ಅಪರ್ಣಗೆ ನೆಮ್ಮದಿಯಾಗಿ ಬದುಕುವ ಆಸೆ ಇತ್ತು; ಅದೇ ನಂಬಿಕೆಯಲ್ಲೇ ಕ್ಯಾನ್ಸರ್ ಎದುರಿಸಿದ್ದ 'ಕನ್ನಡತಿ'
ಕನ್ನಡಿಗರು ಇಂತಹದ್ದೊಂದು ಕೆಟ್ಟ ಸುದ್ದಿಯನ್ನು ನಿರೀಕ್ಷೆ ಮಾಡಿರಲಿಲ್ಲ. ಸುಮಧುರ ಕಂಠದ, ಅಚ್ಚ ಕನ್ನಡದಲ್ಲಿ ಸ್ವಚ್ಛವಾಗಿ ಮಾತಾಡುವ ಈ ಅಪರ್ಣ ವಸ್ತಾರೆ ಇನ್ನಿಲ್ಲ ಅನ್ನೋ ವಿಷಯ ಒಂದು ಕ್ಷಣಕ್ಕೆ ಅರಗಿಸಿಕೊಳ್ಳುವುದಕ್ಕೂ ಆಗಿರಲಿಲ್ಲ. ರಾತ್ರೋ ರಾತ್ರಿ ಬಿತ್ತರಗೊಂಡ ಈ ನೋವಿನ ಸುದ್ದಿಯಿಂದ ಕನ್ನಡಿಗರು ಇಂದಿಗೂ ಹೊರಬಂದಿಲ್ಲ.
ಎರಡು ವರ್ಷದಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದರೂ ಅಪರ್ಣ ಯಾರಿಗೂ ಈ ವಿಷಯವನ್ನು ಹೇಳಿರಲಿಲ್ಲ. ಅದರಲ್ಲಿ ಗೊತ್ತಿದ್ದಿದ್ದು ಕೆಲವೇ ಕೆಲವು ಸ್ನೇಹಿತೆಯರಿಗೆ ಮಾತ್ರ. ಪತಿ ನಾಗರಾಜ್ ವಸ್ತಾರೆ ಅವರೇ ಹೇಳಿದಂತೆ ಅಪರ್ಣ ಒಬ್ಬ ಛಲಗಾತಿ. ಈ ಕೆಟ್ಟ ಕಾಯಿಲೆಯನ್ನು ಗೆದ್ದೇ ಗೆಲ್ಲುತ್ತೇನೆ ಅನ್ನೋ ನಂಬಿಕೆಯಲ್ಲಿಯೇ ಎರಡು ವರ್ಷ ಬದುಕಿದ್ದರು.

ಆ ಹೋರಾಟ ಅಷ್ಟು ಸುಲಭದ್ದಾಗಿರಲಿಲ್ಲ. ಯಾಕಂದ್ರೆ, ವೈದ್ಯರಿಗೆ ನಂಬಿಕೆ ಇರಲಿಲ್ಲ. ಕ್ಯಾನ್ಸರ್ ಶ್ವಾಸಕೋಶವನ್ನು ಆವರಿಸಿಕೊಂಡಿತ್ತು. ನಾಲ್ಕನೇ ಹಂತದಲ್ಲಿ ಇದ್ದಿದ್ದರಿಂದ ಪತಿಯೇ ಹೇಳಿದ್ದರು ಕೊಟ್ಟಿದ್ದು ಕೇವಲ ಆರು ತಿಂಗಳು ಮಾತ್ರ. ಆದರೆ, ಅಪರ್ಣ ವಿಚಾರದಲ್ಲಿ ಚಮತ್ಕಾರ ನಡೆದು ಹೋಗಿತ್ತು. ಅದಕ್ಕೆ ಕಾರಣ ಬದುಕುವ ಆಸೆ.
ಅಪರ್ಣ ಅವರಿಗೆ ಬದುಕುವ ಆಸೆಯಿತ್ತು. "ಬದುಕುವ ಆಸೆ ತುಂಬಾ ಇತ್ತು. ಟ್ರೀಟ್ಮೆಂಟ್ ಅನ್ನು ಸರಿಯಾಗಿ ತೆಗೆದುಕೊಂಡಿದ್ದಳು ಬಿಡಲಿಲ್ಲ. ಅದೇ ಛಲದಿಂದಲೇ ಎರಡು ವರ್ಷ ಹೋರಾಟ ಮಾಡಿದಳು. ಗೊತ್ತಾದ ದಿನದಿಂದಲೂ ಅವಳು ಒಂದೂ ದಿನವೂ ಟ್ರೀಟ್ಮೆಂಟ್ ಅನ್ನು ಬಿಟ್ಟಿರಲಿಲ್ಲ. ಅಷ್ಟು ಅಚ್ಚು ಕಟ್ಟಾಗಿ ಚಿಕಿತ್ಸೆಯನ್ನು ಪಡೆದಿದ್ದಳು" ಎಂದು ಹಿರಿಯ ಗಾಯಕಿ ಬಿ ಆರ್ ಛಾಯಾ ಟಿವಿ9 ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಮುಂದಿನ ಜೀವನ ಆರಾಮಾಗಿ ಕಳೆಯಬೇಕು ಅಂತ ಅಂದುಕೊಂಡಿದ್ದರು. ಮನುಷ್ಯನಿಗೆ ದುಡ್ಡು ಬೇಡ. ಶ್ರೀಮಂತಿಕೆ ಬೇಡ. ಆರೋಗ್ಯ ಬೇಕು ಅನ್ನೋದು ಅವರಿಗೆ ಅರಿವಿಗೆ ಬಂದಿತ್ತು. ಅದಕ್ಕಾಗಿ ಬಹಳಷ್ಟು ಹೋರಾಟ ಮಾಡಿದ್ದರು. ಆದರೆ, ಕ್ಯಾನ್ಸರ್ ಅನ್ನೋದನ್ನು ಗೆಲ್ಲುವುದಕ್ಕೆ ಸಾಧ್ಯವಾಗಲೇ ಇಲ್ಲ.

ತನಗೆ ಕ್ಯಾನ್ಸರ್ ಇರುವ ವಿಷಯವನ್ನು ಯಾರಿಗೂ ಹೇಳುವುದಕ್ಕೆ ಇಷ್ಟ ಪಟ್ಟಿರಲಿಲ್ಲ. ತನ್ನ ನೋವು ತನ್ನ ಬಳಿಯೇ ಇರಬೇಕು ಅಂತ ಎಲ್ಲರಿಂದಲೂ ಮುಚ್ಚಿಟ್ಟಿದ್ದರು. ಅಪರ್ಣ ಅಗಲುವ ಎರಡು ದಿನಗಳ ಮುನ್ನವಷ್ಟೇ ಗಾಯಕಿ ಬಿ ಆರ್ ಛಾಯಾ ಫೋನ್ ಮಾಡಿದ್ದರು. ಆಗ ವೇಳೆನೂ ತಮಾಷೆಯಾಗಿ ಮಾತಾಡಿದ್ದರು. ಆದರೆ, ಆ ಮಾತುಗಳು ಕಣ್ಣೀರು ತರಿಸುತ್ತವೆ. "ನಾನು ಹೋದ್ಮೇಲೆ ಮಾಧ್ಯಮದವರು ಬಂದು ನಿಮಗೆ ಏನು ಅನಿಸುತ್ತೆ ಅಂತ ಕೇಳ್ತಾರೆ ಅವಾಗ ಏನು ಹೇಳ್ತೀಯಾ ಅಂತ ಕೇಳಿದ್ದಳು" ಎಂದು ಆ ದಿನದ ಮಾತುಗಳನ್ನು ನೆನಪಿಸಿಕೊಂಡು ಗಾಯಕಿ ಬಿ.ಆರ್. ಛಾಯಾ ಭಾವುಕರಾಗಿದ್ದಾರೆ.
ಅಪರ್ಣ ಅಂದುಕೊಂಡಂತೆ ಸ್ವಚ್ಚಂದದ ಬದುಕು ನಡೆಸಿದರು. ಆದರೆ, ಕೊನೆಯ ಎರಡು ವರ್ಷಗಳು ಅವರಿಗೆ ತೀರಾ ಕಷ್ಟದಾಯಕವಾಗಿತ್ತು. ಅಂದುಕೊಂಡಂತೆ ಬದುಕುವುದಕ್ಕೆ ಸಾಧ್ಯವಾಗಲಿಲ್ಲ. ಕ್ಯಾನ್ಸರ್ ಖುಷಿಯಿಂದ ಇರುವುದಕ್ಕೆ ಬಿಡಲಿಲ್ಲ. ನೋವಿ ಕೊಟ್ಟು ಬದುಕುವುದಕ್ಕೂ ಹೋರಾಟ ಮಾಡುವ ಸ್ಥಿತಿಗೆ ತಂದೊಡ್ಡಿತ್ತು.


Click it and Unblock the Notifications











