ವಿದ್ಯಾರ್ಥಿಗಳ ಜೊತೆ ಕೂತು 'ತನುಜಾ' ಸಿನಿಮಾ ವೀಕ್ಷಿಸಿದ ಡಾ. ನಿರ್ಮಲಾನಂದನಾಥ ಸ್ವಾಮೀಜಿ
ಕೊರೊನಾ ವೇಳೆ ಅದೆಷ್ಟೋ ಮಂದಿಗೆ ನಾನಾ ರೀತಿಯ ತೊಂದರೆಗಳಾಗಿದ್ದವು. ಇದೇ ವೇಳೆ ವಿದ್ಯಾರ್ಥಿಗೊಬ್ಬರಿಗೆ ಆದ ತೊಂದರೆಯನ್ನೇ ಆಧರಿಸಿ 'ತನುಜಾ' ಅನ್ನೋ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಅದೇ ಸಿನಿಮಾ ಈಗ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಂಡಿದೆ.
'ತನುಜಾ' ಕೊರೊನಾ ಸಮಯದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಲಾಕ್ಡೌನ್ ಸಮಯದಲ್ಲಿ ಶಿವಮೊಗ್ಗದ ಕುಗ್ರಾಮವೊಂದರಿಂದ ಬೆಂಗಳೂರಿಗೆ ಬಂದು ತನುಜಾ ನೀಟ್ ಪರೀಕ್ಷೆ ಬರೆದಿದ್ದರು. ಆ ವೇಳೆ ವಿದ್ಯಾರ್ಥಿನಿ ನೀಟ್ ಪರೀಕ್ಷೆ ಬರೆಯಲು ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ ಕೆ.ಸುಧಾಕರ್. ಇವರ ಜೊತೆ ಹಿರಿಯ ಪತ್ರಕರ್ತ ವಿಶ್ವೇಶ್ವರ್ ಭಟ್ ನೆರವಾಗಿದ್ದರು.

ಜನರಿಂದ ಮೆಚ್ಚುಗೆ ಪಡೆದ 'ತನುಜಾ' ಸಿನಿಮಾವನ್ನು ಆದಿ ಚುಂಚನಗಿರಿಯ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ನೂರಾರು ವಿದ್ಯಾರ್ಥಿಗಳ ಜೊತೆ ಕೂತು ಸಿನಿಮಾ ವೀಕ್ಷಣೆ ಮಾಡಿದ್ದಾರೆ. "ಕಠಿಣ ಪರಿಶ್ರಮ,ಏಕಾಗ್ರತೆ,ಗುರಿ ಮತ್ತು ಹೆತ್ತವರ ಹಾಗೂ ಗುರುವಿನ ಆಶೀರ್ವಾದಗಳ ಅದ್ಭುತ ಕಥನ ತನುಜಾ ಸಿನಿಮಾ" ಎಂದು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೊಗಳಿದ್ದಾರೆ.
ಇದೇ ವೇಳೆ ಸ್ವಾಮೀಜಿ ಓದುವಾಗ ನಡೆದ ಘಟನೆಯನ್ನೂ ವಿವರಿಸಿದ್ದಾರೆ. ಬೆಂಗಳೂರಿಗೆ ಪದವಿ ಸೀಟು ಹಂಚಿಕೆಯ ಸಂದರ್ಭದ ವೇಳೆ ಸಂದರ್ಶನಕ್ಕೆ ಬರುವಾಗ ಕೆರೆ ಒಡೆದು ,ರಸ್ತೆ ಕೊಚ್ಚಿ ಹೋಗಿತ್ತು. ಆಗ ಬೆಂಗಳೂರು ತಲುಪಲು ತಡವಾಗಿತ್ತು. ಆ ವೇಳೆ ಓಡಿ ಹೋಗಿ ಸಂದರ್ಶನಕ್ಕೆ ಹಾಜರಾಗಿದ್ದನ್ನು ಈ ಸಂದರ್ಭದಲ್ಲಿ ನೆನೆಸಿಕೊಂಡಿದ್ದಾರೆ.

ಇದೇ ವೇಳೆ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಾವು ನೋಡಿದ ಕೊನೆಯ ಸಿನಿಮಾ ಬಗ್ಗೆನೂ ಹೇಳಿದ್ದಾರೆ. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಬೆಳದಿಂಗಳ ಬಾಲೆ' ತಾವು ನೋಡಿದ ಕೊನೆಯ ಸಿನಿಮಾ. ಇದರ ಮೂಲ ಕಾದಂಬರಿಯನ್ನು ನೆನೆಯುತ್ತಾ ಮಕ್ಕಳೆಲ್ಲರಿಗೂ ಸಾಧ್ಯವಾದರೆ ಓದುವಂತೆ ಸಲಹೆ ನೀಡಿದ್ದಾರೆ.
ಅಂದು ಸಂಕಷ್ಟಕ್ಕೆ ಸಿಲುಕಿದ್ದ ತನುಜಾ ಅಂದು ನೀಟ್ ಪರೀಕ್ಷೆ ಬರೆದು ಬೆಳಗಾವಿಯಲ್ಲಿ ದ್ವಿತೀಯ ವರ್ಷದ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಈ ನೈಜ ಘಟನೆಯನ್ನೇ ಆಧಾರವಾಗಿಟ್ಟುಕೊಂಡು ಹರೀಶ್ ಎಂ ಡಿ ಹಳ್ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











