ಸಕ್ರೆಬೈಲಿನಲ್ಲಿ 'ಪುನೀತ್' ಕಂಡು ಅಪ್ಪು ನೆನೆಯುತ್ತಿರುವ ಸಾವಿರಾರು ಪ್ರವಾಸಿಗರು
ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಲ್ಲಿ ಇತ್ತೀಚೆಗೆ ಮರಿ ಆನೆಯೊಂದಕ್ಕೆ ನಟ ಪುನೀತ್ ರಾಜಕುಮಾರ್ ಹೆಸರಿಟ್ಟು ನಾಮಕರಣ ಮಾಡಲಾಗಿತ್ತು. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆಯ ನೋವಿನಲ್ಲಿಯೇ ಆನೆ ಮರಿಗೆ 'ಪುನೀತ್' ಅರಣ್ಯ ಇಲಾಖೆ ಅಧಿಕಾರಿಗಳು ನಾಮಕರಣ ಮಾಡಿದ್ದರು. ಅಪ್ಪು ಹೆಸರನ್ನು ಮರಿ ಆನೆಗೆ ಇಡುತ್ತಿದ್ದಂತೆ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ರಾಜ್ಯದ ಮೂಲೆ ಮೂಲೆಯಿಂದ ಪುನೀತ್ ನೋಡಲು ಆಗಮಿಸುತ್ತಿದ್ದಾರೆ.
ಸಕ್ರೆಬೈಲು ಆನೆ ಬಿಡಾರದಲ್ಲಿರುವ ಎರಡೂವರೆ ವರ್ಷದ ಆನೆ ಮರಿಗೆ ಪುನೀತ್ ಪ್ರವಾಸಿಗರ ಪಾಲಿಗೆ ಸ್ಟಾರ್ ಆಗಿದೆ. ಸದ್ಯ ತಾಯಿ ಆನೆ ನೇತ್ರಾವತಿಯಿಂದ ವೀನಿಂಗ್ ಪ್ರಕ್ರಿಯೆಗಾಗಿ ಮರಿ ಆನೆ ಪುನೀತ್ ಅನ್ನು ಬೇರ್ಪಡಿಸಲಾಗಿದೆ. ಮರಿ ಆನೆ ಪುನೀತ್, ಸ್ವತಂತ್ರವಾಗಿ ಬದುಕಬೇಕಿರುವುದರಿಂದ ತಾಯಿಯಿಂದ ಬೇರ್ಪಡಿಸಲಾಗಿದ್ದು, ಬಿಡಾರದಲ್ಲೇ ಆರೈಕೆ ನಡೆಯುತ್ತಿದೆ. ಈ ವೇಳೆ ಅಪ್ಪು ಮುದ್ದಾಡಿದ್ದ ಈ ಆನೆಯನ್ನು ನೋಡಲು ಪ್ರವಾಸಿಗರು ದಂಡೋಪಾದಿಯಾಗಿ ಬರುತ್ತಿದ್ದಾರೆ.

'ಪುನೀತ್' ನೋಡಲು ಪ್ರವಾಸಿಗರ ದಂಡು
ಸಕ್ರೆಬೈಲು ಆನೆ ಬಿಡಾರಕ್ಕೆ ಸಾಮಾನ್ಯ ದಿನಗಳಲ್ಲಿ 100 ರಿಂದ 200 ಮಂದಿ ಬರುತ್ತಿದ್ದರು. ಆದರೆ, ಆನೆ ಮರಿಗೆ ಪುನೀತ್ ಹೆಸರು ನಾಮಕರಣ ಮಾಡಿದ್ದಲ್ಲಿಂದ ಪ್ರತಿ ದಿನ 5 ಸಾವಿರ ಮಂದಿ ಭೇಟಿ ನೀಡುತ್ತಿದ್ದಾರೆ. ಸಕ್ರೆಬೈಲು ಆನೆ ಬಿಡಾರಕ್ಕೆ ಈ ಹಿಂದೆ ವೀಕೆಂಡ್ನಲ್ಲೇ 2 ಸಾವಿರ ಮಂದಿ ಪ್ರವಾಸಿಗರು ಬಂದು ಹೋಗುತ್ತಿದ್ದರು. ಆದ್ರೀಗ, ಆನೆ ಮರಿ ಪುನೀತ್ ನೋಡಲು ಪ್ರವಾಸಿಗರು ದಂಡೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಮರಿ ಆನೆ ಪುನೀತ್ ಜೊತೆ ಸೆಲ್ಫಿ ತೆಗೆಸಿಕೊಂಡು ಅಪ್ಪು ನೆನಪು ಮಾಡಿಕೊಳ್ಳುತ್ತಿದ್ದಾರೆ.

'ಪುನೀತ್' ನೋಡಲು ಶಿವಣ್ಣ ಆಗಮಿಸುವ ಸಾಧ್ಯತೆ
ಸಕ್ರೆಬೈಲ್ ಆನೆ ಬಿಡಾರದಲ್ಲಿರುವ ಮರಿ ಆನೆ ಪುನೀತ್ ನೋಡಲು ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಆಗಮಿಸುವ ಸಾಧ್ಯತೆಯಿದೆ. ಅರಣ್ಯ ಇಲಾಖೆಯ ಅಧಿಕೃತ ಮೂಲಗಳಿಂದ ಈ ವಿಷಯ ತಿಳಿದು ಬಂದಿದ್ದು, ಶಿವಣ್ಣನೊಂದಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕೂಡ ಆಗಮಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಪ್ಪು ನೆನಪು ಸಕ್ರೆಬೈಲು ಆನೆ ಬಿಡಾರದಲ್ಲಿರುವುದರಿಂದ ಈ ತಾಣದತ್ತ ಎಲ್ಲರೂ ಆಕರ್ಷಿತರಾಗುತ್ತಿದ್ದಾರೆ.

ಡಾಕ್ಯೂಮೆಂಟರಿ ಚಿತ್ರೀಕರಣಕ್ಕೆ ಬಂದಿದ್ದ ಅಪ್ಪು
'ಈ ಹಿಂದೆ ಡಾಕ್ಯೂಮೆಂಟರಿ ಒಂದರ ಚಿತ್ರೀಕರಣಕ್ಕಾಗಿ ನಟ ಪುನೀತ್ ರಾಜಕುಮಾರ್ ಅವರು ಸಕ್ರೆಬೈಲು ಬಿಡಾರಕ್ಕೆ ಭೇಟಿ ನೀಡಿದ್ದರು. ಆ ವೇಳೆ ಇದೇ ಬಿಡಾರದಲ್ಲಿದ್ದ ನೇತ್ರಾವತಿಯ ಮರಿ ಜೊತೆಗೆ ನಟ ಪುನೀತ್ ರಾಜ್ಕುಮಾರ್ ಕೆಲವು ಹೊತ್ತು ಕಾಲ ಕಳೆದಿದ್ದರು. ಅದರ ಮೈದಡವಿ ಮುದ್ದಾಡಿದ್ದರು. ಹೀಗಾಗಿ ಪುನೀತ್ ಅವರ ನೆನಪಿಗಾಗಿ ಮರಿ ಆನೆಗೆ ಅಪ್ಪು ಹೆಸರನ್ನು ಇಡಲಾಗಿದೆ. ಅಲ್ಲದೆ ಪುನೀತ್ ರಾಜಕುಮಾರ್ ಸಕ್ರೆಬೈಲು ಬಿಡಾರಕ್ಕೆ ಬಂದು ಹೋದ್ಮೇಲೆ ಎಲ್ಲರೂ ಅದನ್ನು ಅಪ್ಪು ಎಂದೇ ಕರೆಯುತ್ತಿದ್ದರು. ಹಾಗಾಗಿ ಮರಿ ಆನೆಗೆ ಪುನೀತ್ ಎಂದೇ ನಾಮಕರಣ ಮಾಡಲಾಗಿದೆ.

ಪುನೀತ್ನಲ್ಲೇ ಅಪ್ಪು ಕಾಣುತ್ತಿದ್ದಾರೆ ಫ್ಯಾನ್ಸ್
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿಕೆಯಿಂದ ನೋವಿನಲ್ಲಿ ಮುಳುಗಿ ಹೋಗಿರುವ ಅಭಿಮಾನಿಗಳು ಮರಿ ಆನೆಯಲ್ಲೇ ಪುನೀತ್ ಕಾಣುತ್ತಿದ್ದಾರೆ. ಮರಿ ಆನೆ ಪುನೀತ್ ನೋಡಿ ತಮ್ಮ ನೆಚ್ಚಿನ ನಟನನ್ನು ನೋಡಿದಷ್ಟೇ ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೂ ಮರಿ ಆನೆ ಕೂಡ ಸೌಮ್ಯ ಸ್ವಭಾವದ್ದಾಗಿದೆ. ಪುನೀತ್ ವೀನಿಂಗ್ ಪ್ರಕ್ರಿಯೆ ಆದ ಕೆಲವೇ ಹೊತ್ತಲ್ಲಿ ಬೇರೆಯ ಆನೆಯೊಂದಿಗೆ ಬೆರೆಯುತ್ತಿದ್ದು, ಸೌಮ್ಯ ಸ್ವಭಾವ ತೋರುತ್ತಿದೆ.


Click it and Unblock the Notifications











