ಯಶ್ ನೋಡಲು ಬರುತ್ತಿದ್ದ ವೇಳೆ ಅಪಘಾತದಲ್ಲಿ ಗಾಯಗೊಂಡಿದ್ದ ಅಭಿಮಾನಿ ಸಾವು
ಈ ಬಾರಿಯ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಯಾಕೋ ದು:ಖಕರವಾಗಿದೆ. ಯಶ್ ಹುಟ್ಟುಹಬ್ಬಕ್ಕೆ ಬ್ಯಾನರ್ ಹಾಕುವುದಕ್ಕೆ ಹೋಗಿ ವಿದ್ಯುತ್ ಸ್ಪರ್ಶದಿಂದ ಮೂವರು ಅಭಿಮಾನಿಗಳು ಮೃತಪಟ್ಟಿದ್ದರು. ಇದರಿಂದ ಸಾವನ್ನಪ್ಪಿದ ಅಭಿಮಾನಿಗಳ ಕುಟುಂಬಕ್ಕೆ ಸಾಂತ್ವಾನ ಹೇಳುವುದಕ್ಕೆ ಯಶ್ ಗದಗ ಜಿಲ್ಲೆ ಸೊರಣಗಿ ಗ್ರಾಮಕ್ಕೆ ಬಂದಿದ್ದರು.
ಈ ದುರ್ಘಟನೆ ಮಾಸುವ ಮುನ್ನವೇ ಯಶ್ಗೆ ಮತ್ತೆ ಅವಘಡ ನಡೆದಿದೆ. ರಾಕಿಂಗ್ ಸ್ಟಾರ್ ಯಶ್ ಆಸ್ಪತ್ರೆಗೆ ದಾಖಲಾಗಿದ್ದ ತಮ್ಮ ಅಭಿಮಾನಿಗಳನ್ನು ನೋಡುವುದಕ್ಕೆ ಗದಗದ ಜಿಮ್ಸ್ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಯಶ್ ನೋಡಲು ಬರುತ್ತಿದ್ದ ಮತ್ತೊಬ್ಬ ಅಭಿಮಾನಿ 22 ವರ್ಷ ನಿಖಿಲ್ ಗೌಡ ಅಪಘಾತದಲ್ಲಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.

ನಿಖಿಲ್ ಗೌಡ ಎಂಬ ಅಭಿಮಾನಿ ರಾಕಿಂಗ್ ಸ್ಟಾರ್ ಯಶ್ ನೋಡಲು ಬೈಕ್ನಲ್ಲಿ ಬರುತ್ತಿರುವ ವೇಳೆ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ದುರ್ಘಟನೆ ಗದಗದ ತೇಜಾನಗರದಲ್ಲಿ ನಡೆದಿದೆ. ಗಾಯಗೊಂಡಿರುವ ಅಭಿಮಾನಿ ನಿಖಿಲ್ ಗೌಡ ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ನಿವಾಸಿ ಆಗಿದ್ದರು. ರಾತ್ರಿಯಿಂದ ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.
ಯಶ್ ಹುಟ್ಟುಹಬ್ಬದ ಪ್ರಯುಕ್ತ ಗದಗ ಜಿಲ್ಲೆ ಸೊರಣಗಿ ಗ್ರಾಮದಲ್ಲಿ ಮಧ್ಯರಾತ್ರಿ ಬ್ಯಾನರ್ ನಿಲ್ಲಿಸುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದ ದುರ್ಘಟನೆ ನಡೆದಿತ್ತು. ಯಶ್ ಅಭಿಮಾನಿಗಳಾದ ಮುರಳಿ, ನವೀನ್, ಹನುಮಂತ ಮೂವರು ನಿಧನರಾಗಿದ್ದಾರೆ. ಇನ್ನು ಗಾಯಗೊಂಡ ಮೂವರು ಮಂದಿಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಾದವರನ್ನು ನೋಡಲು ಯಶ್ ತೆರಳಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಅಭಿಮಾನಿ ನಿಖಿಲ್ ಗೌಡ ಆಸ್ಪತ್ರೆ ಕಡೆಗೆ ದೌಡಾಯಿಸಿದ್ದರು. ಈ ವೇಳೆ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.


Click it and Unblock the Notifications











