ರಜನಿಕಾಂತ್ ನಂತರ ಕಮಲ್ ಹಾಸನ್ ಗೂ ಕಾದಿದ್ಯಾ ಸಂಕಷ್ಟ.?
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರಕ್ಕೆ ಕರ್ನಾಟಕದಲ್ಲಿ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ 'ಕಾಲಾ' ಚಿತ್ರ ಪ್ರದರ್ಶನ ಕಂಡರೂ, ಕರ್ನಾಟದಿಂದ ನಿರೀಕ್ಷಿತ ಆದಾಯ ಬಂದಿಲ್ಲ ಎನ್ನುವುದು ವಾಸ್ತವ.
ಇದೀಗ, 'ಕಾಲಾ' ನಂತರ ಮತ್ತೊಂದು ತಮಿಳು ಸಿನಿಮಾ ಕರ್ನಾಟಕದವರ ವಿರೋಧಕ್ಕೆ ಕಾರಣವಾಗಲಿದೆ. ಅದು ತಮಿಳು ನಟ ಕಮಲ್ ಹಾಸನ್ ಸಿನಿಮಾ.
ಹೌದು, ಕಾವೇರಿ ವಿಚಾರಕ್ಕೆ ಸಂಬಂಧಪಟ್ಟಂತೆ ಕರ್ನಾಟಕದ ವಿರುದ್ಧ ಹೇಳಿಕೆ ನೀಡಿದ್ದ ರಜನಿ ಮತ್ತು ಕಮಲ್ ಸಿನಿಮಾಗಳನ್ನ ಕರ್ನಾಟಕದಲ್ಲಿ ಬ್ಯಾನ್ ಮಾಡುವುದಾಗಿ ಕನ್ನಡ ಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದರು. ಅದರಂತೆ 'ಕಾಲಾ' ಚಿತ್ರಕ್ಕೆ ವಿರೋಧ ಸೂಚಿಸಿದ್ದರು. ಇದೀಗ, ಕಮಲ್ ಹಾಸನ್ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈಗ ಈ ಚಿತ್ರಕ್ಕೂ ಕರ್ನಾಟಕದಲ್ಲಿ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತಿದೆ. ಮುಂದೆ ಓದಿ......

ಬಿಡುಗಡೆಗೆ ಸಿದ್ಧವಾದ 'ವಿಶ್ವರೂಪಂ 2'
ಕಮಲ್ ಹಾಸನ್ ನಿರ್ದೇಶಿಸಿ ಮತ್ತು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ವಿಶ್ವರೂಪಂ 2' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸುಮಾರು ಮೂರ್ನಾಲ್ಕು ವರ್ಷಗಳಿಂದ ತಯಾರಾಗುತ್ತಿರುವ ಈ ಚಿತ್ರ ಕೊನೆಗೂ ಇದೇ ವರ್ಷ ತೆರೆಕಾಣಲಿದೆ.

ಇಂದು ಟ್ರೈಲರ್ ರಿಲೀಸ್
ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 'ವಿಶ್ವರೂಪಂ 2' ಸಿನಿಮಾ ಸಿದ್ಧವಾಗಿದ್ದು, ಇಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಹಿಂದಿಯಲ್ಲಿ ಅಮೀರ್ ಖಾನ್ ಮತ್ತು ತೆಲುಗು ತಮಿಳಿನಲ್ಲಿ ಶ್ರುತಿ ಹಾಸನ್-ಎನ್.ಟಿ.ಆರ್ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.

ಸ್ವಾತಂತ್ಯ ದಿನಾಚರಣೆಯಂದು ಸಿನಿಮಾ ಬಿಡುಗಡೆ
ಈಗಾಗಲೇ ಸೆನ್ಸಾರ್ ಮುಗಿಸಿರುವ ಚಿತ್ರ, ಯು/ಎ ಪ್ರಮಾಣಪತ್ರ ಪಡೆದುಕೊಂಡಿದೆ. ಎಲ್ಲ ಎಂದುಕೊಂಡಂತೆ ಆದ್ರೆ, ಆಗಸ್ಟ್ ತಿಂಗಳಲ್ಲಿ, ಸ್ವಾತಂತ್ಯ ದಿನಾಚರಣೆಯ ವಿಶೇಷವಾಗಿ ಆಗಸ್ಟ್ 10 ರಂದು ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಏನಾಗಲಿದೆ 'ವಿಶ್ವರೂಪಂ 2'
ಸದ್ಯ ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರಕ್ಕೆ ಕರ್ನಾಟದಲ್ಲಿ ದೊಡ್ಡ ಮಟ್ಟದ ಹಿನ್ನಡೆಯಾಗಿತ್ತು. ಇದನ್ನ ಗಮನಿಸಿದ್ರೆ ಕಮಲ್ ಹಾಸನ್ ಚಿತ್ರಕ್ಕೂ ಇದೇ ಸ್ಥಿತಿ ಎದುರಾಗಬಹುದು ಎನ್ನಲಾಗುತ್ತಿದೆ. ಸದ್ಯ, ಟ್ರೈಲರ್ ಮಾತ್ರ ರಿಲೀಸ್ ಆಗುತ್ತಿದೆ, ಸಿನಿಮಾ ರಿಲೀಸ್ ವೇಳೆಗೆ ಕಮಲ್ ಹಾಸನ್ ಅವರ ಹೇಳಿಕೆಗಳು ಹೇಗಿರುತ್ತೆ ಎಂಬುದು ಕೂಡ ಕಾದುನೋಡಬೇಕಿದೆ.


Click it and Unblock the Notifications











