ಕನ್ನಡ ಚಿತ್ರರಂಗದಲ್ಲಿ ಶತ್ರುಗಳೇ ಇಲ್ಲದ ಏಕೈಕ ಸ್ಟಾರ್.. ಕನ್ನಡದ ರೆಬೆಲ್ ಸ್ಟಾರ್!
ಅಂಬರೀಶ್ ಕೇವಲ ಸಿನಿಮಾದಿಂದಷ್ಟೇ ಅಲ್ಲ. ಅವರ ವ್ಯಕ್ತಿತ್ವದಿಂದಲೂ ಜನರ ಮನಗೆದ್ದವರು. ಮಂಡ್ಯದ ಜನರು ಪ್ರೀತಿಯಿಂದ ಮಂಡ್ಯದ ಗಂಡು ಎಂದು ಕರೆದರು. ಅಂಬಿಯಿಂದ ಸಹಾಯ ಪಡೆದವರು ಕಲಿಯುಗದ ಕರ್ಣ ಎಂದು ಹೊಗಳಿದರು. ಅಂಬರೀಶ್ ರೀಲ್ ಲೈಫೇ ಬೇರೆ. ರಿಯಲ್ ಲೈಫೇ ಬೇರೆ. ತೆರೆಮೇಲೆ ಹೇಗೆ ರೆಬಲ್ ಆಗಿರುತ್ತಿದ್ದರೂ, ಹಾಗೇ ತೆರೆಹಿಂದೆನೂ ರೆಬೆಲ್ ಆಗಿರುತ್ತಿದ್ದರು. ಇದೊಂದು ಸಾಮ್ಯತೆಯನ್ನು ಕಾಣಬಹುದಾಗಿತ್ತು.
ಅಂಬರೀಶ್ ನೋಡವುದಕ್ಕೆ ರೆಬೆಲ್ ಅಂತ ಕಂಡರೂ, ಜಾಲಿ ಮನುಷ್ಯ. ಮಗುವಿನಂತಹ ಮನಸ್ಸು. ಮಾತಿನಿಂದಲೇ ಮೋಡಿ ಮಾಡುವ ಮೋಡಿಗಾರ. ಎದುರಿಗಿದ್ದವರನ್ನು ಸದಾ ನಗಿಸುವ ಸರದಾರ ರೆಬೆಲ್ ಸ್ಟಾರ್ ಅಂಬರೀಶ್. ಸ್ಯಾಂಡಲ್ವುಡ್ನ ಸೂಪರ್ಸ್ಟಾರ್ ಆಗಿದ್ದರೂ, ಫ್ಯಾಮಿಲಿ ಮ್ಯಾನ್ ಆಗಿದ್ದರು. ಸ್ನೇಹಿತರೆಂದರೆ ಪಂಚ ಪ್ರಾಣ. ಅಭಿಮಾನಿಗಳೇ ಸರ್ವಸ್ವ ಎಂದು ಬದುಕಿದ್ದು ಇದೇ ರೆಬೆಲ್ ಸ್ಟಾರ್.
ಸ್ಟಾರ್ಡಮ್, ಅಧಿಕಾರ, ಸೋಲು-ಗೆಲುವು ಇದ್ಯಾವುದಕ್ಕೂ ಕೇರ್ ಮಾಡದ ಏಕೈಕ ವ್ಯಕ್ತಿ ರೆಬೆಲ್ ಸ್ಟಾರ್ ಅಂಬರೀಶ್. ಇಂದು ಅಂಬಿಗೆ 70ನೇ ಹುಟ್ಟುಹಬ್ಬ, ಅಂಬರೀಶ್ ಇಂದು ಬದುಕಿದ್ದರೆ, ಅವರ ಅಪಾರ ಅಭಿಮಾನಿಗಳು, ಸ್ನೇಹಿತರ ಬಳಗ, ಕುಟುಂಬದೊಂದಿಗೆ ಗ್ರ್ಯಾಂಡ್ ಆಗಿ ಆಚರಿಸಿಕೊಳ್ಳುತ್ತಿದ್ದರು. ಇಂತಹದ ಸಂದರ್ಭದಲ್ಲಿ ಅಂಬಿ ಕುರಿತ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ.

ಅಂಬಿ ಹೀರೊ ಆದ ಮೊದಲ ವಿಲನ್
'ನಾಗರಹಾವು' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅಂಬರೀಶ್ ಎಂಟ್ರಿ ಕೊಟ್ಟಿದ್ದು ಗೊತ್ತೇ ಇದೆ. ಮೊದಲ ಖಳನಾಯಕನಾಗಿ ವೃತ್ತಿ ಜೀವನ ಆರಂಭಿಸಿದ್ದ ಅಂಬರೀಶ್ ತನ್ನ ಚಾರ್ಮ್ನಿಂದಲೇ ನಾಯಕನಾಗಿ ಬಡ್ತಿ ಪಡೆದಿದ್ದರು.

ಅಂಬಿಗೆ 'ಅಂತ'ದಿಂದ ಸ್ಟಾರ್ ಪಟ್ಟ
'ನಾಗರಹೊಳೆ', 'ಪಡುವಾರಹಳ್ಳಿ ಪಾಂಡವರು' ಸೇರಿದಂತೆ ಇನ್ನು ಕೆಲವು ಸಿನಿಮಾಗಳಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದರೂ, ಅಂಬಿ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದವು. 1981ರಲ್ಲಿ ತೆರೆಕಂಡ 'ಅಂತ' ಸಿನಿಮಾ ಅಂಬಿಯ ವೃತ್ತಿ ಬದುಕನ್ನೇ ಬದಲಾಯಿಸಿಬಿಟ್ಟಿತ್ತು. ಇಲ್ಲಿಂದ ಅಂಬರೀಶ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಗೆಲುವಿನ ರುಚಿ ನೋಡುತ್ತಾ ಮುಂದೆ ಸಾಗಿತ್ತು.

ಅಂಬಿ ಸಿನಿಮಾ ಇಷ್ಟವಿರಲಿಲ್ಲ
ರೆಬೆಲ್ ಸ್ಟಾರ್ ಅಂಬರೀಶ್ಗೆ ಆರಂಭದ ದಿನಗಳಲ್ಲಿ ಸಿನಿಮಾ ಇಷ್ಟವಿರಲಿಲ್ಲ. ಒತ್ತಾಯದ ಮೇಲೆ 'ನಾಗರಹಾವು' ಸಿನಿಮಾದ ಜಲೀಲಾ ಪಾತ್ರದಲ್ಲಿ ನಟಿಸಿದ್ದರು. ಇಲ್ಲಿಂದ ನಿಧಾನವಾಗಿ ನಟನೆಯಲ್ಲಿ ಆಸಕ್ತಿ ಬೆಳೆಯುತ್ತಾ ಹೋಯಿತು.

ಕುತ್ತೆ ಕನ್ವರ್ ಲಾಲ್ ಬೋಲೊ ಡೈಲಾಗ್ ಫೇಮಸ್
ಕ್ಯಾಮರಾ ಹಿಂದೆ ರೆಬೆಲ್ ಸ್ಟಾರ್ ಜಾಲಿ ವ್ಯಕ್ತಿ. ನೋಡುವುದಕ್ಕೆ ಗಂಭೀರ ಅಂತ ಅನಿಸಿದರೂ ಹಾಸ್ಯ ಪ್ರವೃತ್ತಿ ಹೊಂದಿದ್ದ ವ್ಯಕ್ತಿ. ಆದರೆ ತೆರೆ ಮೇಲೆ ಆಂಗ್ರಿ ಯಂಗ್ ಮ್ಯಾನ್. 'ಅಂತ' ಸಿನಿಮಾದ ಕುತ್ತೆ ಕನ್ವರ್ ನಟಿ ಕನ್ವರ್ ಲಾಲ್ ಬೋಲೊ ಡೈಲಾಗ್ ಅನ್ನು ಸಿನಿಪ್ರಿಯರು ಇಂದಿಗೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ.

ದಿಗ್ಗಜರೆಲ್ಲರೂ ಸ್ನೇಹಿತರು
ಅಂಬರೀಶ್ ಅಂದರೆ ಸ್ನೇಹ ಜೀವಿ. ಸ್ನೇಹಿತರಿಗಾಗಿ ಸದಾ ಮಿಡಿಯುತ್ತಿದ್ದ ಜೀವ. ಡಾ. ರಾಜ್ಕುಮಾರ್ರಿಂದ ಹಿಡಿದು ವಿಷ್ಣುವರ್ಧನ್, ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಬಾಬು ಎಲ್ಲರೂ ಆತ್ಮೀಯ ಸ್ನೇಹಿತರಾಗಿದ್ದರು.

'ಅಂಬಿ ಅಂದರೆ ಮನರಂಜನೆ
ಅಂಬರೀಶ್ ಚಿತ್ರರಂಗದಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಮನರಂಜನೆ ನೀಡುವುದಕ್ಕಾಗಿಯೇ ಇದ್ದಾರೆ ಅನ್ನುವಂತಾಗಿತ್ತು. ಸಿನಿಮಾ ಇರಲಿ, ಇಲ್ಲಾ ರಾಜಕೀಯ ಇರಲಿ ಅಂಬಿ ಬದಲಾಗಿದ್ದೇ ಇಲ್ಲ. ಎಲ್ಲರನ್ನೂ ನಗಿಸುತ್ತಲೇ ಇದ್ದ ವ್ಯಕ್ತಿ ಅಂಬರೀಶ್.

ರಾಜಕೀಯದಲ್ಲೂ ಅಂಬಿ ಸಕ್ಸಸ್
ರೆಬೆಲ್ ಸ್ಟಾರ್ ಅಂಬರೀಶ್ ಸಿನಿಮಾದಲ್ಲಷ್ಟೇ ಅಲ್ಲ ರಾಜಕೀಯದಲ್ಲೂ ಯಶಸ್ಸು ಕಂಡ ನಟ. ಜನತಾದಳ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅಂಬರೀಶ್ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಅತ್ಯುನ್ನತ ಪ್ರಶಸ್ತಿ ಲಭಿಸಿದೆ.
ಅಂಬಿ ಸುಮಾರು 200ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯಕ್ಕಾಗಿ ಹಾಗೂ ಸೇವೆಗಾಗಿ ಹಲವು ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ರಾಜ್ಯದ ವಿಶೇಷ ಪ್ರಶಸ್ತಿ, ಫಿಲ್ಮ್ ಫೇರ್ ಅತ್ಯುತ್ತಮ ನಟ, ಫಿಲ್ಮ್ ಫೇರ್ ಜೀವಮಾನ ಸಾಧನೆ, ಆಂಧ್ರ ಸರ್ಕಾರದ ನಂದಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.


Click it and Unblock the Notifications











