42 ವರ್ಷ ಪೂರೈಸಿದ 'ಪಲ್ಲವಿ ಅನು ಪಲ್ಲವಿ'; ಅನಿಲ್ ಕಪೂರ್ ಏನಂದ್ರು?
ಭಾರತೀಯ ಸಿನಿಮಾಗಳಲ್ಲಿ ಹಾಡುಗಳಿಗೆ ಬಹಳ ಮಹತ್ವ ಇದೆ. ಹಾಡುಗಳಿಂದಲೇ ಗೆದ್ದ ಸಿನಿಮಾಗಳ ಸಂಖ್ಯೆ ದೊಡ್ಡದಿದೆ. ಹಾಡುಗಳ ಕಾರಣಕ್ಕೆ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಮಾಡಿಕೊಂಡ ಸಾಕಷ್ಟು ಚಿತ್ರಗಳಿವೆ. ಅದೇ ಸಾಲಿಗೆ ಸೇರುವ ಸಿನಿಮಾ 'ಪಲ್ಲವಿ ಅನು ಪಲ್ಲವಿ'.
ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಚೊಚ್ಚಲ ಸಿನಿಮಾ ಇದು. ಹೀರೊ ಆಗಿ ಅನಿಲ್ ಕಪೂರ್ಗೂ ಇದು ಮೊದಲ ಸಿನಿಮಾ. ಚಿತ್ರಕ್ಕೆ ಸಂಗೀತ ನೀಡಿದ್ದು ಇಳಯರಾಜಾ. ಛಾಯಾಗ್ರಹಣ ಮಾಡಿದ್ದು ಬಾಲು ಮಹೇಂದ್ರ. ಹೀಗೆ ಸಾಕಷ್ಟು ವಿಚಾರಗಳಿಂದ ಬಹಳ ವಿಶೇಷವಾದ ಸಿನಿಮಾ 'ಪಲ್ಲವಿ ಅನು ಪಲ್ಲವಿ'. ಜನವರಿ 7, 1983ರಲ್ಲಿ ಈ ರೊಮ್ಯಾಂಟಿಕ್ ಮ್ಯೂಸಿಕಲ್ ಎಂಟರ್ಟೈನರ್ ತೆರೆಗೆ ಬಂದಿತ್ತು.

ಬಾಕ್ಸಾಫೀಸ್ನಲ್ಲಿ ದೊಡ್ಡದಾಗಿ ಹಿಟ್ ಆಗದಿದ್ದರೂ ಚಿತ್ರದ ಹಾಡುಗಳು ಎವರ್ಗ್ರೀನ್ ಹಿಟ್ ಎನಿಸಿಕೊಂಡುಬಿಟ್ಟವು. 'ನಗುವ ನಯನ ಮಧುರ ಮೌನ' ಹಾಗೂ 'ನಗು ಎಂದಿದೆ ಮಂಜಿನ ಬಿಂದು' ಇವತ್ತಿಗೂ ಜನಜನಿತ. ಇಳಯರಾಜಾ ಸೂಪರ್ ಹಿಟ್ ಆಲ್ಬಮ್ಗಳಲ್ಲಿ 'ಪಲ್ಲವಿ ಅನು ಪಲ್ಲವಿ' ಮರೆಯುವಂತಿಲ್ಲ. ಅನಿಲ್ ಕಪೂರ್ ಜೊತೆ ನಾಯಕಿಯಾಗಿ ಕಿರಣ್ ವೈರಾಲೆ ನಟಿಸಿದ್ದರು. ಮತ್ತೊಂದು ಮುಖ್ಯ ಪಾತ್ರಕ್ಕೆ ಜ್ಯೂಲಿ ಲಕ್ಷ್ಮಿ ಬಣ್ಣ ಹಚ್ಚಿದ್ದರು.
ಕಾಲೇಜು ಹುಡುಗಿ ಮಧು(ಕಿರಣ್ ವೈರಾಲೆ) ಪ್ರೀತಿಲಿ ಬಿದ್ದ ವಿಜಯ್(ಅನಿಲ್ ಕಪೂರ್) ಆಕೆಯನ್ನ ಮದುವೆ ಆಗಲು ಬಯಸುತ್ತಾನೆ. ಆದರೆ ಯಾವುದೇ ಜವಾಬ್ದಾರಿ ಇಲ್ಲದೇ ಸುತ್ತಾಡಿಕೊಂಡಿದ್ದ ಮಗನಿಗೆ ತಂದ ತನ್ನ ಕಾಲ ಮೇಲೆ ತಾನು ನಿಲ್ಲಲು ಹೇಳುತ್ತಾರೆ. ನಷ್ಟದಲ್ಲಿದ್ದ ತಮ್ಮ ಎಸ್ಟೇಟ್ ಅನ್ನು ಸರಿಪಡಿಸಿ ತೋರಿಸುವಂತೆ ಮಗನನ್ನು ದೂರದೂರಿಗೆ ಕಳುಹಿಸುತ್ತಾನೆ. ಆ ಎಸ್ಟೇಟಿನ ಪಕ್ಕದ ಎಸ್ಟೇಟ್ನಲ್ಲಿ ಅನು(ಲಕ್ಷ್ಮಿ) ಪತಿಯಿಂದ ದೂರದಾಗಿ ಮಗನೊಟ್ಟಿಗೆ ಇರುತ್ತಾಳೆ.
ಅನು ಹಾಗೂ ಆಕೆಯ ಮಗನಿಗೆ ವಿಜಯ್ ಹತ್ತಿರವಾಗಿಬಿಡುತ್ತಾನೆ. ಅನು ನೆನಪಿನಲ್ಲಿ ಪ್ರೇಯಸಿ ಮಧುಳಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸುತ್ತಾನೆ. ಅನುಗೆ ಮತ್ತಷ್ಟು ಹತ್ತಿರವಾಗಲು ಬಯಸುತ್ತಾನೆ. ಈ ವಿಷಯ ಗೊತ್ತಾಗಿ ಅನುಳ ಪತಿ ವಾಪಸ್ ಬರ್ತಾನೆ. ಅನುಗಾಗಿ ಪ್ರೀತಿಸಿದ ಮಧುಳನ್ನು ದೂರ ಮಾಡಿಕೊಳ್ಳಲು ಮುಂದಾದ ವಿಜಯ್ ಕೊನೆಗೆ ಇಬ್ಬರಿಂದಲೂ ದೂರವಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗೆ ಬಹಳ ವಿಭಿನ್ನವಾದ ಕಥೆಯನ್ನು ಮಣಿರತ್ನಂ ಮೊದಲ ಪ್ರಯತ್ನದಲ್ಲೇ ಹೇಳಿದ್ದರು.
ಸಿನಿಮಾ ಬಗ್ಗೆ ಹೆಚ್ಚು ಅರಿವು ಇಲ್ಲದೇ ಯಾರ ಬಳಿಯೂ ಸಹಾಯಕರಾಗಿ ಕೆಲಸ ಮಾಡದೇ ಮಣಿರತ್ನಂ ನೇರವಾಗಿ 'ಪಲ್ಲವಿ ಅನು ಪಲ್ಲವಿ' ಸಿನಿಮಾ ಕಟ್ಟಿ ಕೊಟ್ಟಿದ್ದರು. ಕನ್ನಡದ ಗಂಧಗಾಳಿ ಗೊತ್ತಿಲ್ಲದ ಮಣಿರತ್ನಂ ಕಥೆ, ಚಿತ್ರಕಥೆ ಮಾಡಿ ನಿರ್ಮಾಪಕರನ್ನು ಒಪ್ಪಿಸಿದ್ದರು. ತಮಿಳಿನಲ್ಲಿ ಈ ಕಥೆಯನ್ನು ಒಪ್ಪುವುದು ಕಷ್ಟ. ಕನ್ನಡದಲ್ಲಿ ಇಂತಹ ಪ್ರಯೋಗಗಳು ಹೆಚ್ಚು ನಡೆಯುತ್ತಿದ್ದ ಕಾಲ ಅದು. ಹಾಗಾಗಿ ಕನ್ನಡದಲ್ಲೇ ಸಿನಿಮಾ ಮಾಡುವ ಪ್ರಯತ್ನ ಮಾಡಿದ್ದರು. ಕಡಿಮೆ ಬಜೆಟ್ ಸಿನಿಮಾ ಎನ್ನುವ ಕಾರಣ ಇದ್ದರೂ ಇರಬಹುದು. ಸಿನಿಮಾ ದೊಡ್ಡದಾಗಿ ಗೆಲ್ಲದೇ ಇದ್ದರೂ ನಿರ್ದೇಶಕರಾಗಿ ಮಣಿ ಗೆದ್ದಿದ್ದರು.
ನಾಯಕನಾಗಿ ಅನಿಲ್ ಕಪೂರ್ ಸಹ ಗಮನ ಸೆಳೆದಿದ್ದರು. ಇಳಯರಾಜಾ ಸಂಗೀತ ಜಾದೂ ಮಾಡಿತ್ತು. ಅತ್ಯುತ್ತಮ ಚಿತ್ರಕಥೆ(ಮಣಿರತ್ನಂ), ಅತ್ಯುತ್ತಮ ಛಾಯಾಗ್ರಹಣ(ಬಾಲು ಮಹೇಂದರ್) ಹಾಗೂ ಅತ್ಯುತ್ತಮ ಸಂಭಾಷಣೆ(ಆರ್. ಎನ್ ಜಯಗೋಪಾಲ್)ಗೆ ಆ ವರ್ಷ ಕರ್ನಾಟಕ ರಾಜ್ಯ ಪ್ರಶಸ್ತಿ ಸಿಕ್ಕಿತ್ತು.
ಸದ್ಯ 'ಪಲ್ಲವಿ ಅನು ಪಲ್ಲವಿ' ಸಿನಿಮಾ ಬಂದು 42 ವರ್ಷಗಳಾಗಿದ್ದು ಅನಿಲ್ ಕಪೂರ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. "42 ವರ್ಷ, ಪ್ರತಿಭಾನ್ವಿತ ಇಳಯರಾಜ ಸರ್ ಅವರ ಮಧುರ ಸಂಗೀತ ಇನ್ನೂ ಅಷ್ಟೇ ಶಕ್ತಿಯುತವಾಗಿ ಪ್ರತಿಧ್ವನಿಸುತ್ತದೆ. ಇಷ್ಟು ವರ್ಷಗಳಾದರೂ ಆ ಸಂಗೀತ ಶಾಶ್ವತವಾಗಿ ಉಳಿದಿದೆ" ಎಂದು ಬರೆದುಕೊಂಡಿದ್ದಾರೆ.
ತೆಲುಗು, ತಮಿಳಿಗೂ ಸಿನಿಮಾ ಡಬ್ ಆಗಿತ್ತು. ಇಳಯರಾಜಾ ಅವತ್ತಿನ ಕಾಲಕ್ಕೆ ಬಹುಬೇಡಿಕೆಯ ಸಂಗೀತ ನಿರ್ದೇಶಕರಾಗಿದ್ದರೂ ಬಹಳ ಕಡಿಮೆ ಸಂಭಾವನೆ ಪಡೆದು ಸಂಗೀತ ನೀಡಿದ್ದರು. 'ನಗುವ ನಯನ' ಗೀತೆಯ ಟ್ಯೂನ್ ಅನ್ನು ಐಡಿಯಾ ಸೆಲ್ಯೂಲರ್ ತನ್ನ ಜಾಹೀರಾತುಗಳಿಗೆ ಬಳಸಿಕೊಂಡಿದ್ದು ವಿಶೇಷ.


Click it and Unblock the Notifications











