ಮನೆಯಲ್ಲಿಯೇ ಇರಿ ಎಂದು ಬುದ್ಧಿಮಾತು ಹೇಳಿದ್ದರು ಶರ್ಮಿಳಾ ಮಾಂಡ್ರೆ: ಆದರೆ ಅವರೇ ಮಾಡಿದ್ದೇನು?
ಈ ಲಾಕ್ಡೌನ್ನ ಅವಧಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ- ಇದು ಪದೇ ಪದೇ ಹೇಳುತ್ತಿರುವ ಮಾತು. ಸೆಲೆಬ್ರಿಟಿಗಳೂ ತಮ್ಮ ಎಲ್ಲಾ ಪೋಸ್ಟ್ಗಳಲ್ಲಿಯೂ ಈ ಮಂತ್ರವನ್ನು ಜಪಿಸುತ್ತಿದ್ದಾರೆ. ಮನೆಯಲ್ಲಿ ಸಮಯ ಕಳೆಯಲು ಏನು ಮಾಡಬಹುದು ಎಂಬ ಕೆಲವು ಸಲಹೆಗಳನ್ನು ನೀಡುತ್ತಿದ್ದಾರೆ. ಆದರೆ ಅದನ್ನು ಅವರೂ ಪಾಲಿಸುತ್ತಿದ್ದಾರೆಯೇ ಎಂಬುದು ಶರ್ಮಿಳಾ ಮಾಂಡ್ರೆ ಪ್ರಕರಣದಿಂದ ಅನುಮಾನಕ್ಕೆ ಕಾರಣವಾಗಿದೆ.
ಏಕೆಂದರೆ ಅನೇಕ ಸೆಲೆಬ್ರಿಟಿಗಳಂತೆಯೇ ಶರ್ಮಿಳಾ ಮಾಂಡ್ರೆ ಕೂಡ ಲಾಕ್ಡೌನ್ ಘೋಷಣೆಯಾದಾಗ ಜನರಿಗೆ ಕಿವಿಮಾತು ಹೇಳಿದ್ದರು. ಮನೆಯಲ್ಲಿಯೇ ಇರಿ. ಇದು ನಮ್ಮ ಒಳಿತಿಗಾಗಿಯೇ. ಈ ಮೂಲಕ ನಿಮಗಾಗಿ ಹಗಲು ರಾತ್ರಿ ನಿರಂತರವಾಗಿ ಕಷ್ಟಪಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಸಕಾರಾತ್ಮಕ ಉತ್ತೇಜನ ನೀಡೋಣ. ಮನೆಯಲ್ಲಿಯೇ ಉಳಿದುಕೊಳ್ಳುವುದು ನಮ್ಮ ಭವಿಷ್ಯದ ಒಳಿತಿಗಾಗಿ. ಅದಕ್ಕಾಗಿ ಈ ಸಣ್ಣ ತ್ಯಾಗ ಮಾಡೋಣ ಎಂದು ಸುದೀರ್ಘ ಬರಹವನ್ನು ಅವರು ಮಾರ್ಚ್ 24ರಂದು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಬರೆದುಕೊಂಡಿದ್ದರು.

ಮನೆಯಲ್ಲಿದ್ದಾಗ ಇಷ್ಟೊಂದು ಕೆಲಸ ಮಾಡಬಹುದು
'ಮನೆಯಲ್ಲಿಯೇ ಇದ್ದಾಗ ಎಷ್ಟು ಕೆಲಸಗಳನ್ನು ಮಾಡಬಹುದು ಎನ್ನುವುದನ್ನು ಎಂದಿಗೂ ಅರಿತಿರಲಿಲ್ಲ. ನಾನು ಅಡುಗೆ ಮಾಡುತ್ತಾ, ಮನೆಯಿಂದಲೇ ಕೆಲಸ ಮಾಡುತ್ತಾ, ವರ್ಕೌಟ್ ಮಾಡುತ್ತಾ, ಓದುತ್ತಾ, ಇದುವರೆಗೂ ನಾನು ನೋಡಿರದ ಸಿನಿಮಾಗಳನ್ನು ವೀಕ್ಷಿಸುತ್ತಾ, ಆರೋಗ್ಯಯುತವಾಗಿರುವುದನ್ನು ತಿನ್ನುತ್ತಾ (ಕೆಲವು ಸಂದರ್ಭದಲ್ಲಿ ಜಂಕ್ ಫುಡ್ಗಳನ್ನು ಬೇಡ ಎನ್ನಲು ನನ್ನಿಂದ ಸಾಧ್ಯವಿಲ್ಲ) ಇದ್ದೇನೆ. ಇವೆಲ್ಲವನ್ನೂ ಮನೆಯಲ್ಲಿಯೇ ಮಾಡುತ್ತಿದ್ದೇನೆ' ಎಂದು ಶರ್ಮಿಳಾ ಹೇಳಿದ್ದರು.

ಮನೆಯಲ್ಲಿಯೇ ಇರಿ
ನಿಮಗೆಲ್ಲರಿಗೂ, ದಣಿವರಿಯದೆ ಕೆಲಸ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರಿಗೆ ಮತ್ತು ದೈಹಿಕ ಹಾಗೂ ಮಾನಸಿಕವಾಗಿ ಉತ್ತಮ ಸ್ಥಿತಿಯಲ್ಲಿ ಇಲ್ಲದವರಿಗೆ ಪಾಸಿಟಿವ್ ವೈಬ್ಸ್ಗಳನ್ನು ಕಳುಹಿಸೋಣ. ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿ ಇರಿ ಎಂದು ಬರೆದಿದ್ದರು.
ಬೀಚ್ನ ವಿಡಿಯೋ ಹಾಕಿದ್ದರು
ಈ ಪೋಸ್ಟ್ ಬಳಿಕ ಇನ್ಸ್ಟಾಗ್ರಾಂನಲ್ಲಿ ಯಾವುದೇ ಪೋಸ್ಟ್ ಹಾಕದ ಶರ್ಮಿಳಾ, ಶುಕ್ರವಾರವಷ್ಟೇ ತಮ್ಮ ಹಳೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಇಂಡೋನೇಷ್ಯಾದ ಬಾಲಿಯಲ್ಲಿನ ಬೀಚ್ನಲ್ಲಿ ಮಾದಕವಾಗಿ ಕಾಣಿಸಿಕೊಂಡಿರುವ ವಿಡಿಯೋ ಅದು. ಈಗಿನ ಸಂದರ್ಭದಲ್ಲಿ ನಮ್ಮೊಳಗೆ ಪಾಸಿಟಿವ್ ವೈಬ್ಸ್ ನೀಡಲು ಈ ರೀತಿಯ ಹಿನ್ನೋಟಗಳು ಖಂಡಿತವಾಗಿಯೂ ಬೇಕಾಗುತ್ತದೆ ಎಂದು ಹೇಳಿಕೊಂಡಿದ್ದರು.

ಜಾಲಿ ರೈಡ್ ಹೇಗಿತ್ತು? ಅಣಕಿಸಿದ ಜನರು
ಕಾರು ಅಪಘಾತದ ಬಳಿಕ ಅನೇಕರು ಶರ್ಮಿಳಾ ಮಾಂಡ್ರೆ ಅವರ ಇನ್ಸ್ಟಾ ಖಾತೆಯ ಫೋಟೊ ಮತ್ತು ವಿಡಿಯೋಗಳಿಗೆ ಕಾಮೆಂಟ್ ಹಾಕಲಾರಂಭಿಸಿದ್ದಾರೆ. ಪಾಸಿಟಿವ್ ವೈಬ್ಸ್ ಕಡಿಮೆಯಾಗಿದೆ ಎಂದು ಹೊರಗೆ ಹೋಗಿದ್ದಿರಾ ಎಂದು ಅಣಕಿಸಿದ್ದಾರೆ. ನಿನ್ನೆ ರಾತ್ರಿ ನಿಮ್ಮ ಜಾಲಿ ರೈಡ್ ಹೇಗಿತ್ತು? ಪೊಲೀಸರು ಅಷ್ಟು ಕಷ್ಟಪಡುತ್ತಿದ್ದರೆ, ನೀವು ದೇಶಕ್ಕೆ ಅವಮಾನ ಮಾಡುತ್ತಿದ್ದೀರಾ? ನಿಮಗೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.

ಶರ್ಮಿಳಾ ಮಾಂಡ್ರೆ ಚಿತ್ರಗಳು
'ಸಜನಿ', 'ಕೃಷ್ಣ', 'ಈ ಬಂಧನ', 'ನವಗ್ರಹ', ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಶರ್ಮಿಳಾ, 'ಆಕೆ' ಮತ್ತು 'ಮಾಸ್ ಲೀಡರ್' ಚಿತ್ರಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು. 'ಮೈಸೂರ್ ಮಸಾಲ', ಯೋಗರಾಜ್ ಭಟ್ ಅವರ 'ಗಾಳಿಪಟ 2' ಹಾಗೂ ಸತೀಶ್ ನೀನಾಸಂ ಜತೆಗೆ 'ವೈತರಣಿ' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.


Click it and Unblock the Notifications











