ಬಾಯ್ಕಾಟ್ 'ಪುಷ್ಪ' ಪರಿಣಾಮವೇನು? ಕರ್ನಾಟಕದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟಿಸಿದ 'ಪುಷ್ಪ' ಎಲ್ಲಿ ನೋಡಿದರೂ ಟಾಕ್ ಶುರುವಾಗಿದೆ. ಸಿನಿಮಾದ ಬಾಕ್ಸಾಫೀಸ್ ಗಳಿಕೆ ಬಗ್ಗೆನೇ ಚರ್ಚೆ ಶುರುವಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಅವತಾರವೆತ್ತಿ ದೊಡ್ಡ ಮಟ್ಟದಲ್ಲಿ ತೆರೆಕಂಡಿರುವ 'ಪುಷ್ಪ' ಗಳಿಕೆ ಮೇಲೆನೇ ಎಲ್ಲರ ಕಣ್ಣು ನೆಟ್ಟಿದೆ. ಹಾಗೇ ಕರ್ನಾಟಕದಲ್ಲೂ 'ಪುಷ್ಪ' ಕಲೆಕ್ಷನ್ ಎಷ್ಟಿರಬಹುದು? ಎಷ್ಟು ಕೋಟಿ ಲೂಟಿ ಮಾಡಿದೆ ಎಂಬೆಲ್ಲಾ ಲೆಕ್ಕಾಚಾರ ಆರಂಭ ಆಗಿದೆ.
ಕರ್ನಾಟಕದಲ್ಲಿ ಅಲ್ಲು ಅರ್ಜುನ್ ಸಿನಿಮಾಗಳಿಗೆ ಅಭಿಮಾನಿಗಳಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಸ್ಟೈಲಿಶ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಉತ್ತಮ ಗಳಿಕೆ ಕಂಡ ಉದಾಹರಣೆಗಳು ಸಾಕಷ್ಟಿವೆ. ಆದರೆ, ಈ ಬಾರಿ 'ಪುಷ್ಪ' ಗಳಿಕೆ ಮೇಲೆ ಕಣ್ಣಿಡಲು ಕಾರಣ ಬೇರೆನೇ ಇದೆ. ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದ ಅಲ್ಲು ಅರ್ಜುನ್ ಸಿನಿಮಾ ಬಾಕ್ಸಾಫೀಸ್ನಲ್ಲಿ ಸದ್ದು ಮಾಡಿದ್ಯಾ? ಕನ್ನಡಿಗರು ಆಕ್ರೋಶ 'ಪುಷ್ಪ' ತಂಡಕ್ಕೆ ಎಫೆಕ್ಟ್ ಆಗಿದೆಯಾ? ಈ ಎಲ್ಲಾ ಕುತೂಹಲಗಳಿಗೂ ಈಗ ತೆರೆಬಿದ್ದಿದೆ.

ಬಾಯ್ಕಾಟ್ 'ಪುಷ್ಪ' ಅಂದ ಎಫೆಕ್ಟ್ ಹೇಗಿದೆ?
ಅಲ್ಲುಅರ್ಜುನ್ ಸಿನಿಮಾ ಬಿಡುಗಡೆ ಒಂದು ದಿನ ಮುನ್ನ ಚಿತ್ರತಂಡ ಕನ್ನಡಿಗರಿಗೆ ನಿರಾಸೆ ಮಾಡಿದ್ದರು. ಪುಷ್ಪ ಪ್ಯಾನ್ ಇಂಡಿಯಾ ಸಿನಿಮಾ ಅಂತ ಹಣೆಪಟ್ಟಿ ಹೊತ್ತುಕೊಂಡು ಥಿಯೇಟರ್ಗೆ ಲಗ್ಗೆ ಇಡುವ ಪ್ರಯತ್ನಕ್ಕೆ ಮುಂದಾಗಿತ್ತು. ಹೀಗಾಗಿ ಕನ್ನಡದಲ್ಲಿಯೂ ಈ ಸಿನಿಮಾ ಚಿತ್ರಮಂದಿರಕ್ಕೆ ಬರುತ್ತೆ. ಕನ್ನಡದಲ್ಲಿಯೇ ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾವನ್ನು ನೋಡಬಹುದು ಎಂದು ಲೆಕ್ಕಚಾರ ಹಾಕಿ ಕೂತಿದ್ದ ಕನ್ನಡಿಗರಿಗೆ ನಿರಾಸೆಯಾಗಿತ್ತು. ಕಾರಣ ಕನ್ನಡದಲ್ಲಿ 'ಪುಷ್ಪ' ರಿಲೀಸ್ ಆಗುವ ಬದಲು ತೆಲುಗಿನಲ್ಲಿಯೇ ಬಿಡುಗಡೆಯಾಗಿತ್ತು. ಹೀಗಾಗಿ 'ಕರ್ನಾಟಕದಲ್ಲಿ ಬಾಯ್ಕಾಟ್ ಪುಷ್ಪ' ಅಭಿಯಾನವನ್ನು ಕನ್ನಡಿಗರು ಆರಂಭಿಸಿದ್ದರು. ಆದರೆ, ಈ ಅಭಿಮಾನಿ 'ಪುಷ್ಪ' ಚಿತ್ರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.

ಕರ್ನಾಟಕದಲ್ಲಿ 'ಪುಷ್ಪ' ಗಳಿಕೆ ಎಷ್ಟು?
ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾ 'ಬಾಯ್ಕಾಟ್' ಅಭಿಯಾನದ ಹೊರತಾಗಿಯೂ ಉತ್ತಮ ಗಳಿಕೆ ಕಂಡಿದೆ. ಮೊದಲ ದಿನ ಬೆಂಗಳೂರಿನಲ್ಲಿ ತೆರೆಕಂಡ ಬಹುತೇಕ ಚಿತ್ರಮಂದಿರಗಳಲ್ಲಿ ಸುಮಾರು ಶೇ.77ರಷ್ಟು ಚಿತ್ರಮಂದಿರಗಳು ಹೌಸ್ಫುಲ್ ಆಗಿವೆ. ಹೀಗಾಗಿ ಮೊದಲ ದಿನ ಕರ್ನಾಟಕದಲ್ಲಿ 'ಪುಷ್ಪ' ಸುಮಾರು 5.5 ಕೋಟಿಯಷ್ಟು ಗಳಿಕೆ ಕಂಡಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಾದ್ಯಂತ 'ಪುಷ್ಪ' ಚಿತ್ರ 280 ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಹೀಗಾಗಿ ಇದು ಕರ್ನಾಟಕದ ಮಟ್ಟಿಗೆ ಉತ್ತಮ ಗಳಿಕೆ ಎಂದೇ ಹೇಳಲಾಗಿದೆ.

ತಮಿಳುನಾಡಿಗಿಂತೂ ಅಧಿಕ ಗಳಿಕೆ ಕಂಡ ಪುಷ್ಪ
'ಪುಷ್ಪ' ಕರ್ನಾಟಕಕ್ಕಿಂತ ತಮಿಳುನಾಡಿನಲ್ಲಿ ಹೆಚ್ಚು ಗಳಿಕೆ ಕಾಣುತ್ತೆ ಎನ್ನವ ನಿರೀಕ್ಷೆಯಿತ್ತು. ಒಂದು ಲೆಕ್ಕಾಚಾರದ ಪ್ರಕಾರ, ಪುಷ್ಪ 10 ಕೋಟಿಗೂ ಅಧಿಕ ಗಳಿಕೆ ಮಾಡಬೇಕಿತ್ತು. ಆದರೆ, ಗಳಿಸಿದ್ದು, ಕೇವಲ ನಾಲ್ಕು ಕೋಟಿ ಎನ್ನಲಾಗಿದೆ. ಹೀಗಾಗಿ ತಮಿಳುನಾಡಿನಲ್ಲಿ ಕರ್ನಾಟಕಕ್ಕಿಂತ ಕಡಿಮೆ ಕಲೆಕ್ಷನ್ ಆಗಿದ ಎನ್ನುವ ಮಾತು ಕೇಳಿ ಬರುತ್ತಿದೆ.

ಮತ್ತೊಮ್ಮೆ ಸೋತ ಕನ್ನಡಿಗರು
ಬಾಯ್ಕಾಟ್ ಪುಷ್ಪ ಅಭಿಯಾನ ಆರಂಭ ಆಗುತ್ತಿದ್ದಂತೆ ಕರ್ನಾಟಕದಲ್ಲಿ ಕ್ರಾಂತಿ ಆಗೇ ಬಿಡುತ್ತೆ ಅಂತ ಎದುರು ನೋಡಿದವರಿಗೆ ನಿರಾಸೆಯಾಗಿದೆ. ಕರ್ನಾಟಕದಾದ್ಯಂತ ಬಿಡುಗಡೆಯಾದ ತೆಲುಗು ವರ್ಷನ್ 'ಪುಷ್ಪ'ವನ್ನೇ ನೋಡಿ ಆನಂದಿಸಿದ್ದಾರೆ. ಹೀಗಾಗಿ ಡಬ್ಬಿಂಗ್ ಬೇಕು ಅಂತ ಹೋರಾಟ ಮಾಡಿದವರಿಗೆ 'ಪುಷ್ಪ' ಚಿತ್ರತಂಡ ನಿರಾಸೆ ಮಾಡಿದೆ. ತೆಲುಗಿನಲ್ಲಿಯೇ ಜನರು ಸಿನಿಮಾ ನೋಡಿ ಆನಂದಿಸಿದ್ದಾರೆ. ಹೀಗಾಗಿ ಬಾಯ್ ಕಾಟ್ ಪುಷ್ಪ ಅಭಿಯಾನ ಕರ್ನಾಟಕದಲ್ಲಿ ಫೇಲ್ಯೂರ್ ಆಗಿದೆ. ಇದರಿಂದ 'ಪುಷ್ಪ'ಗೆ ಮತ್ತಷ್ಟು ಪ್ರಚಾರ ಸಿಕ್ಕಿದೆ ಅನ್ನುವ ಮಾತುಗಳು ಕೇಳಿ ಬಂದಿವೆ.


Click it and Unblock the Notifications











