ಯಶ್ಗೆ ಸಿಟ್ಟಿನಿಂದ ಊಟ ಮಾಡಿಸಿದ ಐರಾ: ಮುದ್ದಾದ ವಿಡಿಯೋ ವೈರಲ್
ಮಕ್ಕಳ ಆಟ ತುಂಟಾಟಗಳು ಒಂದೆರಡಲ್ಲ. ಹಾಗೆಯೇ ಸಿಟ್ಟೂ. ಕೊರೊನಾ ವೈರಸ್ ಕಾರಣದಿಂದ ಹೆಚ್ಚಿನವರು ಈಗ ಮನೆಯಲ್ಲಿಯೇ ಉಳಿದುಕೊಳ್ಳುವಂತಾಗಿದೆ. ಇದರಿಂದಾಗಿ ಮನೆಯವರು, ಮಕ್ಕಳ ಜತೆ ಕಾಲ ಕಳೆಯಲು ಸಮಯ ಸಿಗುತ್ತಿದೆ. ಹೆಚ್ಚಿನವರಿಗೆ ವರ್ಕ್ ಫ್ರಂ ಹೋಮ್ ಜವಾಬ್ದಾರಿ ಇದ್ದರೂ ಒಂದಷ್ಟು ವಿರಾಮವೂ ಸಿಗುತ್ತಿದೆ. ಇನ್ನು ವ್ಯಾಪಾರ ವಹಿವಾಟು ಮತ್ತಿತರ ಕೆಲಸ ಮಾಡುವವರಿಗೆ ಸಂಕಷ್ಟದ ಸಮಯವೂ ಹೌದು.
Recommended Video
ಸೆಲೆಬ್ರಿಟಿಗಳಿಗೂ ಮನೆಯವರೊಂದಿಗೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಕ್ಕಿದೆ. ಚಿತ್ರೀಕರಣ, ಕಾರ್ಯಕ್ರಮಗಳೆಂದು ಸದಾ ಹೊರಗೆ ಓಡಾಡುತ್ತಿದ್ದ ಸೆಲೆಬ್ರಿಟಿಗಳು ಮನೆಯಲ್ಲಿಯೇ ಇರಬೇಕಾದ ಸ್ವಯಂ ದಿಗ್ಬಂಧನಗಳನ್ನು ಒಪ್ಪಿಕೊಂಡಿದ್ದಾರೆ. ನಟ ಯಶ್ 'ಕೆಜಿಎಫ್ 2' ಚಿತ್ರೀಕರಣದಿಂದ ಬ್ರೇಕ್ ಸಿಕ್ಕಿರುವುದರಿಂದ ಮಕ್ಕಳೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಅದರ ಮುದ್ದಾದ ವಿಡಿಯೋ ಒಂದನ್ನು ಯಶ್ ಹಂಚಿಕೊಂಡಿದ್ದಾರೆ.

ಐರಾ ಕೋದಲು ಮುಡಿಕೊಟ್ಟಿದ್ದರು
ಇತ್ತೀಚೆಗಷ್ಟೇ ನಂಜನಗೂಡಿನಲ್ಲಿ ಮಗಳು ಐರಾಳ ಮುಡಿಕೊಟ್ಟು ಯಶ್-ರಾಧಿಕಾ ದಂಪತಿ ಚೆಂದದ ಫೋಟೊಗಳನ್ನು ಹಂಚಿಕೊಂಡಿದ್ದರು. ಈಗ ಐರಾಳ ತಲೆಯಲ್ಲಿ ಸಣ್ಣನೆ ಕೂದಲುಗಳು ಬರುತ್ತಿವೆ.

ಯಶ್ಗೆ ಊಟ ಮಾಡಿಸಿದ ಐರಾ
ಮನೆಯಲ್ಲಿ ಮಕ್ಕಳಿಗೆ ಅಪ್ಪ-ಅಮ್ಮ ಊಟ ಮಾಡಿಸುವುದು ಸಹಜ. ಆದರೆ ಯಶ್ ಮಗಳು ಐರಾ, ಅಪ್ಪನಿಗೇ ಊಟ ಮಾಡಿಸುವಷ್ಟು ದೊಡ್ಡವಳಾಗಿದ್ದಾಳೆ. ತನಗೆ ಊಟ ಮಾಡಿಸುವಂತೆಯೇ ಐರಾ, ಚಮಚದಲ್ಲಿ ಅಪ್ಪನಿಗೆ ಊಟ ಮಾಡಿಸುವ ವಿಡಿಯೋ ವೈರಲ್ ಆಗಿದೆ.

ತಾನು ಊಟ ಮಾಡೊಲ್ಲ ಎಂದು ಪಟ್ಟು
ಮಗಳಿಗೆ ಊಟ ಮಾಡಿಸುವ ಕಷ್ಟ ಎಷ್ಟು ಎನ್ನುವುದು ಯಶ್ ಅರಿವಿಗೆ ಬಂದಿದೆ. ಏಕೆಂದರೆ ತಾನು ಊಟ ಮಾಡೊಲ್ಲ ಎಂದು ಹಠ ಹಿಡಿಯುವ ಐರಾ, ಅಪ್ಪ ಮಾತ್ರ ತಾನು ಕೊಟ್ಟಿದ್ದನ್ನು ತಿನ್ನಲೇಬೇಕು ಎಂದು ಪಟ್ಟು ಹಿಡಿಯುತ್ತಾಳೆ.

ಮುನಿಸಿಕೊಳ್ಳುವ ಐರಾ
ನೀನು ತಿಂದರೆ ಮಾತ್ರ ನಾನು ತಿನ್ನೋದು.. ನೀನು ತಿನ್ನದೆ ಇದ್ದರೆ ನಾನು ತಿನ್ನೊಲ್ಲ. ಗುಡ್ ಗರ್ಲ್ ಅಲ್ವಾ ತಿನ್ನು ಎಂದು ಯಶ್ ಎಷ್ಟೇ ಮನವಿ ಮಾಡಿಕೊಂಡರೂ ಐರಾ ಕೇಳುವುದಿಲ್ಲ. ಯಶ್ ಆಕೆಗೆ ಊಟ ಮಾಡಿಸಲು ಹೋದಾಗ ಮುನಿಸಿಕೊಳ್ಳುತ್ತಾಳೆ. ಎಲ್ಲ ಚೆಲ್ಲಿಕೊಂಡು ತಿನ್ನಿಸ್ತೀಯಲ್ಲ ಎಂದು ಯಶ್ ನಗುತ್ತಾ ಹೇಳುವ ವಿಡಿಯೋ ಮುದ್ದಾಗಿದೆ.
ಮನೆಯಲ್ಲಿಯೇ ಇರಿ- ಯಶ್ ಮನವಿ
'ನಾನು ಐರಾಗೆ ಶರಣಾದೆ' ಎನ್ನುವ ಮೂಲಕ ಯಶ್, ಹೋಮ್ ಕ್ವಾರೆಂಟೀನ್ನ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಖುಷಿಯನ್ನು ತಮ್ಮ ಟಿ ಶರ್ಟ್ ಒಪ್ಪಿಕೊಂಡಿಲ್ಲದಿದ್ದರೂ... ಎಲ್ಲರೂ ಮನೆಯಲ್ಲಿಯೇ ಸುರಕ್ಷಿತವಾಗಿರಿ ಎಂದು ಸಲಹೆಯನ್ನೂ ನೀಡಿದ್ದಾರೆ.

ಚಪ್ಪಾಳೆ ತಟ್ಟಿದ ಪುಟ್ಟ ಐರಾ
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸತತ ಪ್ರಯತ್ನ ನಡೆಸುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಜನತಾ ಕರ್ಫ್ಯೂ ದಿನ ಸಂಜೆ ಐದು ಗಂಟೆಗೆ ಚಪ್ಪಾಳೆ ಹೊಡೆಯುವ ಮೂಲಕ ಧನ್ಯವಾದ ಸಲ್ಲಿಸಲಾಗಿತ್ತು. ಅಂದು ಮನೆಯಲ್ಲಿ ಅಜ್ಜ-ಅಜ್ಜಿಯ ಜತೆಗೆ ಪುಟಾಣಿ ಐರಾ ಕೂಡ ಚಪ್ಪಾಳೆ ಹೊಡೆದು ಕೃತಜ್ಞತೆ ಸಲ್ಲಿಸಿದ್ದಳು.
ಪುಟಾಣಿ ಕೈ ಸೇರಿಕೊಂಡಿದೆ
'ನಮಗಾಗಿ ಕೆಲಸ ಮಾಡುತ್ತಿರುವ ಜನರಿಗೆ ವಂದನೆ ಸಲ್ಲಿಸುತ್ತಿದ್ದೇವೆ, ನಾವು ದೇಶವಾಗಿ ಒಂದುಗೂಡಿದ್ದೇವೆ ಎಂದು ಹೇಳಲು ಈ ಪುಟಾಣಿ ಕೈಗಳು ಕೂಡ ನಮ್ಮ ಜತೆ ಸೇರಿಕೊಂಡಿದೆ. ಚಪ್ಪಾಳೆ ತಟ್ಟಿ ಹುರುದುಂಬಿಸುವ ಮೂಲಕ ನಮ್ಮ ಗೌರವವನ್ನು ಸೂಚಿಸಿದ್ದೇವೆ. ಜವಾಬ್ದಾರಿಯುತ ನಾಗರಿಕರಾಗಿ. ಸುರಕ್ಷಿತರಾಗಿ ಇರಿ' ಎಂದು ರಾಧಿಕಾ ಪಂಡಿತ್ ಹೇಳಿದ್ದರು.


Click it and Unblock the Notifications











