Kantara Chapter 1: ಚೆನ್ನೈನಲ್ಲಿ ನಡೀಬೇಕಿದ್ದ 'ಕಾಂತಾರ' ಪ್ರೀ-ರಿಲೀಸ್ ಇವೆಂಟ್ ಕ್ಯಾನ್ಸಲ್; ಹೊಂಬಾಳೆ ಹೇಳಿಕೆಯಲ್ಲಿ ಏನಿದೆ?
ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಕಾಂತಾರ ಚಾಪ್ಟರ್ 1' ಬಿಡುಗಡೆ ಇನ್ನು ಕೇವಲ ಮೂರು ದಿನಗಳು ಬಾಕಿ ಉಳಿದಿವೆ. ನಟ ಕಮ್ ನಿರ್ದೇಶಕ ರಿಷಬ್ ಶೆಟ್ಟಿ ಹೈದ್ರಾಬಾದ್, ಮುಂಬೈ ಆಕಾಶದಲ್ಲೇ ಹಾಡುತ್ತಿದ್ದಾರೆ. ಕೊನೆಯ ಹಂತದ ಪ್ರಚಾರವನ್ನು ಬಿಡುವಿಲ್ಲದೆ ಮಾಡುತ್ತಿದ್ದಾರೆ. ಹೈದ್ರಾಬಾದ್ನಲ್ಲಿ ಗ್ರ್ಯಾಂಡ್ ಇವೆಂಟ್ ಬಳಿಕ ಮುಂಬೈಗೆ ತೆರಳಿರುವ ರಿಷಬ್ ಶೆಟ್ಟಿ, ನಾಳೆ (ಸೆಪ್ಟೆಂಬರ್ 30) ಚೆನ್ನೈನಲ್ಲಿ ಪ್ರೀ-ರಿಲೀಸ್ ಇವೆಂಟ್ನಲ್ಲಿ ಭಾಗವಹಿಸಬೇಕಿತ್ತು. ಆದ್ರೀಗ ಹೊಂಬಾಳೆ ಈ ಇವೆಂಟ್ ಅನ್ನು ಕ್ಯಾನ್ಸಲ್ ಮಾಡಿದೆ.
ಭಾರತದ ಬಹು ನಿರೀಕ್ಷೆಯ ಸಿನಿಮಾ 'ಕಾಂತಾರ ಚಾಪ್ಟರ್ 1' ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಪ್ರಮುಖ ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದರೆ, ಇನ್ನು ಒಂದೆರಡು ಭಾಷೆಯಲ್ಲಿ ರಿಲೀಸ್ಗೆ ಹೊಂಬಾಳೆ ಫಿಲ್ಮ್ಸ್ ಸ್ಕೆಚ್ ಹಾಕಿದೆ. ಹೀಗಾಗಿ ಐದು ರಾಜ್ಯಗಳ ರಾಜಧಾನಿಯಲ್ಲಿ ಸಿನಿಮಾ ಪ್ರಚಾರಕ್ಕೆ ಮುಂದಾಗಿದೆ.

ಮೊದಲೇ ಹೊಂಬಾಳೆ ಫಿಲ್ಮ್ಸ್ ನಿರ್ಧಾರ ಮಾಡಿದಂತೆ ನಾಳೆ (ಸೆಪ್ಟೆಂಬರ್ 30)ರಂದು ಚೆನ್ನೈನಲ್ಲಿ ಅದ್ಧೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ನಡೆಯಬೇಕಿತ್ತು. ಆ ಇವೆಂಟ್ ಅನ್ನು ಕ್ಯಾನ್ಸಲ್ ಮಾಡಲಾಗಿದೆ ಎಂದು ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಅಷ್ಟಕ್ಕೂ ಈ ನಿರ್ಧಾರಕ್ಕೆ ಕಾರಣವೇನು? ತಿಳಿಯುವುದಕ್ಕೆ ಮುಂದೆ ಓದಿ.
2022ರಲ್ಲಿ ರಿಲೀಸ್ ಆಗಿದ್ದ 'ಕಾಂತಾರ' ದೇಶಾದ್ಯಂತ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಈ ಸಾಲಿನಲ್ಲಿ ತಮಿಳುನಾಡಿನಿಂದಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ ಚೆನ್ನೈನಲ್ಲಿ ಇವೆಂಟ್ ಮಾಡುವುದಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ಆದರೆ, ಆ ಇವೆಂಟ್ ಅನ್ನು ಮಾಡದೇ ಇರುವುದಕ್ಕೆ ಹೊಂಬಾಳೆ ಫಿಲ್ಮ್ಸ್ ನಿರ್ಧರಿಸಿದೆ. ಇತ್ತೀಚೆಗೆ ದಳಪತಿ ವಿಜಯ್ ರಾಜಕೀಯ ಸಮಾವೇಶದ ವೇಳೆ ಕಾಲ್ತುಳಿತಕ್ಕೆ ಒಳಗಾಗಿ 41 ಮಂದಿ ಸಾವನ್ನಪ್ಪಿದ್ದರು. ಈ ಕಾರಣದಿಂದ ಪ್ರೀ ರಿಲೀಸ್ ಇವೆಂಟ್ ಅನ್ನು ಕ್ಯಾನ್ಸಲ್ ಮಾಡಲಾಗಿದೆ.
ಟಿವಿಕೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರ ಕರೂರು ಸಮಾವೇಶ ದುರಂತದಲ್ಲಿ ಅಂತ್ಯ ಕಂಡಿದೆ. ಹೀಗಾಗಿ ಈ ದುರ್ಘಟನೆಯಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ತಮ್ಮ ಬೆಂಬಲ ಸೂಚಿಸುವ ಸಲುವಾಗಿ ನಾಳೆ (ಸೆಪ್ಟೆಂಬರ್ 30) ನಡೆಯಬೇಕಿದ್ದ ಇವೆಂಟ್ ಅನ್ನು ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ಹೊಂಬಾಳೆ ಫಿಲ್ಮ್ಸ್ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೆಯೊಂದನ್ನು ನೀಡಿದೆ.
"ಇತ್ತೀಚೆಗೆ ನಡೆದ ದುರಂತವನ್ನು ಗಮನದಲ್ಲಿಟ್ಟುಕೊಂಡು ನಾಳೆ ಚೆನ್ನೈನಲ್ಲಿ ನಡೆಯಬೇಕಿದ್ದ ನಮ್ಮ ಕಾಂತಾರ ಚಾಪ್ಟರ್ 1 ಪ್ರಮೋಷನಲ್ ಇವೆಂಟ್ ಅನ್ನು ಕ್ಯಾನ್ಸಲ್ ಮಾಡುವುದಕ್ಕೆ ನಿರ್ಧರಿಸಿದ್ದೇವೆ. ದುರಂತದಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಂಡವರ ಜೊತೆ ಒಗ್ಗಟ್ಟಾಗಿ ನಿಲ್ಲುವುದಕ್ಕೆ ಇದು ಸರಿಯಾದ ಸಮಯವೆಂದು ನಾವು ನಂಬಿದ್ದೇವೆ. ಈ ದುರಂತದಿಂದ ಆಘಾತಕ್ಕೆ ಒಳಗಾದ ಕುಟುಂಬಕ್ಕೆ ಸಂತಾಪವನ್ನು ಸೂಚಿಸುತ್ತಾ, ನಾವು ಅವರೊಂದಿಗೆ ಇದ್ದೇವೆ ಎಂದು ಹೇಳುವುದಕ್ಕೆ ಬಯಸುತ್ತೇನೆ. ನೀವು ಈ ಉದ್ದೇಶವನ್ನು ಅರ್ಥ ಮಾಡಿಕೊಂಡು ಬೆಂಬಲಕ್ಕೆ ನಿಂತಿದ್ದಕ್ಕೆ ಧನ್ಯರಾಗಿದ್ದೇವೆ. ನಾನು ನಮ್ಮ ತಮಿಳುನಾಡಿನ ಪ್ರೇಕ್ಷಕರನ್ನು ಭೇಟಿ ಮಾಡುವುದಕ್ಕೆ ಕಾತುರರಾಗಿದ್ದು, ಸರಿಯಾದ ಸಮಯಕ್ಕೆ ಸಿಗುತ್ತೇವೆ" ಎಂದು ಹೊಂಬಾಳೆ ಫಿಲ್ಮ್ಸ್ ತನ್ನ ಪತ್ರದಲ್ಲಿ ಹೇಳಿಕೊಂಡಿದೆ.
'ಕಾಂತಾರ ಚಾಪ್ಟರ್ 1' ಅಕ್ಟೋಬರ್ 2ರಂದು ಅದ್ದೂರಿಯಾಗಿ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ರಿಷಬ್ ಶೆಟ್ಟಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದರೆ, ಬಾಲಿವುಡ್ ನಟ ಗುಲ್ಶನ್ ದೇವಯ್ಯ, ಮಲಯಾಳಂನ ಹಿರಿಯ ನಟ ಜಯರಾಂ ಸೇರಿದಂತೆ ಕನ್ನಡದ ಹಲವು ಕಲಾವಿದರು ನಟಿಸಿದ್ದಾರೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.


Click it and Unblock the Notifications











