"ಅನೇಕರಿಗೆ ಸಿಗುವಂತಹ ಬೆಸ್ಟ್ ಆಕ್ಟರ್ ಅವಾರ್ಡ್ ನನಗೆ ಸಿಗಲೇ ಇಲ್ಲ."; ಪದ್ಮಭೂಷಣ ಅನಂತ್ನಾಗ್
ಕನ್ನಡದ ಹಿರಿಯ ನಟ ಅನಂತ್ನಾಗ್ ಅವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿಯನ್ನು ಘೋಷಿಸಿದೆ. ಕಳೆದ ಐದಾರು ದಶಕಗಳಿಂದ ಕಲಾಕ್ಷೇತ್ರದಲ್ಲಿ ದುಡಿಯುತ್ತಿರುವ ಅನಂತ್ನಾಗ್ ನಾಟಕಗಳಲ್ಲಿ, ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರೂ, ಹಿಂದಿ, ತೆಲುಗು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದು ಇವರ ಹೆಗ್ಗಳಿಕೆ.
ಇಂದಿಗೂ ಸಿನಿಮಾಗಳ ಆಯ್ಕೆಯಲ್ಲಿ ಚೂಸಿಯಾಗಿದ್ದರೂ ಅನಂತ್ ನಾಗ್ ಇಂದಿಗೂ ನಟಿಸುವ ಉತ್ಸಾಹವನ್ನು ಕಳೆದುಕೊಂಡಿಲ್ಲ. ಇವರ ಕಲಾ ಸೇವೆಯನ್ನು ಗುರುತಿಸಿ ಕನ್ನಡಿಗರು ಅನಂತ್ನಾಗ್ ಅವರಿಗೆ ಪದ್ಮ ಪ್ರಶಸ್ತಿಯನ್ನು ನೀಡಬೇಕು ಎಂದು ಅಭಿಯಾನ ಆರಂಭಿಸಿದ್ದರು. ಅದಕ್ಕೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಪುನೀತ್ ರಾಜ್ಕುಮಾರ್ ಸೇರಿದಂತೆ ಚಿತ್ರರಂಗದ ಗಣ್ಯರು ಕೂಡ ಈ ಅಭಿಯಾನದಲ್ಲಿ ಭಾಗಿಯಾಗಿದ್ದರು.

ಮೂರು ವರ್ಷಗಳ ಅಭಿಯಾನದ ಬಳಿಕ ಅನಂತ್ನಾಗ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆಯಾಗಿದೆ. ಈ ಖುಷಿಯ ಸಂದರ್ಭದಲ್ಲಿ ಅನಂತ್ನಾಗ್ ಶ್ರೀ ರಾಘವೇಂದ್ರ ಚಿತ್ರವಾಣಿ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದರು. ಹಿರಿಯ ಪತ್ರಕರ್ತ ಸದಾಶಿವ ಶಣೈ ಅವರೊಂದಿಗಿನ ಮಾತುಕತೆಯಲ್ಲಿ ಪದ್ಮ ಭೂಷಣ ಪ್ರಶಸ್ತಿಯ ಬಗ್ಗೆ ಮನ ಬಿಚ್ಚಿ ಮಾತಾಡಿದ್ದಾರೆ. ಅದರ ಝಲಕ್ ಇಲ್ಲಿದೆ.
ಈ ಸಂದರ್ಶನದಲ್ಲಿ 50 ವರ್ಷಗಳಿಂದ ಕೇಂದ್ರ ಸರ್ಕಾರದಿಂದ ತನಗೆ ಬೆಸ್ಟ್ ಆಕ್ಟರ್ ಅನ್ನೋ ಪ್ರಶಸ್ತಿಯೇ ಬಂದಿಲ್ಲ. ಬೇರೆಯವರಿಗೆ ಈ ಪ್ರಶಸ್ತಿ ಸಿಕ್ಕಿತ್ತು. ನನಗೆ ಬಂದಿರಲಿಲ್ಲ. ಈ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ, ತನ್ನ ಸುತ್ತಮುತ್ತ ಇಂತಹದ್ದೊಂದು ಚರ್ಚೆ ನಡೆದಾಗ ತನ್ನ ಮನಸ್ಸಿನಲ್ಲೂ ಈ ಆಲೋಚನೆ ಬಂದಿದ್ದು ಇದೆ ಎಂದಿದ್ದಾರೆ.

"ಪದ್ಮ ಪ್ರಶಸ್ತಿ ಆಕ್ಟಿಂಗ್ಗೆ ಬಂದಿದೆ ಅಂತ ನಾನು ಹೇಳುವುದಿಲ್ಲ. ನೃತ್ಯ, ನಾಟ್ಯ, ಯಕ್ಷಗಾನ, ತಾಳ ಮದ್ದಳೆ, ಬಯಲಾಟ ಅವುಗಳನ್ನು ನೋಡಿ ಬೆಳೆದವನು ನಾನು. ಸಿನಿಮಾರಂಗದಲ್ಲಿ ಇದ್ದರೂ, ನಾಟಕ ರಂಗದಲ್ಲಿ ಬಂದಿದ್ದರೂ ಕೂಡ ಈ ತರದ ಗೌರವ 50 ವರ್ಷಗಳಲ್ಲಿ ಸಿಗಲಿಲ್ಲ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಕಲಾ ಪ್ರಕಾರದಿಂದ ಸಿಕ್ಕಿದೆ ಅಂದರೆ ಒಪ್ಪುತ್ತೇನೆ. ಆದರೆ, ಆ ಕಲಾಪ್ರಕಾರದಲ್ಲಿ ನಾಟಕಗಳಿಗಾಗಲಿ, ಚಿತ್ರರಂಗದ ಪ್ರಕಾರಗಳಿಗಾಗಲಿ 50 ವರ್ಷಗಳ ಕಾಲ ಕೇಂದ್ರದಿಂದ ಆ ರೀತಿ ಬರಲೇ ಇಲ್ಲ. ಅನೇಕರಿಗೆ ಸಿಗುವಂತಹ ಬೆಸ್ಟ್ ಆಕ್ಟರ್ ಅವಾರ್ಡ್ ನನಗೆ ಸಿಗಲೇ ಇಲ್ಲ." ಎಂದು ಅನಂತ್ ನಾಗ್ ಹೇಳಿದ್ದಾರೆ.
ಹಾಗೇ ಜನರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಕೊಡುತ್ತಾರೆ ಅನ್ನೋದು ಗೊತ್ತಿರಲಿಲ್ಲ. ಪದ್ಮ ಪ್ರಶಸ್ತಿಯನ್ನು ಯಾರಿಗೆ ಕೊಡುತ್ತಾರೆ ಅನ್ನೋ ಸ್ಪಷ್ಟತೆ ಹಾಗೂ ಪಾರದರ್ಶಕತೆ ಎರಡೂ ಇರಲಿಲ್ಲ. ನರೇಂದ್ರ ಮೋದಿಯವರು ಮೂರು ವರ್ಷಗಳ ಹಿಂದೆ ಜನರು ಪಾಲ್ಗೊಳ್ಳಬೇಕು ಅಂತ ಕರೆ ಕೊಟ್ಟಾಗ ಅದಕ್ಕೆ ಕನ್ನಡಿಗರು ಸ್ಪಂದಿಸಿದ್ದರು. ಕನ್ನಡಿಗರು ಬಹಳ ಸ್ವಾಭಿಮಾನಿಗಳು ಯಾರಿಗೂ ಯಾವುದನ್ನೂ ಕೇಳುವುದಿಲ್ಲ. ಆ ರೀತಿ ಬಂದಾಗ ತನ್ನ ಹೆಸರಿನ ಜೊತೆಗೆ ಹಲವು ಜನರ ಹೆಸರನ್ನು ಸೂಚಿಸಿದ್ದರು. ಮೂರು ವರ್ಷದಿಂದ ಕನ್ನಡಿಗರು ಅಭಿಯಾನ ಮಾಡಿದ್ದರಿಂದ ಈ ಪ್ರಶಸ್ತಿ ಬಂದಿದೆ ಎಂದು ಈ ಸಂದರ್ಶನದಲ್ಲಿ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ಅನಂತ್ನಾಗ್ ಅವರಿಗೆ ಯಾಕೆ ಅಭಿಮಾನಿ ಸಂಘಗಳು ಇಲ್ಲ. ಅಭಿಮಾನಿಗಳ ಸಂಘ ಕಟ್ಟುತ್ತೇವೆ ಅಂತ ಬಂದಾಗ ಯಾಕೆ ಬೇಡವೆಂದಿದ್ದರು ಅನ್ನೋದ ಸಂಗತಿಯನ್ನು ಹೇಳಿಕೊಂಡಿದ್ದಾರೆ. "ರಾಜ್ಕುಮಾರ್ ಅಭಿಮಾನಿಗಳ ಸಂಘದ ಬಳಿಕ ಅನೇಕ ನನ್ನ ಹತ್ತಿರ ಹಾಗೂ ನನ್ನ ತಮ್ಮನ ಹತ್ತಿರ ಬಂದಿದ್ದರು. ಅವರ ಹೆಸರಿಗೆ ಮಾಡಿದ್ದೀರ ಸಾಕು. ನನ್ನ ಹೆಸರಿಗೆಲ್ಲ ಅಭಿಮಾನಿ ಸಂಘ ಮಾಡುವುದಕ್ಕೆ ಹೋಗಬೇಡಿ ಎಂದಿದ್ದೆ. ಅಷ್ಟರಲ್ಲಿ ನಾನು ರಾಜಕೀಯದ ಕಡೆಗೆ ಒಲವು ತೋರಿಸಿದ್ದೆ. ರಾಜ್ಕುಮಾರ್ ಅಭಿಮಾನಿಗಳ ಸಂಘ ಇದ್ದೇ ಇದೆ. ನೀವು ಅಲ್ಲಿ ಸೇರಬಹುದು. ನಮ್ಮ ಹೆಸರಲ್ಲಿ ಇನ್ನೊಂದು ಶುರು ಮಾಡುವುದು ಬೇಡ. ನಾವು ಯಾವ ಪಕ್ಷಕ್ಕೆ ಒಲವು ತೋರಿಸಿದ್ದೇವೋ ನಿಮಗೆ ಇಷ್ಟವಿದ್ದರೆ ಆ ಪಕ್ಷ ಸೇರಿಸಿಕೊಳ್ಳಿ. ನಾನು ಸೇರಿಸುತ್ತೇನೆ ಅಂತ ಹೇಳುತ್ತಿದ್ದೆ. ಅಭಿಮಾನಿಗಳ ಸಂಘ ಇಲ್ಲ ಅನ್ನೋ ದೋಷ ಏನಾದರೂ ಇದ್ದರೆ ಅದಕ್ಕೆ ಕಾರಣ ನಾನೇ." ಎಂದಿದ್ದಾರೆ.


Click it and Unblock the Notifications











