ಬೆಂಗಳೂರಿನಲ್ಲಿ ವರ್ಲ್ಡ್ ಪಿಕಲ್ ಬಾಲ್ ಲೀಗ್ ಉದ್ಘಾಟಿಸಿ 'ಕಾಂತಾರ' ಅದ್ಭುತ ಎಂದ ಅಟ್ಲೀ; ಯಶ್-ರಿಷಬ್ಗೆ ಹೇಳಿದ್ದೇನು?
ಬೆಂಗಳೂರಿನಲ್ಲಿ 2025ರ ಪಿಕಲ್ ಬಾಲ್ ಲೀಗ್ ಆರಂಭ ಆಗಿದೆ. ಈ ಸಮಾರಂಭಕ್ಕೆ ಇಂದು (ಅಕ್ಟೋಬರ್ 10) ಬೆಂಗಳೂರಿನ ಪಿಕಲ್ ಬಾಲ್ ಕ್ಲಬ್ನಲ್ಲಿ ಚಾಲನೆ ನೀಡಲಾಯಿತು. ಈ ಲೀಗ್ನಲ್ಲಿ ಕಾಲಿವುಡ್ನ ಸ್ಟಾರ್ ಡೈರೆಕ್ಟರ್ ಅಟ್ಲೀ ಒಡೆತನದ 'ಬೆಂಗಳೂರು ಜವಾನ್ಸ್' ತಂಡ ಭಾಗವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಟ್ಲೀ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ಪಿಕಲ್ ಬಾಲ್ ಲೀಗ್ ಬಗ್ಗೆ, ಬೆಂಗಳೂರು ಜವಾನ್ಸ್ ತಂಡದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಭಾರತದ ಮೊಟ್ಟ ಮೊದಲ ಪಿಕಲ್ಬಾಲ್ ಲೀಗ್ ಕಳೆದ ವರ್ಷ ನಡೆದಿತ್ತು. ಈ ಲೀಗ್ ಅನ್ನು ಕರ್ನಾಟಕ ಸ್ಟೇಟ್ ಪಿಕಲ್ ಬಾಲ್ ಅಸೋಸಿಯೇಷನ್ ಯಶಸ್ವಿಯಾಗಿ ಆಯೋಜನೆ ಮಾಡಿತ್ತು. ಇದೇ ಜೋಷ್ನಲ್ಲಿ ಪಿಕಲ್ಬಾಲ್ ಲೀಗ್ನ ಎರಡನೇ ಆವೃತ್ತಿ ಕೂಡ ಆರಂಭ ಆಗಿದೆ. ಅಕ್ಟೋಬರ್ 10 ರಿಂದ 12ನೇ ತಾರೀಖಿನ ವರೆಗೂ ಈ ರೋಚಕ ಪಿಕಲ್ ಬಾಲ್ ಪಂದ್ಯಾವಳಿಗಳು ಬೆಂಗಳೂರಿನಲ್ಲಿ ನಡೆಯಲಿದೆ.

ತಮಿಳು ಸಿನಿಮಾರಂಗದ ಹೆಸರಾಂತ ನಿರ್ದೇಶಕ ಅಟ್ಲೀ ಕುಮಾರ್. ತಮಿಳಿನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ ಬಳಿಕ ಬಾಲಿವುಡ್ ಕಿಂಗ್ ಶಾರುಖ್ ಖಾನ್ ನಟಿಸಿದ'ಜವಾನ್'ಗೆ ಆಕ್ಷನ್ ಕಟ್ ಹೇಳಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದರು. ಈಗ ಅಟ್ಲಿ ಕುಮಾರ್ ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. 'ಬೆಂಗಳೂರು ಜವಾನ್ಸ್' ತಂಡವನ್ನು ಖರೀದಿ ಮಾಡಿದ್ದಾರೆ. ಈ ವಿಚಾರವಾಗಿ ಬೆಂಗಳೂರಿಗೆ ಆಗಮಿಸಿದ್ದ ಅಟ್ಲೀ ಪಿಕಲ್ ಬಾಲ್ ಲೀಗ್ ಜೊತೆಗೆ 'ಕಾಂತಾರ ಚಾಪ್ಟರ್ 1', ರಿಷಬ್ ಶೆಟ್ಟಿ ಹಾಗೂ ಯಶ್ ಬಗ್ಗೆನೂ ಮಾತಾಡಿದ್ದಾರೆ.
ಪಿಕಲ್ಬಾಲ್ ಲೀಗ್ನ ಮೊದಲ ಆವೃತ್ತಿಯಲ್ಲಿ ಅಟ್ಲೀ ಒಡೆತನದ 'ಬೆಂಗಳೂರು ಜವಾನ್ಸ್' ತಂಡ ಪಿಕಲ್ಬಾಲ್ ಲೀಗ್ನ ಚಾಂಪಿಯನ್ ಆಗಿತ್ತು. ಈ ಜೋಷ್ನಲ್ಲಿ ಇರುವ ಅಟ್ಲೀ ಎರಡನೇ ಆವೃತ್ತಿಯನ್ನು ಗೆಲ್ಲುವ ಉತ್ಸಾಹದಲ್ಲಿ ಇದ್ದಾರೆ. ಹೀಗಾಗಿ ಬೆಂಗಳೂರು ಓಪನ್ 2025 ವರ್ಲ್ಡ್ ಪಿಕಲ್ ಬಾಲ್ ಲೀಗ್ ಅನ್ನು ಉದ್ಘಾಟಿಸಿ, ಪಿಕಲ್ಬಾಲ್ ಪ್ಲೇಯರ್ಗಳ ಜೊತೆ ಸ್ನೇಹಪೂರ್ವಕ ಮ್ಯಾಚ್ ಆಡಿ ಅಟ್ಲೀ ಕುಮಾರ್ ಸಂಭ್ರಮಿಸಿದ್ದಾರೆ.
"ನಾನು RCB ಫ್ಯಾನ್. ಬೆಂಗಳೂರು ತಂಡ ಕಳೆದ ಬಾರಿ ಐಪಿಎಲ್ ಕಪ್ ಗೆದ್ದಿತ್ತು. ಅದರಂತೆ ನಮ್ಮ ತಂಡ ಬೆಂಗಳೂರು ಜವಾನ್ಸ್ ತಂಡ ಕೂಡ ಚಾಂಪಿಯನ್ಸ್ ಆಗಿತ್ತು. ಬೆಂಗಳೂರು ಸಿಟಿ ಅಂದ್ರೆ ನಂಗೆ ತುಂಬಾ ಇಷ್ಟ. ಇಲ್ಲಿನವರೇ ಆದ ಯಶ್, ರಿಷಬ್ ಶೆಟ್ಟಿ ಮುಂತಾದವರ ಜೊತೆಗೆ ನನಗೆ ಉತ್ತಮ ಸ್ನೇಹವಿದೆ. ಎಲ್ಲರೂ ಅದ್ಭುತವಾಗಿ ಕೆಲಸ ಮಾಡ್ತಾ ಇದ್ದಾರೆ." ಎಂದು ಕನ್ನಡದ ನಟರ ಬಗ್ಗೆ ಅಟ್ಲೀ ಮಾತಾಡಿದ್ದಾರೆ.

ಇದೇ ವೇಳೆ 'ಕಾಂತಾರ ಚಾಪ್ಟರ್ 1' ಬಗ್ಗೆನೂ ಅಟ್ಲೀ ಮಾತಾಡಿದ್ದಾರೆ. ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1' ಬಾಕ್ಸಾಫೀಸ್ನಲ್ಲಿ ಮೋಡಿ ಮಾಡುತ್ತಿದೆ. ಇದೂವರೆಗೂ 509 ಕೋಟಿ ರೂಪಾಯಿ ಕಲೆ ಹಾಕಿ ಕನ್ನಡ ಸಿನಿಮಾವೊಂದು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಎಲ್ಲೆಡೆ ಸದ್ದು ಮಾಡುತ್ತಿರುವ ಸಿನಿಮಾ ಬಗ್ಗೆ ಅಟ್ಲೀ "ಕಾಂತಾರ ನಿಜಕ್ಕೂ ಅದ್ಭುತ ಸಿನಿಮಾ. ನಾನು ನೋಡಿ ಬೆರಗಾಗಿದ್ದೇನೆ" ಎಂದು ಹೇಳಿ ಮೆಚ್ಚುಗೆ ಸೂಚಿಸಿದ್ದಾರೆ.
ಹಾಗೇ ರಿಷಬ್ ಶೆಟ್ಟಿ ಹಾಗೂ ಯಶ್ ಸಿನಿಮಾಗಳಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಇದೇ ವೇಳೆ ಅಟ್ಲೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬಗ್ಗೆ ಮಾತಾಡಿದ್ದು ಕೂಡ ಅಚ್ಚರಿ ಮೂಡಿಸಿತ್ತು. ಮೂಲತ: ತಮಿಳುನಾಡಿನವರಾಗಿರುವ ಅಟ್ಲೀಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮೇಲೆ ಅಪಾರ ನಂಬಿಕೆ ಅಂತ ಹೇಳಿಕೊಂಡಿದ್ದಾರೆ. ಆಗಾಗ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
ಶಾರುಖ್ ಖಾನ್ಗೆ ನಿರ್ದೇಶಿಸಿದ 'ಜವಾನ್' ಸಿನಿಮಾ ಬಾಕ್ಸಾಫೀಸ್ನಲ್ಲಿ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಈ ಸಿನಿಮಾ ಮೆಗಾ ಹಿಟ್ ಆದ ಕಾರಣ ತನ್ನ ಪಿಕಲ್ ಬಾಲ್ ತಂಡಕ್ಕೆ 'ಬೆಂಗಳೂರು ಜವಾನ್ಸ್' ಎಂದು ಹೆಸರಿಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಕಳೆದ ಬಾರಿ ಚಾಂಪಿಯನ್ಸ್ ಆಗಿ ಹೊರ ಹೊಮ್ಮಿದ್ದ 'ಬೆಂಗಳೂರು ಜಾವಾನ್ಸ್' ಎರಡನೇ ಆವೃತ್ತಿಯಲ್ಲೂ ಗೆದ್ದು ಬೀಗುತ್ತಾರಾ? ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











