ಕನ್ನಡದಲ್ಲಿ ಮತ್ತೊಂದು ಕೋರ್ಟ್ ಡ್ರಾಮಾ 'ಪಾರ್ಥನ್ ಪರಪಂಚ'; 'ಅಣ್ಣಯ್ಯ' ಧಾರಾವಾಹಿಯ ವಿಕಾಶ್ ಹೀರೋ
ಕನ್ನಡದಲ್ಲಿ ಕೋರ್ಟ್ ಡ್ರಾಮಾ ಸಿನಿಮಾಗಳು ಬರೋದೇ ಕಡಿಮೆ. ಅದರಲ್ಲಿ ಇತ್ತೀಚೆಗೆ ಈ ಜಾನರ್ನಲ್ಲಿ ಕೆಲವು ಪ್ರಯೋಗಗಳು ನಡೆದಿವೆ. ಅದರಲ್ಲೂ ಇತ್ತೀಚೆಗೆ ತೆರೆಕಂಡ ಅಜಯ್ ರಾವ್ ನಿರ್ಮಿಸಿ, ನಟಿಸಿದ್ದ 'ಯುದ್ಧಕಾಂಡ', ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ 'ಜಡ್ಜ್ಮೆಂಟ್' ಅಂತಹ ಸಿನಿಮಾಗಳು ಪ್ರೇಕ್ಷಕರಿಗೆ ಹೊಸ ಅನುಭವನ್ನು ನೀಡುವಲ್ಲಿ ಯಶಸ್ವಿ ಆಯ್ತು.
ಈಗ ಸ್ಯಾಂಡಲ್ವುಡ್ನಲ್ಲಿ ಇದೇ ಜಾನರ್ನಲ್ಲಿ ಮತ್ತೊಂದು ಪ್ರಯತ್ನ ಆಗಿದೆ. ಶ್ರೀಹರ್ಷ ಎಂ.ಎನ್.ಅವರ ಕಥೆ, ಚಿತ್ರಕಥೆ ಬರೆದು, ನಿರ್ದೇಶನ ಮಾಡಿದ್ದಾರೆ. ಅದುವೇ 'ಪಾರ್ಥನ್ ಪರಪಂಚ'. ಸಿರಿ ಸಿನಿಮಾಸ್ ಮೂಲಕ ಸೀತಾ ಹರ್ಷವರ್ಧನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಅಣ್ಣಯ್ಯ ಖ್ಯಾತಿಯ ವಿಕಾಶ್ ಉತ್ತಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇವರೊಂದಿಗೆ ಮಂದಾರ, ರಂಗಾಯಣ ರಘು, ಅಮಿತ್, ಸಂಪತ್ ಮೈತ್ರೇಯ ಮುಖ್ಯ ಪಾತ್ರಗಳಲ್ಲಿ ಕಾಣೀಸಿಕೊಂಡಿದ್ದಾರೆ. ಸದ್ಯ 'ಪಾರ್ಥನ್ ಪರಪಂಚ' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯಲಿದೆ. ಇದೊಂದು ಕೋರ್ಟ್ ಡ್ರಾಮಾ ಆಗಿದ್ದರಿಂದ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಸನ್ನಿವೇಶಗಳನ್ನು ನೋಡಬಹುದು. 'ಪಾರ್ಥನ್ ಪರಪಂಚ'ದ ಬಗ್ಗೆ ಚಿತ್ರತಂಡ ಕೆಲವು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದೆ.
"ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಕೋರ್ಟ್ ರೂಂ ಡ್ರಾಮಾ. ರಂಗಾಯಣ ರಘು ಡಿಫೆನ್ಸ್ ಲಾಯರ್ ಹಾಗೂ ಸೀತಾ ಅವರು ಪಬ್ಲಿಕ್ ಪ್ರಾಸಿಕ್ಯೂಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಛಾಯಾಗ್ರಾಹಕರಾಗಿ ಜೈ ಆನಂದ್, ಸಂಗೀತ ನಿರ್ದೇಶಕರಾಗಿ ಅನಂತ್ ಆರ್ಯನ್ ಕೆಲಸ ಮಾಡುತ್ತಿದ್ದಾರೆ. ಇಡೀ ಸಿನಿಮಾದ ಕಥೆ ಬೆಂಗಳೂರಲ್ಲಿ ನಡೆಯುತ್ತದೆ. ಈಗಾಗಲೇ 4-5 ದಿನಗಳ ಶೂಟಿಂಗ್ ಆಗಿದ್ದು, ಈಗ ಕೋರ್ಟ್ ಹಾಲ್ ಸೆಟ್ನಲ್ಲಿ ನಡೆಯುತ್ತಿದೆ" ಎಂದು ಶೂಟಿಂಗ್ ವಿಸಿಟ್ ವೇಳೆ ನಿರ್ದೇಶಕ ಶ್ರೀಹರ್ಷ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಪಾತ್ರದಲ್ಲಿ ನಟಿಸುತ್ತಿರುವ ಸೀತಾ ನಿರ್ಮಾಪಕಿ ಕೂಡ ಹೌದು. ತಮ್ಮ ಸಿನಿಮಾದ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಒಂದು ಅದ್ಭುತವಾದ ಟೀಂ ರೆಡಿ ಆಗಿದೆ. ನಮ್ಮ ಸಿರಿ ಸಿನಿಮಾಸ್ ಮೂಲಕ ನಿರ್ಮಾಣ ಮಾಡುವುದರ ಜೊತೆಗೆ ಒಂದು ಪಾತ್ರವನ್ನು ಕೂಡ ಮಾಡುತ್ತಿದ್ದೇನೆ." ಎಂದು ಹೇಳಿದರೆ, ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ನಾಯಕ ವಿಕಾಶ್ ಉತ್ತಯ್ಯ "ಇವತ್ತಿನ ದಿನಕ್ಕೆ ಹೊಂದುವ ಕಥೆ. ರಿಯಾಲಿಟಿಗೆ ಹತ್ತಿರವಾದ ಕಂಟೆಂಟ್ ಸಿನಿಮಾ. ಒಂದು ಕೇಸ್ ಹೇಗೆ ಟ್ವಿಸ್ಟ್ ಅಂಡ್ ಟರ್ನ್ ಪಡೆಯುತ್ತ ಹೋಗುತ್ತದೆ ಎಂಬುದನ್ನು ನಿರ್ದೇಶಕರು ತುಂಬಾ ಚೆನ್ನಾಗಿ ಹೇಳುತ್ತ ಹೋಗಿದ್ದಾರೆ" ಎಂದು ಸಿನಿಮಾ ಬಗ್ಗೆ ವಿಶ್ವಾಸ ಮೂಡಿಸಿದ್ದಾರೆ.

'ಪಾರ್ಥನ್ ಪರಪಂಚ'ಕ್ಕೆ ನಾಯಕಿ ಮಂದಾರ. "ಬ್ಲಾಂಕ್ ಸಿನಿಮಾದ ನಂತರ ಒಂದೊಳ್ಳೆ ಪಾತ್ರಕ್ಕಾಗಿ ಕಾಯುತ್ತಿದ್ದೆ. ನನ್ನದು ಜಂಝೀ ಹುಡುಗಿ ಪಾತ್ರ. ನೋಟಾ ಲೈಫ್ ಸ್ಟೈಲ್, ನಿರ್ದೇಶಕರು ನನ್ನ ಪಾತ್ರವನ್ನು ತುಂಬಾ ಚೆನ್ನಾಗಿ ಕ್ರಿಯೇಟ್ ಮಾಡಿದ್ದಾರೆ." ಎನ್ನುತ್ತಾರೆ. ಸಿನಿಮಾ ಇನ್ನೊಂದು ಪ್ರಮುಖ ಪಾತ್ರ ರಂಗಾಯಣ ರಘು ಅವರದ್ದು. "ಹರ್ಷ ಈಗಾಗಲೇ ಟಿವಿನಲ್ಲಿ ವರ್ಕ್ ಮಾಡಿದ್ದಾರೆ. ಅವರು ಸಾಹಿತಿ ನರಸಿಂಹಮೂರ್ತಿ ಅವರ ಮಗ. ಈವರೆಗೆ ಯಾರೂ ಗೆಸ್ ಮಾಡಿರದಂಥ ಘಟನೆಯನ್ನು ಶ್ರೀಹರ್ಷ ಯೋಚನೆ ಮಾಡಿದ್ದಾರೆ. ವಿಕಾಶ್ ಮಡಿಕೇರಿ ಹುಡುಗ, ಇದರಲ್ಲಿ ಲಾಯರ್, ಒಂದು ಕ್ಲೂ ಹಿಂದೆ ಹೋದಾಗ ಏನೇನಾಗುತ್ತೆ ಅನ್ನೋದನ್ನು ಚೆನ್ನಾಗಿ ಹೇಳುತ್ತಿದ್ದಾರೆ. ಟಗರು, ಅಜ್ಞಾತವಾಸಿ, ಶಾಖಾಹಾರಿ ನಂತರ ಇದು ಬೇರೆ ಥರದ ಪಾತ್ರ" ಎಂದು ರಂಗಾಯಣ ರಘು ಹರ್ಷ ವ್ಯಕ್ತಪಡಿಸಿದ್ದಾರೆ.
'ಪಾರ್ಥನ್ ಪರಪಂಚ' ಸಿನಿಮಾವನ್ನು 45ದಿನಗಳ ಶೂಟಿಂಗ್ ಮಾಡುತ್ತಿದೆ. ಅದರಲ್ಲಿ 20 ರಿಂದ 25 ದಿನಗಳ ಕಾಲ ಕೋರ್ಟ್ ಹಾಲ್ನಲ್ಲೇ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ ಅನಂತ ಆರ್ಯನ್ 4 ಹಾಡುಗಳನ್ನು ಕಂಪೋಸ್ ಮಾಡುತ್ತಿದ್ದಾರೆ. ಯಾವ ಹಾಡೂ ರೆಗ್ಯುಲರ್ ಪ್ಯಾಟ್ರನ್ನಲ್ಲಿ ಇರೋದಿಲ್ಲ ಎಂದಿದ್ದಾರೆ. ಸಂಭಾಷಣೆಗಾರ ಅನಿವಾರ್ಯ ಬರೆದಿದ್ದರೆ. ಎಲ್ಲ ಪಾತ್ರಗಳಿಗೂ ಎಲ್ಲಿ ನನ್ನ ಮುಖವಾಡ ಕಳಚಿ ಬೀಳುತ್ತೋ ಎಂಬ ಭಯ ಇರುತ್ತೆ. ರಘು ಅವರ ಪಾತ್ರ ಇಡೀ ಸಿನಿಮಾದ ಆತ್ಮ" ಎನ್ನುತ್ತಾರೆ.


Click it and Unblock the Notifications











