"ರಾಮನೂ ಸಹ ಸೀತೆಯ ವರ್ಣನೆಯಲ್ಲಿ ಸೋಲ್ತಿದ್ನೋ ಏನೋ?"; 'ಬೃಂದಾವಿಹಾರಿ' ಸಾಹಿತ್ಯಕ್ಕೆ ಮನಸೋತ ಕನ್ನಡಿಗರು
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ್ ರಾಜು ಅವರ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಹಾಡು ಬಾರೀ ಜನಪ್ರಿಯತೆ ಗಳಿಸಿತ್ತು. ಈ ಹಾಡಿನ ಹಿಟ್ ಆದಂತೆ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಈಗ ಅದೇ ಜೋಡಿ ಮತ್ತೊಂದು ಸಿನಿಮಾದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಅದುವೇ 'ಬೃಂದಾವಿಹಾರಿ'. ಈ ಬಾರಿ ಕೂಡ ಹಾಡಿನ ಮೂಲಕವೇ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತಲುಪಿಸುವುದಕ್ಕೆ ಮುಂದಾಗಿದೆ.
'ಬೃಂದಾವಿಹಾರಿ' ಕೂಡ 'ಕೃಷ್ಣಂ ಪ್ರಣಯ ಸಖಿ'ಯಂತೆಯೇ ಫ್ಯಾಮಿಲಿ ಓರಿಯೆಂಟೆಡ್ ಸಿನಿಮಾ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ನಾಳೆ (ಮಾರ್ಚ್ 26) ರಾಮ ನವಮಿ ಇರುವ ಹಿನ್ನೆಲೆಯಲ್ಲಿ ಈ ಸಿನಿಮಾದ "ರಾಮ ರಾಮ ದೇವ..." ಎನ್ನುವ ಹಾಡನ್ನು ರಿಲೀಸ್ ಮಾಡಲಾಗಿದೆ. ಗೋಲ್ಡನ್ ಗಣೇಶ್ ಹೆಜ್ಜೆ ಹಾಕಿರುವ ಈ ಹಾಡು ಈಗಾಗಲೇ ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಶ್ರೀನಿವಾಸ್ ರಾಜು ಜೋಡಿ ಮತ್ತೊಂದು ಕನ್ನಡಿಗರನ್ನು ಮೋಡಿ ಮಾಡೋದು ಗ್ಯಾರಂಟಿ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. 'ಬೃಂದಾವಿಹಾರಿ'ಯ ಹಾಡು ಲಿರಿಕಲ್ ಆಗಿದ್ದರೂ, ಮಧ್ಯದಲ್ಲಿ ಹಾಡಿನ ದೃಶ್ಯದ ತುಣುಕುಗಳನ್ನು ರಿವೀಲ್ ಮಾಡಲಾಗಿದೆ. ಇದು ಕನ್ನಡಿಗರಿಗೆ ತುಂಬಾನೇ ಇಷ್ಟ ಆಗಿದ್ದು, ಸಂಗೀತ, ಸಾಹಿತ್ಯ ಸೇರಿದಂತೆ ಹಾಡಿನ ಬಗ್ಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗಣೇಶ್ ನಟನೆಯ 'ಬೃಂದಾವಿಹಾರಿ' ಹಾಡಿನ ವಿಶೇಷತೆ ಬಗ್ಗೆ ಇಲ್ಲಿದೆ ಡಿಟೈಲ್ಸ್.
'ಬೃಂದಾವಿಹಾರಿ' ಸಿನಿಮಾ ಟೈಟಲ್ ನೋಡಿದ ಕೂಡಲೇ ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಅಂತ ಹೇಳಿಬಿಡುಬಹುದು. ಇನ್ನು ಅದ್ಧೂರಿಯಾಗಿರುವ ಈ ಹಾಡು ನೋಡಿದ ಬಳಿಕ 'ಬೃಂದಾವಿಹಾರಿ' ಟೈಟಲ್ ಸೂಕ್ತವಾಗಿದೆ ಅಂತಲೂ ಅನಿಸಬಹುದು. ಇದೇ ಜೋಡಿ 'ಕೃಷ್ಣಂ ಪ್ರಣಯ ಸಖಿ' ಬಳಿಕ ಒಟ್ಟಿಗೆ ಕೆಲಸ ಮಾಡಿರುವ ಸಿನಿಮಾ 'ಬೃಂದಾವಿಹಾರಿ' ಆಗಿದ್ದರಿಂದ ಹಾಡುಗಳ ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆಯಿತ್ತು. ಅದಕ್ಕೆ ತಕ್ಕಂತೆ ಮೊದಲ ಹಾಡು "ರಾಮ ರಾಮ ದೇವ" ಕ್ಲಿಕ್ ಆಗಿದೆ.
ಸೂಪರ್ ಹಿಟ್ ಮೆಲೋಡಿ ಹಾಡುಗಳನ್ನು ನೀಡಿರುವ ಮಲಯಾಳಂನ ಹೆಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾ ಆರಂಭದಲ್ಲಿಯೂ ಅವರೇ ಒಂದೆರಡು ಸಾಲುಗಳನ್ನು ಹಾಡಿದ್ದಾರೆ. ಈಗಾಗಲೇ ದಕ್ಷಿಣ ಭಾರತದ ಬಹುತೇಕ ಎಲ್ಲಾ ಪ್ರಮುಖ ಭಾಷೆಯ ಸಿನಿಮಾಗಳಿಗೆ ಮ್ಯೂಸಿಕ್ ನೀಡಿರುವ ಹೆಶಮ್ ಅಬ್ದುಲ್ ವಹಾಬ್ ಈಗ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. 'ಬೃಂದಾವಿಹಾರಿ' ಮೂಲಕ ಮೊದಲ ಹಾಡಿನಲ್ಲಿಯೇ ಗಮನ ಸೆಳೆದಿದ್ದಾರೆ.

'ಬೃಂದಾವಿಹಾರಿ' ಸಿನಿಮಾದ "ರಾಮ ರಾಮ ದೇವ.." ಹಾಡಿಗೆ ಡಾ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಈ ಹಿಂದೆ 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ "ದ್ವಾಪರಾ.."ಗೆ ಸಾಹಿತ್ಯ ರಚಿಸಿದ್ದ ನಾಗೇಂದ್ರ ಪ್ರಸಾದ್ ಈಗ ಮತ್ತೊಂದು ಸೂಪರ್ ಹಿಟ್ ಸಾಂಗ್ ರಚಿಸಿದ್ದಾರೆ. ಈಗಾಗಲೇ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. "ಬಹುಶ: ರಾಮನು ಸಹ ಸೀತೆಯ ವರ್ಣನೆಯಲ್ಲಿ ಸೋಲುತ್ತಿದ್ದನೇನೋ, ಅಷ್ಟು ಚೆನ್ನಾಗಿ ನಾಗೇಂದ್ರ ಪ್ರಸಾದ್ ಅವರು ಸೀತೆಯನ್ನು ವರ್ಣಿಸಿದ್ದಾರೆ." ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಸೂಪರ್ ಸಾಹಿತ್ಯ ನಾಗೇಂದ್ರ ಪ್ರಸಾದ್ ಸರ್.. ವೆಲ್ಕಮ್ ಮ್ಯೂಸಿಕ್ ಡೈರೆಕ್ಟರ್.. ಶ್ರೀನಿವಾಸ್ ಸರ್, ಗಣಿ ಸರ್, ಶೇಖರ್ ಮಾಸ್ಟರ್" ಎಂದು ಇನ್ನೊಬ್ಬರು ಹೊಗಳಿದ್ದಾರೆ.
'ಬೃಂದಾವಿಹಾರಿ' ಸಿನಿಮಾದ ಮೊದಲ ಹಾಡು ಕನ್ನಡಿಗರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಇದೇ ಗುಂಗಿನಲ್ಲಿ ಕನ್ನಡಿಗರು ಸಿನಿಮಾವನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಇನ್ನು 2025ರಲ್ಲಿ ಸದ್ದಿಲ್ಲದೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶ್ರೀನಿವಾಸ್ ರಾಜು ಇಬ್ಬರೂ ಹೊಸ ಸಿನಿಮಾಗೆ ಕೈ ಹಾಕಿದ್ದರು. ಆದರೆ, ಟೈಟಲ್ ರಿವೀಲ್ ಮಾಡಿರಲಿಲ್ಲ. ಯುಗಾದಿ ಹಬ್ಬದ ಈ ಶುಭ ಸಂದರ್ಭದಲ್ಲಿ ಸಿನಿಮಾ ಟೈಟಲ್ ರಿವೀಲ್ ಮಾಡಿ, ಸಿನಿಮಾದ ಪ್ರಚಾರವನ್ನು ಆರಂಭಿಸಿದ್ದರು. ಗಣೇಶ್ ಹಾಗೂ ಶ್ರೀನಿವಾಸ್ ರಾಜು ಕಾಂಬಿನೇಷನ್ ಸಿನಿಮಾ 'ಬೃಂದಾವಿಹಾರಿ'ಯನ್ನು ಸಮೃದ್ಧಿ ವಿ ಮಂಜುನಾಥ್ ನಿರ್ಮಾಣ ಮಾಡುತ್ತಿದ್ದಾರೆ.


Click it and Unblock the Notifications















