"ವೈದ್ಯರು ಇನ್ನು 6 ತಿಂಗಳು ಇದ್ರೆ ಹೆಚ್ಚು ಅಂದಿದ್ರು, ಛಲಗಾತಿ ಒಂದೂವರೆ ವರ್ಷ ಹೋರಾಡಿದಳು": ಅಪರ್ಣ ಪತಿ
ಕನ್ನಡದ ಖ್ಯಾತ ನಿರೂಪಕಿ ಅಪರ್ಣ ನಿನ್ನೆ (ಜುಲೈ 11) ಇಹಲೋಕ ತ್ಯಜಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಅಪ್ಪಟ ಕನ್ನಡದ ನಿರೂಪಕಿಯ ನಿಧನದ ಸುದ್ದಿ ಕೇಳಿ ಕನ್ನಡಿಗರಿಗೆ ಶಾಕ್ ಆಗಿದೆ. ಅಪರ್ಣ ಅವರ ನಿಧನದ ಬಗ್ಗೆ ಪತಿ ನಾಗರಾಜ್ ವಸ್ತಾರೆ ಈ ಹಿಂದೆ ಫೇಸ್ಬುಕ್ನಲ್ಲಿ ವಿಡಿಯೋ ಮಾಡಿ ಮಾಹಿತಿ ಹಂಚಿಕೊಂಡಿದ್ದರು.
ಬಳಿಕ ತಮ್ಮ ಪತ್ನಿ ಅಪರ್ಣ ನಿಧನದ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ತಮ್ಮ ಅಪರ್ಣ ಅವರಿಗೆ ಕ್ಯಾನ್ಸರ್ ರೋಗ ಪತ್ತೆ ಆಗಿ ಅವರು ಕೊನೆಯುಸಿರು ಎಳೆಯುವ ಕ್ಷಣದವರೆಗೂ ಕನ್ನಡಿಗರಿಗೆ ಹಾಗೂ ಅವರ ಅಭಿಮಾನಿಗಳಿಗಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅಪರ್ಣ ಪತಿ ನಾಗರಾಜ್ ವಸ್ತಾರೆ ಅವರ ಭಾವುಕ ಮಾತುಗಳು ಹೀಗಿವೆ.

"ಇಡೀ ಕರ್ನಾಟಕಕ್ಕೆ ಸೇರಿದವಳು"
"ಅವಳು ನನಗೆ ಸಲ್ಲುವುದಕ್ಕೆ ಮೊದಲೇನೆ ಇಡೀ ಕರ್ನಾಟಕಕ್ಕೆ ಸೇರಿದವಳು. ಅವಳ ಒಂದೇ ಒಂದು ಆಸೆ ಇತ್ತು. ಮಾಧ್ಯಮದವರ ಮುಂದೆ ನಿಂತು. ಏನಾಯ್ತು ಅಂತ ಹೇಳು ಅಂತ. ಅಷ್ಟನ್ನು ನಾನು ಎರಡು ಗಂಟೆಗಳ ಹಿಂದೆ ಫೇಸ್ ಬುಕ್ ಪೋಸ್ಟ್ನಲ್ಲಿ ಹೇಳಿದ್ದೇನೆ. " ಎಂದು ಅಪರ್ಣ ಪತಿ ನಾಗರಾಜ್ ವಸ್ತಾರೆ ಹೇಳಿಕೊಂಡಿದ್ದಾರೆ.
"ಅವಳು ಛಲಗಾತಿ"
"ಎರಡು ವರ್ಷದ ಹಿಂದೆ ಇದೇ ಜುಲೈನಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಂತ ತಪಾಸಣೆಯಲ್ಲಿ ಗೊತ್ತಾಯ್ತು. ಅದಾಗಲೇ ನಾಲ್ಕನೇಯ ಹಂತದಲ್ಲಿ ಇತ್ತು. ಅದನ್ನು ನೋಡಿದ ವೈದ್ಯರು ಇನ್ನು ಆರು ತಿಂಗಳು ಇದ್ದರೆ ಹೆಚ್ಚು ಅಂತ ಹೇಳಿದ್ರು. ಆದರೆ, ಅವಳು ಛಲಗಾತಿ. ಏನಾದರೂ ಮಾಡಿ ಗೆಲ್ತೀನಿ ಅನ್ನುವಂತಹ ಛಲವಿತ್ತು. ಅದಾದ ಮೇಲೂ ಒಂದೂವರೆ ವರ್ಷ ಅಂತ ಇಟ್ಟುಕೊಳ್ಳೋಣ ಜನವರಿಯವರೆಗೂ ಹೋರಾಡಿದಳು." ಎಂದು ಭಾವುಕರಾಗಿದ್ದಾರೆ.

"ನಾವಿಬ್ಬರೂ ಜಂಟಿಯಾಗಿ ಸೋತಿದ್ದೇವೆ"
"ಫೆಬ್ರವರಿಯಿಂದ ಸ್ವಲ್ಪ ಸೋತಳು. ಇದು ದೇಹವೇ ದೇಹವನ್ನು ಬಾಧಿಸುವ ಒಂದು ವ್ಯಾದಿ. ಕ್ಯಾನ್ಸರ್ ಅನ್ನೋದು ನೀನಲ್ಲದ ಇನ್ನೊಂದು ವ್ಯಕ್ತಿತ್ವವನ್ನು ಹೇರುವುದಕ್ಕೆ ಬಯಸುತ್ತೆ. ಅವಳು ಧೀರೆ. ಅವಳು ಇಷ್ಟು ವರ್ಷ ಮಣಿಸಿದಳು. ಆದರೆ ಆಗಲಿಲ್ಲ. ನಾವಿಬ್ಬರೂ ಜಂಟಿಯಾಗಿ ಇದರಲ್ಲಿ ಸೋತಿದ್ದೀವಿ ಅಂತ ನಿಮ್ಮ ಎದುರು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ಬರುವ ಅಕ್ಟೋಬರ್ಗೆ ಅವಳಿಗೆ 58 ವರ್ಷ ತುಂಬುತ್ತಿತ್ತು." ಎಂದು ಪತಿ ನಾಗರಾಜ್ ವಸ್ತಾರೆ ತಿಳಿಸಿದ್ದಾರೆ.
"ದೇಹ ನನಗೊಂದು ಮಾಯಕ"
"ಅವಳ ದೇಹ ನನಗೊಂದು ಮಾಯಕ ಅಂತ ಅನಿಸುತ್ತೆ. ಅವಳ ನಿಜವಾದ ವಯಸ್ಸನ್ನು ಯಾವತ್ತೂ ತೋರಿಸಲಿಲ್ಲ. ಯಾವಾಗಲೂ ವಯಸ್ಸ ಆಗದ ಅಚ್ಚರಿ ಎಂದು ಹೇಳುತ್ತಿತ್ತು. 9, 9.30 ಸುಮಾರಿನಲ್ಲಿ ದೇಹ ತನ್ನನ್ನು ತಾನು ನಿಧಾನವಾಗಿ ಹಿಂಪಡೆದುಕೊಳ್ತು ಅಂತ ಹೇಳುವುದಕ್ಕೆ ಬಯಸುತ್ತೇನೆ." ಎಂದು ಪತಿ ನಾಗರಾಜ್ ವಸ್ತಾರೆ ಭಾವುಕರಾಗಿ ಮಾಹಿತಿ ನೀಡಿದ್ದಾರೆ.


Click it and Unblock the Notifications











