ಕರ್ನಾಟಕದಲ್ಲಿ 'ಪುಷ್ಪ' ತೆಲುಗಿನಲ್ಲೇ ಹೆಚ್ಚು ಸ್ಕ್ರೀನ್ಗಳಲ್ಲಿ ತೆರೆಕಾಣಲು ಕಾರಣ ಬಾಲಕೃಷ್ಣ 'ಅಖಂಡ'
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬೆಂಗಳೂರಿಗೆ ಬಂದು 'ಪುಷ್ಪ' ಸಿನಿಮಾ ಬಗ್ಗೆ ಪ್ರಚಾರ ಮಾಡಿದ್ದಕ್ಕೆ ಕನ್ನಡಿಗರು ಖುಷಿಯಾಗಿದ್ದರು. ಕೊನೆಗೂ ಪರಭಾಷೆಯ ಸಿನಿಮಾಗಳನ್ನೂ ಕನ್ನಡದಲ್ಲಿಯೇ ನೋಡುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದ್ದರು. ಆದರೆ, ಅದ್ಯಾವಾಗ 'ಪುಷ್ಪ' ಬೆರಳೆಣಿಕೆಯಷ್ಟು ಚಿತ್ರಮಂದಿರಗಳಲ್ಲಿ ಮಾತ್ರ ಕನ್ನಡ ಅವತರಣಿಕೆ ಬಿಡುಗಡೆಯಾಗುತ್ತೆ ಅನ್ನುವುದು ಗಮನಕ್ಕೆ ಬಂತೋ ಅಲ್ಲಿಂದ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. 'ಪುಷ್ಪ' ಸಿನಿಮಾವನ್ನು ಬಾಯ್ಕಾಟ್ ಮಾಡುವಂತೆ ಅಭಿಯಾನ ಆರಂಭಿಸಿದ್ದಾರೆ.
ಕರ್ನಾಟಕದಾದ್ಯಂತ 'ಪುಷ್ಪ' ಕನ್ನಡ ಅವತರಣೆಕೆಯನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿತ್ತು. ಆದರೆ, ಇದ್ದಕ್ಕಿದ್ದಂತೆ ತೆಲುಗು ವರ್ಷನ್ ಅನ್ನೇ ಹೆಚ್ಚು ಸ್ಕ್ರೀನ್ಗಳಲ್ಲಿ ರಿಲೀಸ್ ಮಾಡುವ ದಿಢೀರ್ ನಿರ್ಧಾರಕ್ಕೆ ಬಂದಿದೆ. ಇದಕ್ಕೆ ಕಾರಣವೇನು ಅಂತ ಹುಡುಕುತ್ತಾ ಹೊರಟವರಿಗೆ ಇತ್ತೀಚೆಗೆ ತೆರೆಕಂಡ ಲೆಜೆಂಡ್ ಬಾಲಕೃಷ್ಣ ನಟಿಸಿದ 'ಅಖಂಡ' ಸಿನಿಮಾ ಸಿಕ್ಕಿದೆ. ಅಷ್ಟಕ್ಕೂ 'ಅಖಂಡ' ಸಿನಿಮಾಗೂ ಅಲ್ಲು ಅರ್ಜುನ್ 'ಪುಷ್ಪ' ತೆಲುಗಿನಲ್ಲಿ ರಿಲೀಸ್ ಆಗುತ್ತಿರುವುದಕ್ಕೂ ಏನು ಸಂಬಂಧ ಅನ್ನುವುದನ್ನು ತಿಳಿಯಲು ಮುಂದೆ ಓದಿ.

ತೆಲುಗು 'ಪುಷ್ಪ'ಗೆ ಕಾರಣ 'ಅಖಂಡ'
ಅಲ್ಲು ಅರ್ಜುನ್ 'ಪುಷ್ಪ'ಬಿಡುಗಡೆಗೆ ಸಜ್ಜಾಗುತ್ತಿದ್ದಂತೆ ಕರ್ನಾಟಕದಲ್ಲಿ ದೊಡ್ಡ ಸಂಚಲನವನ್ನು ಸೃಷ್ಟಿಸುತ್ತಿದೆ. ಕನ್ನಡಿಗರು ಕನ್ನಡದಲ್ಲಿಯೇ 'ಪುಷ್ಪ' ಸಿನಿಮಾ ನೋಡಲು ಪಟ್ಟು ಹಿಡಿದು ಕೂತಿದ್ದಾರೆ. ಇನ್ನೊಂದು ಕಡೆ 'ಪುಷ್ಪ' ತಂಡ ತೆಲುಗಿನಲ್ಲಿಯೇ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ. ಅಷ್ಟಕ್ಕೂ ಮೈತ್ರಿ ಮೂವಿ ಮೇಕರ್ಸ್ ಕನ್ನಡದಲ್ಲಿ 'ಪುಷ್ಪ' ಸಿನಿಮಾ ಡಬ್ ಮಾಡಿದ್ದರೂ, ಕರ್ನಾಟಕದಲ್ಲಿ ತೆಲುಗಿನಲ್ಲಿಯೇ ಯಾಕೆ ಬಿಡುಗಡೆ ಮಾಡುತ್ತಿದೆ? ಈ ಆರೋಪಕ್ಕೆ ಬಾಲಕೃಷ್ಣ ನಟನೆಯ 'ಅಖಂಡ' ಸಿನಿಮಾದ ಕಡೆ ಬೊಟ್ಟು ಮಾಡಿ ತೋರಿಸಲಾಗುತ್ತಿದೆ. ಕರ್ನಾಟಕದಲ್ಲಿ 'ಅಖಂಡ' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ 'ಪುಷ್ಪ' ಕೂಡ ತೆಲುಗು ವರ್ಷನ್ ಅನ್ನೇ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ ಎನ್ನಲಾಗಿದೆ.

ರಾಜ್ಯದಲ್ಲಿ 'ಅಖಂಡ' ಬಾಕ್ಸಾಫೀಸ್ ಗಳಿಕೆ ಎಷ್ಟು?
ಬಾಲಕೃಷ್ಣ ನಟನೆಯ 'ಅಖಂಡ' ಸಿನಿಮಾ ಕರ್ನಾಟಕದಲ್ಲೂ ತೆರೆಕಂಡಿತ್ತು. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿಲ್ಲದೆ ಇದ್ದಿದ್ದರಿಂದ ಕರ್ನಾಟಕದಲ್ಲಿಯೂ ತೆಲುಗು ಭಾಷೆಯಲ್ಲಿಯೇ ಬಿಡುಗಡೆಯಾಗಿತ್ತು. ಡಿಸೆಂಬರ್ 2 ರಂದು ತೆರೆಕಂಡಿದ್ದ ಸಿನಿಮಾ 15 ದಿನಗಳಲ್ಲಿ ಬರೋಬ್ಬರಿ 12 ಕೋಟಿ ಗಳಿಕೆ ಮಾಡಿದೆಯಂತೆ. ಇದನ್ನು ಅರಿತ 'ಪುಷ್ಪ' ಟೀಮ್ ಕರ್ನಾಟಕದಲ್ಲಿ ತೆಲುಗು ಭಾಷೆಯಲ್ಲಿಯೇ ಸಿನಿಮಾ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇಂತಹದ್ದೊಂದು ಸುದ್ದಿ 'ಪುಷ್ಪ' ಅಡ್ಡಾದಿಂದಲೇ ಕೇಳಿ ಬರುತ್ತಿದೆ.

ಕನ್ನಡ 'ಪುಷ್ಪ'ಗೆ ಕರ್ನಾಟಕದಲ್ಲಿ ಸಿಕ್ಕಿದ್ದು ಬರೀ 3 ಚಿತ್ರಮಂದಿರ
ಬುಕ್ ಮೈ ಶೋ ನಲ್ಲಿ ಅಲ್ಲು ಅರ್ಜುನ್ ನಟಿಸಿದ 'ಪುಷ್ಪ' ಸಿನಿಮಾದ ಬುಕಿಂಗ್ ಓಪನ್ ಆಗಿದೆ. ಇದರಲ್ಲಿ ಕನ್ನಡ ಭಾಷೆಯ 'ಪುಷ್ಪ' ಬಿಡುಗಡೆಯಾಗಿದ್ದು ಕೇವಲ ಮೂರು ಚಿತ್ರಮಂದಿರಗಳಲ್ಲಿ ಮಾತ್ರ. ಮೂರೂ ಚಿತ್ರಮಂದಿರಗಳಲ್ಲಿಯೂ ಇರುವುದು ಒಂದೊಂದೇ ಶೋ. ಅದೂ ಪ್ರೈಮ್ ಟೈಂನಲ್ಲಿ 'ಪುಪ್ಪ' ಸಿನಿಮಾವನ್ನು ಪ್ರದರ್ಶನ ಮಾಡುತ್ತಿಲ್ಲ. ಅದೇ ತೆಲುಗು ವರ್ಷನ್ಗೆ ಬುಕ್ ಮೈ ಶೋ ನಲ್ಲಿ ಸಾಕಷ್ಟು ಚಿತ್ರಮಂದಿರಗಳು ಲಭ್ಯವಿದೆ. ವಿಪರ್ಯಾಸ ಅಂದರೆ, ತೆಲುಗು ಭಾಷೆಯ ಸಿನಿಮಾದ ಟಿಕೆಟ್ಗಳೇ ಕರ್ನಾಟಕದಲ್ಲಿ ಹೆಚ್ಚು ಬಿಕರಿಯಾಗಿವೆ.

ಕನ್ನಡದ ನಟರಿದ್ದರೂ ಕನ್ನಡಿಗರಿಗಿಲ್ಲ ಬೆಲೆ
'ಪುಷ್ಪ' ಸಿನಿಮಾದಲ್ಲಿ ಕನ್ನಡದ ಇಬ್ಬರು ಕಲಾವಿದರು ನಟಿಸಿದ್ದಾರೆ. ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಅತ್ತ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಹೀಗಿದ್ದರೂ 'ಪುಷ್ಪ' ತೆಲುಗಿನಲ್ಲಿಯೇ ಬಿಡುಗಡೆ ಆಗುತ್ತಿರುವುದಕ್ಕೆ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಎದ್ದಿರುವ ಪ್ರಶ್ನೆ ಏನಂದರೆ, ಕನ್ನಡಿಗರೇ ಆರಂಭಿಸಿರುವ ಈ ಅಭಿಯಾನ ಯಶಸ್ಸು ಕಾಣುತ್ತಾ? ಡಿಸೆಂಬರ್ 17ರಂದು ಕನ್ನಡ ಭಾಷೆಯಲ್ಲಿಯೇ 'ಪುಷ್ಪ' ಸಿನಿಮಾ ಬಿಡುಗಡೆಯಾಗುತ್ತಾ? ಇಲ್ಲಾ ತೆಲುಗು ಭಾಷೆಯಲ್ಲೇ 'ಪುಷ್ಪ' ಸಿನಿಮಾ ನೋಡುತ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಡಿಸೆಂಬರ್ 17ರಂದು ಸಿಗಲಿದೆ.


Click it and Unblock the Notifications











