"ನಿರ್ದೇಶನವೇ ಮಾಡದೆ ಅದು ಹೇಗೆ ಅವಾರ್ಡ್ ತೆಗೆದುಕೊಳ್ಳುತ್ತಾರೆ?"; ಅನಿರುದ್ಧ್ ಪ್ರಶ್ನೆ ಮಾಡಿದ್ಯಾರಿಗೆ?
ಸಾಹಸ ಸಿಂಹ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಈಗ ಕಿರುತೆರೆಯಲ್ಲಿಯೂ ಫೇಮಸ್. ಸಿನಿಮಾದ ಜೊತೆ ಜೊತೆಗೆ ಕಿರುತೆರೆಯಲ್ಲಿಯೂ ನಟಿಸುತ್ತಿದ್ದಾರೆ. ಅನಿರುದ್ಧ್ಗೆ ದೊಡ್ಡ ಮಟ್ಟಕ್ಕೆ ಯಶಸ್ಸು ಅಂತ ಸಿಕ್ಕಿದ್ದು ಕಿರುತೆರೆಗೆ ಬಂದಾಗಲೇ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿದ್ದ 'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಕನ್ನಡಿಗರ ಮನೆ ಮಾತಾಗಿದ್ದರು.
ಆದರೆ, ಆರಂಭದಲ್ಲಿ ಎಲ್ಲವೂ ಸರಿಯಿದ್ದ ಧಾರಾವಾಹಿ ಮುಗಿಯುವ ವೇಳೆಗೆ ವಿವಾದಕ್ಕೆ ತಿರುಗಿತ್ತು. ಅನಿರುದ್ಧ್ ವಿರುದ್ಧ ಧಾರಾವಾಹಿಯ ತಂಡ ಕೆಲವು ಗಂಭೀರ ಆರೋಪಗಳನ್ನು ಮಾಡಿತ್ತು. ಅದಕ್ಕೆ ಪ್ರತ್ಯುತ್ತರವಾಗಿ ಅನಿರುದ್ಧ್ ಕೂಡ ಆರೋಪ ಮಾಡಿದ್ದರು. ಬಳಿಕ ಈ ಪ್ರಕರಣ ಬ್ಯಾನ್ ವರೆಗೂ ಹೋಗಿತ್ತು. ಕೊನೆಗೂ ಸಂಧಾನದ ಮೂಲಕ ಈ ಪ್ರಕರಣ ಬಗೆ ಹರಿದಿತ್ತು.

ಮತ್ತೆ ಈಗ ಇದೇ ಪ್ರಕರಣದ ಬಗ್ಗೆ ಅನಿರುದ್ಧ್ ಧ್ವನಿ ಎತ್ತಿದ್ದಾರೆ. ಅನಿರುದ್ಧ್ ನಟನೆಯ 'ಚಿದಂಬರ' ಸಿನಿಮಾ ಇದೇ ಜೂನ್ 14ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂದರ್ಶನವನ್ನು ನೀಡುತ್ತಿದ್ದಾರೆ. ಹಾಗೇ ಗೌರೀಶ್ ಅಕ್ಕಿ ಸ್ಟುಡಿಯೋಗೆ ನೀಡಿದ ಸಂದರ್ಭದಲ್ಲಿ 'ಜೊತೆ ಜೊತೆಯಲಿ' ಧಾರಾವಾಹಿ ವಿವಾದದ ಬಗ್ಗೆ ಮತ್ತೆ ಟೀಕೆಗಳನ್ನು ಮಾಡಿದ್ದಾರೆ.
ಈ ಸಂದರ್ಶದಲ್ಲಿ ಅನಿರುದ್ಧ್ 'ಜೊತೆಜೊತೆಯಲಿ' ಧಾರಾವಾಹಿ ನಿರ್ದೇಶಕರಿಗೆ ಯಶಸ್ಸಿನ ಬೆಲೆ ಅವರಿಗೆ ಗೊತ್ತೇ ಇರಲಿಲ್ಲ. ತನಗೆ ಗೊತ್ತಿತ್ತು ಎಂದು ಹೇಳಿಕೊಂಡಿದ್ದಾರೆ. "ನಾನು ಆ ಸಂಘರ್ಷಗಳಿಂದಲೇ ಹೋಗಿದ್ದೆ. ನನಗೆ ಆ ಯಶಸ್ಸಿನ ಬೆಲೆ ಗೊತ್ತಿತ್ತು. ಅವರಿಗೆ ಗೊತ್ತೇ ಇಲ್ಲ. ಇದನ್ನು ನಾನು ಬಹಳಷ್ಟು ಬಾರಿ ಗಮನಿಸಿದ್ದೀನಿ, ಬೇಜಾರು ಮಾಡಿಕೊಂಡಿದ್ದೀನಿ. ಅವರಿಗೆ ಹೇಳಿದ್ದೀನಿ ಕೂಡ. ಹಿಂದೆ ಒಂದಿಷ್ಟು ಧಾರಾವಾಹಿಗಳನ್ನು ಮಾಡಿದ್ದೀನಿ. ಮುಂದೆ ಒಂದಿಷ್ಟು ಮಾಡುತ್ತೀನಿ ಅನ್ನುವ ಧೋರಣೆ ಅಲ್ಲಿತ್ತು." ಎಂದಿದ್ದಾರೆ.
ಇದೇ ಸಂದರ್ಶನದಲ್ಲಿ ನಿರ್ದೇಶಕರು ನಿರ್ದೇಶಕರು ಹೇಳುತ್ತಿದ್ದ ಮಾತುಗಳು, ಅವರ ಧೋರಣೆ ಬಗ್ಗೆನೂ ಕಾಮೆಂಟ್ ಮಾಡಿದ್ದಾರೆ. ಒಂದು ಯಶಸ್ವಿ ಧಾರಾವಾಹಿಯ ನಿರ್ದೇಶಕ ಹೀಗೆಲ್ಲ ಹೇಗೆ ಹೇಳುವುದಕ್ಕೆ ಸಾಧ್ಯ ಅನ್ನೋದು ಅನಿರುದ್ಧ್ ಬೇಸರಕ್ಕೆ ಕಾರಣ.

"ಧಾರಾವಾಹಿಯಲ್ಲಿ ಹಿಂದೆ ಏನಾಗಿತ್ತು. ಇವತ್ತು ಏನಾಗುತ್ತೆ ಅನ್ನೋದು ಗೊತ್ತೇ ಇರಲಿಲ್ಲ. ಅದು ಗೊತ್ತಿದ್ದರೆ ಅಂದು ಜಗಳವೇ ಆಗುತ್ತಿರಲಿಲ್ಲ. ಅವರಿಗೆ ಹಿಂದೇನಾಗಿತ್ತು ಅನ್ನೋದು ಗೊತ್ತೇ ಇರಲಿಲ್ಲ. ಲಾಜಿಕ್ ಇರಲಿಲ್ಲ ಅಲ್ಲಿ. ವಾಹಿನಿಯವರು ಹೇಳಿದಾಗ, ನೀವು ಹೇಳಿದ್ದು ಸರಿಯಾಗಿದೆ. ಬದಲಾಯಿಸಿ ಕಳಿಸುತ್ತೇವೆ ಎಂದಿದ್ದರು. ಅದು ಎಪಿಸೋಡ್ ಡೈರೆಕ್ಟರ್ ಈಗೋಗೆ ಪೆಟ್ಟಾಯ್ತು." ಎಂದಿದ್ದಾರೆ.
ಹಾಗೇ ನಿರ್ದೇಶಕರು ಹೆಸರು ಹಾಕಿಕೊಳ್ಳುತ್ತಾರೆ ಆದರೆ, ನಿರ್ದೇಶನ ಮಾಡುವುದಿಲ್ಲ. ಎಪಿಸೋಡ್ ಡೈರೆಕ್ಟರ್ ಮಾಡುತ್ತಾರೆ ಅಂತ ಆರೋಪಿಸಿದ್ದಾರೆ. "ನಾನು ನಿರ್ದೇಶಕರು, ನಿರ್ಮಾಪಕರಿಗೆ ಕೇಳಿಕೊಂಡಿದ್ದೆ. ದಯವಿಟ್ಟು ಬಂದು ನಿರ್ದೇಶನ ಮಾಡಿ ಅಂದಿದ್ದೆ. ಆ ಸೀರಿಯಲ್ನಲ್ಲಿ ಅವರದ್ದೇ ಹೆಸರು ಇರೋದು. ಅವಾರ್ಡ್ ತೆಗೆದುಕೊಳ್ಳುವುದು ಕೂಡ ಅವರೇ. ಆದರೆ, ಡೈರೆಕ್ಷನ್ ಮಾಡುವುದಕ್ಕೆ ಬರೋದಿಲ್ಲ ಅವರು. ಸಂಚಿಕೆ ನಿರ್ದೇಶಕರು ಡೈರೆಕ್ಟ್ ಮಾಡುತ್ತಾರೆ. ಈ ಕಾನ್ಸೆಪ್ಟ್ ಕೂಡ ಗೊತ್ತಿಲ್ಲ. ನಿರ್ದೇಶನವೇ ಮಾಡದೆ ಅದು ಹೇಗೆ ಅವಾರ್ಡ್ ತೆಗೆದುಕೊಳ್ಳುತ್ತಾರೆ?" ಎಂದು ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಆರೋಪಿಸಿದ್ದಾರೆ.


Click it and Unblock the Notifications











