"ಸ್ವಲ್ಲ ಮುಚ್ಚಿಕೊಳ್ಳುವ ಹಾಗೆ ಡ್ರೆಸ್ ಹಾಕೊಳ್ಳಿ.. ಹೀಗೆ ಮಹಿಳೆಯರ ಮೇಲೆ ದಬ್ಬಾಳಿಕೆ ಆಗ್ತಿತ್ತು": ನಟಿ ಶ್ರುತಿ ಹರಿಹರನ್
ಆರು ವರ್ಷಗಳ ಹಿಂದೆ ಭಾರತದಾದ್ಯಂತ ಮೀಟೂ ಅಭಿಯಾನ ದೊಡ್ಡದಾಗಿ ಸದ್ದು ಮಾಡಿತ್ತು. ಕರ್ನಾಟಕದಲ್ಲೂ ನಟಿ ಶ್ರುತಿ ಹರಿಹರನ್ ಮೀಟೂ (Me Too) ಅಭಿಯಾನದಲ್ಲಿ ಭಾಗವಹಿಸಿದ್ದರು. ಆಕ್ಷನ್ ಕಿಂಗ್ ಹಾಗೂ ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಈ ಆರೋಪ ದೊಡ್ಡ ಮಟ್ಟದಲ್ಲಿ ವಿವಾದ ಹುಟ್ಟಾಕಿತ್ತು.
ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಮಾಡಿದ ಬಳಿಕ ಈ ವಿವಾದ ಫಿಲ್ಮ್ ಚೇಂಬರ್ ಮೆಟ್ಟಿಲೇರಿತ್ತು. ದಿವಂಗತ ಅಂಬರೀಶ್ ಮುಖ್ಯಸ್ಥಿಕೆಯಲ್ಲಿ ಸಂಧಾನಕ್ಕೂ ಮುಂದಾಗಿದ್ದರು. ಆದರೆ, ಈ ಸಂಧಾನ ವಿಫಲವಾಗಿತ್ತು. ಅರ್ಜುನ್ ಸರ್ಜಾ ನಟಿ ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಆ ಕೇಸ್ ಇನ್ನೂ ನಡೆಯುತ್ತಿದೆ.

2021ರಲ್ಲಿ ಶ್ರುತಿ ಹರಿಹರನ್ ಆರೋಪಕ್ಕೆ ಸಾಕ್ಷಿಗಳಿಲ್ಲ ಎಂದು ಕಬ್ಬನ್ ಪಾರ್ಕ್ ಪೊಲೀಸರು ಅರ್ಜುನ್ ಸರ್ಜಾಗೆ ಕ್ಲೀನ್ ಚಿಟ್ ನೀಡಿದ್ದರು. ಸದ್ಯ ಇದೇ ಮೀಟೂ (Me Too)ಪ್ರಕರಣದ ಬಗ್ಗೆ ಶ್ರುತಿ ಹರಿಹರನ್ ರೇಡಿಯೋ ಸಿಟಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಓಪನ್ ಆಗಿ ಮಾಡಿದ್ದಾರೆ. ಮೀಟೂ ಅಭಿಯಾನ ಅಷ್ಟು ಮುಖ್ಯ ಯಾಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.
"ನನ್ನ ಪ್ರಕಾರ, ಆ ಮೂವ್ಮೆಂಟ್ ಆಗಿದ್ದು ಬಹಳ ಅಗತ್ಯ. ಬಹಳಷ್ಟು ಮಹಿಳೆಯರಿಗೆ ಅವರು ಹಿಂದೆಂದೂ ಮಾತನಾಡದೇ ಇದ್ದಿದ್ದನ್ನು ಮಾತನಾಡುವುದಕ್ಕೆ ಒಂದು ವೇದಿಕೆ ಸಿಕ್ಕಿತ್ತು. ನನಗೂ ಕೂಡ ಇದು ಅದೇ ದಾರಿ ಅಂತ ಅನಿಸಿತ್ತು. ಇದರಲ್ಲಿ ಎರಡು ವಿಷಯವಿತ್ತು. ಮೊದಲನೆಯದು, ಇಲ್ಲಿ ವ್ಯವಸ್ಥೆಯನ್ನು ಬದಲಾವಣೆ ಮಾಡುವ ಪ್ರಯತ್ನ. ಇಷ್ಟು ವರ್ಷ ಒಂದು ವ್ಯವಸ್ಥೆಯಲ್ಲಿ ನಡೆಯುತ್ತಿತ್ತು. ಇಷ್ಟು ಏನು ಒಪ್ಪಿಕೊಂಡಿದ್ದೇವೋ ಅದು ಓಕೆ ಅಲ್ಲ ಅಂತ ಹೇಳುವ ಒಂದು ಪ್ರಯತ್ನ." ಎಂದು ರೇಡಿಯೋ ಸಿಟಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇನ್ನು ಮಹಿಳೆಯರ ಮೇಲೆ ಆಗುತ್ತಿದ್ದ ಲೈಂಗಿಕ ಕಿರುಕುಳದ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿ ವಿವಾದ ಸೃಷ್ಟಿಸಿ, ಪ್ರಚಾರ ಗಿಟ್ಟಿಸಿಕೊಳ್ಳುವುದಲ್ಲ. ಸಮಸ್ಯೆ ವಿರುದ್ಧ ಧ್ವನಿ ಎತ್ತುವುದಕ್ಕೆ ಮೀಟೂ ಅಭಿಯಾನ ಎಂದಿದ್ದಾರೆ. "ಎರಡನೆಯದು, ಇದರಿಂದ ಜಸ್ಟಿಸ್ ಯಾವಾಗ ಸಿಗುತ್ತೆ ಅಂತ ಪ್ರಶ್ನೆ ಕೇಳಿದ್ರು. ಆದರೆ, ಇದೊಂದು ಕಾನೂನಿನ ಸಮಸ್ಯೆ. ಸೋಶಿಯಲ್ ಮೀಡಿಯಾದಲ್ಲಿ ವಿಷಯ ಪ್ರಸ್ತಾಪ ಮಾಡಿ, ವಿವಾದ ಹುಟ್ಟಾಕುವುದಕ್ಕಿಂತ ಇದನ್ನು ಹೇಳಲು ಬೇರೆ ದಾರಿ ಇದೆಯೇ? ನನ್ನ ಪ್ರಕಾರ ನಾವು ಒಂದು ಸಮಸ್ಯೆಯನ್ನು ಅಡ್ರೆಸ್ ಮಾಡುತ್ತಿದ್ದೇವೆ." ಎಂದಿದ್ದಾರೆ.
ಇದೇ ಸಂದರ್ಶನದಲ್ಲಿ ಎಲ್ಲಾ ಮಹಿಳೆಯರ ಜೀವನದಲ್ಲೂ ಲೈಂಗಿಕ ಕಿರುಕುಳದಂತಹ ಅಹಿತಕರ ಘಟನೆ ನಡೆದಿರುತ್ತೆ. ಅದನ್ನು ಕೆಲವರು ಹೇಳಿಕೊಂಡಿದ್ದರೆ, ಮತ್ತೆ ಕೆಲವರು ಸುಮ್ಮನಾಗಿದ್ದಾರೆ ಎಂದಿದ್ದಾರೆ. "ನನಗೆ ಎಷ್ಟೋ ಜನ ಹೇಳಿದ್ದಾರೆ. ಅವರ ಮನೆಯಲ್ಲಿರುವ ಅಜ್ಜಿ ಕೂಡ ಎಷ್ಟು ಮುಜುಗರಕ್ಕೆ ಒಳಗಾಗಿದ್ದರು ಅಂತ. ನಮ್ಮ ತಾಯಿಯಂದಿರು. ಪ್ರತಿಯೊಂದು ಹೆಣ್ಣು ಕೂಡ ತಮ್ಮ ಜೀವನದಲ್ಲಿ ಒಂದಲ್ಲ ಒಂದು ಅಹಿತಕರ ಸನ್ನಿವೇಶಗಳನ್ನು ಫೇಸ್ ಮಾಡಿಯೇ ಮಾಡಿರುತ್ತಾರೆ. ಅದು ಅವರ ಮೇಲೆ ತುಂಬಾ ಪರಿಣಾಮ ಬೀರಿರಬಹುದು. ಇಲ್ಲವೇ ಬೀರದೆಯೂ ಇರಬಹುದು." ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಮೀಟೂ ಅಭಿಯಾನ ಶುರುವಾಗಿದ್ದು ಒಳ್ಳೆಯದು ಎಂಬ ಅಭಿಪ್ರಾಯ ಶ್ರುತಿ ಹರಿಹರನ್ ಅವರದ್ದು. "ಕೆಲವರು ಇದು ಸಹಜ ಅಲ್ವ.. ನಾವು ತಾನೇ ನೋಡಿಕೊಳ್ಳಬೇಕು. ರಾತ್ರಿ ಹೊತ್ತು ಯಾಕೆ ಆಚೆ ಹೋಗಬೇಕು. ಸ್ವಲ್ಪ ಮುಚ್ಚಿಕೊಂಡು ಡ್ರೆಸ್ ಹಾಕಿಕೊಳ್ಳಿ. ಅದ್ಯಾಕೆ ಡ್ರೆಸ್ ತೋರಿಸಿಕೊಂಡು ಹಾಕೋತಿರಾ. ಈ ಎಲ್ಲಾ ಸಂಭಾಷಣೆಗಳಿಂದ ಮಹಿಳೆಯರ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ಇದು ಇನ್ಮುಂದೆ ನಡೆಯೋದಿಲ್ಲ. ಇದೆಲ್ಲವೂ ಬದಲಾವಣೆ ಆಗುತ್ತೆ. ಇದು ಕೇವಲ ಹೆಣ್ಣು ಮಕ್ಕಳಿಂದ ಮಾತ್ರ ಆಲ್ಲ. ಪುರುಷರಿಂದಲೂ ಆಗಬೇಕಿದೆ. ನನಗೆ ಈಡಿ ವಿಶ್ವದಾದ್ಯಂತ ಮೂವ್ಮೆಂಟ್ ಆಗಿದ್ದು ತುಂಬಾನೇ ಒಳ್ಳೆಯದು ಅನಿಸಿದೆ." ಎಂದಿದ್ದಾರೆ.


Click it and Unblock the Notifications











