'ನೀರ್ ದೋಸೆ' ವೇಳೆ ಕಿತ್ತಾಡಿದ್ದ ರಮ್ಯಾ–ಜಗ್ಗೇಶ್ ಒಂದಾದ್ರಾ? ಏನಿದು ಹೊಸ ಲೆಕ್ಕಾಚಾರ?
ಮೋಹಕತಾರೆ ರಮ್ಯಾ.. ನವರಸ ನಾಯಕ ಜಗ್ಗೇಶ್.. ಇನ್ನೇನು ಇಬ್ಬರ ಕಾಂಬಿನೇಷನ್ನಲ್ಲಿ ಒಂದು ಸಿನಿಮಾ ನೋಡೇ ಬಿಡ್ತೀವಿ ಅಂದ್ಕೊಂಡಿದ್ರು. ಅದುವೇ ವಿಜಯ್ ಪ್ರಸಾದ್ ನಿರ್ದೇಶನದ ಸಿನಿಮಾ 'ನೀರ್ ದೋಸೆ'.
ರಮ್ಯಾ, ಜಗ್ಗೇಶ್ ಕಾಂಬಿನೇಷನ್ನಲ್ಲಿ 'ನೀರ್ ದೋಸೆ' ಸಿನಿಮಾ ಆರಂಭನೂ ಆಗಿತ್ತು. ಕೆಲವು ದಿನ ಶೂಟಿಂಗ್ ಕೂಡ ನಡೆದಿತ್ತು. ಆದರೆ, ರಮ್ಯಾ ಮಧ್ಯದಲ್ಲಿಯೇ ಸಿನಿಮಾದಿಂದಲೇ ಹೊರಬಿದ್ದಿದ್ದರು. ಅಲ್ಲಿಂದ ರಮ್ಯಾ ಹಾಗೂ ಜಗ್ಗೇಶ್ ನಡುವೆ ಕಿತ್ತಾಟ ಶುರುವಾಗಿತ್ತು. ರಮ್ಯಾ ಮೇಲೆ ಜಗ್ಗೇಶ್ ವಾಗ್ದಾಳಿಯನ್ನು ನಡೆಸಿದ್ದರು. ಇನ್ನೊಂದು ಕಡೆ ರಮ್ಯಾ ಕೇಸು ಅದು-ಇದು ಅಂತ ಗಲಾಟೆ ಮಾಡಿಕೊಂಡಿದ್ದರು.
ಇನ್ನೇನು ರಮ್ಯಾ-ಜಗ್ಗೇಶ್ ಇಬ್ಬರೂ ಒಂದಾಗೋದೇ ಇಲ್ಲ ಅಂದ್ಕೊಂಡಿದ್ರು. ಆದ್ರೀಗ ರಮ್ಯಾ ಮತ್ತು ಜಗ್ಗೇಶ್ ಮುಖಾಮುಖಿಯಾಗಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಕೆಲ ಹೊತ್ತು ಆತ್ಮೀಯವಾಗಿಯೂ ಮಾತಾಡಿದ್ದಾರೆ. ಈ ದೃಶ್ಯ ನೋಡುತ್ತಿದ್ದಂತೆ ಕೆಲವು ಮಂದಿ ಲೆಕ್ಕಾಚಾರ ಆರಂಭಿಸಿದ್ದಾರೆ.

ರಮ್ಯಾ–ಜಗ್ಗೇಶ್ ಭೇಟಿ ಆಗಿದ್ದೆಲ್ಲಿ?
ಕಿಚ್ಚ ಸುದೀಪ್ ನೇತೃತ್ವದಲ್ಲಿ ಕೆಸಿಸಿ ಸೀಸನ್ 3 ನಡೆಯುತ್ತಿದೆ. ಅದಕ್ಕೆ ಸಕಲ ಸಿದ್ಧತೆಗಳೂ ನಡೆಯುತ್ತಿವೆ. ಇಂದು (ಜನವರಿ 26) ಕೆಸಿಸಿ ಸೀಸನ್ 3 ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಕಿಚ್ಚ ಸುದೀಪ್ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಿದ್ದರು. ಈ ವೇಳೆ ನವರಸ ನಾಯಕ ಜಗ್ಗೇಶ್ ಹಾಗೂ ಮೋಹಕತಾರೆ ರಮ್ಯಾ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಹಾವು-ಮುಂಗುಸಿಯಂತೆ ಕಿತ್ತಾಡಿಕೊಂಡಿದ್ದವರು ಒಟ್ಟಿಗೆ ಕೂತಿದ್ದು ಇಬ್ಬರ ಅಭಿಮಾನಿಗಳಿಗೂ ಖುಷಿಕೊಟ್ಟಿದೆ.

ರಮ್ಯಾ–ಜಗ್ಗೇಶ್ ಒಂದಾದ್ರಾ?
ಮೋಹಕತಾರೆ ರಮ್ಯಾ ಹಾಗೂ ನವರಸ ನಾಯಕ ಜಗ್ಗೇಶ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆ ಮಟ್ಟಿಗೆ ಕಿತ್ತಾಡಿದವರು ಪಕ್ಕದಲ್ಲಿಯೇ ಕೂತು ಕೆಲ ಮಾತಾಡಿದ್ದಾರೆ. ಇವರಿಬ್ಬರ ಮಾತುಕತೆ ಒಂದ್ಕಡೆ ಅಚ್ಚರಿ ಮೂಡಿಸಿದ್ರೆ, ಇನ್ನೊಂದು ಕಡೆ ಲೆಕ್ಕಾಚಾರ ಹಾಕುವುದಕ್ಕೆ ಶುರು ಮಾಡಿದ್ದಾರೆ. 'ನೀರ್ ದೋಸೆ'ಯಿಂದ ರಮ್ಯಾ ಹೊರಬರುತ್ತಿದ್ದಂತೆ ಜಗ್ಗೇಶ್ ಕಣ್ಣುಗಳು ಕೆಂಪಾಗಿದ್ದವು. ಆದ್ರೀಗ ಆ ಎಲ್ಲಾ ಮುನಿಸನ್ನು ಮರೆತು ಇಬ್ಬರೂ ಒಂದಾಗಿದ್ದಾರೆ ಎನ್ನಲಾಗಿದೆ.

ಬಿಜೆಪಿ ಬರ್ತಾರಾ ಮೋಹಕತಾರೆ?
ಇದೇ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಭಾಗವಹಿಸಿದ್ದರು. ಡಾ.ಕೆ ಸುಧಾಕರ್, ಮುನಿರತ್ನ ಕೂಡ ಇದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮುನಿರತ್ನ ರಮ್ಯಾ ಅವರನ್ನು ಹೊಗಳಿ ಅಟ್ಟಕ್ಕೇರಿಸಿದ್ದರು. ಹೀಗಾಗಿ ರಮ್ಯಾ ಮುಂದಿನ ದಿನಗಳಲ್ಲಿ ಬಿಜೆಪಿ ಕಡೆಗೆ ಪಯಣ ಬೆಳೆಸುತ್ತಾರಾ? ಅನ್ನೋ ಅನುಮಾನ ಎಲ್ಲರಲ್ಲೂ ಮೂಡಿರೋದಂತೂ ನಿಜ.

ರಮ್ಯಾ ಬಗ್ಗೆ ಮುನಿರತ್ನ ಹೇಳಿದ್ದೇನು?
" ಸ್ಯಾಟಲೈಟ್ ಹಾಕಿ ಹುಡುಕಿದ್ರೂ ಸಿಗದಿದ್ದವರನ್ನು ಇಲ್ಲಿ ನೋಡುತ್ತಿದ್ದೇವೆ. ಯಾವ ಕ್ಯಾಮರದಲ್ಲಿ ಹಾಕಿದ್ರೂ ಸಿಗಲ್ಲ. ಅಂತಹವ್ರನ್ನು ಇಲ್ಲಿ ನೋಡುವ ಅವಕಾಶ ಸಿಕ್ಕಿದೆ. ಅದು ಸುದೀಪ್ ಅವರಿಂದ. ಅವರು ಯಾರು ಅಂತ ನೀವು ಕೇಳುತ್ತಿಲ್ಲ. ನೀವು ಕೇಳಬೇಕು ಯಾರು ಅಂತ. ನಿಮಗೆ ಹೇಳಿದ್ದು, ಯಾವ ಕ್ಯಾಮರಾಗೂ ಸಿಗದೆ ಇದ್ದವರು ಇಲ್ಲಿ ಸಿಗುತ್ತಿದ್ದೀರ. ನಾನು ಎಷ್ಟು ಬಾರಿ ಪೋನ್ಗೆ ಟ್ರೈ ಮಾಡಿದ್ದರೂ ಇಲ್ಲಿ ಸಿಗುತ್ತಿಲ್ಲ." ಎಂದು ಹೇಳಿ ರಮ್ಯಾ ಅವರ ನಗುವಿಗೆ ಕಾರಣರಾಗಿದ್ದಾರೆ.


Click it and Unblock the Notifications











