Rakshit Shetty: " ರಿಚರ್ಡ್ ಆಂಟೋನಿ ಬಂದ್ಮೇಲೆ ಇವನು ಏನು ಮಾಡಿದ್ದಾನೆ ಅಂತ ಹಿಂತಿರುಗಿ ನೋಡ್ತಾರೆ" - ರಕ್ಷಿತ್ ಶೆಟ್ಟಿ
ಸ್ಯಾಂಡಲ್ವುಡ್ನ ಕಿರಿಕ್ ಪಾರ್ಟಿ ರಕ್ಷಿತ್ ಶೆಟ್ಟಿ ಆಂಧ್ರ, ತೆಲಂಗಾಣದಲ್ಲಿ ತಮ್ಮ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿತ್ತು. ಇಲ್ಲಿ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದ ಬಳಿಕ ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ. ತೆಲುಗಿನಲ್ಲಿ ಇದೇ ಸಿನಿಮಾ 'ಸಪ್ತ ಸಾಗರಾಲು ದಾಟಿ' ಅಂತ ಟೈಟಲ್ ಇಟ್ಟು ಬಿಡುಗಡೆ ಮಾಡಲಾಗುತ್ತಿದೆ.
ರಕ್ಷಿತ್ ಶೆಟ್ಟಿ ಸಿನಿಮಾಗಳು ಈ ಹಿಂದೆ ಕೂಡ ತೆಲುಗಿನಲ್ಲಿ ರಿಲೀಸ್ ಆಗಿತ್ತು. ಅದರಲ್ಲೂ '777 ಚಾರ್ಲಿ' ಸಿನಿಮಾಗೆ ತೆಲುಗು ಪ್ರೇಕ್ಷಕರಿಂದ ಸೂಪರ್ ರೆಸ್ಪಾನ್ಸ್ ಸಿಕ್ಕಿತ್ತು. ಈಗ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾವನ್ನು ತೆಲುಗಿನಲ್ಲಿ ನಾಳೆ (ಸೆಪ್ಟೆಂಬರ್ 22) ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ.

ರಕ್ಷಿತ್ ಶೆಟ್ಟಿ ಸದ್ಯ ತೆಲುಗು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇಂತಹದ್ದೇ ಒಂದು ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ "ನಾನೀಗ ನನ್ನ ಪ್ರೊಫೈಲ್ ಬಿಲ್ಡ್ ಮಾಡುತ್ತಿದ್ದೇನೆ" ಎಂದು ಹೇಳಿದ್ದಾರೆ. ಅಲ್ಲದೆ 'ರಿಚರ್ಡ್ ಆಂಟೋನಿ' ರಿಲೀಸ್ ಆದ್ಮೇಲೆ ತನ್ನ ಹಿಂದಿನ ಸಿನಿಮಾಗಳನ್ನು ಹುಡುಕಿ ಹುಡುಕಿ ನೋಡುತ್ತಾರೆಂದು ಎಂ9 ಅನ್ನೋ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ. ಅಷ್ಟಕ್ಕೂ ಈ ಮಾತನ್ನು ರಕ್ಷಿತ್ ಶೆಟ್ಟಿ ಹೇಳಿದ್ದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
"ನನ್ನ ಪ್ರೊಫೈಲ್ ಬಿಲ್ಡ್ ಮಾಡುತ್ತಿದ್ದೇನೆ"
'777 ಚಾರ್ಲಿ' ಯಾವಾಗ ರಿಲೀಸ್ ಆಯ್ತೋ ಅಲ್ಲಿಂದ ರಕ್ಷಿತ್ ಶೆಟ್ಟಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಶೈನ್ ಆಗಿದ್ದಾರೆ. ಆದರೆ, 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾವನ್ನು ಪ್ಯಾನ್ ಇಂಡಿಯಾ ಮಾಡುವ ಮನಸ್ಸು ಮಾಡಿಲ್ಲ. ಅದ್ಯಾಕೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ನಾನೀಗ ನನ್ನ ಪ್ರೊಫೈಲ್ ಅನ್ನು ಬಿಲ್ಡ್ ಮಾಡುವುದರಲ್ಲಿ ನಿರತನಾಗಿದ್ದೇನೆ. 777 ಚಾರ್ಲಿ ಹಾಗೂ ಸಪ್ತಸಾಗರದಾಚೆ ಎಲ್ಲೋ ಸಿನಿಮಾದಿಂದ ನನಗೇನು ಜನಪ್ರಿಯತೆ ಸಿಕ್ಕಿದೆಯೋ ಅದಕ್ಕಿಂತ ಹೆಚ್ಚು ಜನಪ್ರಿಯತೆ ರಿಚರ್ಡ್ ಆಂಟೋನಿ ಸಿನಿಮಾ ಮಾಡಿದ್ದಾಗ ಸಿಗುತ್ತೆ. ಯಾಕಂದ್ರೆ, ರಿಚರ್ಡ್ ಆಂಟೋನಿಯಂತೆ ನಾನಿದ್ದೇನೆ." ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
'ನಾನು ಕೇವಲ ನಟನಷ್ಟೇ ಅಲ್ಲ"
"ನಾನು ಕೇವಲ ನಟನಷ್ಟೇ ಅಲ್ಲ. ನಾನೊಬ್ಬ ಬರಹಗಾರ, ನಾನೊಬ್ಬ ನಿರ್ದೇಶಕ ಕೂಡ ಹೌದು. ಅದನ್ನೆಲ್ಲ ಒಟ್ಟಿಗೆ ಸೇರಿಸಿದರೆ ರಕ್ಷಿತ್ ಶೆಟ್ಟಿ. ಅದು ಕೇವಲ ರಿಚರ್ಡ್ ಆಂಟೋನಿಯಲ್ಲಿ ಬರೋಕೆ ಮಾತ್ರ ಸಾಧ್ಯ. ಇಡೀ ದೇಶದ ಮೂಲೆ ಮೂಲೆಯನ್ನು ತಲುಪುವುದಕ್ಕೆ ರಿಚರ್ಡ್ ಆಂಟೋನಿಯಿಂದ ಮಾತ್ರ ಸಾಧ್ಯ ಅನ್ನೋದು ನನಗೆ ಗೊತ್ತಿದೆ." ಎಂದು ಮುಂದೆ ನಿರ್ದೇಶಿಸಲಿರೋ 'ರಿಚರ್ಡ್ ಆಂಟೋನಿ' ಬಗ್ಗೆ ರಕ್ಷಿತ್ ಶೆಟ್ಟಿ ರಿವೀಲ್ ಮಾಡಿದ್ದಾರೆ.

"ರಿಚರ್ಡ್ ಆಂಟೋನಿ ಬಂದ್ಮೇಲೆ ಹಿಂತಿರುಗಿ ನೋಡ್ತಾರೆ"
ರಕ್ಷಿತ್ ಶೆಟ್ಟಿಗೆ 'ರಿಚರ್ಡ್ ಆಂಟೋನಿ' ಸಿನಿಮಾ ಮೇಲೆ ನಂಬಿಕೆ ಹೆಚ್ಚಾಗಿದೆ. ಈ ಸಿನಿಮಾ ತನ್ನನ್ನು ಮಾಸ್ ಕಮರ್ಷಿಯಲ್ ಹೀರೊ ಮಾಡುತ್ತೆ ಅನ್ನೋ ನಂಬಿಕೆಯಲ್ಲಿದ್ದಾರೆ. ಹೀಗಾಗಿ ರಿಚರ್ಡ್ ಆಂಟೋನಿ ಬಂದ್ಮೇಲೆ ನನ್ನ ಹಿಂದಿನ ಸಿನಿಮಾಗಳನ್ನು ಜನರು ಹುಡುಕಿ ನೋಡುತ್ತಾರೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. "ರಿಚರ್ಡ್ ಆಂಟೋನಿ ಮೂಲಕ ಇಡೀ ದೇಶಕ್ಕೆ ನಾನು ಯಾವಾಗ ರೀಚ್ ಆಗುತ್ತೇನೋ.. ಆಗ ಜನರು ಇವನು ಏನು ಮಾಡಿದ್ದಾನೆ ಅಂತ ಹಿಂತಿರುಗಿ ನೋಡುತ್ತಾರೆ. ಆಗ ಜನರು ಸಪ್ತ ಸಾಗರದಾಚೆ ಎಲ್ಲೋ, 777 ಚಾರ್ಲಿ, ಅವನೇ ಶ್ರೀಮನ್ನಾರಾಣ, ಕಿರಿಕ್ ಪಾರ್ಟಿ, ಉಳಿದವರು ಕಂಡಂತೆ ಸಿನಿಮಾವನ್ನು ನೋಡುತ್ತಾರೆ. ಆಗ ಈ ಸಿನಿಮಾಗಳಿಗೆ ಬೆಲೆ ಬರುತ್ತೆ." ಎಂದು ರಕ್ಷಿತ್ ಆತ್ಮ ವಿಶ್ವಾಸದಿಂದ ಹೇಳಿದ್ದಾರೆ.
ರಕ್ಷಿತ್ ಕೈಯಲ್ಲಿ 6 ಸಿನಿಮಾಗಳು
'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಬಳಿಕ ರಕ್ಷಿತ್ ಶೆಟ್ಟಿ ಆರು ಸಿನಿಮಾಗಳಿಗೆ ಲಾಕ್ ಆಗಿದ್ದಾರೆ. ಅದರಲ್ಲೊಂದು 'ರಿಚರ್ಡ್ ಆಂಟೋನಿ'. ಈ ಸಿನಿಮಾ ಬಳಿಕ 'ಪುಣ್ಯಕೋಟಿ' ಕೂಡ ಕೈಯಲ್ಲಿದೆ. ಹಾಗೇ ಹೇಮಂತ್ ರಾವ್ ನಿರ್ದೇಶನದಲ್ಲಿಯೇ ಮತ್ತೊಂದು ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಒಟ್ಟು ಆರು ಸಿನಿಮಾಗಳು ಕೈಯಲ್ಲಿವೆ ಎಂದು ರಕ್ಷಿತ್ ಶೆಟ್ಟಿ ಬೇರೊಂದು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.


Click it and Unblock the Notifications











