆ ಓದಿ.
ಸಂಯುಕ್ತ ಹೆಗ್ಡೆ ಕನ್ನಡದ ಹೈಪರ್ ಆಕ್ಟಿವ್ ನಟಿ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೂ, ಕನ್ನಡದಲ್ಲಿ ಆಫರ್ಗಳು ಯಾಕೆ ಸಿಗುತ್ತಿಲ್ಲ ಅನ್ನೋ ಪ್ರಶ್ನೆ ಆಗಾಗ ಎದ್ದೇಳುತ್ತಲೇ ಇರುತ್ತೆ. ಈ ಬಗ್ಗೆ ಫಸ್ಟ್ ಡೇ ಫಸ್ಟ್ ಶೋ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
"ನನಗೆ ಆಫರ್ ಸಿಗದೇ ಇರೋದಕ್ಕೆ ತುಂಬಾನೇ ಕಾರಣಗಳು ಇವೆ. ಅದರಲ್ಲಿ ಒಂದು ಕಾರಣ ಕಾಲೇಜ್ ಕುಮಾರ ವಿವಾದ. ಎಷ್ಟೊಂದು ಜನಕ್ಕೆ ಅದರ ಬಗ್ಗೆ ಸತ್ಯಾನೇ ಗೊತ್ತಿಲ್ಲ. ಪರ್ವಾಗಿಲ್ಲ, ದೇವರಿಗೆ ಅದೆಲ್ಲ ಗೊತ್ತು. ಕೆಲಸ ಕೊಡುವುದಕ್ಕೆ, ಕೆಲಸ ತೆಗೆದುಕೊಳ್ಳುವುದಕ್ಕೆ ಈ ಸುಂದರ ಪ್ರಪಂಚದ ಒಂದು ಭಾಗವಾಗಿದ್ದೇವೆ. ನಮ್ಮನ್ನೆಲ್ಲ ನೋಡಿಕೊಳ್ಳುತ್ತಿರುವವನು ಆ ದೇವರು. ಅವನೊಬ್ಬನ್ನೇ ನಮ್ಮನ್ನು ಜಡ್ಜ್ ಮಾಡಲು ಸಾಧ್ಯ" ಎಂದು ಸಂಯುಕ್ತ ಹೆಗ್ಡೆ ಹೇಳಿದ್ದಾರೆ.

ಇದೇ ಸಂದರ್ಶನದಲ್ಲಿ ಆಫರ್ ಸಿಗದೇ ಇರೋದಕ್ಕೆ ಎರಡನೇ ಕಾರಣವೇನು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಅವಕಾಶಗಳು ಕಡಿಮೆ ಸಿಗುವುದಕ್ಕೆ ಎರಡನೇ ಕಾರಣ ಏನು ಅಂದ್ರೆ, ನನಗೆ ಟ್ರಾವೆಲ್ ಹುಚ್ಚು. ಊರು ಸುತ್ತಬೇಕು ಅನ್ನೋ ಹುಚ್ಚು ಸಿಕ್ಕಾಪಟ್ಟೆ ಇದೆ. ನನಗೆ 18 ವರ್ಷ ಆಗುವುದಕ್ಕೆ ಮುಂಚೆ ನಾನು ಬೆಂಗಳೂರು ಬಿಟ್ಟು ಎಲ್ಲೂ ಹೋಗಿಲ್ಲ. ನಾನು ನಟಿಯಾದ್ಮೇಲೆ ದುಡ್ಡು ನೋಡಿರೋದು. ನಮ್ಮ ಫ್ಯಾಮಿಲಿಯಲ್ಲಿ ನಾನು ಚೆನ್ನಾಗಿ ದುಡಿಯುತ್ತಿದ್ದೇನೆ. ನನ್ನ ಆದಾಯದಿಂದ ನನ್ನ ಕುಟುಂಬದ ಲೈಫ್ ಸ್ಟೈಲ್ ಚೇಂಜ್ ಮಾಡುವುದಕ್ಕೆ ಆಗಿದೆ. ಹಾಗೇ ನನಗೆ ಆಸೆಗಳೂ ಇರುತ್ತಲ್ಲ. ಅದನ್ನು ಈಡೇರಿಸಿಕೊಳ್ಳುವುದಕ್ಕೆ ನಾನೇ ಎಷ್ಟೋ ಸಿನಿಮಾಗಳಿಗೆ ಇಲ್ಲ ಅಂದಿದ್ದೇನೆ." ಎಂದು ಎರಡನೇ ಕಾರಣವನ್ನು ರಿವೀಲ್ ಮಾಡಿದ್ದಾರೆ.
ಇದರ ಜೊತೆನೇ ಹೀರೊಯಿನ್ಗಳಿಗೆ ಕನ್ನಡದಲ್ಲಿ ಮೊದಲ ಸಿನಿಮಾಗೆ ಎಷ್ಟು ಆಫರ್ ಮಾಡುತ್ತಾರೋ ಅಷ್ಟೇ ಎರಡು, ಮೂರು, ನಾಲ್ಕನೇ ಅಷ್ಟೇ ಆಫರ್ ಮಾಡುತ್ತಾರೆಂದು ಸಂಭಾವನೆ ಬಗ್ಗೆನೂ ಪ್ರಸ್ತಾಪ ಮಾಡಿದ್ದಾರೆ. "ನಮ್ಮ ಇಂಡಸ್ಟ್ರಿಯಲ್ಲೂ ನಮ್ಮ ಹೆಣ್ಣು ಮಕ್ಕಳನ್ನು ಹೆಚ್ಚು ಬೆಳೆಸಬೇಕು. ಯಾಕಂದ್ರೆ, ಅವರಿಗೆ ಅವಕಾಶ ಸಿಗುತ್ತೆ. ಸಿಕ್ಕ ಮೇಲೆ ಬೇರೆ ಚಿತ್ರರಂಗದಲ್ಲಿ ಅವಕಾಶ ಸಿಗುತ್ತೆ. ಯಾಕೆ ಬೇರೆ ಚಿತ್ರರಂಗಕ್ಕೆ ಹೋಗುತ್ತಾರೆ ಅನ್ನೋದು ಗೊತ್ತಿಲ್ಲ. ಎಲ್ಲರೂ ಬೈತಾರೆ. ಯಾಕೆ ಅವರು ಬೇರೆ ಇಂಡಸ್ಟ್ರಿಗೆ ಹೋಗುತ್ತಾರೆ ಅಂತ. ಇಲ್ಲಿ ಮೊದಲನೇ ಸಿನಿಮಾಗೆ ಎಷ್ಟು ಆಫರ್ ಮಾಡುತ್ತಾರೋ ಅಷ್ಟೇ ಎರಡನೇ ಸಿನಿಮಾಗೂ ಆಫರ್ ಮಾಡುತ್ತಾರೆ. ಮೂರನೇ ಸಿನಿಮಾಗೂ ಅಷ್ಟೇ.. ನಾಲ್ಕನೇ ಸಿನಿಮಾಗೂ ಅಷ್ಟೇ. ಎಷ್ಟೋ ಹೀರೊಯಿನ್ಸ್ ಇದ್ದಾರೆ. ಎಷ್ಟೋ ಹಿಟ್ ಹೀರೊಯಿನ್ಸ್ ಇದ್ದಾರೆ. ಹಿಟ್ ಆದ್ಮೇಲೂ ಅವರಿಗೆ ಅಷ್ಟೇ ದುಡ್ಡು ಆಫರ್ ಮಾಡಿದ್ದಾರೆ." ಎಂದು ಕನ್ನಡ ಚಿತ್ರರಂಗದಲ್ಲಿ ಸಂಭಾವನೆ ವಿಚಾರದಲ್ಲಿರುವ ತಾರತಮ್ಮದ ಬಗ್ಗೆನೂ ರಿವೀಲ್ ಮಾಡಿದ್ದಾರೆ.


Click it and Unblock the Notifications











