ಕನ್ನಡಿಗರ ತಂಡದೊಂದಿಗೆ 'ಕಿರುನಗೆ' ಬೀರಲು ಬಂದ ಅನುಪಮ್ ಖೇರ್ ಸಹೋದರ
ಕನ್ನಡ ಚಿತ್ರರಂಗಕ್ಕೆ ಸೂಪರ್ಸ್ಟಾರ್ಗಳ ಕೊಡುಗೆ ದಿನದಿಂದ ದಿನಕ್ಕೆ ಯಾಕೋ ಕಡಿಮೆ ಆಗುತ್ತಿದೆ. ಹಾಗಂತ ಇಂಡಸ್ಟ್ರಿ ಏನು ಸುಮ್ಮನಾಗಿಲ್ಲ. ಹೊಸಬರ ಸಿನಿಮಾಗಳು ಸೆಟ್ಟೇರುತ್ತಿವೆ. ಆ ಸಿನಿಮಾಗಳು ರಿಲೀಸ್ ಆಗುತ್ತಿವೆ. ಹೊಸ ಪ್ರತಿಭೆಗಳ ಸಕ್ಸಸ್ ರೇಟ್ ಕಮ್ಮಿ ಇದ್ದರೂ ರಿಲೀಸ್ ಆಗುತ್ತಿರುವ ಸಿನಿಮಾಗಳ ಸಂಖ್ಯೆ ದೊಡ್ಡದೇ ಇದೆ. ಸೋತರೂ ಪ್ರಯತ್ನ ಮಾಡುವುದನ್ನೂ ಮಾತ್ರ ನಿಲ್ಲಿಸುತ್ತಿಲ್ಲ. ಹೀಗಾಗಿ ಕನ್ನಡ ಚಿತ್ರರಂಗ ಇನ್ನೂ ಉಸಿರಾಡುತ್ತಿದೆ.
ಇತ್ತೀಚೆಗೆ ಮತ್ತೊಂದು ಹೊಸಬರ ಸಿನಿಮಾ ಸೆಟ್ಟೇರಿದೆ. ಅದುವೇ 'ಕಿರುನಗೆ'. ಪ್ರತಿಬಾರಿಯಂತೆ ಹೊಸಬರ ಸಿನಿಮಾಗಳಿಗೆ ಹಿರಿಯ ಕಲಾವಿದರು ಸಾಥ್ ಕೊಡುತ್ತಿದ್ದಾರೆ. ಹಾಗೇ ಈ ಸಿನಿಮಾಗೂ ಸೀನಿಯರ್ಗಳು ಜೊತೆಯಾಗಿ ನಿಲ್ಲುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೈಟಲ್ ಲಾಂಚ್ ಆಗಿದ್ದು, ಇಂಟ್ರೆಸ್ಟಿಂಗ್ ಎನಿಸುತ್ತಿದೆ. ಆದರೆ, ಅದಕ್ಕಿಂತ ಕುತೂಹಲ ಕೆರಳಿಸುವ ಅಂಶ ಕೂಡ ಇದೆ.

ಈ ಸಿನಿಮಾದಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ಸಂಗತಿಯೊಂದಿದೆ. ಬಾಲಿವುಡ್ನ ಜನಪ್ರಿಯ ನಟ ಅನುಪಮ್ ಖೇರ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಅದೇ ಬೆನ್ನಲ್ಲೇ ಅವರ ಸಹೋದರ ರಾಜು ಖೇರ್ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಸಿನಿಮಾ ಹೊಸಬರು ಹಾಗೂ ಹಿರಿಯ ಕಲಾವಿದರ ಮಹಾಸಂಗಮದ ಮೂಲಕ ಕಿರುನಗೆ ಬೀಡುತ್ತಿದೆ.
ಮದುವೆ ಮನೆಯ ವಿಭಿನ್ನ ಪ್ರೇಮಕಥೆ
ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವವರು ಹೊಸಬರಾದರೂ ನಿರ್ದೇಶಕ ಅಶೋಕ್ ಕಡಬ ಚಿತ್ರರಂಗಕ್ಕೆ ಹಳಬರೇ. 'ಕಿರುನಗೆ' ಅವರಿಗೆ ಆರನೇ ಸಿನಿಮಾ. ಸಿನಿಮಾದ ಟೈಟಲ್ ರಿವೀಲ್ ಮಾಡುತ್ತಿದ್ದಂತೆ ಅದರ ಕಥಾಹಂದರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಇದೊಂದು ಕ್ಯೂಟ್ ಲವ್ ಜಾನರ್ ಸಿನಿಮಾ. ತಂದೆ-ತಾಯಿಗಾಗಿ ಮಕ್ಕಳು ತಮ್ಮ ಪ್ರೀತಿಯನ್ನು ತ್ಯಾಗ ಮಾಡುವ ಭಾವನಾತ್ಮಕ ಕಥೆ ಇಲ್ಲಿದೆ. ವಿಶೇಷವೆಂದರೆ, ಚಿತ್ರದ ಮೊದಲರ್ಧದ ಕಥೆ ಸಂಪೂರ್ಣವಾಗಿ ಮದುವೆ ಮನೆಯಲ್ಲೇ ನಡೆಯುತ್ತದೆ" ಎಂದು ನಿರ್ದೇಶಕರು ಹೇಳಿದ್ದಾರೆ.
ಅಣ್ಣಾವ್ರ ಪುತ್ರಿಯಿಂದ ಟೈಟಲ್ ರಿವೀಲ್
'ಕಿರುನಗೆ' ಸಿನಿಮಾದ ಟೈಟಲ್ ಅನ್ನು ವರನಟ ಡಾ.ರಾಜಕುಮಾರ್ ಅವರ ಪುತ್ರಿ ಲಕ್ಷ್ಮಿ ಗೋವಿಂದರಾಜು ಹಾಗೂ ಅಳಿಯ ಎಸ್.ಎ. ಗೋವಿಂದರಾಜು ಅನಾವರಣಗೊಳಿಸಿದ್ದಾರೆ. ಈ ವೇಳೆ ಇಡೀ ತಂಡಕ್ಕೆ ಯಶಸ್ಸು ಸಿಗಲಿ ಎಂದು ಇಬ್ಬರು ಶುಭ ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷರಾದ ಎನ್ನಾರ್.ಕೆ ವಿಶ್ವನಾಥ್, ನಟ ಷಣ್ಮುಖ ಹಾಗೂ ಯುವ ಕಾಂಗ್ರೆಸ್ ಮುಖಂಡ ಅಶೋಕ್ ಭೀಮನಾಯಕ್ ಅತಿಥಿಗಳಾಗಿ ಬಂದು ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ.

'ಕಿರುನಗೆ'ಯಲ್ಲಿ ಅನುಪಮ್ ಖೇರ್ ಸಹೋದರ
'ಕಿರುನಗೆ' ಸಿನಿಮಾ ಮೂಲಕ ವಿಜಯ್ ರಾಜ್ ಮತ್ತು ಖುಷ್ಬು ನಾಯಕ-ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಪರಿಚಯವಾಗುತ್ತಿದ್ದಾರೆ. ಹಾಗಂತ ವಿಜಯ್ ರಾಜ್ಗೆ ನಟನೆ ಅನ್ನೋದು ಹೊಸದೇನು ಅಲ್ಲ. ಈಗಾಗಲೇ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರೋ ವಿಜಯ್ ರಾಜ್ಗೆ ಇದು ಚೊಚ್ಚಲ ಸಿನಿಮಾ. ಇವರೊಂದಿಗೆ ಬಾಲಿವುಡ್ನ ಜನಪ್ರಿಯ ನಟ ಅನುಪಮ್ ಖೇರ್ ಅವರ ಸಹೋದರ ರಾಜು ಖೇರ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೇ ಹಿರಿಯ ನಟಿ ಶೃತಿ, ನಟಿ ಸಂಗೀತಾ, ಮೂಗು ಸುರೇಶ್, ಸುಧಾ ಬೆಳವಾಡಿ, ಮಂಜುನಾಥ್ ಹೆಗ್ಡೆ ಹಾಗೂ ಪ್ರಮುಖ ಪಾತ್ರದಲ್ಲಿ ಶ್ರೀಶ ಕಾಣಿಸಿಕೊಂಡಿದ್ದಾರೆ.
ಇದು ಕೇವಲ ಮಹಿಳಾ ಪ್ರಧಾನ ಚಿತ್ರವಲ್ಲ
ಅಂದ್ಹಾಗೆ 'ಕಿರುನಗೆ' ಸಿನಿಮಾಗೆ ಕಥೆ ಬರೆದು, ನಿರ್ಮಾಣ ಮಾಡುತ್ತಿರೋದು ಲತಾಶ್ರೀ ಡಿ.ಸಿ. "ಕಥೆ ಹೆಣ್ಣುಮಗಳೊಬ್ಬಳ ಸುತ್ತ ಸಾಗಿದರೂ, ಇದು ಕೇವಲ ಮಹಿಳಾ ಪ್ರಧಾನ ಚಿತ್ರವಲ್ಲ. ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಕಮರ್ಷಿಯಲ್ ಮತ್ತು ಕೌಟುಂಬಿಕ ಮನೋರಂಜನೆಯ ಅಂಶಗಳು ಇಲ್ಲಿ ಇದೆ" ಎಂದು ಲತಾ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಸಿನಿಮಾವನ್ನು ಬೆಂಗಳೂರು, ಉಡುಪಿ, ವಿಜಾಪುರ, ಮುಂಬೈ ಹಾಗೂ ಗೋವಾದ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಸದ್ಯ ಸಿನಿಮಾದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.


Click it and Unblock the Notifications