ಕಾರು ಅಪಘಾತದ ಬಗ್ಗೆ ನಟಿ ಉಮಾಶ್ರೀ ಪ್ರತಿಕ್ರಿಯೆ
ಕಾರು ಅಪಘಾತದ ಬಗ್ಗೆ ಸ್ಯಾಂಡಲ್ ವುಡ್ ನ ಹಿರಿಯ ನಟಿ ಹಾಗೂ ರಾಜಕಾರಣಿ ಉಮಾಶ್ರೀ ಪ್ರತಿಕ್ರಿಯೆ ನೀಡಿ, 'ನನ್ನ ವಾಹನ ಜಖಂಗೊಂಡಿರೋದಕ್ಕೆ ಬೇಸರವಿಲ್ಲ. ಆದರೆ ಈ ಅಪಘಾತದಲ್ಲಿ ಇಬ್ಬರ ಪ್ರಾಣ ಹೋಯಿತಲ್ಲಾ ಅದರಿಂದ ತುಂಬಾ ನೋವಾಗ್ತಿದೆ' ಎಂದು ಹೇಳಿದ್ದಾರೆ.
ನಿನ್ನೆ (ನವೆಂಬರ್ 20) ತಡರಾತ್ರಿ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಬಳಿ ನಡೆದ ರಸ್ತೆ ಅಪಘಾತದಲ್ಲಿ ವಿಜಯಪುರ ಜಿಲ್ಲಾ ಸರ್ಜನ್ ಡಾ.ಶರಣಪ್ಪ ಕಟ್ಟಿ ಅವರ ಪತ್ನಿ ಶೋಭಾ (ಶಾರದಾ) ಕಟ್ಟಿ ಹಾಗೂ ಹಾಗೂ ಚಾಲಕ ಸಂದೀಪ್ ವಿಭೂತಿ ಮಠ ಸಾವಿಗೀಡಾಗಿದ್ದಾರೆ.
ಇದೇ ಘಟನೆಯಲ್ಲಿ ನವಲಗುಂದ ಹೆಲ್ತ್ ಆಫೀಸರ್ ಆಗಿದ್ದ ಡಾ.ಶರಣಪ್ಪ ಕಟ್ಟಿ ಅವರ ಪುತ್ರಿ ಡಾ.ಸ್ಮಿತಾ ಕಟ್ಟಿ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲ, ಉಮಾಶ್ರೀಯವರ ಇನ್ನೋವಾ ಕಾರು ಚಾಲಕ ಶಿವಕುಮಾರ ಬಿಡನಾಳ ಗಾಯಗೊಂಡಿದ್ದಾರೆ.

ಘಟನೆ ನಡೆದ ಬೆನ್ನಲ್ಲೇ ನಟಿ ಉಮಾಶ್ರೀ ತೇರದಾಳಕ್ಕೆ ಹೋಗಲು ಆಗಮಿಸಿದ್ದು ಈ ಸಮಯದಲ್ಲಿ ಮಾತನಾಡಿ ಘಟನೆಯ ಬಗ್ಗೆ ತೀವ್ರ ಬೇಸರವ್ಯಕ್ತ ಪಡಿಸಿದರು. 'ಕೊಪ್ಪಳ ಮೂಲದ ಚಾಲಕ ಇಲ್ಲಿಗೆ ಬಂದಿದ್ದು ಯಾಕೆ ಎಂಬುದು ಗೊತ್ತಿಲ್ಲ. ಆತನನ್ನ ನನ್ನ ಕಾರ್ಯಕರ್ತರೇ ಪರಿಚಯಿಸಿ ಕಳಿಸಿದ್ದರು. ಇಡೀ ಘಟನೆಯಿಂದ ನಾನು ನೊಂದಿದ್ದೇನೆ' ಎಂದರು.
ಉಮಾಶ್ರೀ ಅವರನ್ನು ಬಿಟ್ಟು ಕಾರು ಚಾಲಕ ತನ್ನೂರಿಗೆ ಹೊರಟಿದ್ದರು. ಓವರ್ ಟೇಕ್ ಮಾಡುವ ಭರದಲ್ಲಿ ಎದುರಿಗೆ ಬಂದ ಬಲೆನೋ ಕಾರಿನ ನಡುವೆ ಡಿಕ್ಕಿಯಾಗಿದೆ. ಅಪಘಾತದ ಬಗ್ಗೆ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ರಮೇಶ್ ಗೋಕಾಕ ಅವರಿಂದ ಮಾಹಿತಿ ಪಡೆದ ಉಮಾಶ್ರೀಯವರು, ಮುಂದಿನ ಕಾನೂನು ಕ್ರಮದ ಬಗ್ಗೆಯೂ ತಿಳಿದುಕೊಂಡರು.


Click it and Unblock the Notifications











