ದಿಗಂತ್ 'ರುದ್ರ ಕಾಲ' ಸಿನಿಮಾದಿಂದ ಕನ್ನಡಕ್ಕೆ ಕಮ್ ಬ್ಯಾಕ್ ಮಾಡಿದ 'ಅಧ್ಯಕ್ಷ' ನಟಿ ಹೆಬಾ; ಹೈಲೈಟ್ ಏನು?
ಸ್ಯಾಂಡಲ್ವುಡ್ನ ದೂದ್ ಪೇಡಾ ದಿಗಂತ್ ಹೊಸ ಸಿನಿಮಾ ಸೆಟ್ಟೇರಿದೆ. ಕೆಲವೇ ದಿನಗಳ ಹಿಂದೆ ದಿಗಂತ್ ನಟಿಸುತ್ತಿರುವ ಈ ಹೊಸ ಸಿನಿಮಾ ಟೈಟಲ್ ಅನ್ನು ಸಮಂತಾ ರುಥ್ ಪ್ರಭು ಅನಾವರಣ ಮಾಡಿದ್ದರು. ಅಲ್ಲಿಂದ 'ರುದ್ರ ಕಾಲ' ಸಿನಿಮದ ಮೇಲೆ ಸಿನಿಮಾ ಮಂದಿ ಕಣ್ಣಿಟ್ಟಿದ್ದರು. ಈ ಬೆನ್ನಲ್ಲೇ ಸಿನಿಮಾ ಕೂಡ ಸೆಟ್ಟೇರಿದೆ. ಸಿನಿಮಾ ಟೈಟಲ್ನಿಂದ ಸಿನಿಪ್ರಿಯರನ್ನು ಸೆಳೆಯುತ್ತಿದೆ.
ನಟ ದಿಗಂತ್ ಅಭಿನಯದ 'ರುದ್ರ ಕಾಲ' ಸಿನಿಮಾದ ಮುಹೂರ್ತ ಸಮಾರಂಭ ಬುಧವಾರ ಬೆಂಗಳೂರಿನಲ್ಲಿ ನೆರವೇರಿದೆ. ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಈ ಸಿನಿಮಾದ ಮೊದಲ ಸನ್ನಿವೇಶಕ್ಕೆ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿದರು. ನಿರ್ದೇಶಕ ರಾಜ್ ಗುರು ಕ್ಯಾಮೆರಾ ಚಾಲನೆ ಮಾಡಿದರು. ನಿರ್ದೇಶಕರಿಬ್ಬರು 'ರುದ್ರ ಕಾಲ' ಯಶಸ್ವಿಯಾಗಲೆಂದು ಹಾರೈಸಿದರು.

'ರುದ್ರ ಕಾಲ' ಟೈಟಲ್ ಸೂಚಿಸುವಂತೆ ಇದು ರೆಗ್ಯೂಲರ್ ಸಿನಿಮಾ ಅಲ್ಲ. ಇದೂವರೆಗೂ ದಿಗಂತ್ ಕೂಡ ಇಂತಹ ಸಿನಿಮಾದಲ್ಲಿ ನಟಿಸಿಲ್ಲ ಎಂದು ತಂಡೇ ಹೇಳಿಕೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಶರಣ್ ನಟಿಸಿದ 'ಅಧ್ಯಕ್ಷ' ಸಿನಿಮಾದಲ್ಲಿ ನಾಯಕಿಯಾಗಿ ಗಮನ ಸೆಳೆದಿದ್ದ ಹೆಬಾ ಪಟೇಲ್ ಬಹಳ ವರ್ಷಗಳ ಬಳಿಕ ಮತ್ತೆ ಕನ್ನಡ ಸಿನಿಮಾಗೆ ಕಮ್ ಬ್ಯಾಕ್ ಮಾಡಿದ್ದಾರೆ. ದಿಗಂತ್ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಹೀಗಾಗಿ ಈ ಪ್ರಾಜೆಕ್ಟ್ ಸಿನಿಪ್ರೇಮಿಗಳಿಗೆ ಕಿಕ್ ಕೊಡುವುದಕ್ಕೆ ಶುರು ಮಾಡಿದೆ.
ಈ ಸಿನಿಮಾವನ್ನು ಗೋಪಿ ನಿರ್ದೇಶನ ಮಾಡುತ್ತಿದ್ದಾರೆ. ಹಾಗಂತ ಅವರಿಗೇನು ಇದು ಮೊದಲ ಸಿನಿಮಾ ಅಲ್ಲ. ತೆಲುಗು ಹಾಗೂ ಕನ್ನಡದಲ್ಲಿ ಸಿನಿಮಾ ಮಾಡಿದ್ದಾರೆ. ಇದು ಅವರ ನಾಲ್ಕನೇ ಸಿನಿಮಾ. "ನಾನು ತೆಲುಗಿನಲ್ಲಿ ಎರಡು, ಕನ್ನಡದಲ್ಲಿ ಒಂದು ಚಿತ್ರ ನಿರ್ದೇಶನ ಮಾಡಿದ್ದೇನೆ. 'ರುದ್ರ ಕಾಲ' ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಈ ಸಿನಿಮಾ ಕೂಡ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಇದು ಕ್ರೈಮ್ ಥ್ರಿಲ್ಲರ್ ಹಾಗೂ ಫ್ಯಾಮಿಲಿ ಎಮೋಷನ್ ಸ್ಟೋರಿ ಇರುವ ಸಿನಿಮಾ. ಇತ್ತೀಚೆಗೆ ಖ್ಯಾತ ನಟಿ ಸಮಂತಾ ನಮ್ಮ ಸಿನಿಮಾದ ಟೈಟಲ್ ಅನಾವರಣ ಮಾಡಿಕೊಟ್ಟಿದ್ದರು. ನನ್ನ ಸಹೋದರ ರಮೇಶ್ ಅವರೇ, ರುದ್ರ ಕಾಲಕ್ಕೆ ಕಥೆ ಬರೆದಿದ್ದಾರೆ. ದಿಗಂತ್ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೇ ತಿಂಗಳಲ್ಲಿ ಬೆಂಗಳೂರಿನಲ್ಲೇ ಶೂಟಿಂಗ್ ಶುರುವಾಗುತ್ತಿದೆ" ಎಂದು ನಿರ್ದೇಶಕ ಗೋಪಿ ಮಾಹಿತಿ ಹಂಚಿಕೊಂಡಿದ್ದಾರೆ.
ದಿಗಂತ್ ಜೊತೆ 'ಅಧ್ಯಕ್ಷ' ಸಿನಿಮಾ ನಾಯಕಿ ಹೆಬಾ ಪಟೇಲ್ ಬಹಳ ವರ್ಷಗಳ ನಂತರ ನಟಿಸುತ್ತಿದ್ದಾರೆ. ಜೊತೆಗೆ ನಟಿ ವಂಶಿ, ನಟ ಗೋವಿಂದೇ ಗೌಡ ಸೇರಿದಂತೆ ಹಲವರು ಇದ್ದಾರೆ. ಇನ್ನು ಟೆಕ್ನಿಕಲ್ ಟೀಮ್ನಲ್ಲಿ ಕ್ರಿಸ್ಟೋಫರ್ ಜೋಸೆಫ್ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. ರುದ್ರ ಮಾಸ್ಟರ್ ಕೊರಿಯೋಗ್ರಫಿ ಹಾಗೂ ಚನ್ನಯ್ಯ ಅವರ ಸಾಹಸ ನಿರ್ದೇಶನವಿದೆ. ಈ ಸಿನಿಮಾವನ್ನು ರಮೇಶ್ ನಾಯ್ಕ ಅವರು ನಿರ್ಮಿಸುತ್ತಿದ್ರೆ, ರಂಜಿತ ನವೀನ್ ಸಹ ನಿರ್ಮಾಪಕರಾಗಿದ್ದಾರೆ.

"ನಾನು ಕಳೆದ ವರ್ಷ ಎರಡು ಹೊಸಚಿತ್ರಗಳನ್ನು ಒಪ್ಪಿಕೊಂಡಿದ್ದೆ. ಚಿತ್ರರಂಗದ ಈಗಿನ ಪರಿಸ್ಥಿತಿ ನೋಡಿ ಅವರು ಇನ್ನೂ ಸಿನಿಮಾ ಆರಂಭ ಮಾಡಿಲ್ಲ. ಆದರೆ. ಈ ಚಿತ್ರದ ನಿರ್ಮಾಪಕ ರಮೇಶ್ ನಾಯ್ಕ ಅವರು "ರುದ್ರ ಕಾಲ" ಚಿತ್ರವನ್ನು ಆರಂಭ ಮಾಡಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಜೊತೆಗೆ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ. ರಮೇಶ್ ಅವರು ಒಳ್ಳೆಯ ಕಥೆ ಬರೆದಿದ್ದಾರೆ. ನಿರ್ದೇಶಕ ಗೋಪಿ ಅವರು ಕಥೆ ಹೇಳುವಾಗಲೇ ನನಗೆ ಕಥೆ ಬಹಳ ಇಷ್ಟವಾಯಿತು. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಯೋಗರಾಜ್ ಭಟ್ ಅವರು ಬಂದು ಚಿತ್ರಕ್ಕೆ ಚಾಲನೆ ನೀಡಿದ್ದು ಬಹಳ ಖುಷಿಯಾಗಿದೆ ಎಂದು ನಾಯಕ ದಿಗಂತ್ ತಿಳಿಸಿದರು.
"ಅಧ್ಯಕ್ಷ ರಿಲೀಸ್ ಆಗಿ ಹತ್ತು ವರ್ಷಗಳ ಬಳಿಕ ನಾನು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಆ ಚಿತ್ರಕ್ಕೆ ಕನ್ನಡಿಗರು ತೋರಿದ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆಯಲಿ" ಎಂದರು ನಾಯಕಿ ಹೆಬಾ ಪಟೇಲ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ "ನಿರ್ದೇಶಕ ಗೋಪಿ ಅವರು ಹೇಳಿದ ಕಥೆ ಇಷ್ಟವಾಯಿತು. ದಿಗಂತ್ ಅವರೆ ಈ ಚಿತ್ರಕ್ಕೆ ಸೂಕ್ತ ಎನಿಸಿತು "ಎಂದು ನಿರ್ಮಾಪಕ ರಮೇಶ್ ನಾಯ್ಕ ಹೇಳಿದ್ದಾರೆ.


Click it and Unblock the Notifications
