'ಕೊರಗಜ್ಜ' ಸಿನಿಮಾದಲ್ಲಿ ಸಾವಿರ ಕೋಳಿ, ಸಾವಿರ ಕುದುರೆಯ ರಕ್ತ ಹೀರಿದ 'ಗುಳಿಗ'ನ ಘೋರ ದರ್ಶನ
'ಕಾಂತಾರ' ಬಳಿಕ ವಿಶ್ವಕ್ಕೆ ತುಳುನಾಡಿನ ದೈವಗಳ ಪರಿಚಯ ಆಗಿದೆ. ಅದರಲ್ಲೂ ಗುಳಿಗ ಹಾಗೂ ಪಂಜುರ್ಲಿ ದೈವದ ಬಗ್ಗೆ ಈಗಾಗಲೇ ಸಿನಿಮಾದಲ್ಲಿ ತಿಳಿದುಕೊಂಡಿದ್ದಾರೆ. ಈಗ ಮತ್ತೊಂದು ದೈವದ ಕುರಿತ ಸಿನಿಮಾ ಬಿಡುಗಡೆ ಸಜ್ಜಾಗಿದೆ. ಅದುವೇ 'ಕೊರಗಜ್ಜ'. ಮಂಗಳೂರು ಹಾಗೂ ಸುತ್ತಮುತ್ತಲಿನ ಜನರ ಅಪಾರವಾಗಿ ನಂಬುವ 'ಕೊರಗಜ್ಜನ' ಪವಾಡ ಹಾಗೂ ಹಿನ್ನೆಲೆಯನ್ನು ತೆರೆಮೇಲೆ ತರಲಾಗುತ್ತಿದೆ.
ಕಳೆದ ಎರಡು-ಮೂರು ವರ್ಷಗಳಿಂದ 'ಕೊರಗಜ್ಜನ' ಕುರಿತ ಸಿನಿಮಾದ ನಿರ್ಮಾಣ ಆಗುತ್ತಿತ್ತು. ಕೊನೆಗೂ ಈ ಸಿನಿಮಾ ಪೂರ್ಣಗೊಂಡಿದೆ. ಸುಧೀರ್ ಅತ್ತಾವರ್ ನಿರ್ದೇಶಿಸಿರುವ ಈ ಸಿನಿಮಾ ಈಗ ಭರ್ಜರಿಯಾಗಿ ಪ್ರಚಾರವನ್ನು ಆರಂಭಿಸಿದೆ. ಸಿನಿಮಾದ ಒಂದೊಂದೇ ಹಾಡುಗಳನ್ನು ರಿಲೀಸ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದೆ.

'ಕೊರಗಜ್ಜ' ಸಿನಿಮಾದ ಹಾಡುಗಳನ್ನು ಜೀ಼ ಮ್ಯೂಜಿಕ್ ಖರೀದಿ ಮಾಡಿದೆ. ಇಂದಿನಿಂದ (ನವೆಂಬರ್ 21) ಈ ಸಿನಿಮಾದ ಒಂದೊಂದು ಹಾಡುಗಳನ್ನು ರಿಲೀಸ್ ಮಾಡುತ್ತಿದೆ. ಸದ್ಯ ಮೊದಲ ಹಾಡು "ಗುಳಿಗ.,.ಗುಳಿಗ...ಗುಳಿಗ...ಗುಳಿಗ...ಗುಳಿಗ...ಗುಳಿಗ...ಘೋರ ಗುಳಿಗಾ.!" ರಿಲೀಸ್ ಆಗಿದೆ. 'ಕೊರಗಜ್ಜ' ಸಿನಿಮಾದ ಈ ಹಾಡು ಕರಾವಳಿಯ ಉಗ್ರಭಯಂಕರ, ರಕ್ತದಾಹದ ದೈವ ಬಗ್ಗೆ ಹೇಳಲಾಗಿದ್ದು, ಈ ಗೀತೆಯನ್ನು ಸಾಹಿತಿ-ನಿರ್ದೇಶಕ ಸುಧೀರ್ ಅತ್ತಾವರ್ ಅವರೇ ಬರೆದಿದ್ದಾರೆ.
ಈ ಸಿನಿಮಾದ ಹಾಡುಗಳನ್ನು ದಕ್ಷಿಣ ಭಾರತದ ಖ್ಯಾತ ಸಂಗೀತಗಾರ ಗೋಪಿಸುಂದರ್ ಕಂಪೋಸ್ ಮಾಡಿದ್ದಾರೆ. ಬಾಲಿವುಡ್ನ ಜನಪ್ರಿಯ ಗಾಯಕ ಜಾವೆದ್ ಆಲಿ ಧ್ವನಿ ನೀಡಿದ್ದಾರೆ. ಇವರೊಂದಿಗೆ ನಿರ್ದೇಶಕ ಹಾಗೂ ಸಾಹಿತಿ ಸುಧೀರ್ ಅತ್ತಾವರ್, ಕೆಲವೆಡೆ ಗೋಪಿ ಸುಂದರ್ ಕೂಡ ಹಾಡಿರೋದು ವಿಶೇಷ.
ಗುಳಿಗ ಯಾರು? ಗುಳಿಗನ ಶಕ್ತಿ ಎಂತಹದ್ದು? ಎನ್ನುವುದಕ್ಕೆ ತುಳುನಾಡಿನಲ್ಲೊಂದು ನಂಬಿಕೆಯಿದೆ. ನೆಲವುಲ್ಲ ಸಂಕೆಯ 24 ನೆಯ ಮಗನಾಗಿ ಹುಟ್ಟಿದ 'ಗುಳಿಗ' ಹುಟ್ಟುವಾಗಲೇ ಭಯಂಕರ ಹಸಿವು. ಹೀಗಾಗಿ ಸಾವಿರ ಕೋಳಿ, ಸಾವಿರ ಕುದುರೆಯ ರಕ್ತ ಹೀರಿದರೂ ಹಸಿವು ನಿಲ್ಲದಿದ್ದಾಗ, ಶ್ರೀಮನ್ನಾರಾಯಣನ ಕಿರುಬೆರಳಿನಿಂದ ಅವರ ರಕ್ತವನ್ನೆಲ್ಲ ಹೀರಿದ ಎನ್ನುವ ಜನಪದ ಕಥೆ ಗುಳಿಗನ ಹುಟ್ಟಿನ ಬಗ್ಗೆ ಇದೆ. ಇಂತಹ ಘೋರ ಗುಳಿಗನ ಕೋಲ ಸೇವೆಯೂ ಘನ ಘೋರ ರೂಪದಲ್ಲಿ ತುಳುನಾಡಿನಾದ್ಯಂದ ಆಚರಿಸಲಾಗುತ್ತೆ. ಕೋಲಾದಲ್ಲಿ ಗುಳಿಗ ರಕ್ತ ಹೀರುವ ರುದ್ರ ನರ್ತನವನ್ನು ನೋಡಲಾಗದೆ ಭಯ ಭೀತಿಯಿಂದ ಅನೇಕರು ಕಣ್ಣು ಮುಚ್ಚಿಕೊಳ್ಳುತ್ತಾರೆ. ರಕ್ತ ದಾಹದಿಂದ ಎಲ್ಲೆಂದೆಲ್ಲಿ ಓಡುವ ಗುಳಿಗನನ್ನು ಹಿಡಿಯಲು ಹರಸಾಹಸ ಮಾಡುವ ದ್ರಶ್ಯ ಮೈ ಝುಂ ಎನಿಸುತ್ತದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ರುದ್ರಭಯಂಕರ ಗುಳಿಗ ದೈವ ಪಂಜುರ್ಲಿ ಜೊತೆ ಸೇರಿ 'ಕೊರಗಜ್ಜ'ನನ್ನು ಭೇಟಿಯಾಗುವ ಸನ್ನಿವೇಶ ಈ ಸಿನಿಮಾದಲ್ಲಿದೆ. ಹೀಗಾಗಿ ಕರಾವಳಿ ಭಾಗದ ಮತ್ತೊಂದು ದೈವದ ಮಹಿಮೆ ತೆರೆಮೇಲೆ ಮೂಡಿ ಬರಲಿದೆ. ಗುಳಿಗ ದೈವದ ಘೋರ ನರ್ತನವನ್ನು ಹಾಲಿವುಡ್ ಹಾಗೂ ಬಾಲಿವುಡ್ನ ಡಾನ್ಸರ್-ಕೊರಿಯೋಗ್ರಾಫರ್ ಸಂದೀಪ್ ಸೋಪರ್ಕರ್ ಕಂಪೋಸ್ ಮಾಡಿದ್ದಾರೆ. ಪಂಜುರ್ಲಿಯಾಗಿ ಸರ್ದಾರ್ ಸತ್ಯ ಅಭಿನಯಿಸಿರೋದು ವಿಶೇಷ.
ಈ ಹಾಡಿನ ಚಿತ್ರೀಕರಣ ನಡೆಯುವಾಗ ಸಾಕಷ್ಟು ಅಡೆ-ತಡೆಗಳಾಗಿದ್ದವು. ಮಂಗಳೂರಿನ ಸೋಮೇಶ್ವರ ಕಡಲಕಿನಾರೆಯಲ್ಲಿ ನೂರು ಫೀಟ್ನ ಎರಡು ಕ್ರೇನ್ಗಳ ಮೂಲಕ 5 ಕ್ಯಾಮರಗಳನ್ನಿಟ್ಟು ಚಿತ್ರೀಕರಣ ಮಾಡುತ್ತಿತ್ತು. ಆ ವೇಳೆ ರೌಡಿಗಳ ಗ್ಯಾಂಗ್ ಎರಡು ದಿನ ದಾಳಿ ಮಾಡಿತ್ತಂತೆ. ಇದರಿಂದ ಚಿತ್ರತಂಡಕ್ಕೆ ಸಿಕ್ಕಾಪಟ್ಟೆ ನಷ್ಟ ಆಗಿತ್ತು. ಹೀಗಾಗಿ ನಿರ್ಮಾಪಕರು 25 ಮಂದಿ ಬೌನ್ಸರ್ಗಳನ್ನು ಕರೆದುಕೊಂಡು ಬಂದಿದ್ದರು. ಆದರೆ ಅವರಿಗೂ ಬೆದರಿಕೆಯ ಕರೆ ಬಂದಿದ್ದರಿಂದ ಬೌನ್ಸರ್ಗಳು ಓಡಿಹೋಗಿದ್ದರು ಎನ್ನುತ್ತ ತಂಡ.
ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ರೌಡಿಗಳ ಮನ ಒಲಿಸುವ ಪ್ರಯತ್ನ ಮಾಡಿದರೂ, ರೌಡಿಗಳು ಕೇಳದೆ ಶೂಟಿಂಗ್ ಅನ್ನೇ ಸ್ಥಗಿತಗೊಳಿಸಿದ್ದರು. ಆಗಲೇ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಪೋಲೀಸರ ಸರ್ಪಗಾವಲಿನಲ್ಲಿ ಮೂರನೇ ಬಾರಿ ಮತ್ತೆ ಅದೇ ಸೋಮೇಶ್ವರ ಕಡಲ ಕಿನಾರೆಯಲ್ಲಿ ಗುಳಿಗ ಹಾಡಿನ ಶೂಟಿಂಗ್ ಮಾಡಿ ಮುಗಿಸಿದ್ದರು. ಈಗ ಅದೇ ಹಾಡುಗಳು ಜೀ ಮ್ಯೂಸಿಕ್ನಲ್ಲಿ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಆಗಿದೆ.


Click it and Unblock the Notifications











