"ಕಬ್ಜ ಬಳಿಕ ನಮಗೆ ಸೆಟ್ ಬ್ಯಾಕ್ ಆಯ್ತು.. ಹಣವನ್ನು ಗೌರವಯುತವಾಗಿ ತಗೋಬೇಕು": ಹಿಂಗ್ಯಾಕೆ ಅಂದ್ರು ಶಿವಣ್ಣ?
ಶಿವರಾಜ್ಕುಮಾರ್ 'ಘೋಸ್ಟ್' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಇದೇ ತಿಂಗಳು (ಅಕ್ಟೋಬರ್) 19ಕ್ಕೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ರಿಲೀಸ್ ಆಗುತ್ತಿದೆ. ಹೀಗಾಗಿ ಸಿನಿಮಾ ರಿಲೀಸ್ ಆಗುವುದಕ್ಕೆ ಒಂದು ವಾರ ಮೊದಲೇ ಭರ್ಜರಿಯಾಗಿ ಪ್ರಚಾರ ಮಾಡುವುದಕ್ಕೆ ಮುಂದಾಗಿದೆ.
ಶಿವಣ್ಣ 'ಘೋಸ್ಟ್'ಗಾಗಿ ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ವೇಳೆ ಸಂದರ್ಶನವೊಂದರಲ್ಲಿ 'ಕಬ್ಜ' ಸಿನಿಮಾದಿಂದ ಕನ್ನಡ ಚಿತ್ರರಂಗಕ್ಕೆ ಹೇಗೆ ಸೆಟ್ಬ್ಯಾಕ್ ಆಯ್ತು ಅನ್ನೋದನ್ನು ವಿವರಿಸಿದ್ದಾರೆ. 'ಜೈಲರ್' ತಂಡ ಏನು ಮಾಡಿತು. ಅದೇ 'ಕಬ್ಜ' ಟೀಮ್ ಏನು ಮಾಡಿದ್ರು ಅನ್ನೋದನ್ನು ಶಿವರಾಜ್ಕುಮಾರ್ ವಿವರಿಸಿದ್ದಾರೆ.

'ಕಬ್ಜ' ಸಿನಿಮಾ ರಿಲೀಸ್ ಆಗಿ ತಿಂಗಳುಗಳೇ ಕಳೆದಿವೆ. ಈಗ 'ಘೋಸ್ಟ್' ರಿಲೀಸ್ ವೇಳೆ ಶಿವಣ್ಣ 'ಕಬ್ಜ' ಸಿನಿಮಾ ಬಗ್ಗೆ ಯಾಕೆ ಮಾತಾಡಿದರು ಅನ್ನೋ ಕುತೂಹಲ ಸಹಜ. 'ಘೋಸ್ಟ್' ಸಿನಿಮಾ ಪರಭಾಷೆಯಲ್ಲಿ ರಿಲೀಸ್ ಮಾಡುವ ಬಗ್ಗೆ ಹೇಳುವಾಗ 'ಕಬ್ಜ' ಸಿನಿಮಾ ಬಗ್ಗೆ ಜನರನ್ನು ಮಿಸ್ ಲೀಡ್ ಮಾಡಿದೆ ಎಂದು ಆರೋಪಿಸಿದ್ದಾರೆ.
ಶಿವಣ್ಣನ ಬಾಯಲ್ಲಿ 'ಕಬ್ಜ' ಮಾತೇಕೆ?
'ಘೋಸ್ಟ್' ಸಿನಿಮಾವನ್ನು ಪೆನ್ ಸ್ಟುಡಿಯೋ ಹಿಂದಿಯಲ್ಲಿ ರಿಲೀಸ್ ಮಾಡುತ್ತಿದೆ. ಈ ಬಗ್ಗೆ ಪ್ರಶ್ನೆ ಬಂದಾಗ, ನಿರ್ದೇಶಕ ಶ್ರೀನಿ ಈ ಶೋ ರೀಲ್ ನಡೆಯೋದಿಲ್ಲ. ಇಡೀ ಸಿನಿಮಾ ನೋಡಿ, ಇದು ಹಿಂದಿ ಆಡಿಯನ್ಸ್ಗೆ ಸೂಟ್ ಆಗುತ್ತೆ ಅಂದ್ಮೇಲೆ ಕೊಂಡುಕೊಂಡಿದ್ದಾರೆ. 'ಕಬ್ಜ' ಸಿನಿಮಾದ ಬಳಿಕ ಪರಭಾಷೆಯಲ್ಲಿ ರಿಲೀಸ್ ಮಾಡುವುದಕ್ಕೆ ಕಷ್ಟ ಆಗುತ್ತಿದೆ ಅನ್ನೋ ಗುಸುಗುಸು ಕೇಳಿಬಂದಿತ್ತು. ಅದಕ್ಕೆ ಪೂರಕವಾಗಿ ಶಿವಣ್ಣ ಕೂಡ ಕಡಕ್ ಸಿನಿಮಾ ಯೂಟ್ಯೂನ್ ಚಾನೆಲ್ ಸಂದರ್ಶನದಲ್ಲಿ ಅದೇ ಮಾತು ಹೇಳಿದ್ದಾರೆ.

"ಕಬ್ಜ ಬಳಿಕ ಸೆಟ್ ಬ್ಯಾಕ್ ಆಯ್ತು"
'ಕಬ್ಜ'ದಲ್ಲಿ ಅತಿಥಿ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರು. ಆದರೂ, ಥಿಯೇಟರ್ ಮುಂದೆ ಕಟೌಟ್ ಅನ್ನು ಕಟ್ಟಲಾಗಿತ್ತು. ಇದು ಜನರನ್ನು ಮಿಸ್ ಲೀಡ್ ಮಾಡುತ್ತೆ ಎಂದು ಶಿವಣ್ಣ ಕಡಕ್ ಸಿನಿಮಾ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ. "ಕಬ್ಜ ಬಳಿಕ ಇದು ಸ್ವಲ್ಪ ಸೆಟ್ ಬ್ಯಾಕ್ ಆಯ್ತು. ಅತಿಥಿ ಪಾತ್ರ ಅನ್ನೋದು ಜೈಲರ್ನಲ್ಲಿ ಎಷ್ಟು ಚೆನ್ನಾಗಿ ಮಾಡಿದ್ದಾರೆ ಅಂದರೆ, ಎಲ್ಲೂ ವೈಭವೀಕರಿಸದೆ ಆ ಎಲಿಮೆಂಟ್ ಅನ್ನೇ ಚೆನ್ನಾಗಿ ತೋರಿಸಿದ್ರು. ಇಲ್ಲಿ ಏನು ಮಾಡಿದ್ರು ಇದನ್ನೇ ಫೋಕಸ್ ಮಾಡಿಕೊಂಡು ಹೋದರು. ಕಷ್ಟ ಆಗಿಬಿಡುತ್ತೆ." ಎಂದು ಶಿವಣ್ಣ ಹೇಳಿದ್ದಾರೆ.
"ಚಂದ್ರು ಬಗ್ಗೆ ಗೌರವವಿದೆ.. ಯೋಚನೆ ಮಾಡ್ಬೇಕಿತ್ತು"
ಹಾಗಂತ ಶಿವಣ್ಣ ಇಲ್ಲಿ ನಿರ್ದೇಶಕ ಆರ್. ಚಂದ್ರು ಅನ್ನು ದೂರುತ್ತಿಲ್ಲ. ಆದರೆ, ಯಾರೋ ಹಣ ಕೊಡುವಾಗ ಗೌರವಯುತವಾಗಿ ತೆಗೆದುಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. "ಚಂದ್ರು ಬಗ್ಗೆ ಏನೂ ಹೇಳುತ್ತಿಲ್ಲ. ಅವರ ಬಗ್ಗೆ ಗೌರವವಿದೆ. ಅವರು ಆ ಬಗ್ಗೆ ಯೋಚನೆ ಮಾಡಬೇಕಿತ್ತು. ಜನರನ್ನು ನಾವು ತುಂಬಾನೇ ಮಿಸ್ ಲೀಡ್ ಮಾಡಲು ಹೋಗಬಾರದು. ಕೊಂಡುಕೊಳ್ಳುವವರ ಹಣಕ್ಕೆ ನಾವು ಗೌರವ ಕೊಡಬೇಕು. ಹಣವನ್ನು ತೆಗೆದುಕೊಳ್ಳುವಾಗ ನಾವು ಗೌರವಯುತವಾಗಿ ತೆಗೆದುಕೊಳ್ಳಬೇಕು. ಬೇಕಿದ್ದರೆ ಕಮ್ಮಿ ತೆಗೆದುಕೊಳ್ಳೋಣ. ನಾನು ಕಠೋರವಾಗಿ ಹೇಳುತ್ತಿಲ್ಲ. ಇಂತಹದ್ದೊಂದು ವಿಚಾರವನ್ನು ಹೇಳುತ್ತಿದ್ದೇನೆ ಅಷ್ಟೇ." ಎಂದು ಶಿವಣ್ಣ ಅಭಿಪ್ರಾಯ ಪಟ್ಟಿದ್ದಾರೆ.
"ಥ್ರಿಲ್ ಇರುತ್ತೆ ಅಂತ ಒಪ್ಪಿಕೊಂಡೆ"
"ನನಗೂ ಗೊತ್ತಿಲ್ಲ. ಈ ಪಾತ್ರ ಹೀಗಿದೆ. ಇದು ಮುಂದಿನ ಪಾರ್ಟ್ಗೆ ಲೀಡ್ ಕೊಡುತ್ತೆ ಎಂದಿದ್ದರು. ನನಗೂ ಒಂದು ಥ್ರಿಲ್ ಇರುತ್ತೆ. ಉಪೇಂದ್ರ, ನಾನು ಸುದೀಪ್ ಮೂವರು ಅಂತ ನಾನು ಮಾಡಿದೆ ಅಷ್ಟೇ. ಸಿನಿಮಾ ರಿಲೀಸ್ ಆದಾಗ ಶೂಟಿಂಗ್ನಲ್ಲಿದ್ದೆ. ಆಗ ಬೆಂಗಳೂರಿಗೆ ಬರುವಾಗ ಅಲ್ಲಿ ಒಂದೇ ಒಂದು ಸೀನ್ ಸಾರ್. ತುಂಬಾನೇ ಎಕ್ಸ್ಪೆಕ್ಟೇಷನ್ ಇಟ್ಟುಕೊಂಡು ಹೋಗಿದ್ದೆ ಸಾರ್ ಎಂದರು. ಪಾರ್ಟ್ 2ನಲ್ಲಿ ಬರುತ್ತೆ ಎಂದೆ. ಇಲ್ಲಾ ಸರ್ ಕಟೌಟ್ ಅಂದರು. ಕಟೌಟ್ ಎಲ್ಲಾ ಹಾಕಿಬಿಟ್ಟಿದ್ದಾರೆ. ಆಗ ನಮಗೂ ಏನಯ್ಯ ಹಿಂಗೆ ಮಾಡಿದ್ರು ಅಂತ ಅನಿಸುತ್ತೆ." ಎಂದು ಶಿವಣ್ಣ ಆ ಘಳಿಗೆ ನೆನೆದು ಬೇಸರ ಪಟ್ಟುಕೊಂಡಿದ್ದಾರೆ.


Click it and Unblock the Notifications











